ಕಾಂಗ್ರೆಸ್ 40 ಸ್ಥಾನ ಗೆಲ್ಲುವುದಿಲ್ಲ: ಬಸವರಾಜ ಬೊಮ್ಮಾಯಿ ಭವಿಷ್ಯ

ಗದಗ:(ರೋಣ) ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೇಶ್ಯಾದ್ಯಂತ 40ಸ್ಥಾನ ಗೆಲ್ಲುವುದು ಕಷ್ಟವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರೋಣ ವಿಧಾನಸಭಾ ಕ್ಷೇತ್ರದ ಹಿರೇಹಾಳ, ಶಾಂತಗೇರಿ, ಮುಶಿಗೇರಿ ಹಾಗೂ ಇಟಗಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿ ಮಾತನಾಡಿದರು. ಭಾರತ ಬದಲಾಗುತ್ತಿದೆ. ಬೇರೆ ದೇಶಗಳಿಗೆ ಪೈಪೋಟಿ ಕೊಟ್ಟು ಬೆಳೆಯುತ್ತಿದೆ. ಕೇವಲ ರಸ್ತೆ, ನೀರು ಕೊಡುವುದಷ್ಟೆ ಅಲ್ಲ. ಮಾಧ್ಯಮ, ಮೊಬೈಲ್ ಮೂಲಕ ಪ್ರತಿಯೊಬ್ಬರ ಕೈಯಲ್ಲಿ ಮಾಹಿತಿ ದೊರೆಯುವುದರಿಂದ ಜಗತ್ತಿನ ಎಲ್ಲ ಮಾಹಿತಿ ದೊರೆಯುವಂತಾಗಿದೆ. ಎಲ್ಲರ ಕೈಗೆ ಮಾಹಿತಿ ತಂತ್ರಜ್ಞಾನ ನೀಡಿದ್ದು ಪ್ರಧಾನಿ ನರೆಂದ್ರ ಮೋದಿಯವರು ಎಂದರು.
ಕಾಂಗ್ರೆಸ್ ನವರು ಗರಿಬಿ ಹಠಾವೊ ಅಂತ ಹೇಳಿದರು. ಆದರೆ ಇದುವರೆಗೂ ಬಡತನ ನಿರ್ಮೂಲನೆ ಆಗಲಿಲ್ಲ. ಕಳೆದ ಹತ್ತು ವರ್ಷದಲ್ಲಿ ಮೋದಿಯವರು 15 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದಾರೆ. ರಾಜ್ಯದಲ್ಲಿ 36 ಲಕ್ಷ ಜನರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ದೊರೆತಿದೆ. 58 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ದೊರೆತಿದೆ.12 ಲಕ್ಷ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಇದೆಲ್ಲವನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸವನ್ಬು ಮೋದಿಯವರು ಮಾಡಿದ್ದಾರೆ. ಮೋದಿಯವರು ಅಕ್ಕಿ ಕೊಡುತ್ತಿದ್ದಾರೆ. ಇವರು ತಮ್ಮದೇ ಭಾಗ್ಯ ಅಂತ ಹೇಳಿಕೊಳ್ಳುತ್ತಿದ್ದಾರೆ ಎಂದರು.ಈಗ ನಡೆದಿರುವ ಸಮೀಕ್ಷೆ ಪ್ರಕಾರ ದೇಶದಲ್ಲಿ ಕಾಂಗ್ರೆಸ್ ಈ ಚುನಾವಣೆಯಲ್ಲಿ 40 ಸ್ಥಾನ ಗೆಲ್ಕುವುದು ಕಷ್ಟವಿದೆ. ಸಮೀಕ್ಷೆ ಪ್ರಕಾರ ಬಿಜೆಪಿ 400 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ. ಕಾಂಗ್ರೆಸ್ 40 ಸ್ಥಾನ ಮಾತ್ರ ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳಿದೆ.INDI ಒಕ್ಕೂಟದ 26 ಪಕ್ಷಗಳಲ್ಲಿ ಪಿಎಂ ಆಗುವ ಅರ್ಹತೆ ಇರುವವರು ಯಾರೂ ಇಲ್ಲ. ಮೋದಿಯವರ ಸಮಾನಾದ ನಾಯಕರು ಯಾರೂ ಇಲ್ಲ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಎಂದು ಹೆಸರು ಹೆಳಿದರು. ಆದರೆ, ಸಿದ್ದರಾಮಯ್ಯ ರಾಹುಲ್ ಗಾಂಧಿ ಅಂತ ಹೇಳಿದರು. ರಾಹುಲ್ ಗಾಂಧಿ ನಾನು ಪ್ರಧಾನಿ ಆಗುವುದಿಲ್ಲ ಅಂತ ಹೇಳಿದ್ದಾರೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ. ಅದು ರಾಹುಲ್ ಗಾಂಧಿ. ಸವಾಲನ್ನು ಸ್ವೀಕಾರ ಮಾಡಿ ಅದನ್ನು ಗೆಲುವಾಗಿ ಪರಿವರ್ತಿಸುವ ಛಲ ನರೇಂದ್ರ ಮೋದಿಯವರಿಗೆ ಮಾತ್ರ ಇದೆ. ಹೀಗಾಗಿ ಮೋದಿಯವರು ಜನರ ನಾಯಕ ಆಗಿದ್ದಾರೆ ಎಂದು ಹೇಳಿದರು.






