ಬೆಂಗಳೂರು: ಬಿಜೆಪಿಯನ್ನು ಮೂರು ಪದಗಳಲ್ಲಿ ಬಣ್ಣಿಸುವುದಾದರೆ ಸುಳ್ಳು ಭರವಸೆ, ದುರಾಡಳಿತ, ಒಡೆದು ಆಳುವ ನೀತಿ (“BAD” – Broken Promises – Abysmal Governance – Divisive Agenda) ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅಭಿಪ್ರಾಯಿಸಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೊಮ್ಮಾಯಿ ಅವರ ಸರ್ಕಾರ ಎಂದರೆ, ಅಸಮರ್ಥರ ಸರ್ಕಸ್ ಹಾಗೂ ಭ್ರಷ್ಟರ ಪಡೆ ಎಂದರ್ಥ. ಬಿಜೆಪಿಯ ಡಿಎನ್ಎ ಮೂರು Dಗಳಿಂದ ಕೂಡಿದೆ. ‘Dupe!’, ‘Deceive!’, ‘Divide!’ ಅಂದರೆ, ವಂಚನೆ, ಮೋಸ, ವಿಭಜನೆ ಎಂದರು.
ಪಕ್ಷಾಂತರ ಹಾಗೂ ಭ್ರಷ್ಟಾಚಾರದಿಂದ ರಚನೆಯಾದ ಬಿಜೆಪಿಯ ಅನೈತಿಕ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಶಾಪವಾಗಿದೆ. ಭ್ರಷ್ಟಾಸುರ ಬೊಮ್ಮಾಯಿ ಅವರ ಸರ್ಕಾರದ ಅವಧಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಸರ್ಕಾರ ಸುಳ್ಳು ಭರವಸೆ ಮೂಲಕ ರಾಜ್ಯದ ಜನರ ಕನಸನ್ನು ನುಚ್ಚುನೂರು ಮಾಡಿದೆ. ಜತೆಗೆ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿಯ 2018ರ ಪ್ರಣಾಳಿಕೆಯಲ್ಲಿ ಕೊಟ್ಟ 600 ಭರವಸೆಗಳ ಪೈಕಿ ಶೇ.91ರಷ್ಟು ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ರೈತರಿಗೆ ಕೊಟ್ಟ 112 ಭರವಸೆಗಳ ಪೈಕಿ 97 ಭರವಸೆಗಳನ್ನು ಈಡೇರಿಸಿಲ್ಲ. ಬಿಜೆಪಿ ಸರ್ಕಾರ ಮಹಿಳೆಯರಿಗೆ ನೀಡಿದ್ದ 26 ಭರವಸೆಗಳ ಪೈಕಿ 24 ಭರವಸೆ ಈಡೇರಿಸಿಲ್ಲ. ರಾಜ್ಯದ ಯುವಕರಿಗೆ ಕೊಟ್ಟ 18 ಭರವಸೆಗಳಲ್ಲಿ 17 ಭರವಸೆ ಈಡೇರಿಸಲು ಸರ್ಕಾರ ವಿಫಲವಾಗಲು ಕಾರಣವೇನು ಎಂಬುದನ್ನು ಮುಖ್ಯಮಂತ್ರಿಗಳು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.

ನೇಮಕಾತಿ ಅಕ್ರಮಗಳ ಪರಿಣಾಮ 2.52 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಇದು ಯುವಕರ ಭವಿಷ್ಯಕ್ಕೆ ಗ್ರಹಣ ಹಿಡಿಯುವಂತೆ ಮಾಡಿದೆ. 1300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದ ಪಿಯು ಕಾಲೇಜು ನಿರ್ಮಾಣವಾಗಿಲ್ಲ. ಮಾತ್ರವಲ್ಲದೇ ಪಧವಿವರೆಗೂ ಉಚಿತ ಶಿಕ್ಷಣ ನೀಡುವ ಭರವಸೆಯನ್ನು ಸರ್ಕಾರ ಕಸದಬುಟ್ಟಿಗೆ ಎಸೆಯಲು ಕಾರಣವೇನು ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ SC/ST/OBC ಸಮುದಾಯಗಳಿಗೆ ನೀಡಿದ್ದ 81 ಭರವಸೆಗಳಲ್ಲಿ 77 ಭರವಸೆಗಳನ್ನು ಈಡೇರಿಸಿಲ್ಲ. ಈ ಸಮುದಾಯದ ಮಕ್ಕಳಿಗೆ 4500 ಕೋಟಿಯ ವಿದ್ಯಾರ್ಥಿ ವೇತನ, ಎಸ್ಸಿ/ಎಸ್ಟಿ/ಒಬಿಸಿ ಸಮುದಾಯಕ್ಕೆ ಘೋಷಿಸಿದ್ದ ರೂ. 15,000 ಕೋಟಿ ವೆಚ್ಚದ ವಸತಿ ನಿರ್ಮಾಣ ಭರವಸೆ ಪೂರ್ಣಗೊಂಡಿಲ್ಲ. ಎಸ್ಸಿ ಎಸ್ಟಿ ಗೆ ಮೀಸಲಾದ ರೂ. 7000 ಕೋಟಿ ನಿಧಿಯನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುವ ಮೂಲಕ ಎಸ್ಸಿ ಎಸ್ಟಿ ಸಮುದಾಯಕ್ಕೆ ವಂಚಿಸಲು ಕಾರಣವೇನು ಎಂದು ಬೊಮ್ಮಾಯಿ ಅವರನ್ನು ಸುರ್ಜೆವಾಲ ಕೇಳಿದ್ದಾರೆ.
2018ರ ಬಿಜೆಪಿ ಪ್ರಣಾಳಿಕೆಯಲ್ಲಿ “ಶಿಕ್ಷಣ” ಕೇತ್ರಕ್ಕೆ ಘೋಷಿಸಲಾದ 32 ಭರವಸೆಗಳ ಪೈಕಿ 29 ಈಡೇರಿಸಿಲ್ಲ, “ಆರೋಗ್ಯ ” ಕ್ಷೇತ್ರಕ್ಕೆ ನೀಡಿದ್ದ 40 ಭರವಸೆಗಳ ಪೈಕಿ 35 ಭರವಸೆ ಈಡೇರಿಲ್ಲ, ಮೂಲ ಸೌಕರ್ಯ ಕ್ಷೇತ್ರದಲ್ಲಿ 48 ಭರವಸೆಗಳ ಪೈಕಿ 40 ಭರವಸೆ ಪೂರ್ಣಗೊಂಡಿಲ್ಲ, ಕೈಗಾರಿಕಾಭಿವೃದ್ಧಿಗೆ 23 ಭರವಸೆಗಳನ್ನು ನೀಡಿ 22 ಭರವಸೆ ಈಡೇರಿಸಿಲ್ಲ, ಈ ಭರವಸೆಗಳ ವಿಚಾರಗಳಲ್ಲಿ ಸರ್ಕಾರ ವಿಫಲವಾಗಿದ್ದು ಏಕೆ? ಎಂಬುದಕ್ಕೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಬಸವರಾಜ ಬೊಮ್ಮಾಯಿ ಅವರು 2022-2023 ಬಜೆಟ್’ನಲ್ಲಿ ಹೇಳಿರುವ ಸುಳ್ಳುಗಳ ಕುರಿತಾದ 10 ಪ್ರಶ್ನೆಗಳನ್ನು ಕೇಳಿದ್ದು, ಅವುಗಳಿಗೆ ಉತ್ತರಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಶ್ನೆಗಳೇನು ?
1. ಬಜೆಟ್’ನಲ್ಲಿ ಘೋಷಿಸಲಾದ 339 ಕಾರ್ಯರೂಪಕ್ಕೆ ತರುವ ಭರವಸೆಗಳ ಪೈಕಿ 207 ಭರವಸೆಗಳನ್ನು ಸರ್ಕಾರಿ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದರೆ. ಉಳಿದ 132 ಭರವಸೆಗಳು ಅನುಷ್ಠಾನಕ್ಕೆ ತಂದಿಲ್ಲ ಏಕೆ?
2. 2022-2023ನೇ ಸಾಲಿನ ಬಜೆಟ್ನಲ್ಲಿ ಘೋಷಿಸಲಾದ ಅನುದಾನಗಳ ಪೈಕಿ ಕೇವಲ 56% ಮಾತ್ರ ಬಳಕೆ ಮಾಡಿರುವುದು ಏಕೆ?
3. 438 “ನಮ್ಮ ಕ್ಲಿನಿಕ್”ಗಳು ಕೇವಲ ಕಾಗದದ ಮೇಲೆ ಉಳಿದಿರುವುದೇಕೆ?
4. 19 ಲಕ್ಷ ಬಾಲಕಿಯರಿಗೆ ನೆರವಾಗಬೇಕಿದ್ದ “ಶುಚಿ” ಯೋಜನೆಯನ್ನು ಇದುವರೆಗೆ ಪುನಾರಂಭಿಸಿಲ್ಲ ಏಕೆ?
5. ಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನೀಡಿದ್ದ 3000 ಕೋಟಿ ರೂಪಾಯಿಗಳ ಅನುದಾನ ಪೈಕಿ ಬಸವರಾಜ ಬೊಮ್ಮಾಯಿ ಶೇ. 50 ರಷ್ಟು ಅನುದಾನವನ್ನೂ ಬಳಸಿಲ್ಲ ಏಕೆ?
6. ಒಕ್ಕಲಿಗ ಅಭಿವೃದ್ಧಿ ಮಂಡಳಿ ಮತ್ತು ಬಿಲ್ಲವ ಕೋಶಕ್ಕೆ ಅನುದಾನ ಬಿಡುಗಡೆ ಮಾಡಲು ಬಸವರಾಜ ಬೊಮ್ಮಾಯಿ ವಿಫಲರಾಗಿದ್ದು ಏಕೆ?
7. ಬೊಮ್ಮಾಯಿ ಮತ್ತು ಮೋದಿ ಸರ್ಕಾರ ಎಸ್ಸಿ/ಎಸ್ಟಿ ಮೀಸಲಾತಿ ಕಾಯಿದೆಯನ್ನು ಸಂವಿಧಾನದ 9ನೇ ಷೆಡ್ಯೂಲ್’ಗೆ ಸೇರಿಸುವ ಪ್ರಕ್ರಿಯೆಗೆ ಮುಂದಾಗಿಲ್ಲ ಏಕೆ?
8. ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿಯನ್ನು ತರಾತುರಿಯಲ್ಲಿ ಘೋಷಣೆ ಮಾಡಿದ್ದು ಏಕೆ?
9. ಎಸ್ ಸಿ, ಕುರುಬ ಹಾಗೂ ಇತರೆ ಹಿಂದುಳಿದ ಸಮುದಾಯಗಳಿಗೆ ಕೊಟ್ಟ ಭರವಸೆ ಈಡೇರಿಸದೇ ಇರುವುದು ಏಕೆ?
10. ಗೋವಾದಲ್ಲಿ ಕನ್ನಡ ಭವನ ಎಲ್ಲಿದೆ?
2023-24ನೇ ಸಾಲಿನ ಸುಳ್ಳಿನ ಬಜೆಟ್ ಮಂಡನೆಯಾಗುವ ಮೊದಲೇ ಕನ್ನಡಿಗರು ಅದನ್ನು ತಿರಸ್ಕಾರ ಮಾಡಿದ್ದಾರೆ ಎಂದು ರಣದೀಪ್ ಸುರ್ಜೆವಾಲ ತಿಳಿಸಿದರು.






