ಪ್ರವಾದಿ ಮಹಮ್ಮದ್ ಕುರಿತಾದ ವಿವಾದಾತ್ಮಕ ಟ್ವೀಟ್ಗೆ ಸಂಬಂಧಿಸಿದಂತೆ ಪಕ್ಷದಿಂದ ಉಚ್ಛಾಟನೆಯಾಗಿರುವ ದಿಲ್ಲಿ ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್, ತಮ್ಮ ಕುಟುಂಬವು ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿಗೆ ಒಳಗಾಗುವ ಅಪಾಯದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ನನ್ನ ಮತ್ತು ನನ್ನ ಕುಟುಂಬದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾನು ವಿನಮ್ರತೆಯಿಂದ ಎಲ್ಲರಿಗೂ ಮನವಿ ಮಾಡುತ್ತೇನೆ. ನನ್ನ ಮನವಿಗಳ ಮಧ್ಯೆಯೂ, ಅನೇಕ ಜನರು ನನ್ನ ಮನೆಯ ವಿಳಾಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಂದ ನನ್ನ ಕುಟುಂಬ ಬೆದರಿಕೆ ಎದುರಿಸುತ್ತಿದೆ” ಎಂದು ನವೀನ್ ಜಿಂದಾಲ್ ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.

ತಮಗೆ ಎಲ್ಲಿಂದ ಬೆದರಿಕೆಗಳು ಬಂದಿವೆಯೋ ಆ ನಂಬರ್ನ ಸ್ಕ್ರೀನ್ಶಾಟ್ ಅನ್ನು ಕೂಡ ನವೀನ್ ಜಿಂದಾಲ್ ಹಂಚಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದಿಲ್ಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.