ಮೊದಲು ರಾಜೀನಾಮೆ ಕೊಡು. ಮುಟ್ಟಿನೋಡುವ ಹಾಗೆ ಮಾಡುವಂತೆ ಎಂದು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಗದಗದ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು,
ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರ. ಬೊಮ್ಮಾಯಿ ಅವರು ನೇಮಕವಾದ ಮುಖ್ಯಮಂತ್ರಿ. ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಲ್ಲ. ಬೊಮ್ಮಾಯಿ ಅವರೇ ನೀವ್ಯಾಕೆ ಪೊಲೀಸರನ್ನು ವರ್ಗಾವಣೆ ಮಾಡಿದಿರಿ. ಅಕ್ರಮ ನಡೆದಿದೆಯೋ ಇಲ್ವೋ..? ನಡೆಯದಿದ್ದರೆ ಪಟ್ಟಿಯನ್ನು ಏಕೆ ರದ್ದು ಮಾಡಿದಿರಿ? ಮರು ಪರೀಕ್ಷೆಗೆ ಏಕೆ ಆದೇಶ ಮಾಡಿದಿರಿ? ಸಿಎಂ ಬೊಮ್ಮಾಯಿ, ಆರೋಪಿಗಳ ರಕ್ಷಣೆ ಮಾಡುತ್ತಿದ್ದಾರೆ. ಜೊತೆಗೆ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈಲ್ವೇ ಮಂತ್ರಿಯಾದಾಗ ರೈಲು ಅಪಘಾತ ನಡೆದಿತ್ತು. ಆಗ ಅವರು ಯಾಕೆ ರಾಜೀನಾಮೆ ಕೊಟ್ಟರು?
ಅವರೇನು ರೈಲು ನಡೆಸ್ತಿದ್ರಾ? ಅಪಘಾತ ಆಗಿದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಆದರೆ ಇಗಿನವರಿಗೆ ಮಾನ ಮರ್ಯಾದೆ ಏನೂ ಇಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಪಿಎಸ್ಐ ಆಯ್ಕೆ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಅಶ್ವತ್ಥ್ ನಾರಾಯಣ ಅವರ ಇಬ್ಬರು ಸಂಬಂಧಿಕರು ಆಯ್ಕೆಯಾಗಿದ್ದಾರೆ. ಒಬ್ಬ 6ನೇ ರ್ಯಾಂಕ್, ಇನ್ನೊಬ್ಬ 10ನೇ ರ್ಯಾಂಕ್ ಪಡೆದಿದ್ದಾರೆ. ಅವರ ಹತ್ತಿರ ಅಶ್ವತ್ಥ್ ನಾರಾಯಣ ಅವರ ಸಹೋದರ ದುಡ್ಡು ತೆಗೆದುಕೊಂಡಿದ್ದಾರೆ ಅನ್ನುವ ಮಾಹಿತಿ ಇದೆ. ಆದರೆ ಪೊಲೀಸರು ಇವರನ್ನು ಕರೆದುಕೊಂಡು ಹೋಗಿ ಪುನಃ ಬಿಟ್ಟು ಕಳಿಸಿದ್ದಾರೆ. ಯಾರ ಪ್ರಭಾವದಿಂದ ಬಿಟ್ಟು ಕಳಿಸಿದ್ದಾರೆ? ಅದಕ್ಕೆ ಈ ಕಾರಣದಿಂದ ಸಚಿವ ಅಶ್ವತ್ಥ್ ನಾರಾಯಣ ರಾಜೀನಾಮೆ ಕೊಡಿ ಅಂತಾ ನಾವು ಕೇಳಿದ್ದು ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತ್ ಪೌಲ್ ಅವರನ್ನು ಯಾಕೆ ವರ್ಗಾವಣೆ ಮಾಡಿದರು?
ಡಿವೈಎಸ್ಪಿ ಅವರನ್ನು ಯಾಕೆ ಅರೆಸ್ಟ್ ಮಾಡಿದರು?
ಹೀಗಾಗಿ ಪ್ರಕರಣವನ್ನು ಸಿಐಡಿಯಿಂದ ತನಿಖೆ ಮಾಡಿದರೆ ಸಾಲದು. ಇದರಲ್ಲಿ ಭ್ರಷ್ಟಾಚಾರ, ಅಕ್ರಮ ನಡೆದಿದೆ. ಮಂತ್ರಿಗಳು ಶಾಮೀಲಾಗಿದ್ದಾರೆ.
ಮಂತ್ರಿಗಳಿಗೆ ಗೊತ್ತಿಲ್ಲದೇ ಅಕ್ರಮ ನಡೆಯುತ್ತಾ?
ಹೀಗಾಗಿ ಪ್ರಕರಣದ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರಿಯಾಂಕ್ ಖರ್ಗೆಯವರನ್ನು ವಿಚಾರಣೆಗೆ ಕರೆಯುವ ಅಧಿಕಾರ ಅವರಿಗೆ ಇಲ್ಲ. ದಾಖಲಾತಿಗಳಿದ್ದರೆ ಕೊಡಿ ಅಂತಾ ಹೇಳಬಹುದು. ಐಒ ಮುಂದೆ ಹಾಜರಾಗಿ
ಅಂತಾ ಹೇಳವುದಕ್ಕೆ ಆಗುವುದಿಲ್ಲ ಎಂದರು.






