ಅಸ್ಸಾಂನಲ್ಲಿ ಭಾರೀ ವಿವಾದ ಸೃಷ್ಟಿಸಿದ್ದ ಪೌರತ್ವ ಪರಿಶೀಲನೆ ಪ್ರಕ್ರಿಯೆಯು ಇದೀಗ ಮತ್ತೊಂದು ಎಡವಟ್ಟನ್ನು ಮಾಡಿಕೊಂಡಿದೆ. ಅಸ್ಸಾಂನ ವಿದೇಶಿಯರ ನ್ಯಾಯಮಂಡಳಿಯು 2016 ರಲ್ಲಿ ಮೃತರಾದ ವ್ಯಕ್ತಿಯೊಬ್ಬರಿಗೆ ಅವರು ಭಾರತದ ಪ್ರಜೆಯೇ ಎಂದು ಸಾಬೀತುಪಡಿಸಲು ನೋಟಿಸ್ ಕಳುಹಿಸಿ ವಿವಾದ ಸೃಷ್ಟಿಸಿದೆ.
ಮಾರ್ಚ್ 15 ರಂದು ನ್ಯಾಯಮಂಡಳಿಯು ಮೃತ ಶ್ಯಾಮ ಚರಣ್ ದಾಸ್ ಅವರಿಗೆ ನೋಟಿಸ್ ಕಳುಹಿಸಿದ್ದು ಮಾರ್ಚ್ 30 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ವಿಶೇಷವೆಂದರೆ, ಸೆಪ್ಟೆಂಬರ್ 23, 2016 ರಲ್ಲಿ ಅದೇ ನ್ಯಾಯಾಲಯವು ಚರಣ್ ದಾಸ್ ಅವರ ಪೌರತ್ವಕ್ಕೆ ಸಂಬಂಧಿಸಿದ ಪ್ರಕರಣವನ್ನು ಮುಕ್ತಾಯಗೊಳಿಸಿತ್ತು. ಪ್ರಕರಣವನ್ನು ಮುಕ್ತಾಯಗೊಳಿಸುಲು ದಾಸ್ ಅವರ ಕುಟುಂಬವು ದಾಸ್ ಅವರ ಮರಣ ಪ್ರಮಾಣ ಪತ್ರವನ್ನು ನ್ಯಾಯಮಂಡಳಿಗೆ ಸಲ್ಲಿಸಿದ್ದರು. ನ್ಯಾಯಮಂಡಳಿಗೆ ಸಲ್ಲಿಸಿದ, ಅಸ್ಸಾಂ ಸರ್ಕಾರ ನೀಡಿದ ಮರಣ ಪ್ರಮಾಣಪತ್ರದ ಪ್ರಕಾರ, ದಾಸ್ ಅವರು ಮೇ 6, 2016 ರಂದು ನಿಧನರಾಗಿದ್ದಾರೆ.
ಆದಾಗ್ಯೂ, ಈ ವರ್ಷದ ಆರಂಭದಲ್ಲಿ, ಅವರನ್ನು ದಾಖಲೆ ರಹಿತ ಅಕ್ರಮ ವಲಸಿಗ ಎಂದು ಶಂಕಿಸಿರುವ ಗಡಿ ಪೊಲೀಸರು ದಾಸ್ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿದ್ದಾರೆ. ಅದರ ಆಧಾರದಲ್ಲಿ ನ್ಯಾಯಾಲಯವು ನೋಟಿಸ್ ನೀಡಿದೆ ಎಂದು scroll.in ವರದಿ ಮಾಡಿದೆ.
ದಾಸ್ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಜನವರಿ 1, 1966 ಮತ್ತು ಮಾರ್ಚ್ 23, 1973 ರ ನಡುವೆ ಅಸ್ಸಾಂಗೆ ಪ್ರವೇಶಿಸಿ ಸಿಲ್ಚಾರ್ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಅದರ ಆಧಾರದ ಮೇಲೆ ನ್ಯಾಯಮಂಡಳಿಯ ನೋಟಿಸ್ ಜಾರಿಯಾಗಿದೆ ಎಂದು ವರದಿಯಾಗಿದೆ.

ಮೃತ ತಂದೆಯನ್ನು ಹಾಜರಾಗಲು ಕೋರ್ಟ್ ನೋಟಿಸ್ ನೀಡಿದ್ದು ಕುಟುಂಬಸ್ಥರಿಗೆ ಆಘಾತ ತಂದಿದೆ. ತನ್ನ ತಂದೆಯ ಪೌರತ್ವವನ್ನು ಸಾಬೀತುಪಡಿಸಲು ಬೇಕಾದ ಎಲ್ಲಾ ಅವಶ್ಯಕ ದಾಖಲೆಗಳನ್ನು ಇದ್ದರೂ, ಪೌರತ್ವ ಸಾಬೀತುಪಡಿಸಲು ಅವರು ನ್ಯಾಯಾಲಯದಲ್ಲಿ ಬಹಳ ವರ್ಷಗಳ ಕಾಲ ಹೋರಾಡಿದ್ದರು ಎಂದು ದಾಸ್ ಪುತ್ರಿ ಬೇಬಿ ದಾಸ್ ತಿಳಿಸಿದ್ದಾರೆ.
ಐದು ವರ್ಷಗಳ ಹಿಂದೆ ನಾವು ನಮ್ಮ ತಂದೆಯನ್ನು ಕಳೆದುಕೊಂಡಿದ್ದೇವೆ. ಆದರೀಗ, ಅವರ ಮರಣದ ನಂತರ, ನಾವು ಅವರ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕಾಗಿದೆ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಘಟನೆಯು ವ್ಯವಸ್ಥೆಯ ಮೇಲೆ ಕಳಪೆಗೆ ನಿರ್ವಹಣೆಗೆ ಸಾಕ್ಷಿ ಎಂದು ಸಾಮಾಜಿಕ ಕಾರ್ಯಕರ್ತ ಕಮಲ್ ಚಕ್ರವರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಪರಿಶೀಲನೆಯ ಆಧಾರದ ಮೇಲೆಯೇ ಮೃತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಅಂದರೆ, ಪೊಲೀಸರು ಆರೋಪಿಯ ಮನೆಗೆ ದಾಖಲೆಗಳನ್ನು ಪರಿಶೀಲಿಸಲು ಕೂಡಾ ಭೇಟಿ ನೀಡಲಿಲ್ಲ ಎಂದು ಇದರ ಮೂಲಕ ಅರ್ಥವಾಗುತ್ತದೆ. ತುಂಬಾ ಮಂದಿಗೆ ಕೋರ್ಟ್ ನೋಟಿಸ್ ನೀಡಿರುವುದರಿಂದ ಇದು ಅಪಾಯಕಾರಿಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.









