ಯುರೋಪ್ ಪ್ರವಾಸ ಮುಗಿಸಿ ವಾಪಸ್ ಬೆಂಗಳೂರಿಗೆ ಬಂದಿಳಿದ ಕುಮಾರಸ್ವಾಮಿ, ಬೆಳಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ್ದರು. ಕುಟುಂಬ ಸಮೇತ ಯುರೋಪ್ ಪ್ರವಾಸ ಹೋಗಿದ್ದೆವು. ಆದರೆ ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ಮಾಡಲಾಗ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಹಾಗಿದ್ದರೆ ರಾಜ್ಯದಲ್ಲಿ ಎಷ್ಟರ ಮಟ್ಟಕ್ಕೆ ರಾಜ್ಯ ಪೊಲೀಸ್ ಇಲಾಖೆಯ ಇಂಟಲಿಜೆನ್ಸ್ ವಿಭಾಗ ಕೆಲಸ ಮಾಡುತ್ತಿದೆ ಎಂದು ಟೀಕಿಸಿದ್ದರು. ನಾವು ಕುಟುಂಬ ಸಮೇತ ಹೋಗಿದ್ದು ಯುರೋಪ್ ದೇಶಕ್ಕೆ, ಆದರೆ ಸಿಂಗಾಪುರದಲ್ಲಿ ಸರ್ಕಾರ ಬೀಳಿಸಲು ಸಂಚು ಮಾಡ್ತಿದ್ದಾರೆ ಎಂದು ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದಿದ್ದರು.
ಜೆಡಿಎಸ್ ಬರೀ 19 ಸ್ಥಾನ ಗೆದ್ದರೂ ನಮ್ಮ ಭಯವೇ..?
ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಹಿಡಿದಿದೆ. ಜೆಡಿಎಸ್ ಪಕ್ಷ ಕೇವಲ 19 ಸ್ಥಾನ ಗೆದ್ದಿದೆ. ಆದರೂ ಕೂಡಾ ಕಾಂಗ್ರೆಸ್ನವರಿಗೆ ನಮ್ಮ ಭಯ ಎಷ್ಟಿಗೆ ಅಂತಾ ನಾವು ಕಾಣಬಹುದು. ನಾನು ವಿದೇಶದಲ್ಲಿದ್ರೂ ಪ್ರತಿನಿತ್ಯದ ಬೆಳವಣಿಗೆಗಳನ್ನ ಗಮನಿಸಿದ್ದೇವೆ. ಗೃಹ ಇಲಾಖೆಯಲ್ಲಿ ಯಾವ ರೀತಿ ವರ್ಗಾವಣೆ ದಂಧೆ ನಡೆಯಿತು. ಪೊಲೀಸ್ ಅಧಿಕಾರಿಗಳನ್ನ ಯಾವ ಮಟ್ಟಿಗೆ ಬಳಸಿಕೊಂಡ್ರೆ, ಜನ ಸಾಮಾನ್ಯರಿಗೆ ಪೊಲೀಸ್ರು ಯಾವ ಮಟ್ಟದ ರಕ್ಷಣೆ ನೀಡಬಹುದು ಎಂದು ಪ್ರಶ್ನಿಸಿದ್ರು. ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್ನಲ್ಲಿ ಸಭೆ ನಡೆಯಬೇಕಿದ್ರೆ ಯಾರೆಲ್ಲಾ ಇದ್ರು. ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್ವಿ ಟ್ಯಾಕ್ಸ್ನವರು ಅಲ್ಲಿ ಇದ್ದಿದ್ದು ಯಾಕೆ ಎಂದು ಹೊಸ ಬಾಂಬ್ ಸಿಡಿಸಿದ್ರು.
ಭವಿಷ್ಯ ನಂಬಿಕೊಂಡು ಸರ್ಕಾರ ಪತನದ ಹೇಳಿಕೆ..!
ರಾಜ್ಯ ಸರ್ಕಾರ ಪತನದ ಷಡ್ಯಂತರದ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಕುಮಾರಸ್ವಾಮಿ ಟಾಂಟ್ ಕೊಟ್ಟಿದ್ದು, ಯಾಕೆ ಅವರು ಹಿಂಗೆ ಮಾಡ್ಕೊಂಡಿದ್ದಾರೆ ಗೊತ್ತಿಲ್ಲ. ಬಹುಶಃ ಅವರಿಗೆ ಈ ಸರ್ಕಾರದ ಅವಧಿ ಬಹಳ ದಿನ ಇರಲ್ಲ ಅಂತಾ ಅಂದ್ಕೊಂಡಿರಬೇಕು. ನಮ್ಮಗಿಂತ ಜಾಸ್ತಿ ಡಿ.ಕೆ ಶಿವಕುಮಾರ್ ಅವರೇ ಶಾಸ್ತ್ರ ಕೇಳ್ತಾರೆ. ಜೋತಿಷ್ಯದವರನ್ನ ಬಹಳ ನಂಬಿರೋರು. ಹಲವಾರು ರೀತಿ ಕುತಂತ್ರಗಳನ್ನ ಮಾಡ್ತಾರೆ. ಜೋತಿಷ್ಯದಿಂದ ಕೃತಕವಾದ ಶಕ್ತಿಯನ್ನ ಚುನಾವಣೆಯಲ್ಲಿ ತುಂಬಿಕೊಂಡಿದ್ದಾರೆ. ಆ ಕೃತಕವಾದ ಶಕ್ತಿ ಬಹುಶಃ ಬಹಳ ದಿನ ಇರಲ್ಲ ಅಂತಾ ಅವರ ತಲೆಯಲ್ಲಿ ಇರಬಹುದು. ಅದೇ ಕಾರಣದಿಂದ ಸರ್ಕಾರ ಪತನದ ಬಗ್ಗೆ ಹೇಳಿಕೆ ನೀಡಿರಬೇಕು ಎಂದಿದ್ದಾರೆ.
ಬಿಡಿಎ ಇಲಾಖೆಯಿಂದ 250ಕೋಟಿಗೆ ಡಿಮ್ಯಾಂಡ್..!
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಪರ್ಸಂಟೇಜ್ ನೀಡುವಂತೆ ಕೇಳಿರುವ ಆರೋಪದ ಬಗ್ಗೆ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದು, ಗುತ್ತಿಗೆದಾರರಿಗೆ ಇಂತಿಷ್ಟು ಪರ್ಸಂಟೇಜ್ ನೀಡುವುದಕ್ಕೆ ಹೇಳಿದ್ದಾರಂತೆ. ನಾನು ಯುರೋಪ್ನಲ್ಲಿ ಇದ್ದಾಗಲೇ ಈ ಮಾಹಿತಿ ಬಂತು. ಬೆಂಗಳೂರಿನಲ್ಲಿ ಪರ್ಸಂಟೇಜ್ ನೀಡಲು ಹೇಳ್ತಿದ್ದಾರಂತೆ. ಈ ಬಗ್ಗೆ ಗುತ್ತಿಗೆದಾರ ಸಂಘ ಮೀಟಿಂಗ್ ಮಾಡಬೇಕಿತ್ತಂತೆ. ಮಂತ್ರಿ, ಮಂತ್ರಿ ಚೇಲಾಗಳು ಪರ್ಸಂಟೇಜ್ ಕೇಳ್ತಿದ್ದಾರೆ ಎಂದಿದ್ದಾರೆ. ಬಿಡಿಎ ಅಧಿಕಾರಿಗಳಿಗೆ 250 ಕೋಟಿ ಸಂಗ್ರಹ ಮಾಡಬೇಕು ಎಂದು ಹೇಳಿದ್ದಾರಂತೆ. ದೆಹಲಿಗೆ ಕಳುಹಿಸಬೇಕು, ನಾವು ಪಟ್ಟಿ ಕೊಡ್ತೇವೆ ನೀವೇ ಹೋಗಿ ತಲುಪಿಸಿ ಬರಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದಾರಂತೆ. ಇದನ್ನು ಬಿಡಿಎ ಅಧಿಕಾರಿಗಳೇ ನನಗೇ ಮಾಹಿತಿ ನೀಡಿದ್ದಾರೆ ಎಂದು ಕುಟುಕಿದ್ದಾರೆ. ಡಿ.ಕೆ ಶಿವಕುಮಾರ್ ಮಾತ್ರ ದೊಡ್ಡವರು ಹೇಳಲಿ ಬಿಡಿ, ನಾವು ಕೇಳ್ತೇವೆ ಎಂದು ತೇಪೆ ಸಾರಿಸುವ ಕೆಲಸ ಮಾಡಿದ್ದಾರೆ.
ಕೃಷ್ಣಮಣಿ