ಆತ್ಮನಿರ್ಭರ ಆಯವ್ಯಯ ಎಂದು ಬಣ್ಣಿಸಿದ ಜಯರಾಂ ರಾಯ್ಪುರ
ಬೆಂಗಳೂರು: 2023-2024ನೇ ಸಾಲಿನ ರೂ.11,158 ಸಾವಿರ ಕೋಟಿ ಗಾತ್ರದ ಬಿಬಿಎಂಪಿ ಬಜೆಟ್’ನ್ನು ಬಜೆಟ್ ಗುರುವಾರ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಂ ರಾಯ್ಪುರ ಮಂಡನೆ ಮಾಡಿದ್ದಾರೆ.
ಸರ್.ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್)ದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧ್ಯಕ್ಷತೆ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರ ಉಪಸ್ಥಿತಿಯಲ್ಲಿ ಜಯರಾಮ್ ರಾಯಪುರ ಬಿಬಿಎಂಪಿ ಬಜೆಟ್ ಮಂಡನೆ ಮಾಡಿದರು.
ಈ ವೇಳೆ ಇದು ಆತ್ಮನಿರ್ಭರ ಆಯವ್ಯಯ ಎಂದು ತಿಳಿಸಿದರು.
ಬಜೆಟ್ ಮಂಡಿಸಿದ ಜಯರಾಮ್ ರಾಯಪುರ ಅವರು, ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ ರೂ. ಹಾಗೂ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕಾಗಿ ಒಟ್ಟು 210 ಕೋಟಿ ರೂ ಘೋಷಿಸಿದರು.
ಬೆಂಗಳೂರಿನ ಸೌಂದರ್ಯ ಹೆಚ್ಚಿಸಲು ಹಾಗೂ ಪ್ರವಾಸಿಗರ ಮನಸೆಳೆಯಲು 50 ಕೋಟಿ ರೂ.ಗಳ ವೆಚ್ಚದಲ್ಲಿ 10 ಹೊಸ ಸಿಟಿ ಪ್ಲಾಜಾ ಗಳನ್ನು ನಗರದ ಹಲವು ಜನವಸತಿ ಪ್ರದೇಶಗಳಲ್ಲಿ ನಿರ್ಮಿಸಲಾಗುವುದು. ಈ ಪ್ಲಾಜಾಗಳಲ್ಲಿ ಕಾರಂಜಿ, ಆಟದ ಸ್ಥಳಗಳು, ಆಹಾರ ಮಳಿಗೆಗಳು ಹಾಗೂ ಮುಕ್ತವಾಗಿ ಕುಳಿತು ವಿರಮಿಸುವ ಸೌಲಭ್ಯಗಳು ಇರಲಿವೆ ಎಂದರು.
ಬೆಂಗಳೂರಿನಲ್ಲಿ ಹಲವು ಕೊಳಗೇರಿ ಪ್ರದೇಶಗಳಿದ್ದು, 2023-24ನೇ ವರ್ಷದಲ್ಲಿ 80 ಕೋಟಿ ರೂ ಗಳ ವೆಚ್ಚದಲ್ಲಿ 8 ಕೊಳಗೇರಿ ಪ್ರದೇಶಗಳ ಪುನರ್ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುವುದು. ಹಂತ ಹಂತವಾಗಿ ಬೆಂಗಳೂರಿನ ಎಲ್ಲಾ ಕೊಳಗೇರಿ ಪ್ರದೇಶಗಳ ಪುನರ್ ಅಭಿವೃದ್ಧಿ ಮಾಡಿ ನಗರವನ್ನು ಕೊಳಗೇರಿ ಮುಕ್ತ ಪ್ರದೇಶವನ್ನಾಗಿ ಮಾಡುವ ಯೋಜನೆಯಿದೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ 42 ಮೇಲ್ವೇತುವೆ ಮತ್ತು 28 ಕೆಳಸೇತುವೆಗಳಿದ್ದು, ಈ ವರ್ಷದಲ್ಲಿ ಮತ್ತೆ 4 ಮೇಲ್ಸೇತುವೆಗಳು ಮತ್ತು 4 ಕೆಳಸೇತುವೆಗಳು ಸೇರ್ಪಡೆಯಾಗಬಹುದಾಗಿದ್ದು, ಪಾದಚಾರಿ ಸುರಂಗ ಮಾರ್ಗ ಸೇರಿದಂತೆ ಈ ಮೇಲೇತುವೆ ಮತ್ತು ಕೆಳಸೇತುವೆಗಳ ನಿರ್ವಹಣೆಗೆ 20 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ನಿರ್ವಹಣೆ ಮತ್ತು ಟೆಂಡರ್ ಶೂರ್ ಅಡಿಯಲ್ಲಿ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗಿರುವ ರಸ್ತೆಗಳ ನಿರ್ವಹಣೆಗೆ 20 ಕೋಟಿಗಳನ್ನು ಮೀಸಲಿಡಲಾಗಿದೆ.
ತುಮಕೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್ ಗಾಗಿ 70 ಕೋಟಿ ರೂ, ಗೋಕುಲ ರಸ್ತೆಯ ಮತ್ತಿಕೆರೆ ತಿರುವಿನಲ್ಲಿ ಐ.ಐ.ಎಸ್.ಸಿ. ಒದಗಿಸುತ್ತಿರುವ ಭೂಮಿಯನ್ನು ಬಳಸಿಕೊಂಡು 40 ಕೋಟಿ ರೂ ವೆಚ್ಚದಲ್ಲಿ ಮೇಲ್ವೇತುವೆ ನಿರ್ಮಾಣ, ಮೇಖಿವೃತ್ತ ಕೆಳಸೇತುವೆ ಮೇಲ್ಬಾಗದಲ್ಲಿ ಜಯಮಹಲ್ ರಸ್ತೆಯಲ್ಲಿ 65 ಕೋಟಿ ರೂ ಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ, ಈಗಾಗಲೇ ಪಾಲಿಕೆಯ ವತಿಯಿಂದ ನಿರಾಶ್ರಿತರಿಗಾಗಿ 48 ರಾತ್ರಿ ತಂಗುದಾಣಗಳನ್ನು ನಡೆಸಲಾಗುತ್ತಿದ್ದು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಒಟ್ಟು 84 ರಾತ್ರಿ ತಂಗುದಾಣಗಳನ್ನು ನಿರ್ವಹಿಸಬೇಕಾಗಿದ್ದು, 2023-24ನೇ ಆಯವ್ಯಯದಲ್ಲಿ 3 ಕೋಟಿ ರೂ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದರು.
2022-23 ನೇ ವರ್ಷದಲ್ಲಿ ಎಲ್ಲಾ ವರ್ಗದ ಬಡ ವಿದ್ಯಾರ್ಥಿಗಳಿಗೆ 10,000 ಲ್ಯಾಪ್ಟಾಟ್’ಗಳನ್ನು ವಿತರಿಸಲಾಗುತ್ತಿದೆ. 2023-24ರಲ್ಲಿಯೂ ಲ್ಯಾಪ್ಟಾಪ್ಗಳನ್ನು ವಿತರಿಸಲು ರೂ.25 ಕೋಟಿ ಒದಗಿಸಲಾಗಿದೆ. 2022-23ರಲ್ಲಿ ಉತ್ತಮ ಬ್ರಾಂಡ್’ನ 8091 ಹೊಲಿಗೆ ಯಂತ್ರಗಳನ್ನು ಆಯ್ದ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. 2023-24 ವರ್ಷದಲ್ಲಿ ಇದೇ ಯೋಜನೆಗೆ 9 ಕೋಟಿ ರೂ ಒದಗಿಸಲಾಗಿದೆ.
2022-23ನೇ ವರ್ಷದಲ್ಲಿ ಪಾಲಿಕೆಯ ಎಲ್ಲಾ ಹಳೆಯ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತೆ ಕೈಗೆತ್ತಿಕೊಳ್ಳಲಾಗಿದೆ. ಈ 2022-23ನೇ ವರ್ಷದಲ್ಲಿ 1500 ಒಂಟಿ ಮನೆಗಳ ನಿರ್ಮಾಣಕ್ಕೆ ವಿವಿಧ ವರ್ಗಗಳ ಜನರಿಗೆ ತಲಾ 5 ಲಕ್ಷ ರೂಗಳಂತೆ ನೀಡಲಾಗಿದೆ. 2023-24ನೇ ವರ್ಷದಲ್ಲಿ 2000 .ಒಂಟಿ ಮನೆ ನಿರ್ಮಾಣ ಯೋಜನೆಯ ಅನುಷ್ಠಾನಕ್ಕೆ 100 ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ.
2022-23ನೇ ವರ್ಷದಲ್ಲಿ ಅಮೃತ ನಗರೋತ್ಥಾನ ಯೋಜನೆಯಲ್ಲಿ 160 ಕೋಟಿ ರೂ ವೆಚ್ಚದಲ್ಲಿ ಪಾಲಿಕೆಯ ಶಾಲೆಗಳ ಕಟ್ಟಡ ನವೀಕರಣ, ಅಗೆಯಲ್ಪಟ್ಟ ರಸ್ತೆಗಳ ಪುನರ್ ನಿರ್ಮಾಣಕ್ಕೆ 300 ಕೋಟಿ ರೂ. ನಿಗದಿ, 345 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಫ್ಲೈಓವರ್ ನಿರ್ಮಾಣ, 75 ಜಂಕ್ಷನ್ ಗಳ ಅಭಿವೃದ್ಧಿಗೆ 150 ಕೋಟಿ ರೂಪಾಯಿ ಮೀಸಲು, ಅಗೆಯಲ್ಪಟ್ಟ ರಸ್ತೆಗಳ ಪುನರ್ ನಿರ್ಮಾಣಕ್ಕೆ 300 ಕೋಟಿ ರೂ. ನಿಗದಿ, 1,410 ಕೋಟಿ ವೆಚ್ಚದಲ್ಲಿ 150 ಕಿ.ಮೀ. ರಸ್ತೆಗೆ ವೈಟ್ ಟಾಪಿಂಗ್ ಮಾಡುವುದಾಗಿ ತಿಳಿಸಿದರು.
ಬೆಂಗಳೂರಿನ ರಸ್ತೆಗಳಲ್ಲಿ ಪ್ರಯಾಣ ಮಾಡುವ ಹೆಂಗಸರ ಸೌಲಭ್ಯಕ್ಕೆಂದು 250 ಶೀ-ಟಾಯ್ಲೆಟ್ ಗಳನ್ನು 2023-24ನೇ ವರ್ಷದಲ್ಲಿ ನಿರ್ಮಾಣ ಮಾಡಲಾಗುವುದು. ಈ ಸ್ಥಳಗಳಲ್ಲಿ ಟಾಯ್ಲೆಟ್ ಜಾಗ, ಬಟ್ಟೆ ಬದಲಾಯಿಸುವಿಕೆಗೆ ಜಾಗ, ಕೈತೊಳೆಯುವ ಸೌಲಭ್ಯಕ್ಕೆ ಸ್ಥಳ ಹಾಗೂ ಮೊಬೈಲ್ ಜಾರ್ಜಿಂಗ್ ಸೌಲಭ್ಯಗಳು ಇರಲಿವೆ ಎಂದು ತಿಳಿಸಿದರು.






