ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ಗೆ ಕರೋನಾ ಸೋಂಕು ಬಂದಿದೆ. ಕಳೆದ ವಾರ ಆಗಸ್ಟ್ 5 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಂಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ಎಸ್ ಸರ ಸಂಚಾಲಕ ಮೋಹನ್ ರಾವ್ ಭಾಗವತ್, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಪ್ರಮುಖರಾಗಿ ಭಾಗಿಯಾಗಿದ್ದರು. ಇನ್ನುಳಿದಂತೆ ಜೊತೆಗೆ ದೇಶದ ವಿವಿಧ ಮೂಲೆಗಳಿಂದ ನೂರಾರು ಸ್ವಾಮೀಜಿಗಳು ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದೀಗ ಎಲ್ಲರಿಗೂ ಆತಂಕ ಶುರು ಆಗಿದೆ.
ಪ್ರಧಾನಿ ಮೋದಿ ಕಟ್ಟೆಚ್ಚರ ವಹಿಸಿದ್ದರು..!
ಪ್ರಧಾನಿ ನರೇಂದ್ರ ಮೋದಿ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವಾಗ ಸಾಕಷ್ಟು ಮುಂಜಾಗ್ರತೆ ವಹಿಸಲಾಗುತ್ತದೆ. ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಲಖನೌಗೆ ವಿಮಾನದಲ್ಲಿ ತೆರಳಿ, ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಅಯೋಧ್ಯೆ ಸಾಕೇತ್ ಕಾಲೇಜು ಹೆಲಿಪ್ಯಾಡ್ನಲ್ಲಿ ಇಳಿದು ತೆರಳಿದ್ದರು. ಎಲ್ಲಿಯೂ ಯಾರೊಂದಿಗೂ ಕೈಕುಲುಕಲಿಲ್ಲ. ಭದ್ರತೆಗೆ ನೇಮಿಸಿದ್ದ 150 ಮಂದಿ ಪೊಲೀಸರೂ ಈಗಾಗಲೇ ಕರೋನಾ ಸೋಂಕು ಬಂದು ಗುಣವಾದರು ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಕರೋನಾ ಸೋಂಕು ಒಮ್ಮೆ ಬಂದು ಗುಣವಾಗಿದ್ದರೆ ಅವರಲ್ಲಿ ಕರೋನಾ ವಿರುದ್ಧ ಹೋರಾಟ ಮಾಡುವ ರೋಗ ನಿರೋಧಕ ಶಕ್ತಿ ಇರುತ್ತದೆ ಎನ್ನಲಾಗಿದೆ. ಕನಿಷ್ಟ ಮೂರು ತಿಂಗಳು ಮತ್ತೆ ಆ ಸೋಂಕು ಬರುವುದಿಲ್ಲ ಅದೇ ಕಾರಣಕ್ಕೆ ಸೋಂಕು ಬಂದವರನ್ನೇ ಭದ್ರತೆಗೆ ನಿಯೋಜಿಸಲಾಗಿತ್ತು. ಆದರೂ ಒಂದು ಎಡವಟ್ಟು ನಡೆದುಬಿಟ್ಟಿದೆ.
ಸೂಕ್ತ ಚಿಕಿತ್ಸೆಗೆ ಯೋಗಿ ಆದಿತ್ಯನಾಥ್ ಸೂಚನೆ..!
ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ತಿ, ರಾಮ ಜನ್ಮಭೂಮಿ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ಗೆ ಕರೋನಾ ಸೋಂಕು ಬಂದಿರುವ ವಿಚಾರ ಸಿಎಂ ಯೋಗಿ ಆದಿತ್ಯನಾಥ್ ಗಮನಕ್ಕೆ ಬಂದಿದ್ದು, ಕೂಡಲೇ ಮಥುರಾ ಜಿಲ್ಲಾಧಿಕಾರಿ ಎಸ್.ಆರ್ ಮಿಶ್ರಾಗೆ ಕರೆ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ಕೊಟ್ಟಿದ್ದಾರೆ. ಮೇದಾಂತ ಆಸ್ಪತ್ರೆ ಹಾಗೂ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿರುವ ಯೋಗಿ ಆದಿತ್ಯನಾಥ್ ಎಷ್ಟು ಸಾಧ್ಯವೋ ಅಷ್ಟು ಮುತುವರ್ಜಿ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಮಥುರಾದಲ್ಲಿ ಪತ್ತೆಯಾಯ್ತು ಕರೋನಾ ಸೋಂಕು..!
ಆಗಸ್ಟ್ 5ರಂದು ಅಯೋಧ್ಯೆಯ ಭೂಮಿಪೂಜೆಯಲ್ಲಿ ಭಾಗಿಯಾದ ಬಳಿಕ ಅಯೋಧ್ಯೆಯಲ್ಲೇ ಇದ್ದ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮುಖ್ಯಸ್ಥ ನೃತ್ಯ ಗೋಪಾಲ್ ದಾಸ್ ಮೊನ್ನೆ ಅಷ್ಟೇ ಮಥುರಾಗೆ ತೆರಳಿದ್ದರು. ಮಥುರಾ ಕೃಷ್ಣ ಜನ್ಮಭೂಮಿ ನ್ಯಾಸದ ಅಧ್ಯಕ್ಷನಾಗಿರುವ ನೃತ್ಯ ಗೋಪಾಲ್ ದಾಸ್ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಈ ವೇಳೆ ಸಣ್ಣ ಪ್ರಮಾಣದ ಜ್ವರದಿಂದ ಬಳಲುತ್ತಿದ್ದ ನೃತ್ಯ ಗೋಪಾಲ್ ದಾಸ್ಗೆ ಪರೀಕ್ಷೆ ಮಾಡಿದಾಗ ಕರೋನಾ ಸೋಂಕು ಇರುವುದು ಪತ್ತೆಯಾಗಿದೆ. ಆಸ್ಪತ್ರೆಗೆ ದಾಖಲಾದ ಬಳಿಕ ಉಸಿರಾಟದ ಸಮಸ್ಯೆ ಆಗಿದ್ದು, ವೈದ್ಯರು ನಿಗಾ ವಹಿಸಿದ್ದಾರೆ ಎನ್ನಲಾಗಿದೆ.
ಮಹಾರಾಜ್ ಜೀಗೆ ಜ್ವರ ಇದೆ ಎನ್ನುವ ಮಾಹಿತಿ ತಿಳಿಯುತ್ತಿದ್ದ ಹಾಗೆ ವೈದ್ಯಕೀಯ ತಂಡ ಸ್ಥಳಕ್ಕೆ ತೆರಳಿ ತಪಾಸಣೆ ಮಾಡಿತು. ಆ ವೇಳೆ ಉಸಿರಾಟ ಸಮಸ್ಯೆಯೂ ಪತ್ತೆಯಾಗಿತ್ತು. ಇದೀಗ ವೈದ್ಯರ ತಂಡ ಎಲ್ಲ ರೀತಿಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದಿದ್ದಾರೆ ಮಥುರಾ ಜಿಲ್ಲಾಧಿಕಾರಿ ಎಸ್. ಮಿಶ್ರಾ. ಸದ್ಯಕ್ಕೆ ಜ್ವರ ಕಡಿಮೆಯಾಗಿದ್ದು, ಉಸಿರಾಟದ ಸಮಸ್ಯೆ ಇದೆ. ಸಿಎಂ ಯೋಗಿ ಆದಿತ್ಯನಾಥ್ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಮೆದಾಂತ ಆಸ್ಪತ್ರೆಗೆ ಶಿಫ್ಟ್ ಮಾಡಲು ಸೂಚನೆ ಕೊಟ್ಟಿದ್ದಾರೆ. ಸದ್ಯ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಆದರೂ ಮೇದಾಂತ್ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದೇವೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕ್ವಾರಂಟೈನ್ ಒಳಗಾಗ್ತಾರಾ..?
ಸೋಂಕಿತ ಸ್ವಾಮೀಜಿ ನೃತ್ಯ ಗೋಪಾಲ್ ದಾಸ್ ಜೊತೆಗೆ ಸೋಂಕು ತಗುಲುವ ನಾಲ್ಕೈದು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಹಾಗಾಗಿ ಹೋಮ್ ಕ್ವಾರಂಟೈನ್ ಆಗುವ ಅವಶ್ಯಕತೆ ಎದುರಾಗಿದೆ. ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಪ್ರಧಾನ ಮಂತ್ರಿ ಕಚೇರಿ ವಕ್ತಾರ ವಿ. ರವಿ ರಾಮ್ ಕೃಷ್ಣ, ಇನ್ನೂ ಆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ಈ ಕ್ಷಣದ ತನಕ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಒಟ್ಟಾರೆ, ಅಯೋಧ್ಯೆ ರಾಮ ಮಂದಿರ ಭೂಮಿಪೂಜೆ ವೇಳೆ ಕೋವಿಡ್ 19 ನಿಯಮಗಳನ್ನು ಪಾಲಿಸುತ್ತಾ ಕಾರ್ಯಕ್ರಮ ನಡೆದರೆ, ಇನ್ನೂ ಹಲವೆಡೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯೂ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಕಾರ್ಯಕ್ರಮ ಎನ್ನುವ ಕಾರಣಕ್ಕೆ ಅಷ್ಟಾಗಿ ಮಹತ್ವ ಪಡೆದುಕೊಳ್ಳಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡರೂ ಅಪಾಯಕ್ಕೆ ಸಿಲುಕಿದ್ದಾರೆಯೇ ಎನ್ನುವ ಅನುಮಾನವನ್ನ ಹುಟ್ಟುಹಾಕಿದೆ. ಇನ್ನೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳಲ್ಲಿ ಯಾರೆಲ್ಲಾ ನೃತ್ಯ ಗೋಪಾಲ್ ದಾಸ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದಾರೋ..? ಯಾರಿಗೆಲ್ಲಾ ಸೋಂಕು ತಗುಲಿದೆಯೋ ಆ ರಾಮನೇ ಬಲ್ಲ. ಒಂದು ವೇಳೆ ಕಾರ್ಯಕ್ರಮದ ಮುಗಿದ ಬಳಿಕ ಸೋಂಕು ತಗುಲಿದ್ದರೆ..? ಇವರೆಲ್ಲರೂ ಬಚಾವ್.
