ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮಂಗಳವಾರದಂದು ಭೇಟಿಯಾಗಲಿದ್ದಾರೆ. ಈ ಭೇಟಿಯು, ಜಗನ್ ನೇತೃತ್ವದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಎನ್ಡಿಎ ಮೈತ್ರಿಕೂಟವನ್ನು ಸೇರುವುದೇ ಎಂಬ ಕುತೂಹಲ ಹಾಗೂ ಚರ್ಚೆ ಹುಟ್ಟು ಹಾಕಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಲ್ಲಿ, ವೈಎಸ್ಆರ್ ಕಾಂಗ್ರೆಸ್ಗೆ ಒಂದು ಕ್ಯಾಬಿನೆಟ್ ದರ್ಜೆಯ ಮಂತ್ರಿ ಸ್ಥಾನ ಹಾಗೂ ಎರಡು ರಾಜ್ಯ ಮಂತ್ರಿಗಳ ಸ್ಥಾನವನ್ನು ನೀಡುವ ʼಆಫರ್ʼ ನೀಡಲಾಗಿದೆಯೆಂದು, ವೈಎಸ್ಆರ್ ಕಾಂಗ್ರೆಸ್ ವಲಯದಲ್ಲಿ ಮಾತುತೆಗಳು ನಡೆಯುತ್ತಿವೆ, ಎಂದು ವರದಿಯಾಗಿದೆ. ಆಂಧ್ರ ಪ್ರದೇಶ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಮಾತ್ರ ಜಗನ್ ತಮ್ಮ ಪಟ್ಟು ಸಡಿಲಿಸಲು ಒಪ್ಪುತ್ತಿಲ್ಲ. ಏಕೆಂದರೆ, ಈ ಒಂದು ವಿಚಾರವನ್ನು ಮುಂದಿಟ್ಟುಕೊಂಡು 2019ರ ವಿಧಾನಸಭಾ ಚುನಾವಣೆಯನ್ನು ಜಗನ್ ಎದುರಿಸಿದ್ದರು ಮತ್ತು ದಾಖಲೆಯ ಬಹುಮತದಿಂದ ಗೆದ್ದು ಬಂದಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರಿಂ ಕೋರ್ಟ್ನಲ್ಲಿ ಹಾಕಿರುವ ಅರ್ಜಿಯ ವಿಚಾರಣೆಗೆ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಮತ್ತು ಜಗನ್ ಹಾಜರಾಗಬೇಕಿತ್ತು. ಚಂದ್ರಶೇಖರ್ ರಾವ್ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗುತ್ತಿದ್ದಾರೆ. ಆದರೆ, ಜಗನ್ ಮಾತ್ರ ಖುದ್ದಾಗಿ ದೆಹಲಿಗೆ ಭೇಟಿ ನೀಡಿದ್ದಾರೆ. ಕಳೆದ 15 ದಿನಗಳಲ್ಲಿ ಜಗನ್ ಅವರ ಎರಡನೇ ದೆಹಲಿ ಭೇಟಿ ಇದು.
Also Read: ವಿಶಾಖಪಟ್ಟಣಂನಲ್ಲಿ ರಾಜಧಾನಿ ನಿರ್ಮಾಣ; ಅಪಾಯದಲ್ಲಿ ಬೌದ್ದ ಪಾರಂಪರಿಕ ತಾಣ
ಕಳೆದ ಬಾರಿ ದೆಹಲಿಗೆ ಭೇಟಿ ನೀಡಿದ್ದ ಜಗನ್, ಸೆಪ್ಟೆಂಬರ್ 23 ಮತ್ತು 24ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರೊಂದಿಗಿನ, ಇಂದಿನ ಜಗನ್ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯ ವ್ಯಪ್ತಿಯನ್ನು ಹೆಚ್ಚಿಸಲು ಬಿಜೆಪಿ ಸಾಕಷ್ಟು ಪ್ರಯತ್ನ ಪಡುತ್ತಿರುವ ಸಂದರ್ಭದಲ್ಲಿ ಈ ಭೇಟಿ ಕುತೂಹಲ ಹುಟ್ಟಿಸಿದೆ.