ಪ್ರಧಾನಿ ಮೋದಿಯವರು ಇತ್ತೀಚಿನ ವರ್ಷಗಳಲ್ಲೇ ಕಂಡರಿಯದ ಪ್ರಮಾಣದ ಮುಜುಗರಕ್ಕೆ ಮತ್ತು ಇರಿಸುಮುರಿಸಿನ ಪರಿಸ್ಥಿತಿಗೆ ಸಿಲುಕಿದ್ದಾರೆ.
ಸ್ವತಃ ಮೋದಿ ಮತ್ತು ಆಡಳಿತಾರೂಢ ಬಿಜೆಪಿ ಊಹಿಸದೇ ಇದ್ದ ಪ್ರಮಾಣದ ಮುಜುಗರ ಇದಾಗಿದ್ದು, ಭಾರತ- ಚೀನಾ ಗಡಿ ಸಂಘರ್ಷದ ಕುರಿತ ಪ್ರಧಾನಿ ಹೇಳಿಕೆ ಅವರ ವರ್ಚಸ್ಸು ವೃದ್ಧಿ ಪಡೆ(ಪಿಆರ್ ಪಡೆ) ಬಹಳ ಕಷ್ಟಪಟ್ಟು ಕಟ್ಟಿದ್ದ ವಿಶ್ವನಾಯಕ, ಭಾರತದ ಸಿಂಹ, ಧೀರೋದ್ಧಾತ ನಾಯಕ ಎಂಬೆಲ್ಲಾ ಬಿರುದಾಕಿಂತಗಳನ್ನೊಳಗೊಂಡ ‘ಮಹಾನಾಯಕ’ನ ವರ್ಚಸ್ಸು ಕಳಚಿಬಿದ್ದಿದೆ.
ಕಳೆದ ಸೋಮವಾರ ಲಡಾಖ್ ವಲಯದ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆ ನಡುವೆ ನಡೆದ ಗಡಿ ಸಂಘರ್ಷದಲ್ಲಿ ಒಬ್ಬ ಕರ್ನಲ್ ಸೇರಿದಂತೆ 20 ಮಂದಿ ಭಾರತೀಯ ಯೋಧರು ದಾರುಣ ಸಾವು ಕಂಡಿದ್ದರು. ಚೀನಾ ಪಡೆಗಳು ಭಾರತದ ಗಡಿಯೊಳಗೆ ಸುಮಾರು 60 ಚ.ಕಿಮಿ ಒಳನುಗ್ಗಿ ಇಡೀ ಕಣಿವೆಯನ್ನು ವಶಪಡಿಸಿಕೊಂಡಿದ್ದವು. ದೇಶದ ಗಡಿ ರಕ್ಷಣೆಗಾಗಿ ಭಾರತೀಯ ಯೋಧರು ಪ್ರಯತ್ನಿಸಿದಾಗ ಮಾರಕ ಅಸ್ತ್ರಗಳನ್ನು ಬಳಸಿ ಚೀನಾ ಪಡೆಗಳು ದಾಳಿ ನಡೆಸಿದರು. ಪರಿಣಾಮವಾಗಿ ಕಳೆದ ಐದು ದಶಕದಲ್ಲೇ ಮೊದಲ ಬಾರಿಗೆ ಗಡಿಯಲ್ಲಿ ಯೋಧರ ರಕ್ತ ಹರಿದಿತ್ತು.
ತಮ್ಮ ಆರು ವರ್ಷಗಳ ಆಡಳಿತದಲ್ಲಿ ಭಾರತ ಹಿಂದೆಂದಿಗಿಂತ ಬಲಿಷ್ಠವಾಗಿದೆ. ವಿಶ್ವನಾಯಕನಾಗಿ ಹೊರಹೊಮ್ಮಿದೆ. ನೆರೆಹೊರೆಯ ದೇಶಗಳ ಎದೆ ನಡುಗಿಸುವ ಮಟ್ಟಿಗೆ ಸೇನಾ ಬಲವನ್ನು ವೃದ್ಧಿಸಿಕೊಂಡಿದೆ ಎಂದು ತಮಗೆ ತಾವೇ ಶಹಭಾಸ್ ಗಿರಿ ಕೊಟ್ಡುಕೊಂಡಿದ್ದ ಮೋದಿ ಮತ್ತು ಅವರ ಬಿಜೆಪಿ ಸರ್ಕಾರವನ್ನು ಈ ಅವಮಾನಕರ ಘಟನೆ ಸಹಜವಾಗೇ ಇಕ್ಕಟ್ಟಿಗೆ ಸಿಲುಕಿಸಿತ್ತು.
ಪ್ರತಿಪಕ್ಷಗಳಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳ ಮೂಲಕ ದೇಶದ ಜನಸಾಮಾನ್ಯರು ಕೂಡ ಯೋಧರ ಹೇಯ ಹತ್ಯೆ ಘಟನೆ ಮತ್ತು ದೇಶದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಒದಗಿರುವ ಅಪಾಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಗಡಿಯಲ್ಲಿ ನಿಜಕ್ಕೂ ನಡೆದದ್ದೇನು? ಯಾಕೆ ಮೋದಿಯವರು ಮೌನ ವಹಿಸಿದ್ದಾರೆ ? ಎಂಬ ಪ್ರಶ್ನೆಗಳನ್ನು ಕೇಳಿ, ಬಿಜೆಪಿ ಸರ್ಕಾರ ಮತ್ತು ಮೋದಿ ಆಡಳಿತದ ದೇಶದ ಸಮಗ್ರತೆ ಕಾಯುವ ಬದ್ಧತೆಯ ಬಗ್ಗೆ ಕಟು ಟೀಕೆ ಮಾಡಿದ್ದರು.
ಇದರಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿದ ಪ್ರಧಾನಿ, ಶುಕ್ರವಾರ ಸರ್ವಪಕ್ಷ ಸಭೆ ಕರೆದು ಗಡಿ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಿದರು. ಆದರೆ, ಗಡಿ ಮತ್ತು ಯೋಧರ ಜೀವದ ವಿಷಯದಲ್ಲಿ ಎದ್ದ ಪ್ರಶ್ನೆಗಳನ್ನು ಶಮನ ಮಾಡಲು ಕರೆದ ಈ ಸರ್ವಪಕ್ಷ ಸಭೆಯಲ್ಲಿ ಮೋದಿಯವರು ಆಡಿದ ಮಾತುಗಳು ಅವರನ್ನು ಸಾರ್ವಜನಿಕ ಮುಜುಗರದಿಂದ ಪಾರುಮಾಡುವ ಬದಲು ಮತ್ತಷ್ಟು ಇರಿಸುಮುರಿಸಿಗೆ ಸಿಲುಕಿಸಿವೆ ಎಂಬುದು ಇದು ನಿಜಕ್ಕೂ ವಿಪರ್ಯಾಸಕರ!

“ನಮ್ಮ ಗಡಿಯೊಳಗೆ ಯಾರೊಬ್ಬರೂ ನುಗ್ಗಿಲ್ಲ, ನುಗ್ಗುವ ಪ್ರಯತ್ನವನ್ನೂ ಮಾಡಿಲ್ಲ. ಅಥವಾ ದೇಶದ ಯಾವುದೇ ಗಡಿ ಗುರುತುಗಳನ್ನಾಗಲೀ, ಗಡಿ ಕಲ್ಲುಗಳನ್ನಾಗಲೀ ಯಾರೂ ನಾಶ ಮಾಡಿಲ್ಲ” ಎಂದು ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ಹೇಳಿರುವುದು ಇದೀಗ ದೇಶಾದ್ಯಂತ ದೊಡ್ಡ ವಿವಾದವೆಬ್ಬಿಸಿದೆ. ಪ್ರಮುಖವಾಗಿ ಪ್ರತಿಪಕ್ಷಗಳು ಪ್ರಧಾನಿ ಮೇಲೆ ಮುಗಿಬಿದ್ಸಿವೆ. “ಗಡಿಯ ಉಲ್ಲಂಘನೆಯ, ನುಸುಳುವಿಕೆಯ ಯಾವ ಪ್ರಯತ್ನವೂ ನಡೆದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಹಾಗಾದರೆ ಗಲ್ವಾನ್ ಕಣಿವೆಯಲ್ಲಿ 20 ಮಂದಿ ಭಾರತೀಯ ಯೋಧರ ಹತ್ಯೆಗೆ ಕಾರಣವೇನು ಮತ್ತು ಕಾರಣರಾರು? ಎಂಬುದನ್ನು ಪ್ರಧಾನಿ ದೇಶದ ಜನತೆಗೆ ವಿವರಿಸಬೇಕು” ಎಂದು ಅಗ್ರಹಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯವರ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ, ವಿಡಂಬನೆ, ಟೀಕೆಯ ಸುನಾಮಿಯೇ ಎದ್ದಿದೆ.
ಹೀಗೆ ಹೇಳುವ ಮೂಲಕ ಪ್ರಧಾನಮಂತ್ರಿಗಳು ದೇಶದ ಸೇನಾಪಡೆಗಳು ಮತ್ತು ಯೋಧರಿಗೆ ಅವಮಾನ ಮಾಡಿದ್ದಾರೆ ಮತ್ತು ಚೀನಾ ಆಕ್ರಮಣಕಾರಿ ಸೇನಾ ಕಾರ್ಯಾಚರಣೆಯನ್ನು ಅಲ್ಲಗಳೆಯುವ ಪ್ರಯತ್ನದ ಮೂಲಕ ದೇಶದ ಸಮಗ್ರತೆಗೆ ಧಕ್ಕೆ ತಂದಿದ್ದಾರೆ. ಇವರ ಕೈಯಲ್ಲಿ ನಿಜಕ್ಕೂ ದೇಶ ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆಗಳು ಕೇಳಿಬಂದಿವೆ.
ಕಾಕತಾಳೀಯವೆಂಬಂತೆ ಇತ್ತ ಮೋದಿಯವರ ಹೇಳಿಕೆಯ ಬೆನ್ನಲ್ಲೇ ಅತ್ತ ಬೀಜಿಂಗ್, ಒಂದು ಹೇಳಿಕೆ ಬಿಡುಗಡೆ ಮಾಡಿದ್ದು, ಗಲ್ವಾನ್ ಕಣಿವೆಯ ವಿದ್ಯಮಾನಗಳ ಕುರಿತ ಆ ಹೇಳಿಕೆಯಲ್ಲಿ, ಕಡೀ ಗಲ್ವಾನ್ ಕಣಿವೆ ಪ್ರದೇಶ ಚೀನಾಕ್ಕೆ ಸೇರಿದ್ದು, ವಾಸ್ತವಿಕ ಗಡಿ ರೇಖೆ ಆ ಕಣಿವೆ ವ್ಯಾಪ್ತಿಯಿಂದ ಹೊರಗಿದೆ. ಆದರೆ ಭಾರತೀಯ ಪಡೆಗಳು ವಾಸ್ತವಿಕ ಗಡಿ ರೇಖೆ ದಾಟಿ ತಮ್ಮ ಸರಹದ್ದಿನ ಒಳ ನುಸುಳಿ ತಮ್ಮ ಯೋಧರ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದಾರೆ. ಆ ಆಕ್ರಮಣವೇ ಇಡಿ ಘಟನೆಗೆ ಕಾರಣ ಎಂದು ಹೇಳಿದೆ.
ಚೀನಾದ ಹೇಳಿಕೆ ಹಿನ್ನೆಲೆಯಲ್ಲಿ ಕೂಡ ಪ್ರಧಾನಿ ಮೋದಿಯವರ ಹೇಳಿಕೆ ಹಲವು ಅರ್ಥ ಮತ್ತು ವಿಶ್ಲೇಷಣೆಗೆ ಇಂಬು ನೀಡಿದೆ.
ಈ ನಡುವೆ, ವಿಪರ್ಯಾಸಕರ ಸಂಗತಿ ಎಂದರೆ; ಮೋದಿಯವರ ಆ ವಿವಾದಾಸ್ಪದ ಹೇಳಿಕೆ, ಕೇವಲ ಪ್ರತಿಪಕ್ಷಗಳು ಮತ್ತು ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೆ ಸ್ವತಃ ಅವರದೇ ಸರ್ಕಾರ ಮತ್ತು ಸಂಪುಟದ ಒಳಗೂ ತೀವ್ರ ಮುಖಭಂಗ ಮತ್ತು ಮುಜುಗರದ ಸನ್ನಿವೇಶಕ್ಕೆ ಕಾರಣವಾಗಿದೆ.
ಮೋದಿಯವರ ಹೇಳಿಕೆಗೆ ಕೇವಲ ಒಂದೇ ದಿನ ಮುನ್ನ ಜೂನ್ 17ರಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಗಲ್ವಾನ್ ಕಣಿವೆ ಸಂಘರ್ಷದ ಕುರಿತು ದೂರವಾಣಿ ಮಾತುಕತೆ ನಡೆಸಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್, “ಚೀನಾ ಪಡೆಗಳು ಬಹಳ ಯೋಜನಾಬದ್ಧ ಮತ್ತು ಪೂರ್ವನಿಗದಿತ ಕಾರ್ಯಸೂಚಿಯಂತೆ ಗಲ್ವಾನ್ ಕಣಿವೆಯ ಭಾರತದ ಗಡಿಯೊಳಗೆ ನುಸುಳಿದ್ದವು ಮತ್ತು ಗಡಿ ಗೋಪುರ ನಿರ್ಮಾಣಕ್ಕೆ ಯತ್ನಿಸಿದ್ದವು. ಚೀನಾದ ಅಂತಹ ಆಕ್ರಮಣಕಾರಿ ಯೋಜಿತ ಕೃತ್ಯವೇ ಸಂಘರ್ಷ ಮತ್ತು ಜೀವಹಾನಿಗೆ ನೇರ ಹೊಣೆ” ಎಂದಿದ್ದರು!
ತಮ್ಮದೇ ಆಪ್ತ ವಲಯದ ಮತ್ತು ಸರ್ಕಾರದ ಗುರುತರ ಹೊಣೆಗಾರಿಕೆಯ ವಿದೇಶಾಂಗ ಸಚಿವರ ಅಧಿಕೃತ ಹೇಳಿಕೆಗೆ ಪೂರ್ಣ ತದ್ವಿರುದ್ಧವಾದ ಮತ್ತು ಸೇನಾ ಪಡೆಗಳ ಎದೆಗುಂದಿಸುವಂಥ ಮೋದಿಯವರ ಹೇಳಿಕೆಗೆ ಇಡೀ ದೇಶ ಆಕ್ರೋಶದಿಂದ ಮತ್ತು ಅದೇ ಹೊತ್ತಿಗೆ ಆಘಾತದಿಂದ ಪ್ರತಿಕ್ರಿಯಿಸಿದೆ.
ಪ್ರಧಾನಿ ಹೇಳಿಕೆ ಮತ್ತು ವಿದೇಶಾಂಗ ಸಚಿವರ ಹೇಳಿಕೆಗಳ ಪೈಕಿ ಯಾವುದೊ ಒಂದು ಮಾತ್ರ ನಿಜವಿರಲು ಸಾಧ್ಯ. ಎರಡೂ ನಿಜವಿರಲು ಸಾಧ್ಯವೇ ಇಲ್ಲ. ಹಾಗಾಗಿ ಯಾವುದು ಸುಳ್ಳು ಮತ್ತು ಯಾವುದು ನಿಜ?, ಯಾವುದು ದೇಶದ ಜನತೆಯ ದಿಕ್ಕುತಪ್ಪಿಸುವ ಮತ್ತು ದೇಶದ ಹಿತ ಬಲಿ ಕೊಟ್ಡು ತಮ್ಮ ವೈಯಕ್ತಿಕ ವರ್ಚಸ್ಸು ರಕ್ಷಣೆಯ ಪ್ರಯತ್ನ?, ಯಾವುದು ವಾಸ್ತವ ಮತ್ತು ಯಾವುದು ಕಟ್ಟುಕತೆ ಎಂಬುದನ್ನು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಗಳು ದೇಶದ ಜನರ ಮುಂದಿಡಬೇಕಾದುದು ಅವರ ಹೊಣೆಗಾರಿಕೆ ಎಂಬ ಕಟು ಟೀಕೆಗೆ ಈ ವಿರೋಧಾಭಾಸದ ಹೇಳಿಕೆಗಳು ಗುರಿಯಾಗಿವೆ.
ಈ ಪ್ರತಿಕ್ರಿಯೆಗಳು ಮೋದಿಯವರ ವರ್ಚಸ್ಸನ್ನು ಮಣ್ಣುಪಾಲು ಮಾಡಲಿವೆ ಎಂಬುದು ಅರಿವಾಗುತ್ತಲೇ ಎತ್ತೆಚ್ಚ ಪ್ರಧಾನಮಂತ್ರಿಗಳ ಕಾರ್ಯಾಲಯ ಇದೀಗ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನಕ್ಕೆ ಮುಂದಾಗಿದ್ದು, ಮೋದಿ ಮತ್ತು ಬಿಜೆಪಿಯ ಎಂದಿನ ಯೂ ಟರ್ನ್ ವರಸೆಗೆ ಮೊರೆಹೋಗಿದೆ. “ಮೋದಿಯವರ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಹೇಳಿದ್ದು, ನಮ್ಮ ಗಡಿಯೊಳಗೆ ಚೀನಾ ಪ್ರವೇಶಿಸಿಲ್ಲ. ಏಕೆಂದರೆ ನಮ್ಮ ಯೋಧರು ಗಲ್ವಾನ್ ದಲ್ಲಿ ಗಡಿ ಉಲ್ಲಂಘಿಸುವ ಚೀನಾದ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂಬುದು ಮೋದಿಯವರ ಮಾತಿನ ಅರ್ಥ” ಎಂದು ಸಮಾಜಾಯಿಷಿ ನೀಡಿ ತಿಪ್ಪೆ ಸಾರಿಸುವ ಯತ್ನ ನಡೆಸಿದೆ.
ಏನೇ ಇರಲಿ, ಈ ಹೇಳಿಕೆ ಸದ್ಯಕ್ಕಂತೂ ಮೋದಿಯವರ ಕುರಿತು ದೇಶದ ಮುಗ್ಧ ಜನಸಾಮಾನ್ಯರ ಮನಸಿನಲ್ಲಿ ಈವರೆಗೆ ಸಾಮಾಜಿಕ ಜಾಲತಾಣ ಮತ್ತು ತಮ್ಮ ‘ಭಜನೆ’ ಮಾಧ್ಯಮಗಳನ್ನು ಬಳಸಿಕೊಂಡು ಕಟ್ಟಲಾಗಿದ್ದ ಅತಿಮಾನುಷ, ಪರಾಕ್ರಮದ ಚಿತ್ರಣದ ರೆಕ್ಕೆಪುಕ್ಕ ಕಿತ್ತುಹಾಕಿದೆ! ಅತಿರಂಜಿತ ಬಹುಪರಾಕಿನ ವರ್ಚಸ್ಸಿನ ಬಲೂನಿಗೆ ವಾಸ್ತವದ ಸೂಜಿಮೊನೆ ತುಸುವಾದರೂ ತಾಗಿದೆ!