ಕರೋನಾ ಸೋಂಕು ದೇಶದಲ್ಲಿ ಢಮರುಗ ಬಾರಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ದೆಹಲಿ, ಪಶ್ಚಿಮ ಬಂಗಾಳದಲ್ಲಿ ಕರೋನಾ ರಣಕೇಕೆ ಜೋರಾಗಿದೆ. ಕೇಂದ್ರ ಸರ್ಕಾರ ಅಂತಾರಾಜ್ಯ ಹಾಗೂ ವಿದೇಶದಿಂದ ಜನರು ಸಂಚಾರ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅಂತಾರಾಜ್ಯ ವಲಸೆ ಕಾರ್ಮಿಕರು ಶ್ರಮಿಕ್ ರೈಲಿನಲ್ಲಿ ತೆರಳಿದ್ರೆ, ಉಳಿದವರು ವಿಶೇಷ ರೈಲುಗಳ ಮೂಲಕವೂ ತಮ್ಮ ಹುಟ್ಟೂರುಗಳಿಗೆ ಸಂಚಾರ ಮಾಡಬಹುದಾಗಿದೆ. ಇನ್ನೂ ವಿದೇಶದಲ್ಲಿರುವ ಭಾರತೀಯರು ವಂದೇ ಭಾರತ್ ಮಿಷನ್ ಹಾಗೂ ಸಮುದ್ರ ಸೇತು ಅಭಿಯಾನ ಮಾಡಲಾಗ್ತಿದೆ. ಆದರೆ ಕರ್ನಾಟಕ ಸರ್ಕಾರ, ಕೋವಿಡ್ 19 ಹೆಚ್ಚಾಗಿರುವ 6 ರಾಜ್ಯಗಳಿಂದ ಬರುವ ಜನರಿಗೆ ಕಡ್ಡಾಯ 7 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನಗಳ ಕಾಲ ಹೋಂ ಕ್ವಾರಂಟೈನ್ ಎಂದು ನಿರ್ಧಾರ ಮಾಡಿದೆ. ಆದರೆ ಕಳೆದ 2 ತಿಂಗಳಿಂದ ಲಾಕ್ಡೌನ್ ದೆಹಲಿಯಲ್ಲಿ ಸಿಲುಕಿದ್ದ ಕೇಂದ್ರ ಫಾರ್ಮಸಿ ಹಾಗೂ ರಾಸಾಯನಿಕ ಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಸೋಮವಾರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ದೆಹಲಿಯಿಂದ ಬಂದವರನ್ನು 7 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕು ಎನ್ನುವುದು ರಾಜ್ಯ ಸರ್ಕಾರದ ನಿರ್ಧಾರ. ಆದರೆ ಡಿ.ವಿ ಸದಾನಂದಗೌಡರು ನೇರವಾಗಿ ಮನೆಗೆ ತೆರಳಿ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ಹುಟ್ಟುಹಾಕಿದೆ.
ಸಾಮಾಜಿಕ ಜಾಲತಾಣದ ಆಕ್ರೋಶಕ್ಕೆ ಉತ್ತರ ಕೊಟ್ಟಿರುವ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ರಾಜ್ಯದ ಸ್ಥಿತಿಗತಿ ತಿಳಿದುಕೊಳ್ಳುವ ಉದ್ದೇಶದಿಂದ ಕರ್ನಾಟಕಕ್ಕೆ ಬಂದಿದ್ದೇನೆ. ತುರ್ತಾಗಿ ಮಾಡಬೇಕಾದ ಕೆಲಸಗಳನ್ನು ಮಾಡಬೇಕಿದೆ. ಔಷಧಿ ಪೂರೈಕೆ ಕುರಿತು ಸಭೆ ಮಾಡಿದ್ದೇನೆ. ಟಾಸ್ಕ್ ಫೋರ್ಸ್ ತಂಡದಲ್ಲಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ಡಿಸಿಎಂ ಅಶ್ವಥ್ ನಾರಾಯಣ್ ಸೇರಿ ಬೆಂಗಳೂರು ಶಾಸಕರು ಭಾಗಿಯಾಗಿದ್ದರು. ಕರೋನಾ ತಡೆಯುವ ತಂಡದಲ್ಲಿ ನಾನು ಕೂಡ ಇದ್ದೇನೆ. ಹೀಗಿದ್ದಾಗ ಹೊರಗೆ ಬರಬಾರದು ಎಂದರೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ತುರ್ತು ಸೇವೆಯಲ್ಲಿ ಇದ್ದೇನೆ. ರೋಗ ಗುಣ ಮಾಡುವ ಟೀಮ್ ಹೊರಗೆ ಬರಬಾರದು ಅಂದರೆ ಹೇಗೆ..? ನಾನು ಫಾರ್ಮಾ ಮಿನಿಸ್ಟರ್ ಆಗಿ ಸಭೆ ನಡೆಸಬೇಕು. 63 ದಿನ ದೆಹಲಿಯಲ್ಲಿ ಇದ್ದು ಇವತ್ತು ಬಂದಿದ್ದೇನೆ. ಆದರೂ ನಾನು ಕೂಡ ಜಾಗರೂಕತೆಯಿಂದ ಇದ್ದೇನೆ. ಆರೋಗ್ಯ ಸೇತು ಆಪ್ ಕೂಡ ಹಾಕಿಕೊಂಡಿದ್ದೇನೆ. ನಾನು ಸೇಫ್ ಅಂತಾ ತೋರಿಸುತ್ತಿದೆ. ಅಗತ್ಯ ಸೇವೆಗಳಲ್ಲಿ ಬರುವವರಿಗೆ ಇಡೀ ದೇಶದಲ್ಲಿ ಓಡಾಡಲು ಅವಕಾಶ ಇದೆ. ದಿನನಿತ್ಯ ನಾವು ನಮ್ಮ ಕಚೇರಿಗೆ ಹಲವರನ್ನು ಕರೆದು ಚರ್ಚೆ ನಡೆಸಬೇಕಾಗುತ್ತದೆ. ಕೇರಳದ ಜವಾಬ್ದಾರಿ ಕೂಡಾ ನನಗಿದೆ. ಸಭೆ ನಡೆಸುವ ದೃಷ್ಟಿಯಿಂದ ನಾನು ರಾಜ್ಯಕ್ಕೆ ಬಂದಿದ್ದೇನೆ. ರಾಜ್ಯಕ್ಕೆ ಬರುವ ಮುನ್ನ ನೋಡೆಲ್ ಅಧಿಕಾರಿ ಜೊತೆ ಮಾತನಾಡಿಕೊಂಡು ಬಂದಿದ್ದೇನೆ ಎಂದಿದ್ದಾರೆ.

ಆದರೂ ಸಾಮಾಜಿಕ ಜಾಲತಾಣ ಫೇಸ್ಬುಕ್ ಹಾಗೂ ಟ್ವೀಟರ್ನಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರನ್ನು ಕ್ವಾರಂಟೈನ್ ಮಾಡುವಂತೆ ಒತ್ತಾಯ ಮಾಡಿದ್ದರು. ಕೋವಿಡ್ 19 ಹೆಚ್ಚಾಗಿರುವ ದೆಹಲಿಯಿಂದ ಡಿ.ವಿ ಸದಾನಂದಗೌಡ ಬಂದಿದ್ದಾರೆ. ಆದರೂ ಸಚಿವರನ್ನು ಯಾಕೆ ಕ್ವಾರಂಟೈನ್ನಲ್ಲಿ ಇಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ..? ಎಂದಿರುವ ಸಿದ್ದರಾಮಯ್ಯ, ಕಾನೂನು ಕ್ರಮಕ್ಕೂ ಒತ್ತಾಯ ಮಾಡಿದ್ದಾರೆ.
ಸದಾನಂದ ಗೌಡರ ಕ್ವಾರಂಟೈನ್ ಸಲುವಾಗಿ ಶುರುವಾಗ ಚರ್ಚೆಗೆ ಬ್ರೇಕ್ ಹಾಕಲು ನಿರ್ಧಾರ ಮಾಡಿದ ರಾಜ್ಯ ಸರ್ಕಾರ, ನಿಯಮಗಳ ಬಗ್ಗೆ ಜನರಿಗೆ ತಿಳಿಸಲು ಮುಂದಾಯ್ತು. ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಕೇಂದ್ರ ಹಾಗೂ ರಾಜ್ಯಗಳ ಸಚಿವರು, ಅಧಿಕಾರಿಗಳು ಅಧಿಕೃತ ಕರ್ತವ್ಯದ ಮೇಲೆ ಅಂತರ ರಾಜ್ಯ ಪ್ರಯಾಣ ಮಾಡಿದರೆ ಕ್ವಾರಂಟೈನ್ನಿಂದ ವಿನಾಯಿತಿ ನೀಡಿದ್ದೇವೆ. ಪ್ರಯಾಣಿಕರ ಕ್ವಾರಂಟೈನ್ಗೆ ಸಂಬಂಧಿಸಿದಂತೆ ಮೇ 22 ರಂದು ಹೊರಡಿಸಿದ್ದ ನಿರ್ದಿಷ್ಟ ನಿಯಮಗಳಿಗೆ ಕೆಲ ಅಂಶಗಳನ್ನು ಸೇರ್ಪಡೆ ಮಾಡಿ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ಟ್ವೀಟ್ ಮಾಡಿದ್ದರು. ಅಂತಾರಾಜ್ಯ ಪ್ರಯಾಣಿಕರು 2 ದಿನಗಳ ಮುಂಚಿತವಾಗಿ ಕರೋನಾ ಪರೀಕ್ಷೆಗೆ ಒಳಪಟ್ಟು ನೆಗಟೀವ್ ವರದಿ ಜೊತೆಗೆ ಆಗಮಿಸಿದರೆ ಕ್ವಾರಂಟೈನ್ ಬೇಕಿಲ್ಲ ಎನ್ನುವ ಅಂಶವೂ ಸೇರಿತ್ತು. ಆದರೆ ಟ್ವೀಟರ್ನಲ್ಲಿ 23ರ ಆದೇಶವನ್ನು 25ರಂದು ಬಿಡುಗಡೆ ಮಾಡಿದ್ದು ಹಾಗೂ ಇಂಗ್ಲಿಷಿನಲ್ಲಿ ಆದೇಶ ಪ್ರತಿ ಹೊರಡಿಸಿದ್ದಕ್ಕೂ ಜನ ಕೆಂಗಣ್ಣು ಬೀರಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದು..!
ರಾಜ್ಯ ಸರ್ಕಾರ ಆದೇಶ ಮಾಡಿದ್ದು ಮೇ 23ರಂದು, ಆದರೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ದೆಹಲಿಯಿಂದ ಬಂದ ಬಳಿಕ ಬಿಡುಗಡೆ ಮಾಡಿರುವ ಔಚಿತ್ಯವೇನು ಎಂದು ಪತ್ರಕರ್ತೆ ಅನುಷಾ ರವಿ ಸೂದ್ @anusharavi10 ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ. ‘ನಿಮ್ಮ ಯೋಗ್ಯತೆಗೆ, ನಿಮ್ಮ VIP ಕಲ್ಚರ್ ಬುದ್ಧಿ ತೋರಿಸಿದಿರಲ್ಲ. ಒಬ್ಬ ಕೋವಿಡ್ ಪೇಷಂಟ್ ಆಗಿದ್ದ ರಿಪೋರ್ಟರ್ ಜೊತೆ ಒಡನಾಟಕ್ಕೆ ಬಂದಿದ್ದರು ಅನ್ನೋ ಕಾರಣಕ್ಕೆ ನಿಮ್ಮ ಮಂತ್ರಿಗಳೇ ಕ್ವಾರಂಟೈನ್ ಅಲ್ಲಿ ಇರ್ಲಿಲ್ವ..? ಇವರದೇನು ಹೆಚ್ಚುಗಾರಿಕೆ..? ಎಂದರೆ, ಇದೇನು ಕರ್ನಾಟಕದಲ್ಲಿದ್ದೇವಾ..? ಅಥವಾ ವಿದೇಶದಲ್ಲಿದ್ದೇವಾ..? ಈ Addendum ಅಂದ್ರೆ ಏನು..? ಕನ್ನಡದಲ್ಲಿ ಸುತ್ತೋಲೆ ಹೊರಡಿಸಿ ಎಂದು ಕುಟುಕಿದ್ರು. ಇನ್ನೂ ಈ ನಿಮ್ಮ ಸುತ್ತೋಲೆಯ ಪ್ರತಿಯನ್ನು ಕರೋನಾಗೂ ಕಳಿಸಿದ್ದೀರಾ ಎಂದು ಕುಹಕವಾಡಿದ್ರೆ. ಇನ್ನೂ ಕೆಲವರು, ಈ ಆದೇಶ ಹೈರಿಸ್ಕ್ ರಾಜ್ಯದಿಂದ ಬಂದ ಸಾಮಾನ್ಯ ಜನರಿಗೂ ಅನ್ವಯ ಆಗುತ್ತಾ ಹೇಳಿ ಸಾರ್ ಎಂದರು. ಸಚಿವರು ಯಾಕೆ ಬದಲಿ ಕಾನೂನು..? ಕರೋನಾ ವೈರಸ್ ಅವನು, ಅವಳು, ಸಚಿವರು, ಸಾಮಾನ್ಯರು ಎಂದು ನೋಡಲ್ಲ. ಕಾನೂನು ಅಂದರೆ ಎಲ್ಲರಿಗೂ ಒಂದೇ. ಮಹಾರಾಷ್ಟ್ರದಲ್ಲಿ ಸಚಿವರಿಗೆ ಕರೋನಾ ಬಂದಿದೆ. ಅದೇ ಸಾಕ್ಷಿ ಎಂದಿದ್ದಾರೆ. ಕೂಡಲೇ ಕೇಂದ್ರ ಸಚಿವರನ್ನು ಕ್ವಾರಂಟೈನ್ ಆಗಲು ಕರ್ನಾಟಕ ಸರ್ಕಾರ ಹೇಳಬೇಕು. ಮೊದಲು ಸಚಿವರು ಕಾನೂನು ಪಾಲಿಸಲಿ ಆ ಬಳಿಕ ಸಾಮಾನ್ಯ ಜನರಿಗೆ ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಕ್ವಾರಂಟೈನ್ ಬೇಕಾ..? ಬೇಡ್ವಾ..? ಇದು ಸಂಕಷ್ಟದ ಪ್ರಶ್ನೆ..!
ಓರ್ವ ಸಚಿವ ದೆಹಲಿಯಿಂದ ಬಂದಿದ್ದಾರೆ ಎನ್ನುವ ಮಾತ್ರಕ್ಕೆ ಕ್ವಾರಂಟೈನ್ ಮಾಡಲು ಸಾಧ್ಯವಿಲ್ಲ. ಸರ್ಕಾರಿ ಕೆಲಸದ ಮೇಲೆ ಓಡಾಡುವ ಅವಶ್ಯಕತೆ ಇರುತ್ತೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಾಗಿರುತ್ತದೆ ಅಷ್ಟೇ. ಓರ್ವ ಪತ್ರಕರ್ತ ಜನಸಂದಣಿ ನಡುವೆ ಹೋಗಿ ವರದಿ ಮಾಡಿಕೊಂಡು ಬಂದಿರುತ್ತಾರೆ. ಅಲ್ಲಿ ಯಾರಿಗೋ ಒಬ್ಬರಿಗೆ ಸೋಂಕು ಬಂದಿರುತ್ತೆ ಎಂದುಕೊಂಡಾಗ ಪತ್ರಕರ್ತನನ್ನು ಕ್ವಾರಂಟೈನ್ ಮಾಡಲು ಸಾಧ್ಯವಿಲ್ಲ. ಯಾಕಂದರೆ ಆತನ ಕೆಲಸವೇ ಅದಾಗಿರುತ್ತದೆ. ಡಾಕ್ಟರ್, ಆರೋಗ್ಯ ಕಾರ್ಯಕರ್ತೆಯು ರೆಡ್ ಝೋನ್ನಲ್ಲೂ ಹೋಗಿ ಕಾರ್ಯ ನಿರ್ವಹಣೆ ಮಾಡಿರುತ್ತಾರೆ. ಅವರನ್ನೂ 14 ದಿನ ಕ್ವಾರಂಟೈನ್ ಮಾಡಿದರೆ ಕೆಲಸ ಮಾಡುವುದು ಯಾರು..? ಅಲ್ಲವೇ. ಒಟ್ಟಾರೆ ಕ್ವಾರಂಟೈನ್ ಎನ್ನುವ ಕಾನೂನಲ್ಲೇ ನೂರಾರು ಗೊಂದಲಗಳಿವೆ. ಮೊದಲು 14 ದಿನ, ಆ ಬಳಿಕ 28 ದಿನಗಳ ಕಾಲವೂ ಕರೋನಾ ಬರುವ ಸಾಧ್ಯತೆ ಇರುವ ಕಾರಣ 28 ದಿನಗಳ ಕಾಲ ಕ್ವಾರಂಟೈನ್. ಆ ನಂತರ ಇದೀಗ ಹೈ ರಿಸ್ಕ್ ರಾಜ್ಯಗಳಿಂದ ಬರುವ ಜನರಿಗೆ 7 ದಿನ ಇನ್ಸ್ಟಿಟ್ಯೂಟ್ ಕ್ವಾರಂಟೈನ್, ಆ ಬಳಿಕ ಹೋಂ ಕ್ವಾರಂಟೈನ್ ವ್ಯವಸ್ಥೆ. ವಿದೇಶದಿಂದ ಬಂದವರಿಗೆ ಕಡ್ಡಾಯ 14 ದಿನಗಳ ಕಾಲ ಕ್ವಾರಂಟೈನ್. ಇನ್ನು ಅದೆಷ್ಟು ದಿನ ಇದೇ ರೀತಿ ಗೊಂದಲ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಲೇ ಇರುತ್ತದೋ ಅಲ್ಲೀವರೆಗೂ ಈ ರೀತಿಯ ಚರ್ಚೆಗಳು ನಡೆಯುತ್ತಲೇ ಇರುತ್ತವೆ.
ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ದೆಹಲಿ ಹಾಗೂ ಪಶ್ಚಿಮ ಬಂಗಾಳ ಎರಡೂ ರಾಜ್ಯಗಳು ಹೈರಿಸ್ಕ್ ರಾಜ್ಯಗಳಾಗಿವೆ. ಪಶ್ಚಿಮ ಬಂಗಾಳ ಪ್ರವಾಸದ ಬಳಿಕ ಒಡಿಶಾಗೆ ತೆರಳಿ ಸಮೀಕ್ಷೆ ನಡೆಸಿದ್ದರು. ಹಾಗೆಂದ ಮಾತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ವಾರಂಟೈನ್ ಮಾಡಲು ಸಾಧ್ಯವಿದೆಯಾ..? ಆದರೆ ಸರ್ಕಾರದ ಕ್ವಾರಂಟೈನ್ ಗೊಂದಲವನ್ನು ಸರಿಮಾಡಲು ಅವಕಾಶವಿದೆ. ನೆಪಮಾತ್ರಕ್ಕೆ ಲಾಕ್ಡೌನ್ ಮಾಡಿಕೊಂಡು ಬಂದವರನ್ನು ಕ್ವಾರಂಟೈನ್ ಗೊಂದಲಕ್ಕೆ ಸಿಲುಕಿಸುವ ಪರಿ ಬದಲಾಗಬೇಕಿದೆ ಅಷ್ಟೇ. ಆದರೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರ ಸಮಸ್ಯೆಗೆ ಪರಿಹಾರ ಕೊಡಲು ಮುಂದಾದ ರಾಜ್ಯ ಸರ್ಕಾರ, ಹಳೇ ತಾರೀಕಿನಲ್ಲಿ ಹೊಸ ಆದೇಶ ಕೊಟ್ಟು ಸಾಮಾಜಿಕ ಜಾಲ ತಾಣದಲ್ಲಿ ಮಕಾಡೆ ಮಲಗಿದ್ದು ಮಾತ್ರ ಸತ್ಯ.