ವಿಶ್ವದಾದ್ಯಂತ ತನ್ನ ಕಬಂಧ ಬಾಹುವನ್ನು ಚಾಚಿರುವ ಕರೋನಾ ಸೋಂಕು ಭಾರತದಲ್ಲಿ 3,583 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಸತತ ಎರಡು ತಿಂಗಳು ಕಾಲ ಲಾಕ್ಡೌನ್ ಜಾರಿಯಲ್ಲಿದ್ದರೂ ಕರೋನಾ ತನ್ನ ಪ್ರಭಾವವನ್ನು ಭಾರತದಲ್ಲಿ ವ್ಯಾಪಕವಾಗಿ ಬೀರಿತು.
ಜನವರಿ 30 ರಂದು ಮೊದಲ ಕರೋನಾ ಸೋಂಕು ಪತ್ತೆಯಾದ ಬಳಿಕ ಭಾರತ ಹಲವಾರು ಸಾಮಾಜಿಕ ಸ್ಥಿತ್ಯಂತರಗಳಿಗೆ ಸಾಕ್ಷಿಯಾಯಿತು. ಜಗತ್ತಿನ ರಾಷ್ಟ್ರಗಳು ಕರೋನಾದ ಕುರಿತು ಜಾಗರೂಕ ಹೆಜ್ಜೆಗಳನ್ನಿಡುವಾಗ ಭಾರತದ ನಾಯಕರುಗಳಿಗೆ ರಾಜಕೀಯ ಚದುರಗದಾಟವೇ ಮುಖ್ಯವಾಯಿತು.
Also Read: ಕೇಂದ್ರದ ಬೇಜವಾಬ್ದಾರಿತನಕ್ಕೆ ಭಾರತ ಬಲಿಯಾಯಿತೇ?
ಕರೋನಾ ಸೋಂಕಿನ ಉಗಮ ದೇಶವಾದ ಚೀನಾಗಿಂತ ಹೆಚ್ಚು ಅಧಿಕೃತ ಪ್ರಕರಣ ದಾಖಲಿಸಿಕೊಂಡಿರುವ ಭಾರತದಲ್ಲಿ 1 ಲಕ್ಷದ 18 ಸಾವಿರಕ್ಕಿಂತಲೂ ಅಧಿಕ ಪ್ರಕರಣದಾಖಲಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಸೋಂಕಿನ ಪ್ರಮಾಣ ಸದ್ಯಕ್ಕಂತೂ ಕಡಿಮೆಯಾಗುವ ಲಕ್ಷಣ ಕಂಡುಬರುತ್ತಿಲ್ಲ.
ಪ್ರಸ್ತುತ 66,330 ಸಕ್ರಿಯ ಪ್ರಕರಣಗಳಿರುವ ಭಾರತದಲ್ಲಿ ಇದುವರೆಗೂ 48,533 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಮಾಣದ ಸೋಂಕು ಕಂಡು ಬಂದಿದ್ದು, ಸುಮಾರು ಭಾರತದಲ್ಲಿ ಕಂಡುಬಂದಿರುವ 40 ಶೇಕಡಾ ಸೋಂಕಿತರು ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಇದ್ದಾರೆ.







