ರಾಜ್ಯದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳಿಂದ ಕಾರ್ಮಿಕರ ಪರವಾಗಿರುವ ಪ್ರಮುಖ 34 ಕಾನೂನುಗಳನ್ನು 3 ವರ್ಷಗಳ ಕಾಲ ರದ್ದು ಪಡಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಪ್ರಕಾರ ರಾಜ್ಯದಲ್ಲಿ ಕಾರ್ಮಿಕರ ಪರವಾಗಿರುವ 38 ಕಾನೂನುಗಳ ಪೈಕಿ 4 ಕಾನೂನುಗಳು ಮಾತ್ರ ರಾಜ್ಯದಲ್ಲಿ ಅನ್ವಯವಾಗುವುದು. ಉಳಿದ 34 ಕಾನೂನುಗಳನ್ನು ಮುಂದಿನ ಮೂರು ವರ್ಷಗಳ ಕಾಲ ರದ್ದುಗೊಳಿಸಲಾಗುವುದು ಎಂದಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996, ಕಾರ್ಮಿಕರ ಪರಿಹಾರ ಕಾಯ್ದೆ 1923, ಜೀತ ಕಾರ್ಮಿಕ (ನಿರ್ಮೂಲನಾ) ಕಾಯ್ದೆ 1976, ಹಾಗೂ ಕಾರ್ಮಿಕ ಪಾವತಿ ಕಾಯ್ದೆಯಲ್ಲಿ 5 ನೇ ಭಾಗವನ್ನು (ಸಮಯೋಚಿತ ವೇತನವನ್ನು ಪಡೆಯುವ ಹಕ್ಕು) ಹೊರತು ಪಡಿಸಿ ಕಾರ್ಮಿಕರ ಪರವಾಗಿರುವ ಬೇರೆ ಯಾವ ಕಾಯ್ದೆಯು ಉತ್ತರ ಪ್ರದೇಶದಲ್ಲಿ ಅನ್ವಯವಾಗುವುದಿಲ್ಲ.

ವ್ಯವಹಾರ, ಕಾರ್ಖಾನೆ, ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ನೀಡುವ ಸುಗ್ರೀವಾಜ್ಞೆಯನ್ನು ಯೋಗಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅಂಗೀಕರಿಸಲಾಯಿತು. ದೇಶದಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ಆರ್ಥಿಕ ಹೊಡೆತ ಬಿದ್ದಿರುವ ಉದ್ಯಮ ರಂಗವನ್ನು ಮೇಲೆತ್ತುವ ಸಲುವಾಗಿ ಈ ಸುಗ್ರೀವಾಜ್ಞೆ ತರಲಾಗಿದೆಯೆಂದು ಉತ್ತರ ಪ್ರದೇಶ ಸರ್ಕಾರದ ವಕ್ತಾರರೊಬ್ಬರು ತಿಳಿಸಿದ್ದಾರೆ.
ಮಾದ್ಯಮಗಳಿಗೆ ಅವರು ನೀಡಿದ ಹೇಳಿಕೆ ಪ್ರಕಾರ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಮರುಜೀವ ಕೊಡಲು, ಹೊಸ ಉದ್ಯಮಗಳಿಗೆ ಹೂಡಿಕೆ ಬರಲು ಸರ್ಕಾರ ಕೆಲವೊಂದು ನಿಷ್ಟುರವಾದ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಹಾಗಾಗಿಯೇ ಈ ನಿರ್ಧಾರವನ್ನು ಜಾರಿಗೆ ತಂದಿದ್ದೇವೆ ಎಂದಿದ್ದಾರೆ.
ಕಾರ್ಮಿಕ ವಲಯಕ್ಕೆ ಸಂಬಂಧಿಸಿದ 38 ಕಾಯ್ದೆಯಲ್ಲಿ 35 ಕಾಯ್ದೆಗಳನ್ನು ರದ್ದು ಪಡಿಸಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಈ ಸುಗ್ರೀವಾಜ್ಞೆಯನ್ನು ವಿರೋಧ ಪಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತರು ಬಲವಾಗಿ ಖಂಡಿಸಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ಲಲ್ಲು, ಯೋಗಿ ಸರ್ಕಾರ ಕಾರ್ಮಿಕರನ್ನು ವಂಚಿಸುತ್ತಿದೆ ಎಂದಿದ್ದಾರೆ. ಈಗ ಖಂಡಿತವಾಗಿಯೂ ಕಾರ್ಮಿಕರಿಗೆ ಅಸುರಕ್ಷತೆಯ ಭಾವ ಕಾಡಲಿದೆ, ಈ ಸುಗ್ರೀವಾಜ್ಞೆಯಿಂದಾಗಿ ಸರಿಯಾದ ವೇತನ ಮತ್ತು ಭತ್ಯೆಯನ್ನು ಅವರು ಪಡೆಯದಿರುವ ಸಾಧ್ಯತೆಗಳಿವೆ. ಇದಕ್ಕೆ ಹೊಣೆ ಯಾರು ಹೊರಲಿದ್ದಾರೆ? ಸಿಎಂ ಯೋಗಿ ಅವರ ವೇತನದ ಕುರಿತು ಖಾತರಿ ನೀಡಲಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕನಿಷ್ಟ ವೇತನ ಕಾಯ್ದೆ ಪ್ರಮುಖ ಕಾರ್ಮಿಕ ಕಾಯ್ದೆ. ಅದು ಇನ್ನು ರಾಜ್ಯದಲ್ಲಿ ಅನ್ವಯಗೊಳ್ಳುವುದಿಲ್ಲವೆಂದಾದರೆ ಕಾರ್ಮಿಕರು ಅವರ ನ್ಯಾಯಯುತ ವೇತನವನ್ನು ಹೇಗೆ ಪಡೆಯುತ್ತಾರೆ ಎಂದು ಕಾರ್ಮಿಕ ಕಾನೂನು ತಜ್ಞ ಕಾಶೀನಾಥ್ ಮಿಶ್ರಾ ಆತಂಕ ವ್ಯಕ್ತ ಪಡಿಸಿದ್ದಾರೆ. ಮುಂದುವರೆಸಿ ಹಲವು ಪ್ರಮುಖ ಕಾರ್ಮಿಕ ಕಾನೂನುಗಳು ರದ್ದುಗೊಳ್ಳಲಿವೆ. ಉದಾಹರಣೆಗೆ ಕಾರ್ಮಿಕ ಸಂಘ ಕಾಯ್ದೆ, ಉದ್ಯೋಗ ಭದ್ರತಾ ಕಾಯ್ದೆ, ಕೈಗಾರಿಕಾ ವಿವಾದಗಳನ್ನು ಬಗೆಹರಿಸುವ ಕಾಯ್ದೆ, ಆರೋಗ್ಯ ಮತ್ತು ಕಾರ್ಮಿಕರ ಕೆಲಸದ ಪರಿಸ್ಥಿತಿಗಳು, ಗುತ್ತಿಗೆ ಆಧಾರಿತ ಕಾರ್ಮಿಕರು ಜೊತೆಗೆ ಬೋನಸ್ ಮತ್ತು ಭತ್ಯೆ ಸಂಬಂಧಿತ ಕಾಯ್ದೆಗಳು ನಿಷ್ಕ್ರಿಯಗೊಳ್ಳಲಿವೆ. ಹೀಗಾದಲ್ಲಿ ಕಾರ್ಮಿಕರು ಪರಿಹಾರ, PF ಮೊದಲಾದವುಗಳನ್ನು ಪಡೆದುಕೊಳ್ಳುವುದು ಹೇಗೆಂದು ಪ್ರಶ್ನಿಸಿದ್ದಾರೆ.
ಸಾಂಕ್ರಾಮಿಕ ರೋಗ ನಿಯಂತ್ರಣ ಸುಗ್ರೀವಾಜ್ಞೆ 2020ನ್ನು ಜಾರಿಗೆ ತಂದ ಅದೇ ದಿನ ಕಾರ್ಮಿಕ ಕಾನೂನು ಸುಗ್ರೀವಾಜ್ಞೆಯನ್ನು ಯೋಗಿ ಸರ್ಕಾರ ಹೊರಡಿಸಿದೆ. ಈ ಮೂಲಕ, ಜನರ ಕಣ್ಣಿಗೆ ಮಣ್ಣೆರಚಿ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯನ್ನು ಮಾತ್ರ ಪ್ರಚಾರಕ್ಕಾಗಿ ಬಳಸುವ ತಂತ್ರಗಾರಿಕೆ ಮಾಡಿದೆ ಎಂದು ʼದಿ ಪ್ರಿಂಟ್ʼ ವರದಿ ಮಾಡಿದೆ