ಒಂದು ರೀತಿಯಲ್ಲಿ ಕ್ರೂರಿ ಕರೋನಾವನ್ನು ಕೇಂದ್ರ ಸರ್ಕಾರವೇ ಕೆಂಪು ಹಾಸಿ ಬರಮಾಡಕೊಂಡಿತು. ಇದಾದ ಬಳಿಕ ಸೂಕ್ತವಲ್ಲದ ಸಂದರ್ಭದಲ್ಲಿ, ಸಮರ್ಪಕವಲ್ಲದ ರೀತಿಯಲ್ಲಿ ಲಾಕ್ಡೌನ್ ಜಾರಿಗೊಳಿಸಿ ದುರ್ದಿನಗಳನ್ನು ಆಮಂತ್ರಿಸಿಕೊಂಡಿತು. ಈಗ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶ ಕಂಡುಕೇಳರಿಯದ ಕಷ್ಟ ಅನುಭವಿಸುತ್ತಿರುವುದರ ನಡುವೆಯೂ ‘ಸಂಭ್ರಮಾಚರಣೆ’ ಮಾಡಲು ಮುಂದಾಗಿದೆ.
Also Read: ಕೇಂದ್ರದ ಬೇಜವಾಬ್ದಾರಿತನಕ್ಕೆ ಭಾರತ ಬಲಿಯಾಯಿತೇ?
ಕರೋನಾ ಎಂಬ ಕ್ರೂರಿ ಮತ್ತು ಲಾಕ್ಡೌನ್ ಎಂಬ ನಿಷ್ಕರುಣಿಗಳೆರಡೂ ದೇಶದ ಪ್ರತಿ ಪ್ರಜೆಗೆ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ನೀಡುತ್ತಿರುವ ಹೊತ್ತಿನಲ್ಲಿ ಅದ್ಧೂರಿಯಾಗಿ ವರ್ಷಾಚರಣೆ ಮಾಡಿಕೊಂಡರೆ ಜನ ತಿರುಗಿ ಬೀಳುತ್ತಾರೆ ಎಂಬುದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಆದರೂ ‘ತಾವೇನೋ ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಸಿಕ್ಕ ಅವಕಾಶವನ್ನು’ ಅದು ಬಿಡಲೊಲ್ಲದು. ಅದೇ ಕಾರಣಕ್ಕೆ ಕರೋನ ಕಡುಕಷ್ಟವಿರಲಿ, ಲಾಕ್ಡೌನ್ ಎಂಬ ಸಹಿಸಲಸಾಧ್ಯ ಬೇನೆಯೇ ಇರಲಿ ವರ್ಷಾಚರಣೆ ಮಾಡುವುದಾಗಿ ನಿರ್ಧರಿಸಿದೆ.
ಕರೋನಾ ಇರುವ ಕಾರಣಕ್ಕೆ ಸಾಮಾಜಿಕ ಅಂತರ ಕಾಪಾಡಲೇಬೇಕು. ಆದ್ದರಿಂದ ಹೆಚ್ಚು ಜನ ಸೇರಿಸುವುದು ಅಸಾಧ್ಯ. ಅದೇ ಕಾರಣಕ್ಕೆ ಬಿಜೆಪಿ ದೇಶಾದ್ಯಂತ ವರ್ಚ್ಯುಯಲ್ ಸಮಾವೇಶಗಳನ್ನು ನಡೆಸಲು ಮುಂದಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಎಲ್ಲಾ ರಾಜ್ಯಗಳ ಬಿಜೆಪಿ ಅಧ್ಯಕ್ಷರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 1 ಸಾವಿರ ವರ್ಚ್ಯುಯಲ್ ಸಮಾವೇಶಗಳನ್ನು ಹಮ್ಮಿಕೊಳ್ಳಲು ಸೂಚಿಸಿದ್ದಾರೆ. ಸಮಾವೇಶದಲ್ಲಿ ಕನಿಷ್ಠ 750 ಜನ ಇರಬೇಕೆಂದು ಸೂಚಿಸಿದ್ದಾರೆ.
ಈ ವಿಡಿಯೋ ಸಮ್ಮೇಳನಗಳು ಒಂದು ಗಂಟೆಯ ಅವಧಿಯನ್ನು ಹೊಂದಿರುತ್ತವೆ. 40 ನಿಮಿಷಗಳನ್ನು ಅತಿಥಿಯ ಭಾಷಣಕ್ಕಾಗಿ ಮತ್ತು 20 ನಿಮಿಷಗಳನ್ನು ಸಂವಾದಕ್ಕಾಗಿ ಮೀಸಲಿಡಲಾಗುತ್ತದೆ. ಸಮಾವೇಶದಲ್ಲಿ ಕೇಂದ್ರ ಸರಕಾರ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ನ ಪ್ರಮಾಣವನ್ನು ಜನಸಾಮಾನ್ಯರ ಭಾಷೆಯಲ್ಲಿ ಜನರಿಗೆ ತಿಳಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ಕಳೆದ ಒಂದು ವರ್ಷ ಏನೇನು ಕೆಲಸ ಮಾಡಿದೆ ಎಂದು ತಿಳಿಸಲು ಬಳಸಿಕೊಳ್ಳಲಿದೆ. ಮುಖ್ಯವಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದ್ದಂತೆ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದೆ ಮತ್ತು ತ್ರಿಪಲ್ ತಲಾಖ್ ಕಾಯ್ದೆ ಜಾರಿ ಮಾಡಿದೆ ಎಂದು ಹೇಳಲಿದೆ. ಅಯೋಧ್ಯೆಯ ಬಾಬರಿ ಮಸೀದಿ ಮತ್ತು ರಾಮ ಜನ್ಮಭೂಮಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ತಮ್ಮದೇ ಶ್ರೇಯ ಎಂದು ಬಣ್ಣಿಸಿಕೊಳ್ಳಲು ಬಳಸಿಕೊಳ್ಳಲಿದೆ.

ಇದಲ್ಲದೆ ಕೋವಿಡ್ -19 ನಿಭಾಯಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಯೋಜನೆ ಹೊಂದಿದೆ. ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಸಾರಿ ಸಾರಿ ಹೇಳಲಿದೆ. ಈ ಮುಖಾಂತರ ವಲಸೆ ಕಾರ್ಮಿಕರ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಬಂದಿರುವ ಕೆಟ್ಟ ಹೆಸರನ್ನು ಸ್ವಲ್ಪವಾದರೂ ತೊಳೆದುಹಾಕಬೇಕು ಎಂಬುದು ಬಿಜೆಪಿ ಲೆಕ್ಕಾಚಾರ. ಲಾಕ್ಡೌನ್ ಅನ್ನು ಅಗತ್ಯ ಇಲ್ಲದೇ ಇದ್ದಾಗ ಜಾರಿಗೆ ತಂದು ದೇಶದ ಜನರಿಗೆ ತೊಂದರೆ ಕೊಟ್ಟು, ಕರೋನಾ ಪ್ರಕರಣಗಳು ಹೆಚ್ಚಾದಾಗ ಲಾಕ್ಡೌನ್ ನಿಯಮಗಳನ್ನು ಸಡಿಲಿಸಿ ದೇಶವನ್ನು ಆಪತ್ತಿಗೆ ತಳ್ಳಿದ ಅಪಖ್ಯಾತಿಯಿಂದ ಸ್ವಲ್ಪ ಮಟ್ಟಿಗಾದರೂ ದೂರಾಗಬೇಕು ಎಂಬುದು ದೂರದ ಆಲೋಚನೆ.
ಸದ್ಯ ಬಿಜೆಪಿ ಎಂದರೆ ಮೋದಿ, ಮೋದಿ ಎಂದರೆ ಬಿಜೆಪಿ. ಆದುದರಿಂದ ವರ್ಷಾಚರಣೆಯಲ್ಲೂ ಬಿಜೆಪಿ ಮೋದಿ ಮಂತ್ರ ಪಠಣದ ಮೊರೆ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಪ್ರತಿಯನ್ನು ದೇಶಾದ್ಯಂತ 10 ಕೋಟಿ ಕುಟುಂಬಗಳಿಗೆ ನೀಡಲು ನಿರ್ಧರಿಸಿದೆ. ಬಿಜೆಪಿ ಕಾರ್ಯಕರ್ತರು ಮನೆಮನೆಗೆ ತೆರಳಿ ಪತ್ರ ವಿತರಿಸಲಿದ್ದಾರೆ. ಪತ್ರದಲ್ಲಿ ಮೋದಿ “ಆತ್ಮಾ ನಿರ್ಭಾರ್ ಭಾರತ್” ಪ್ರತಿಜ್ಞೆ ಕೈಗೊಳ್ಳುವಂತೆ ಕರೆ ನೀಡಲಿದ್ದಾರೆ. ಪತ್ರದ ಪ್ರಕಾರ ಬಿಜೆಪಿ ಆತ್ಮಾ ನಿರ್ಭಾರ್ ಭಾರತ್ ಪ್ರತಿಜ್ಞಾ ಪ್ರಕ್ರಿಯೆ ನಡೆಸಲಿದೆ. ಪ್ರತಿಯೊಬ್ಬ ಬಿಜೆಪಿ ಸದಸ್ಯರು ಸ್ವದೇಶಿ ಅಥವಾ ಸ್ಥಳೀಯ ಉತ್ಪನ್ನಗಳನ್ನೇ ಕೊಂಡುಕೊಂಡು ಬಳಸುವ ಪ್ರತಿಜ್ಞೆಯನ್ನು ಸ್ವೀಕರಿಸಲಿದ್ದಾರೆ.
ಕೇಂದ್ರ ಸರ್ಕಾರ ಕರೋನಾ ಕಷ್ಟಕ್ಕೆ ಬಿಜೆಪಿ ಸ್ಪಂದಿಸುತ್ತಿದೆ ಎಂಬ ಸಂದೇಶ ರವಾನಿಸಲು ಬಿಜೆಪಿಯು ತನ್ನ ರೈತ, ಮಹಿಳಾ, ಯುವ ಮೋರ್ಚಾಗಳ ಮೂಲಕ ಮಾಸ್ಕ್, ಸ್ಯಾನಿಟೈಸೇಷನ್ ವಿತರಿಸಲು ನಿರ್ಧರಿಸಲಾಗಿದೆ. ಪ್ರಚಾರದ ಮುಂದುವರೆದ ಭಾಗವಾಗಿ ಕೇಂದ್ರ ಸಚಿವರು ಮತ್ತು ರಾಜ್ಯಾಧ್ಯಕ್ಷರು ಮತ್ತಿತರ ಮುಂಚೂಣಿ ನಾಯಕರು ದೇಶದ 150 ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸಲಿದ್ದಾರೆ.
ಕೇಂದ್ರ ಸರ್ಕಾರದ ಸಾಧನೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ದೃಷ್ಟಿಯಿಂದ ಬಿಜೆಪಿಯು ತನ್ನ ಎಲ್ಲಾ ಬೂತ್ ಮಟ್ಟದ ಸದಸ್ಯರಿಗೆ ಕೂಡಲೇ ವಾಟ್ಸಾಪ್ ಗುಂಪುಗಳನ್ನು ರಚಿಸಿಕೊಳ್ಳುವಂತೆ ಸೂಚನೆ ನೀಡಿದೆ. ಆ ವಾಟ್ಸಾಪ್ ಗುಂಪುಗಳಿಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಕಳುಹಿಸಿಕೊಡಲಾಗುತ್ತದೆ. ಅವರು ಅದನ್ನು ಬೇರೆಯವರಿಗೆ ಹಂಚಬೇಕು ಎಂದು ಹೇಳಲಾಗುತ್ತದೆ. ಈ ಎಲ್ಲಾ ಪ್ರಚಾರ ಕಾರ್ಯಗಳನ್ನು ಮೇ 27, 28 ಮತ್ತು 29ರಂದು ಯುದ್ಧೋಪಾದಿಯಲ್ಲಿ ನಡೆಸುವಂತೆ ನಿರ್ದೇಶಿಸಲಾಗಿದೆ.
ಇದಲ್ಲದೆ ಕರೋನಾ ಸಾಂಕ್ರಾಮಿಕ ರೋಗವನ್ನು ಭಾರತ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಬಿಂಬಿಸುವ ಕಿರು ವಿಡಿಯೋ ಬಿಡುಗಡೆ ಮಾಡಲಿದೆ. ಹಿಂದಿ ಭಾಷೆಯ ಸಾಕ್ಷ್ಯಚಿತ್ರಗಳು ಮಾತ್ರವಲ್ಲ, ಎಲ್ಲಾ ರಾಜ್ಯ ಘಟಕಗಳಿಗೂ ಈ ಚಿತ್ರವನ್ನು ಸ್ಥಳೀಯ ಭಾಷೆಗಳಿಗೆ ಡಬ್ ಮಾಡುವಂತೆ ಸೂಚಿಸಲಾಗಿದೆ.
ಹೀಗೆ ಕರೋನಾ ಕಷ್ಟವನ್ನೇ, ಲಾಕ್ಡೌನ್ ಸಂಕಷ್ಟವನ್ನೇ ಬಂಡವಾಳ ಮಾಡಿಕೊಂಡು ಪಕ್ಷದ ನೆಲೆ ಭದ್ರ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಕರೋನಾ ಮತ್ತು ಲಾಕ್ಡೌನ್ ನಡುವೆಯೂ ಬ್ರಾಂಡ್ ಬಿಲ್ಡಿಂಗ್ ಗೆ ಮುಂದಾಗಿದೆ. ಜೊತೆಗೆ ಎಲ್ಲಾ ವೈಫಲ್ಯಗಳ ನಡುವೆಯೂ ಮತ್ತೆ ಅಧಿಕಾರಕ್ಕೆ ಬಂದ ಸಂಭ್ರಮವನ್ನು ಆಚರಿಸುವುದಕ್ಕೂ ಮುಂದಾಗಿದೆ.
Also Read: ಕೇಂದ್ರದ ಅಸಹಕಾರದ ನಡುವೆ BSY ಕರ್ನಾಟಕವನ್ನು ಮುನ್ನಡೆಸಿದ್ದೇಗೆ.!?






