ಎನ್ಆರ್ಸಿ ಪಟ್ಟಿಯಲ್ಲಿರುವ ʼಅನರ್ಹʼ ಸರಿ ಸುಮಾರು 10,000 ಮಂದಿಯ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವಂತೆ ಅಸ್ಸಾಮ್ ರಾಜ್ಯ ಸಂಯೋಜಕ ಹಿತೇಶ್ ದೇವ್ ಶರ್ಮಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅನರ್ಹರ ಹೆಸರುಗಳನ್ನು ಅಳಿಸಲು ಆದೇಶಗಳನ್ನು ನೀಡುವಂತೆ ನಿರ್ದೇಶಿಸಿದ ಶರ್ಮಾ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ನೋಂದಣಿ ಜಿಲ್ಲಾ ರಿಜಿಸ್ಟ್ರಾರ್ (ಡಿಆರ್ಸಿಆರ್) ಗಳಿಗೆ ಮಂಗಳವಾರ ಪತ್ರ ಬರೆದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿದೇಶಿಗರೆಂದು ಘೋಷಿತರಾದವರು, ಅನುಮಾನಾಸ್ಪದ ಮತದಾರರು, ವಿದೇಶಿಯರ ನ್ಯಾಯಮಂಡಳಿಯ ಮುಂದೆ ಪ್ರಕರಣ ಬಾಕಿ ಉಳಿದವರು ಎನ್ಆರ್ಸಿ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿಯಿಂದ ಅಂತವರ ಹೆಸರನ್ನು ಕೈ ಬಿಡಬೇಕೆಂದು ಶರ್ಮಾ ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
“ಪರಿಶೀಲನೆಗೆ ವ್ಯಕ್ತಿಯ ಸರಿಯಾದ ಗುರುತನ್ನು ಕಡ್ಡಾಯವಾಗಿ ಅಗತ್ಯವಿರುತ್ತದೆ, ಇದರಿಂದಾಗಿ ಭವಿಷ್ಯದಲ್ಲಿ ವ್ಯಕ್ತಿಯ ಗುರುತಿಸುವಿಕೆಗೆ ಸಂಬಂಧಿಸಿದಂತೆ ಯಾವುದೇ ಅಸ್ಪಷ್ಟತೆ ಉಂಟಾಗುವುದಿಲ್ಲ” ಎಂದು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಎಷ್ಟು ಜನರನ್ನು ಹೊರಗಿಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿಲ್ಲವಾದರೂ, ವಿದ್ಯಮಾನಗಳ ಬಗ್ಗೆ ತಿಳಿದಿರುವ ಅಧಿಕಾರಿಯೊಬ್ಬರು, ಸುಮಾರು 10,000 ಜನರನ್ನು ಅಂತಿಮ ಎನ್ಆರ್ಸಿಯಲ್ಲಿ ʼತಪ್ಪಾಗಿ ಸೇರಿಸಲಾಗಿದೆʼ ಎಂದು ಗುರುತಿಸಲಾಗಿದೆ ಮತ್ತು ಈಗ ಅವರನ್ನು ಹೊರಗಿಡಲಾಗುವುದು ಎಂದು ಹೇಳಿದ್ದಾರೆ.

“ಇದರಲ್ಲಿ ಎಲ್ಲಾ ಸಮುದಾಯದವರೂ ಸೇರಿದ್ದಾರೆ. ಈ ಅಂಕಿ-ಅಂಶವು ಸ್ವಲ್ಪ ದೊಡ್ಡದಾಗಿದೆ.” ಎಂದು ಅಧಿಕೃತ ಮೂಲವೊಂದು ತಿಳಿಸಿದೆ. 19,06,657 ಜನರ ಹೆಸರನ್ನು ಹೊರತುಪಡಿಸಿ ಅಂತಿಮ ಎನ್ಆರ್ಸಿಯನ್ನು ಕಳೆದ ವರ್ಷ ಆಗಸ್ಟ್ 31 ರಂದು ಬಿಡುಗಡೆ ಮಾಡಲಾಯಿತು. 3,30,27,661 ಅರ್ಜಿದಾರರಲ್ಲಿ ಒಟ್ಟು 3,11,21,004 ಹೆಸರುಗಳನ್ನು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಅಂತಿಮ ಎನ್ಆರ್ಸಿ ಪ್ರಕಟಣೆಯ ನಂತರ, ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಇದನ್ನು ತಪ್ಪಾದ ದಾಖಲೆ ಎಂದು ಟೀಕಿಸಿದರು, ಸ್ಥಳೀಯ ಜನರನ್ನು ಹೊರಗಿಟ್ಟು ಅಕ್ರಮ ವಲಸಿಗರನ್ನು ಸೇರಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು