ಕೇರಳದ ಪಾಲಕ್ಕಾಡ್ ನಲ್ಲಿ ಹಂದಿ ಬೇಟೆಗಾಗಿ ತೆಂಗಿನಕಾಯಿಯಲ್ಲಿ ಇರಿಸಿದ ಸ್ಫೋಟಕದಿಂದಾಗಿ ಅದನ್ನು ತಿಂದ ಗರ್ಭಿಣಿ ಆನೆ ಸತ್ತಿರುವ ಘಟನೆ ಮಾಸುವ ಮುನ್ನವೇ ಅಸ್ಸಾಂ ನ ಗುವಾಹಟಿಯಲ್ಲಿ ವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆಯೊಂದನ್ನು ಗುಂಪೊಂದು ಭೀಕರವಾಗಿ ಥಳಿಸಿ ಕೊಂದು ಹಾಕಿದೆ. ಮಾತ್ರವಲ್ಲದೇ ಕೊಂದು ಹಾಕಿದ ಚಿರತೆಯನ್ನ ಊರೆಲ್ಲಾ ಮೆರವಣಿಗೆ ನಡೆಸಿರುವ ತಂಡ ಅದನ್ನ ವೀಡಿಯೋ ಮಾಡಿ ಜಾಲತಾಣದಲ್ಲಿ ವೈರಲ್ ಮಾಡಿವೆ. ಅಷ್ಟಕ್ಕೇ ಸುಮ್ಮನಾಗದ ಯುವಕರ ಗುಂಪು ನಂತರ ಅದರ ಹಲ್ಲು, ಉಗುರು ಹಾಗೂ ಚರ್ಮವನ್ನೂ ಕಿತ್ತು ಹಾಕಿದೆ.
ಘಟನೆ ಸಂಬಂಧ ಈಗಾಗಲೇ ಪೊಲೀಸರು ಆರು ಮಂದಿಯನ್ನ ಬಂಧಿಸಿದ್ದಾರೆ. ಅಲ್ಲದೇ ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ವಸತಿ ಪ್ರದೇಶಕ್ಕೆ ಚಿರತೆ ನುಗ್ಗಿದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತಾದರೂ ಅವರು ಸ್ಥಳಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಒಂದು ವೇಳೆ ಅವರು ತಕ್ಷಣವೇ ಬರುತ್ತಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಅನ್ನೋದಾಗಿ ಅಲ್ಲಿನ ಸ್ಥಳೀಯರು ಹೇಳಿಕೊಂಡಿದ್ದಾರೆ.
ಭಾನುವಾರ ಬೆಳಿಗ್ಗೆಯೇ 5 ಗಂಟೆಗೆ ಮಾಹಿತಿ ಪಡೆದಿದ್ದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದಿದ್ದರಾದರೂ ಆ ನಂತರ ಅಲ್ಲಿಂದ ಆ ಚಿರತೆ ಓಡಿ ಹೋಗಿತ್ತು. ಇದರಿಂದಾಗಿ ಅರಣ್ಯಾಧಿಕಾರಿಗಳು ಸುಮ್ಮನಾಗಿದ್ದಾರೆ. ಆದರೆ ಆನಂತರ ಘಟನೆ ನಡೆದ ಬಳಿಕವಷ್ಟೇ ಅವರು ಎಚ್ಚೆತ್ತುಕೊಂಡಿದ್ದಾರೆ. ಅದಾಗಲೇ ಜಾಲತಾಣ ತುಂಬಾ ಯುವಕರ ತಂಡದ ಈ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆದರೆ ಅಸ್ಸಾಂ ರಾಜ್ಯ ಸರಕಾರದ ಮೂಲದ ಪ್ರಕಾರ, ಚಿರತೆಯನ್ನ ಬೆನ್ನಟ್ಟಿದ್ದ ಜನರು ಅದನ್ನ ಮೀಸಲು ಅರಣ್ಯ ಪ್ರದೇಶದಲ್ಲಿಯೇ ಕೊಂದು ಹಾಕಿದ್ದಾಗಿ ತಿಳಿಸಿದೆ. ಆದರೆ ಕಳೆದ ಒಂದು ವರುಷದಲ್ಲಿ ಅಸ್ಸಾಂ ನಲ್ಲಿ ಐದು ಚಿರತೆಗಳ ಹತ್ಯೆಯಾಗಿರುವುದು ವರದಿಯಾಗಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎಪ್ರಿಲ್ ತಿಂಗಳ ಲಾಕ್ಡೌನ್ ಸಮಯದಲ್ಲಿಯೇ ನಾಲ್ಕು ಚಿರತೆಗಳನ್ನ ಹತ್ಯೆಯಾಗಿತ್ತು ಎನ್ನಲಾಗಿದೆ. ಅರಣ್ಯಾಧಿಕಾರಿಗಳ ಬೇಜವಾಬ್ದಾರಿ ಹಾಗೂ ಮುನ್ನೆಚ್ಚರಿಕಾ ಕ್ರಮ ವಹಿಸದ ಕಾರಣ ಅದು ಮುಂದುವರೆದಿದೆ ಅನ್ನೋ ಮಾತು ಅಲ್ಲಿನ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿದೆ.
ಆದರೆ ಗುವಾಹಟಿ ವನ್ಯಜೀವಿ ರಕ್ಷಣಾ ವಿಭಾಗದ ಅಧಿಕಾರಿ ಜಿತೇಂದರ್ ಕುಮಾರ್ ಹೇಳಿಕೆ ಪ್ರಕಾರ, “ಚಿರತೆ ಫಾತಾಸಿಲ್ ಎಂಬ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿದ್ದ ಚಿರತೆಯನ್ನೇ ತಂಡ ಬೇಟೆಯಾಡಿದೆ. ಚಿರತೆ ಎಲ್ಲೂ ತನ್ನ ಗಡಿ ದಾಟಿ ಬಂದಿರಲಿಲ್ಲ. ಬದಲಿಗೆ ತಂಡವೇ ಅಲ್ಲಿಗೆ ತೆರಳಿತ್ತು. ನಾವು ಅಲ್ಲಿಗೆ ಬೆಳಿಗ್ಗೆ 7.30 ರ ವೇಳೆಗೆ ಹೋಗಿದ್ದೆವು. ಅಲ್ಲದೇ ಗುವಾಹಟಿಯ ಮೃಗಾಲಯದ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೆವು. ಅದನ್ನ ಸುರಕ್ಷಿತವಾಗಿ ಹಿಡಯುವಂತೆಯೂ ಸೂಚಿಸಿದ್ದೆವು. ಆದರೆ ಆ ಸಮಯದಲ್ಲಿ ಅದು ತಪ್ಪಿಸಿಕೊಂಡು ಓಡಿ ಹೋಗಿತ್ತು. ಆದರೆ ಆ ಬಳಿಕ ಆ ಚಿರತೆಯನ್ನ ಹತ್ಯೆಗೈಯಲಾಗಿದೆ” ಎಂದಿದ್ದಾರೆ.
“ಅದಾಗಲೇ ಗಾಯಗೊಂಡು ಓಡಿ ಹೋಗಿದ್ದ ಚಿರತೆಯನ್ನ ಹಿಂಬಾಲಿಸದಂತೆಯೂ ನಾನು ಹೇಳಿದ್ದೆ. ಆ ಬಳಿಕ ಅಲ್ಲಿಂದ ಹತ್ತು ಗಂಟೆ ವೇಳೆಗೆ ನಾನು ಅಲ್ಲಿಂದ ಹೊರಟಿದ್ದೇನೆ. ಆದರೆ ಮಧ್ಯಾಹ್ನದ ನಂತರ ರೇಂಜ್ ಆಫೀಸರ್ ನನಗೆ ಮಾಹಿತಿ ನೀಡಿದಾಗ ವಿಷಯ ತಿಳಿಯಿತು” ಅಂತಾ ಜಿತೇಂದರ್ ಸಿಂಗ್ ತಿಳಿಸಿದ್ದಾರೆ.
ಅಲ್ಲದೇ ಅದಾಗಲೇ ಓಡಿ ಹೋಗಿದ್ದ ಚಿರತೆಗೆ ಯಾವುದೇ ರೀತಿಯಲ್ಲೂ ತೊಂದರೆ ನೀಡದಂತೆ ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಸೂಚಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸ್ಥಳೀಯರು ಮಾತ್ರ, ಚಿರತೆ ತಮ್ಮ ಸಾಕು ಆಡು, ಕೋಳಿ ಹಾಗೂ ನಾಯಿಗಳನ್ನ ಬೇಟೆಯಾಡಿತ್ತು ಎಂದಿದ್ದಾರೆ.
ಕಳೆದ ಎಪ್ರಿಲ್ ಇದೇ ಅಸ್ಸಾಂ ರಾಜ್ಯದ ಗೊಲಾಘಾಟ್ ಜಿಲ್ಲೆಯಲ್ಲಿ ಚಿರತೆ ಬೇಟೆಯಾಡಿದ ಸಂಬಂಧ ವೀಡಿಯೋ ಫೂಟೇಜ್ ಆಧಾರದ ಮೇಲೆಯೇ ಐವರನ್ನ ಬಂಧಿಸಲಾಗಿತ್ತು. ಇದು ಮಾತ್ರವಲ್ಲದೇ ಇದೇ ಜಿಲ್ಲೆಯಲ್ಲಿ ಮತ್ತೂ ಮೂರು ಚಿರತೆಗಳನ್ನ ಸ್ಥಳೀಯರು ಕೊಂದು ಹಾಕಲಾಗಿದ್ದರೆ, ಐದು ಚಿರತೆಗಳನ್ನ ಅರಣ್ಯ ಸಿಬ್ಬಂದಿಗಳು ರಕ್ಷಿಸಿದ್ದರು. ಇದೆಲ್ಲವೂ ಎಪ್ರಿಲ್ ತಿಂಗಳ ಲಾಕ್ಡೌನ್ ಸಮಯದಲ್ಲಷ್ಟೇ ನಡೆದಿತ್ತು. ಇನ್ನೊಂದು ಚಿರತೆಯನ್ನ ಪೊಳಿಸ್ ಸಿಬ್ಬಂದಿಯೊಬ್ಬ ಜೊರ್ಹಾಟ್ ಜಿಲ್ಲೆಯಲ್ಲಿ ಶೂಟ್ ಮಾಡಿ ಕೊಂದು ಹಾಕಿದ್ದ.
ಒಟ್ಟಿನಲ್ಲಿ ಅಸ್ಸಾಂ ರಾಜ್ಯವೊಂದರಲ್ಲೇ ಈ ರೀತಿ ಹಲವು ಚಿರತೆಗಳನ್ನ ಮಾಂಸದ ಉದ್ದೇಶಕ್ಕಾಗಿಯೂ ಅಲ್ಲಿನ ಸ್ಥಳೀಯರು ಬೇಟೆಯಾಡುತ್ತಲೇ ಬಂದಿದ್ದಾರೆ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಆದರೆ ಕೇರಳದ ಗರ್ಭಿಣಿ ಆನೆ ಸಾವು ಪ್ರಕರಣದಿಂದಾಗಿ ಚಿರತೆ ಹತ್ಯೆ ಪ್ರಕರಣ ಬಹುದೊಡ್ಡದಾಗಿ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಸಂರಕ್ಷಿತ ಅರಣ್ಯ ವಲಯ ಅಥವಾ ಪ್ರಕೃತಿ ಮೇಲಿನ ಮಾನವನ ಹಸ್ತಕ್ಷೇಪ ಅತಿಯಾಗಿದ್ದರಿಂದಲೇ ಚಿರತೆ ಹಾಗೂ ಮನುಷ್ಯರ ನಡುವಿನ ಮುಖಾಮುಖಿ ಅತಿಯಾಗತೊಡಗಿದೆ ಅಂತಾ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.