ಜಾಮಿಯತ್ ಉಲಾಮಾ-ಇ-ಹಿಂದ್ ಸಂಘಟನೆಯು ತಬ್ಲೀಘಿ ಜಮಾತ್ ಕುರಿತು ಮಾಧ್ಯಮಗಳು ನೀಡಿದ ಏಕ ಪಕ್ಷೀಯ ವರದಿಯ ವಿರುದ್ದ ಸುಪ್ರಿಂ ಕೋರ್ಟ್ನಲ್ಲಿ ಹೂಡಿದ್ದ ದಾವೆಯ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅರವಿಂದ್ ಎಸ್ ಬೊಬ್ಡೆ ಅವರು ಪ್ರಮುಖವಾದ ಅಂಶವನ್ನು ಗಮನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅತೀ ಹೆಚ್ಚಾಗಿ ದುರುಪಯೋಗಗೊಳ್ಳುತ್ತಿದೆ, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ತ್ರಿಸದಸ್ಯ ಪೀಠದ ನೇತೃತ್ವವನ್ನು CJI ಬೊಬ್ಡೆ ಅವರು ವಹಿಸಿಕೊಂಡಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಹಿರಿಯ ವಕೀಲರಾದ ದುಷ್ಯಂತ್ ದಾವೆ ಅವರು, ಕೇಂದ್ರ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅರ್ಜಿಯನ್ನು ತಳ್ಳಿಹಾಕಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಆ ಸಂದರ್ಭದಲ್ಲಿ ಮಾತನಾಡಿದ ಸಿಜೆಐ ಬೊಬ್ಡೆ, “ನಿಮ್ಮ ಹಾಗೆಯೇ ಅವರು ಕೂಡಾ ತಮ್ಮ ವಾದವನ್ನು ಮಂಡಿಸಲು ಸ್ವತಂತ್ರರು. ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯಂತ ಹೆಚ್ಚು ದುರುಪಯೋಗಪಡಿಸಿಕೊಂಡ ಹಕ್ಕುಗಳಲ್ಲಿ ಒಂದಾಗಿರಬಹುದು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಿರಿಯ ಅಧಿಕಾರಿ ಸುಪ್ರಿಂಕೋರ್ಟ್ಗೆ ವರದಿ ನೀಡಿದ ಕಾರಣಕ್ಕೆ ಸರ್ಕಾರದ ಪರ ವಕೀಲರ ಮೇಲೆ ಗರಂ ಆದ ನ್ಯಾಯಮೂರ್ತಿಗಳು, ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಯಾಕೆ ಅಫಿಡವಿಟ್ ನೀಡಲಿಲ್ಲ ಎಂದು ಕೇಳಿದ್ದಾರೆ. ತಬ್ಲೀಘಿ ಜಮಾತ್ನ ವರದಿಗಾರಿಕೆಯ ಕುರಿತು ತೆಗೆದುಕೊಂಡಿರುವ ಕ್ರಮಗಳ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಫಿಡವಿಟ್ ನೀಡಬೇಕೆಂದು ಆದೇಶ ನೀಡಿದ್ದಾರೆ.
ಹೊಸ ಅಫಿಡವಿಟ್ ಅನ್ನು ಸಲ್ಲಿಸಲು ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶವನ್ನು ನೀಡಲಾಗಿದೆ.






