ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲಿ, ಯಾರೂ ಮಿತ್ರರಲ್ಲ ಎನ್ನುವ ಮಾತೊಂದಿದೆ. ಆ ಮಾತು ಅಕ್ಷರಶಃ ರಾಮನಗರದಲ್ಲಿ ಸತ್ಯವಾಗಿದೆ. ಒಂದು ಕಾಲದಲ್ಲಿ ಒಂದೇ ಪಕ್ಷದಲ್ಲಿ ಇದ್ದುಕೊಂಡು ಮಿತ್ರರಾಗಿದ್ದವರು ಇದೀಗ ಎದುರಾಳಿಗಳಾಗಿದ್ದಾರೆ. ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಅದೇ ರೀತಿ ಮೊದಲು ಹಾವು ಮುಂಗೂಸಿಯಂತೆ ಕಿತ್ತಾಡುತ್ತಿದ್ದವರು ಇದೀಗ ಬೇರೆ ಬೇರೆ ಪಕ್ಷದಲ್ಲಿ ಇದ್ದರೂ ರಾಜಕೀಯ ಹೊರತುಪಡಿಸಿ ಮಿತ್ರತ್ವ ಭಾವನೆಯಲ್ಲಿ ಕೆಲಸ ಮಾಡುವ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಈ ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎನ್ನುವುದಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಆದರೆ ಇದೀಗ ಅದೇ ರಾಮನಗರ ರಾಜಕಾರಣ ಇದೀಗ ಅಧಿಕಾರದ ಅಮಲಿನಲ್ಲಿ ತೇಲುವುದಕ್ಕೆ ಶುರುವಾಗಿದೆ. ಒಬ್ಬರಿಗೆ ಅಧಿಕಾರ ಇದ್ದು ಎದುರಾಳಿಗೆ ಅಧಿಕಾರ ಸಿಗದಿದ್ದಾಗ ಯಾವುದೇ ಜಟಾಪಟಿಗಳು ನಡೆಯುವುದಿಲ್ಲ. ಆದರೆ ಇಬ್ಬರಿಗೂ ಅಧಿಕಾರ ಸಿಕ್ಕಿದರೆ ಪೈಪೋಟಿ ತಪ್ಪಿದ್ದಲ್ಲ. ಆ ಪರಿಸ್ಥಿತಿ ರಾಮನಗರದಲ್ಲಿ ಶುರುವಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ರಾಮನಗರದ ಕನಕಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದಿಂದ ಸೋಲುಂಡಿದ್ದ ಯೋಗೇಶ್ವರ್ ವಿಧಾನಪರಿಷತ್ಗೆ ಆಯ್ಕೆಯಾಗಿದ್ದಾರೆ. ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಯೋಗೇಶ್ವರ್, ಹೆಚ್.ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಬಿಜೆಪಿಯನ್ನು ಸಪೋರ್ಟ್ ಮಾಡುತ್ತಿದ್ದಾರೆ. ಅವರು ಹೇಳಿದ ಕೆಲಸಗಳು ಜಿಲ್ಲೆಯಲ್ಲಿ ನಡೆಯುತ್ತಿವೆ ಎಂದು ಕೀಟಲೆ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಯೋಗೇಶ್ವರ್ ಮಾತಿಗೆ ಡಿ ಕೆ ಶಿ ತಿರುಗುಬಾಣ ..!
ಡಿ ಕೆ ಶಿವಕುಮಾರ್, ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡುವುದಿಲ್ಲ ಎಂದು .ಪಿ ಯೋಗೇಶ್ವರ್ ಹೇಳಿಕೆ ನೀಡುತ್ತಿದ್ದ ಹಾಗೆ ತಿರುಗಿ ಬಿದ್ದಿರುವ ಕನಕಪುರ ಬಂಡೆ, ಸಿ.ಪಿ ಯೋಗೇಶ್ವರ್ ನನ್ನ ಬಳಿ ಬಂದಿದ್ದ. ಹದಿನೈದು ದಿನಗಳ ಹಿಂದೆ ನನ್ನ ಬಳಿ ಮನವಿ ಮಾಡಿದ್ದ. ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ. ಕಾಂಗ್ರೆಸ್ಗೆ ಬರ್ತಿನಿ. ಯಡಿಯೂರಪ್ಪ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸ್ತಾರೆ ಅಂದ. ಹೀಗಾಗಿ ಕಾಂಗ್ರೆಸ್ ಬರ್ತಿನಿ ಅಂತ ನನ್ನ ಬಳಿ ಚರ್ಚೆ ಮಾಡಿದ. ನಾನೇ ಬೇಡ ಅಲ್ಲಿಯೇ ಇರು. ಬಿಜೆಪಿ ಪಕ್ಷಕ್ಕೆ ಲಾಯಲ್ ಆಗಿ ಇರು ಅಂತ ನಾನೇ ಕಳಿಸಿ ಕೊಟ್ಟೆ. ಈಗ ಯಾಕೆ ಹೀಗೆ ಮಾತಾಡಿದ್ದರೋ ಗೊತ್ತಿಲ್ಲ. ಮೆಂಟಲ್ ಏನಾದ್ರು ಆಗಿದ್ದಾರಾ..? ಎಂದು ಗುಡುಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಣ್ಣನ ಎದುರಾದ ಸಿಪಿ ಯೋಗೇಶ್ವರ್ಗೆ ತಮ್ಮನ ಚಾಟಿ..!
ಡಿಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳ ಸಂಬಂಧ ದೆಹಲಿಯ ತಿಹಾರ್ ಜೈಲಿಗೆ ಹೋಗಿದ್ದಾಗ ಕ್ಷಣಮಾತ್ರವೂ ಅಲುಗಾಡದೆ ಡಿಕೆ ಶಿವಕುಮಾರ್ ಅವರನ್ನು ಜೈಲಿನಿಂದ ಹೊರಕ್ಕೆ ತರಲು ಶ್ರಮ ಹಾಕಿದ ಡಿಕೆ ಸುರೇಶ್ ರಾಮನ ಪಾಲಿನ ಲಕ್ಷ್ಮಣನಂತೆ ನಡೆದುಕೊಂಡಿದ್ದರು. ಈಗಲೂ ರಾಜಕೀಯವಾಗಿ ಡಿಕೆ ಶಿವಕುಮಾರ್ ವಿರುದ್ಧ ದಾಳಿ ಮಾಡಿದರೆ, ಅಣ್ಣನಿಗಿಂತ ಮೊದಲು ಅಖಾಡಕ್ಕೆ ಧುಮುಕುವುದು ಸ್ವತಃ ಕಾಂಗ್ರೆಸ್ ಸಂಸದ ಡಿಕೆ ಸುರೇಶ್. ಈಗಲೂ ಯೋಗೇಶ್ವರ್ ವಿರುದ್ಧ ಕಿಡಿಕಾರಿರುವ ಸುರೇಶ್, ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬರಲು ತಯಾರಿ ನಡೆಸಿದ್ದರು. ಆದರೆ ಇದೀಗ ಯೋಗೇಶ್ವರ್ ಹುಚ್ಚಾಸ್ಪತ್ರೆಯಲ್ಲಿ ಮಲಗಿ ಎದ್ದುಬಂದಂತೆ ಮಾತನಾಡಿದ್ದಾರೆ. ಬಿಜೆಪಿಯವರು ಸರಿಯಾಗಿ ಟೆಸ್ಟ್ ಮಾಡಿಸಿಲ್ಲ. ಹಾಗಾಗಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನಾವು ಕುಮಾರಸ್ವಾಮಿ ಒಂದೇ ಜಿಲ್ಲೆಯವರು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಾವು ಹೆಚ್.ಡಿ ಕುಮಾರಸ್ವಾಮಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಇದನ್ನು ಸಹಿಸಿಕೊಳ್ಳಲಾಗದ ಯೋಗೇಶ್ವರ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಜೊತೆಗೆ ಯಾವುದೇ ಜಗಳವಿಲ್ಲ. ಯೋಗೇಶ್ವರ್ಗೆ ಭಗವಂತ ಇನ್ನು ಮುಂದಕ್ಕಾದರೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಬೇಡಿಕೊಂಡಿದ್ದಾರೆ. ಯೋಗೇಶ್ವರ್ ನಂಬಿದವರಿಗೆ ಮೋಸ ಮಾಡುವ ವ್ಯಕ್ತಿ. ಬಾಯಿ ಚಪಲ ತೀರಿಸಿಕೊಳ್ಳಲು ನಾನು ಬದುಕಿದ್ದೇನೆ ಎಂದು ತೋರಿಸಿಕೊಳ್ಳಲು ಈ ರೀತಿಯ ಹೇಳಿಕೆ ಕೊಡುತ್ತಾರೆ. ಮೊದಲು ಬಣ್ಣ ಹಚ್ಚಿಕೊಂಡು ನಾಟಕ ಮಾಡುತ್ತಿದ್ರು, ಈಗ ಹಾಗೆಯೇ ನಾಟಕ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಡಿಕೆ ಶಿವಕುಮಾರ್ ಯಾವತ್ತೂ ಒಕ್ಕಲಿಗ ಎಂಬ ಕಾರಣಕ್ಕೆ ಜಾತಿ ರಾಜಕೀಯ ಮಾಡಲಿಲ್ಲ. ಎಲ್ಲಾ ಜಾತಿ ಧರ್ಮವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದೇವೆ. ಸಿಪಿ ಯೋಗೇಶ್ವರ್ ಅವರು ಚಡ್ಡಿ ಹಾಕೊಂಡು ಕೆಲಸ ಮಾಡಲಿ ಅಂತ ಬಿಟ್ಟಿದ್ದಾರೆ. ಕರ್ನಾಟಕ, ದೇಶ ವಿಶಾಲವಾಗಿದೆ. ಚುನಾವಣೆ ಮುಂದೆ ಇದೆ, ನೋಡೊಣ ಎಂದಿದ್ದಾರೆ. ಇನ್ನೂ ಕುಮಾರಸ್ವಾಮಿ ಅವರು ಏನು ಮಾತಾಡಿದ್ದಾರೆ ಗೊತ್ತಿಲ್ಲ. ನಾನು ಅವರ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದೇನೆ. ಅವರು ಮಾಜಿ ಮುಖ್ಯಮಂತ್ರಿ ಆಗಿದ್ದವರು ಎಂದಿದ್ದಾರೆ.
ಕೆಲವೇ ಗಂಟೆಗಳಲ್ಲಿ ತಪ್ಪಿನ ಅರಿವಾಯ್ತಾ..?
ವಿಧಾನಪರಿಷತ್ ಸದಸ್ಯನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ ಹೊರ ಬರುತ್ತಿದ್ದಂತೆ ದೃಶ್ಯ ಮಾಧ್ಯಮಗಳ ಎದುರು ವಿಜೃಂಬಿಸಿದ ಯೋಗೇಶ್ವರ್ ಕೆಲವೇ ಗಂಟೆಗಳಲ್ಲಿ ಶಾಂತರಾಗಿದ್ದಾರೆ. ಕಾಲು ಹಿಡಿದಿದ್ದರು ಎಂದು ಡಿಕೆ ಶಿವಕುಮಾರ್ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ನನ್ನ ವಿರುದ್ದ ಗಾಳಿ ಸುದ್ದಿಗಳನ್ನ ಹರಿಬಿಡುತ್ತಿದ್ದಾರೆ. ಬಿಜೆಪಿಯಲ್ಲಿ ನಾನು ತತ್ವಾದರ್ಶಗಳನ್ನ ಇಟ್ಟುಕೊಂಡವನು. ಮೂರು ತಿಂಗಳ ಹಿಂದೆಯೇ ಬಿಎಸ್ ಯಡಿಯೂರಪ್ಪ ಹಾಗೂ ವರಿಷ್ಠರು ಮೇಲ್ಮನೆ ಸದಸ್ಯನನ್ನಾಗಿ ಮಾಡ್ತೀವಿ ಎಂದು ಭರವಸೆ ನೀಡಿದ್ದರು. ಡಿಕೆ ಶಿವಕುಮಾರ್ ಅವರು ವಿಷಬೀಜ ಬಿತ್ತೋ ಕೆಲಸ ಮಾಡ್ತಿದ್ದಾರೆ. ನಾನು ಡಿಕೆ ಶಿವಕುಮಾರ್ ಕಾಲಿಗೆ ಬೀಳೋ ಸಂದರ್ಭ ಯಾವತ್ತೂ ಬರಲ್ಲ. ಕೋತ್ವಾಲ್ ರಾಮಚಂದ್ರ ಸಂಸ್ಕೃತಿಯಿಂದ ಡಿಕೆ ಶಿವಕುಮಾರ್ ಆಚೆ ಬರಬೇಕು. ಅಧ್ಯಕ್ಷರಾಗಿದ್ದಾರೆ ಸ್ವಲ್ಪ ಜಬಾವ್ದಾರಿಯುತವಾಗಿ ಮತನಾಡಲಿ ಎಂದಿದ್ದಾರೆ.
ಯೋಗೇಶ್ವರ್ ಸೋಲಿಸಲು ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಒಟ್ಟಾಗಿದ್ದರು ಎಂಬುದಂತೂ ಸತ್ಯ. ಡಿಕೆ ಶಿವಕುಮಾರ್ ಹಾಗೂ ಹೆಚ್ ಡಿ ಕುಮಾರಸ್ವಾಮಿ ರಾಜಕೀಯದಲ್ಲಿ ಮೇರು ಪರ್ವತವಾಗಿ ಬೆಳೆದಿದ್ದಾರೆ. ಇವರಿಬ್ಬರನ್ನು ರಾಜಕೀಯವಾಗಿ ಎದುರಿಸಬೇಕಾದರೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಆದರೆ ಪರಿಷತ್ ಸ್ಥಾನ ಸಿಗಲಿಲ್ಲ ಎಂದಾಗ ಕಾಂಗ್ರೆಸ್ ಸೇರಲು ಕಸರತ್ತು ನಡೆಸಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಪರಿಸ್ಥಿತಿ ಹೀಗಿರುವಾಗ ಕೆಣಕುವ ಕೆಲಸ ಮಾಡಬಾರದು. ಕೆಣಕಿದ ಮೇಲೆ ಪ್ರತ್ಯಾರೋಪಕ್ಕೆ ಮತ್ತೆ ಸುದ್ದಿಗೋಷ್ಠಿ ನಡೆಸಿ ಸಾಕ್ಷಿ ಬಿಡುಗಡೆ ಮಾಡುವಂತೆ ಸವಾಲು ಹಾಕಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಸೇರುವುದಕ್ಕೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ನಿಜವೇ ಇರಬಹುದು ಎನ್ನುವ ತೀರ್ಮಾನಕ್ಕೆ ಬರುತ್ತಾರೆ ಜನ, ಎಂಬ ಸಾಮಾನ್ಯ ತಿಳಿವಳಿಕೆ ಯೋಗೇಶ್ವರ್ ಅವರಲ್ಲಿ ಇರಬೇಕಿತ್ತು.