ಭಾರತ-ಚೀನಾ ಗಡಿ ಪ್ರದೇಶವಾದ ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದ ಬಳಿಕ ಭಾರತೀಯರ ಆಕ್ರೋಶ ಹೆಚ್ಚಾಗಿದೆ. ಈ ಹಿಂದೆ ಟಿಕ್ಟಾಕ್ ಗಷ್ಟೇ ಸೀಮಿತವಾಗಿದ್ದ ಆಕ್ರೋಶ, ಈಗ ಮನೆಯಲ್ಲಿರುವ ಚೀನಾ ಉತ್ಪನ್ನಗಳ ಮೇಲೂ ವ್ಯಕ್ತವಾಗತೊಡಗಿದೆ. ಪರಿಣಾಮ ತಮ್ಮ ಕೈಯಾರೆ ಚೀನಾ ವಸ್ತುಗಳಿಗೆ ಮುಕ್ತಿ ನೀಡ ತೊಡಗಿದ್ದಾರೆ. ಮಾತ್ರವಲ್ಲದೇ ಚೀನಾ ಜೊತೆ ಭಾರತ ನಡೆಸಿರುವ ಒಪ್ಪಂದಗಳನ್ನು ಕೈ ಬಿಡುವಂತೆಯೂ ಸರಕಾರವನ್ನ ಆಗ್ರಹಿಸುತ್ತಿದ್ದಾರೆ. ʼಆಲ್ ಇಂಡಿಯಾ ಟ್ರೇಡರ್ಸ್ʼ ಅಂಗಸಂಸ್ಥೆ ʼಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ʼ (CAIT) ಚೀನಾ ಸರಕುಗಳ ಬಹಿಷ್ಕಾರಕ್ಕೆ ಸೆಲೆಬ್ರಿಟಿಗಳ ಬೆಂಬಲವನ್ನೂ ಯಾಚಿಸಿದ್ದು ಮಾತ್ರವಲ್ಲದೇ, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಅಮೀರ್ ಖಾನ್, ಕತ್ರಿನಾ ಕೈಫ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಆಯುಷ್ಮಾನ್ ಖುರ್ರಾನ ಇನ್ನೂ ಹಲವರಿಗೆ ಮನವಿಯನ್ನೂ ಮಾಡಿದೆ. “ಭಾರತೀಯ ಸಾಮಾನ್- ಹಮಾರಾ ಅಭಿಮಾನ್” ಅನ್ನೋ ಘೋಷವಾಕ್ಯದಡಿ ನಡೆಯಲಿರುವ ಅಭಿಯಾನಕ್ಕೆ ಬೆಂಬಲಿಸುವಂತೆ ಕೋರಿದೆ. ಆದರೆ ಈ ರೀತಿ ಮನವಿ ಮಾಡಿದ ದಿನಗಳ ನಂತರವೂ ಸೆಲೆಬ್ರಿಟಿಗಳಿಂದ ಯಾವುದೇ ರೀತಿಯ ಸ್ಪಂದನೆ ಬಹುವಾಗಿ ಸಿಕ್ಕಿಲ್ಲ ಅನ್ನೋದು ಮುಖ್ಯವಾಗುತ್ತಿದೆ. ಇದರಲ್ಲಿ ಸಲ್ಮಾನ್ ಖಾನ್, ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳಿಂದ ಬಹಿಷ್ಕಾರಗೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲೂ Boycottsalmankhan ಅನ್ನೋ ಅಭಿಯಾನವೂ ನಡೆಯುತ್ತಿರುವುದು ವಿಪರ್ಯಾಸವೇ ಸರಿ.
This video shows love for sushant from Patna… #CBIEnquiryForSushantSinghRajput #boycottsalmankhan #BoycottKaranJoharGang
pic.twitter.com/JKAAgTpVgA— nishit (@nishit2754) June 20, 2020
ಅದೇನೆ ಇರಲಿ ಭಾರತೀಯ ಸೆಲೆಬ್ರಿಟಿಗಳನ್ನ ಅಭಿಯಾನಕ್ಕೆ ಆಹ್ವಾನಿಸುವ ಮೂಲಕ ವ್ಯಾಪಾರಿಗಳಿಗೆ ಚೀನಾ ಸರಕುಗಳನ್ನ ವ್ಯಾಪಾರ ಮಾಡದಂತೆ ಹಾಗೂ ಖರೀದಿದಾರರಿಗೂ ಚೀನಾ ಉತ್ಪನ್ನಗಳ ಬಹಿಷ್ಕಾರಕ್ಕೆ ಉತ್ತೇಜನ ನೀಡುವುದೇ ನಮ್ಮ ಉದ್ದೇಶ ಅನ್ನೋದಾಗಿ CAIT ತಿಳಿಸಿದೆ. ಅಲ್ಲದೇ “ಗಡಿಯಲ್ಲಿ ಚೀನಾ ನಡೆಸಿದ ದಾಳಿಯು ಅತ್ಯಂತ ಕ್ರೂರತನದ್ದಾಗಿದ್ದು, ಇದು ಪ್ರತಿಯೊಬ್ಬ ಭಾರತೀಯನನ್ನು ಕೆರಳುವಂತೆ ಮಾಡಿದೆ. ಆದ್ದರಿಂದ ಅವರ ವರ್ತನೆ ವಿರುದ್ಧ ಇಂತಹದ್ದೊಂದು ಅಭಿಯಾನದ ಅಗತ್ಯವಿದೆ” ಅಂತಾ CAIT ತಿಳಿಸಿದೆ.
We request Bollywood & Sports fraternity to join hands with CAIT for boycott of Chinese goods in the larger interest of the nation & urging celebrities who are endorsing Chinese products to immediately stop such endorsements: Confederation Of All India Traders (CAIT) pic.twitter.com/tMTrMihrzr
— ANI (@ANI) June 18, 2020
ಈಗಾಗಲೇ ಕೇಂದ್ರ ಸರಕಾರವೇ ತನ್ನ ಅಧೀನದ BSNL ಗೆ ಈ ರೀತಿಯ ಸೂಚನೆ ನೀಡಿದ್ದು, ಆದ್ದರಿಂದ 4G ಸೇವೆಗಳನ್ನ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಯಾವುದೇ ಚೀನಾ ಸರಕುಗಳನ್ನ ಬಳಸದೇ ಇರಲು ನಿರ್ಧರಿಸಿದೆ. ಅಲ್ಲದೇ ಬಿಎಸ್ಎನ್ಎಲ್ ಈ ನಿಟ್ಟಿನಲ್ಲಿ ಟೆಂಡರ್ ಪ್ರಕ್ರಿಯೆಯನ್ನ ಮರು ಪರಿಶೀಲಿಸಲೂ ಮುಂದಾಗಿದೆ. ಅಲ್ಲದೇ ಖಾಸಗಿ ನೆಟ್ ವರ್ಕ್ ಸಂಸ್ಥೆಗಳಿಗೂ ಕೇಂದ್ರ ಸರಕಾರ ಮಾಹಿತಿಯನ್ನ ನೀಡಿದೆ. ಮಾತ್ರವಲ್ಲದೇ ಚೀನಾ ಮೂಲದ Oppo ಇದರ ನೂತನ ಸ್ಮಾರ್ಟ್ ಫೋನ್ ಬಿಡುಗಡೆಯ ಜಾಹೀರಾತನ್ನ ತಡೆ ಹಿಡಯಲಾಗಿದೆ. ಆದರೆ ದೆಹಲಿಯ ಹೃದಯ ಭಾಗದಲ್ಲಿರುವ ಅತ್ಯಂತ ದೊಡ್ಡ ಸಗಟು (Wholesale) ಮಾರುಕಟ್ಟೆ ವ್ಯಾಪಾರಿಗಳು, ಇಲ್ಲಿ ಭಾರೀ ಪ್ರಮಾಣದ ಚೀನಾ ಸರಕುಗಳು ತುಂಬಿಕೊಂಡಿದ್ದು, ಆದ್ದರಿಂದ CAIT ಹಾಗೂ ಕೇಂದ್ರ ಸರಕಾರದ ನಿರ್ಧಾರವನ್ನ ಪ್ರಶ್ನಿಸಿದ್ದಾರೆ. ದಾಸ್ತಾನುವಿರಿಸಿರುವ ಕೋಟ್ಯಾಂತರ ರೂಪಾಯಿ ಸರಕುಗಳನ್ನ ನಿಷೇಧಿಸಿದರೆ ಮರು ಹೊಂದಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಭಾರತದಲ್ಲಿ ʼಮೇಕ್ ಇಂಡಿಯಾʼ ಘೋಷಣೆಯ ಹೊರತಾಗಿಯೂ ತೆರಿಗೆಗಳು ಅಧಿಕವಿದ್ದ ಪರಿಣಾಮ ದೇಶಿ ಉತ್ಪನ್ನ ಮಾರುಕಟ್ಟೆಗಳು ಮಗುಮ್ಮಾಗಿ ಮಲಗಿಕೊಂಡಿದೆ. ಆದ್ದರಿಂದ ಕಳೆದ ಎರಡು ವರುಷಗಳಿಂದ ಭಾರತದಲ್ಲಿ ಅದೆಷ್ಟೋ ಸಣ್ಣ ಕೈಗಾರಿಕೆಗಳು ನಷ್ಟ ಅನುಭವಿಸಿ ಮುಚ್ಚಿ ಕೊಂಡಿದ್ದಾವೆ.
ಇನ್ನು ಕಳೆದ ಬಾರಿ ಪರಿಸರ ಕಾಳಜಿಯಿಂದ ಸುಪ್ರೀಂ ಕೋರ್ಟ್ ಪಟಾಕಿ ಸಿಡಿಸಲು ನಿಷೇಧ ಹೇರಿದ್ದರಿಂದ ಚೀನಾ ಪಟಾಕಿಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗಿಲ್ಲ. ಇದು ಭಾರತೀಯ ಉದ್ಯಮಿಗಳಿಗೂ ಸಾಕಷ್ಟು ನಷ್ಟು ಅನುಭವಿಸುವಂತೆ ಮಾಡಿತ್ತು. ಹಾಗಂತ ಚೀನಾ ಮಾರುಕಟ್ಟೆಯ ಸರಕು ಅನ್ನೋದು ಇನ್ನೊಂದು ರೂಪದಲ್ಲಿ ಮಾರುಕಟ್ಟೆಯನ್ನ ಸೇರಿಕೊಂಡಿತ್ತು. ದೀಪಾವಳಿ ಬಳಸುವ ದೀಪಗಳು, ಫ್ಯಾನ್ಸಿ ಲೈಟ್ಸ್, ಅಲಂಕಾರಿಕ ಉಡುಗೊರೆಗಳು ಹೀಗೆ ಚೀನಾ ಸರಕುಗಳು ಭಾರತದ ಮಾರುಕಟ್ಟೆಯಲ್ಲಿ ಅಜರಾಮರವಾಗಿ ಕಾಣುವಂತಾಗಿತ್ತು.
2017-18 ರಲ್ಲಿ ಚೀನಾ ಸರಕುಗಳ ಬಹಿಷ್ಕಾರ ಅಭಿಯಾನದಿಂದಾಗಿ ಮಾಡಿರುವುದರಿಂದ, ಚೀನಾದಿಂದ ಖರೀದಿಸಬಹುದಾದ ವಾರ್ಷಿಕ 76 ಬಿಲಿಯನ್ ಡಾಲರ್ ಬೆಲೆಯ ಸರಕುಗಳನ್ನ ಭಾರತ ಕೈ ಬಿಟ್ಟಿತ್ತು ಅಂತಾ CAIT ಮುಖ್ಯ ಕಾರ್ಯದರ್ಶಿ ಪ್ರವೀಣ್ ಖಾಂಡೇಲ್ವಾಲ್ ತಿಳಿಸಿದ್ದಾರೆ. ಅಲ್ಲದೇ ಇದು ಮುಂದುವರಿದು 2021 ರ ವರ್ಷಾಂತ್ಯಕ್ಕೆ 1 ಲಕ್ಷ ಕೋಟಿ ಮೌಲ್ಯದ ಸರಕುಗಳ ಆಮದಿನಲ್ಲಿ ಕಡಿತಗೊಳಿಸುವ ಯೋಜನೆಯನ್ನ ಹಾಕಿಕೊಂಡಿದೆ ಎಂದಿದ್ದಾರೆ.

ಆದರೆ ಚೀನಾ ವಸ್ತುಗಳ ಬಹಿಷ್ಕಾರ ಮಾಡುತ್ತಲೇ, ʼಮೇಕ್ ಇನ್ ಇಂಡಿಯಾʼ ಕ್ಕೆ ಪ್ರೇರಣೆ ಸಿಗಬಹುದು, ದೇಶೀಯ ಕಂಪೆನಿಗಳು ತಲೆ ಎತ್ತಬಹುದು ಅನ್ನೋ ಲೆಕ್ಕಾಚಾರವೂ ಸುಲಭದ್ದಲ್ಲ. ಯಾಕೆಂದರೆ ಸದ್ಯ ಇಲ್ಲಿ ಅಂತಹ ಅವಕಾಶಗಳೇ ಕಾಣಸಿಗುತ್ತಿಲ್ಲ. ತಲೆ ಬುಡವಿಲ್ಲದ ತೆರಿಗೆ ಲೆಕ್ಕಚಾರಗಳು ಈಗಾಗಲೇ ಹಲವು ಕಂಪೆನಿಗಳನ್ನ ಬಾಗಿಲು ಮುಚ್ಚುವಂತೆ ಮಾಡಿವೆ. ಅಲ್ಲದೇ ಚೀನಾ ವಸ್ತುಗಳಿಗೆ ಪರ್ಯಾಯ ಸರಕುಗಳು ಭಾರತದಲ್ಲಿ ಇಲ್ಲದೇ ಇರುವುದು ಕೂಡಾ ಅಷ್ಟು ಸುಲಭವಾಗಿ ಚೀನಾವನ್ನ ಬಿಟ್ಟು ಸರಿಯುವಂತಿಲ್ಲ ಅನ್ನೋ ಹಾಗಾಗಿದೆ. ಆದ್ದರಿಂದ ಕೇಂದ್ರ ಸರಕಾರ ಸಣ್ಣ ಕೈಗಾರಿಕೆಗಳಿಗೆ, ಬಿಡಿಭಾಗಗಳನ್ನ ಉತ್ಪಾದಿಸುವ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಹಾಗಿದ್ದಲ್ಲಿ ಮಾತ್ರ ಭಾರತ ತನ್ನ ʼಮೇಕ್ ಇನ್ ಇಂಡಿಯಾʼ ಜೊತೆಗೆ ಚೀನಾ ವಸ್ತುಗಳ ಬಹಿಷ್ಕಾರ ಅನ್ನೋ ಅಭಿಯಾನಕ್ಕೆ ಅರ್ಥ ಬಂದೀತು.