ಕರ್ನಾಟಕದಲ್ಲಿ ಲೋಕಾಯುಕ್ತರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಪ್ರಕ್ರಿಯೆ ಮೂಲಕ ಜನಪ್ರತಿನಿಧಿಗಳಾಗಿ ಆರಿಸಿ ಬಂದವರು ತಮ್ಮ ಆಸ್ತಿವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ಆದೇಶ ಈಗ ಮೂಲೆಗುಂಪಾಗಿದೆ.
ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತರಾಗಿರುವ ಹೆಚ್ ಎಂ ವೆಂಕಟೇಶ್ ಅವರು ಆರ್ಟಿಐ ಅಡಿಯಲ್ಲಿ ಪಡೆದಿರುವ ಮಾಹಿತಿಯ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬಹುತೇಕ ಸದಸ್ಯರು ಇನ್ನೂ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಚುನಾವಣೆಯ ಮುಖಾಂತರ ಜನಪ್ರತಿನಿಧಿಗಳಾಗಿ ಆರಿಸಿ ಬಂದವರು, ಜೂನ್ 30ರ ಒಳಗಾಗಿ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಬೇಕೆಂಬ ನಿಯಮ 2009ರಲ್ಲೇ ರೂಪಿತವಾಗಿತ್ತು. ಒಂದು ದಶಕದಷ್ಟು ಸಮಯ ಕಳೆದರೂ, ಈ ನಿಯಮವನ್ನು ಜಾರಿಗೆ ತರಲು ಮೀನಾಮೇಷ ಎನಿಸುತ್ತಿತ್ತು. ಈ ಹೊತ್ತಿನಲ್ಲಿ, ಹೆಚ್ ಎಂ ವೆಂಕಟೇಶ್ ಅವರು ಲೋಕಾಯುಕ್ತರಿಗೆ ಪತ್ರವನ್ನು ಬರೆದು ಬಿಬಿಎಂಪಿ ಅಡಿಯಲ್ಲಿ ಬರುವ ಕಾರ್ಪೊರೇಟರ್ಗಳು ತಮ್ಮ ಆಸ್ತಿ ವಿವರ ಸಲ್ಲಿಸದ ಕಾರಣಕ್ಕೆ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
2019 ಆಗಸ್ಟ್ 28ರಂದು ಆದೇಶ ಹೊರಡಿಸಿದ್ದ ಲೋಕಾಯುಕ್ತರು, ಎಲ್ಲಾ 198 ವಾರ್ಡ್ಗಳ ಸದಸ್ಯರೂ ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ಈ ವಿಚಾರವನ್ನು ಬಿಬಿಎಂಪಿ ಕಮಿಷನರ್ ಎಲ್ಲಾ ಸದಸ್ಯರುಗಳ ಗಮನಕ್ಕೆ ತರಬೇಕೆಂದು ಹೇಳಿದ್ದರು.
ಈ ಆದೇಶ ನೀಡಿ ಒಂದು ವರ್ಷವಾದರೂ, ಈ ವರ್ಷವೂ ಎಲ್ಲಾ ಕಾರ್ಪೊರೇಟರ್ಗಳು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಲಿಲ್ಲ. 124 ಕಾರ್ಪೊರೇಟರ್ಗಳು ಇನ್ನೂ ತಮ್ಮ ವಿವರಗಳನ್ನು ಸಲ್ಲಿಸದೇ ಇರುವುದು ಆರ್ಟಿಐನಲ್ಲಿ ಬಹಿರಂಗಗೊಂಡಿದೆ.

ಹೋದ ವರ್ಷ ಒಂದು 20 ಜನರು ಮಾತ್ರ ಕಟ್ಟಿರಲಿಲ್ಲ. ಈ ವರ್ಷ 124 ಜನ ಕಾರ್ಪೊರೇಟರ್ಗಳು ಇನ್ನೂ ಆಸ್ತಿ ವಿವರ ಸಲ್ಲಿಸದೇ ಇದ್ದ ಕಾರಣಕ್ಕೆ ಅವರ ವಿರುದ್ದ ಕ್ರಮ ಕೈಗೊಳ್ಳಲು ಲೋಕಾಯುಕ್ತರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಈ ಹಿಂದೆ ಸಂತೋಷ್ ಹೆಗ್ಡೆಯವರು ಲೋಕಾಯುಕ್ತರಾಗಿದ್ದಾಗ, ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿದ್ದರು. IPC ಸೆಕ್ಷನ್ 176 ಪ್ರಕಾರ ಪ್ರಕರಣ ದಾಖಲಾಗಿತ್ತು. ಈ ಲೋಕಾಯುಕ್ತರು ನೋಟಿಸ್ ಕೂಡಾ ಕೊಡ್ತಾ ಇಲ್ಲ, ಎಂದು ಹೆಚ್ ಎಂ ವೆಂಕಟೇಶ್ ಅವರು ಹೇಳಿದ್ದಾರೆ.
“ಮುಖ್ಯಮಂತ್ರಿಯವರಲ್ಲ ಈ ಕುರಿತಾಗಿ ನೇರವಾಗಿ ಪ್ರಶ್ನೆ ಕೇಳಿದ್ದೆ, ಅದಕ್ಕೆ ಲೋಕಾಯುಕ್ತದವರು ಈಗಿರುವ ಕಾನೂನನ್ನು ಸದ್ಬಳಕೆ ಮಾಡಿಕೊಳ್ಳಲಿ, ಆಮೇಲೆ ನೋಡೋಣಾ ಎಂದಿದ್ದರು. ಈಗ ಲೋಕಾಯುಕ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.






