ಚಿಕ್ಕಮಗಳೂರು:
ಜಿಲ್ಲೆಯ ಬಣಕಲ್ ಪ್ರದೇಶದಲ್ಲಿ ಮಾನವೀಯತೆ ಕಲುಕುವ ಘಟನೆ ಬೆಳಕಿಗೆ ಬಂದಿದೆ. ವೃದ್ಧನೊಬ್ಬರು ಮೃತಪಟ್ಟ ಬಳಿಕ, ಅವರ ಮಾನಸಿಕ ಅಸ್ವಸ್ಥ ಪತ್ನಿ ಸುಮಾರು 10 ದಿನಗಳ ಕಾಲ ಪತಿಯ ಶವದ ಜೊತೆಗೆ ಕಳೆದಿರುವುದು ಆತಂಕ ಮೂಡಿಸಿದೆ.ಬಣಕಲ್ ಸುಭಾಷ್ ನಗರ ನಿವಾಸಿ 77 ವರ್ಷದ ಸಿರಿಲ್ ಮೋನಿಸ್ ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಆದರೆ ಅವರ ಪತ್ನಿ ಸಿಸಿಲ್ ಮಾನಸಿಕ ಅಸ್ವಸ್ಥರಾಗಿದ್ದರಿಂದ, ಪತಿ ಸಾವನ್ನಪ್ಪಿರುವುದನ್ನು ಅರಿಯದೇ, ಅವರು ಬದುಕಿದ್ದಾರೆ ಎಂಬ ಭಾವನೆಯಲ್ಲೇ ದಿನ ಕಳೆದಿದ್ದಾರೆ.

ಮೃತರ ಪುತ್ರ ಮೆಲ್ವಿನ್ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗನು ತಾಯಿಗೆ ನಿಯಮಿತವಾಗಿ ಕರೆ ಮಾಡಿ ತಂದೆಯ ಆರೋಗ್ಯ ವಿಚಾರಿಸುತ್ತಿದ್ದರೂ, ‘ಅವರು ಚೆನ್ನಾಗಿದ್ದಾರೆ, ಮಲಗಿದ್ದಾರೆ’ ಎಂಬ ಉತ್ತರವೇ ಬರುತ್ತಿದ್ದರಿಂದ ಯಾವುದೇ ಅನುಮಾನ ವ್ಯಕ್ತಪಡಿಸಿರಲಿಲ್ಲ.ಆದರೆ ಮನೆ ಸುತ್ತಮುತ್ತ ದುರ್ವಾಸನೆ ಹರಡುತ್ತಿದ್ದ ಹಿನ್ನೆಲೆ ನೆರೆಹೊರೆಯವರಿಗೆ ಅನುಮಾನ ಬಂದು ಪರಿಶೀಲಿಸಿದಾಗ ಘಟನೆ ಬಹಿರಂಗವಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮೃತದೇಹ ಸಂಪೂರ್ಣವಾಗಿ ಕೊಳೆತು ಹೋದ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಈ ವೇಳೆ ಪತ್ನಿ ‘ನನ್ನ ಗಂಡನನ್ನು ಯಾರೂ ಕೊಂಡೊಯ್ಯಬೇಡಿ’ ಎಂದು ಹಠ ಹಿಡಿದಿದ್ದ ದೃಶ್ಯ ಸ್ಥಳೀಯರನ್ನು ಮರ್ಮಭೇದಗೊಳಿಸಿತು. ಬಳಿಕ ಸಮಾಜ ಸೇವಕ ಆರಿಫ್ ಸಹಕಾರದಿಂದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.ಪರಿವಾರದವರು ತಲುಪುವಷ್ಟರಲ್ಲಿ ಮೃತದೇಹದ ಸ್ಥಿತಿ ಹದಗೆಟ್ಟಿದ್ದರಿಂದ ಕೊನೆಯ ಬಾರಿ ಮುಖ ನೋಡುವ ಅವಕಾಶವೂ ಸಿಗಲಿಲ್ಲ. ಅಂತಿಮವಾಗಿ ಬಣಕಲ್ ಕ್ರೈಸ್ತ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಸ್ಥಳೀಯರು ಘಟನೆಯನ್ನು ಕಂಡು ದುಃಖ ವ್ಯಕ್ತಪಡಿಸಿದ್ದಾರೆ.





