ಮೈಸೂರು: ಚಾಮರಾಜನಗರದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ (60) ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.
ಇಂದು ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅವರು ಬದುಕುಳಿದಿಲ್ಲ. ಧ್ರುವನಾಯಣ ಅವರು ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
1983 ರಲ್ಲಿ ಕಾಂಗ್ರೆಸ್ ಸೇರುವ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದ ಅವರು, ಸಂತೇಮರಹಳ್ಳಿ ಕ್ಷೇತ್ರದಿಂದ ಒಂದು ಶಾಸಕರಾಗಿ ಆಯ್ಕೆಯಾಗಿ, ಎರಡನೇ ಬಾರಿ ಕೊಳ್ಳೇಗಾಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಚಾಮರಾಜನಗರ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿ. ಶ್ರೀನಿವಾಸ ಪ್ರಸಾದ್ ಅವರ ಎದುರು ಸೋಲು ಕಂಡಿದ್ದ ಅವರು, ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.
ಸಿದ್ದರಾಮಯ್ಯ ನಂತರ ಮೈಸೂರಿನ ಪ್ರಭಾವಿ ನಾಯಕರು ಎಂದರೆ ಅದು ಆರ್.ಧ್ರುವ ನಾರಾಯಣರಾಗಿದ್ದರು. ಶ್ರಿನಿವಾಸ್ ಪ್ರಸಾದ್ ಅವರ ಬಳಿಕ ಮೈಸೂರಿನ ಭಾಗದಲ್ಲಿ ದಲಿತ ಸಮುದಾಯವನ್ನು ಪ್ರತಿನಿಧಿಸಿದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದರು.
ಕೇಂದ್ರದ ಅನುದಾನವನ್ನು ಉತ್ತಮವಾಗಿ ಬಳಸಿ ಅಭಿವೃದ್ದಿಗೆ ನೆರವಾದ ಅವರು ಜನರಿಂದ
ಅತ್ಯುತ್ತಮ ಸಂಸದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇತ್ತೀಚಿಗೆ ಆರೋಗ್ಯ ಸಮಸ್ಯೆ ಇದ್ದರೂ ರಾಜಕೀಯ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು.
ಆಸ್ಪತ್ರೆಗೆ ಕೈ ನಾಯಕರ ದಂಡು..
ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶಾಸಕರಾದ ಮಂಜುನಾಥ್ , ಯತೀಂದ್ರ ಸಿದ್ದರಾಮಯ್ಯ , ಅನಿಲ್ ಚಿಕ್ಕಮಾದು , ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಅನೇಕ ಜನರು ಕಣ್ಣೀರಿಟ್ಟರು. ಆಸ್ಪತ್ರೆಯಲ್ಲಿ ಗೋಳಾಡಿದ್ರು.
ಸಂಜೆ ಅಂತ್ಯಕ್ರಿಯೆ..?
ಧ್ರುವನಾರಾಯಣ ಅವರ ಅಂತ್ಯಕ್ರಿಯೆ ಸಂಜೆ ಮೈಸೂರಲ್ಲಿ ನಡೆಯಲಿದೆ ಅಂತ ಹೇಳಲಾಗುತ್ತಿದೆ. ಧ್ರುವನಾರಾಯಣ್ ಕುಟುಂಬಸ್ಥರು ಶಾಕ್ ಗೆ ಒಳಗಾಗಿದ್ದು ಶೋಕ ಸಾಗರದಲ್ಲಿ ಮುಳುಗಿದ್ರು. ಅಂತಿಮ ದರ್ಶನಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದ್ದು , ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸು ತ್ತಿದ್ದಾರೆ.
ರಾಜಕೀಯ ಹಿನ್ನೆಲೆ
1961 ಜುಲೈ 31ರಂದು ಚಾಮರಾಜನಗರದ ಹಗ್ಗವಾಡಿಯಲ್ಲಿ ಜನಿಸಿದ್ದ ಇವರು ಬೆಂಗಳೂರಿನ ಜಿಕೆವಿಕೆಯಲ್ಲಿ ಪದವಿ ಪಡೆದಿದ್ದರು. ಕಳೆದ 2 ವರ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.1983 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಧ್ರುವನಾರಾಯಣ್ 1984 ರಲ್ಲಿ ಜಿಕೆವಿಕೆಯ ಎನ್ ಎಸ್ ಯುಐ ಅಧ್ಯಕ್ಷನಾಗಿ ಆಯ್ಕೆಯಾದರು. ನಂತರ 1986 ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು, ಆದರೆ 1999ರಲ್ಲಿ ಮೊದಲ ಬಾರಿಗೆ ಸಂತೆಮಾರಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಮೊದಲ ಬಾರಿ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ಆದರೆ 2004 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ 1 ಮತದ ಅಂತರದ ಗೆಲುವು ಸಾಧಿಸಿ ಇತಿಹಾಸವನ್ನು ಸೃಷ್ಟಿಸಿದ್ದರು.ನಂತರ 2008ರಲ್ಲಿ ಕೊಳ್ಳೆಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಾದ ಬಳಿಕ 2009 ಹಾಗೂ 2014 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನನುಭವಿಸಿದ್ದರು