ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾಗಿದೆಯೆಂದು ಆರೋಪಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜಿಲ್ಲಾ ಕಾಂಗ್ರೆಸ್ ಘಟಕಕ್ಕೆ 10 ಸಾವಿರ ರೂ. ದಂಡ ವಿಧಿಸಿದೆ.

ಮೇ 31ರಂದು ಸಂಜೆ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್ ಕೇಶ್ವಾಪುರದ ಸರ್ವೋದಯ ವೃತ್ತದ ಬಳಿಯ ಮದರ್ ತೆರೆಸಾ ಪ್ರತಿಮೆ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆ್ಯಂಬುಲೆನ್ಸ್, ಕೋವಿಡ್ ಸೇವಾ ವಾಹನ, ಆಕ್ಸಿಜನ್ ಇತ್ಯಾದಿ ಸೌಲಭ್ಯಗಳಿಗೆ ಚಾಲನೆ ನೀಡಿದ್ದರು.

ಈ ವೇಳೆ ಸ್ಥಳದಲ್ಲಿ ಜನಜಂಗುಳಿ ತುಂಬಿದ್ದು, ಸಾಮಾಜಿಕ ಅಂತರ ಕಾಪಾಡಲು ಆಯೋಜಕರು ವಿಫಲರಾಗಿದ್ದರು. ಸಾಮಾಜಿಕ ಅಂತರ ಕಾಪಾಡದಿರುವುದು ಮಾತ್ರವಲ್ಲದೆ, ಅನುಮತಿಯಿಲ್ಲದೆ ಬ್ಯಾನರ್, ಬಂಟಿಂಗ್ಸ್ ಹಾಕಿದ ಆರೋಪವೂ ಆಯೋಜಕರ ಮೇಲಿದೆ.

ಸದ್ಯ, ಮಹಾನಗರ ಪಾಲಿಕೆಯಿಂದ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದ್ದು, ಕೋವಿಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡ ವಿಧಿಸಿರುವುದಾಗಿ ಪಾಲಿಕೆ ಪರಿಸರ ಎಂಜಿನಿಯರ್ ನಯನ ತಿಳಿಸಿದ್ದಾರೆ.