
ಬೆಂಗಳೂರು: ದ್ವಿಚಕ್ರ ವಾಹನವನ್ನು ತಾನೇ ಉದ್ದೇಶಪೂರ್ವಕವಾಗಿ ಕಾರಿಗೆ ತಾಗಿಸಿ ವಾಹನ ಚಾಲಕರಿಂದ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೈಸೂರಿನ ರಾಜೇಂದ್ರನಗರದ ಹಳೆ ಕೆಸರೆಯ ನಿವಾಸಿ ಜಮೀಲ್ ಖಾನ್(29) ಬಂಧಿತ ಆರೋಪಿ.
ಆರೋಪಿಯಿಂದ ₹ 40 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಜೂನ್ 14ರಂದು ಜಯನಗರ 4ನೇ ಬ್ಲಾಕ್ನ ಕೂಲ್ ಜಾಯಿಂಟ್ ವೃತ್ತದಲ್ಲಿ ವ್ಯಕ್ತಿಯೊಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಆಗ ಆರೋಪಿ ಕಾರಿಗೆ ಕೈನಿಂದ ಗುದ್ದಿ, ಕಾರು ನಿಲ್ಲಿಸುವಂತೆ ಬೆದರಿಕೆ ಹಾಕಿದ್ದ.ಬೈಕ್ಗೆ ಕಾರು ತಾಗಿದ್ದು,ಹಣ ನೀಡುವಂತೆ ಹೆದರಿಸಿದ್ದ.ಚಾಲಕರಿಂದ ₹30 ಸಾವಿರವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಅಲ್ಲದೇ ಜೇಬಿನಲ್ಲಿದ್ದ ₹300 ಅನ್ನು ಕಸಿದುಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.
ಆರೋಪಿ ವಿರುದ್ಧ ಕೆ.ಆರ್.ಸಾಗರ, ಅಶೋಕಪುರ, ಮದ್ದೂರು, ಬಿಳಿಕೆರೆ ಪೊಲೀಸ್ ಠಾಣೆ ಸೇರಿದಂತೆ 17 ಪ್ರಕರಣಗಳು ದಾಖಲಾಗಿವೆ’ ಎಂದು ಮಾಹಿತಿ ನೀಡಿದರು.