ಬೆಂಗಳೂರು : ರಾಜ್ಯದಲ್ಲಿನ ವಿಧಾನ ಪರಿಷತ್ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ಜೋರಾಗಿದೆ. ಕ್ಷೇತ್ರದ ಚುನಾವಣೆಗೆ ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಪದವೀಧರರು, ನಿರುದ್ಯೋಗಿ ವಿದ್ಯಾವಂತ, ಉದ್ಯೋಗಸ್ಥ ಯುವಕ, ಪದವೀಧರ ಶಿಕ್ಷಕರನ್ನು ಒಳಗೊಂಡಂತೆ ಪ್ರತಿನಿಧಿಸುವ ಈ ಕ್ಷೇತ್ರದ ಬಗ್ಗೆ ಎಲ್ಲರಲ್ಲೂ ಸಾಕಷ್ಟು ಮೂಡಿದೆ. ಹಾಗಾದರೆ ಈ ಕ್ಷೇತ್ರದ ಬಗ್ಗೆ ನಾವು ಸಂಪೂರ್ಣವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ..
ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಆಗ್ನೇಯ ಕ್ಷೇತ್ರವೂ ಒಂದಾಗಿದ್ದು, ಪ್ರಮುಖವಾಗಿ ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಈ 5 ಜಿಲ್ಲೆಗಳನ್ನು ಈ ಕ್ಷೇತ್ರ ಒಳಗೊಂಡಿದೆ. ಹೀಗಾಗಿ ಈ ಎಲ್ಲ ಕ್ಷೇತ್ರಗಳಲ್ಲೂ ಚುನಾವಣೆಗೆ ಸಂಬಂಧಿಸಿದಂತೆ ಚಟುವಟಿಕೆಗಳು ವೇಗ ಪಡೆಯುತ್ತಿವೆ. ಇನ್ನೂ ಈ ಕ್ಷೇತ್ರದಲ್ಲಿನ ಮತದಾರರ ಸಂಖ್ಯೆಯನ್ನು ಗಮನಿಸುವುದಾದರೆ, ಒಟ್ಟು ಕ್ಷೇತ್ರದಲ್ಲಿ 1 ಲಕ್ಷ 76 ಸಾವಿರದ 16 ಮತದಾರರಿದ್ದು,ಇನ್ನೂ ಜಿಲ್ಲಾವಾರು ಮತದಾರರ ಪ್ರಮಾಣದಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 29,739 ಮತದಾರರಿದ್ದು, ಅಲ್ಲದೆ ಈ ಜಿಲ್ಲೆಯಲ್ಲಿ ಹರಿಹರ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ, ಜಗಳೂರು ಹಾಗೂ ಮಾಯಕೊಂಡ ಹೀಗೆ 5 ವಿಧಾನಸಭಾ ಕ್ಷೇತ್ರಗಳಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು ಮತದಾರರ ಸಂಖ್ಯೆಯು 41,363 ಇದ್ದು, ಅಲ್ಲದೆ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ ಹಾಗೂ ಹೊಳಲ್ಕೆರೆ ಈ ಎಲ್ಲ ಕ್ಷೇತ್ರಗಳು ಆಗ್ನೇಯ ಪದವೀಧರರ ಕ್ಷೇತ್ರದಲ್ಲಿವೆ.

ತುಮಕೂರು ಕೂಡ ಇದೇ ಕ್ಷೇತ್ರದ ವ್ಯಾಪ್ರಿಗೆ ಬರುವ ಜಿಲ್ಲೆಯಾಗಿದ್ದು ಇಲ್ಲಿ 48,030 ಒಟ್ಟು ಮತದಾರರಿದ್ದು, ಹೀಗಾಗಿ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು ಹಾಗೂ ಕುಣಿಗಲ್ ಹೀಗೆ 11 ವಿಧಾನಸಭಾ ಕ್ಷೇತ್ರಗಳು ಇದರಲ್ಲಿವೆ.
ಈ ಜಿಲ್ಲೆಗಳಷ್ಟೇ ಅಲ್ಲದೆ ಚಿಕ್ಕಬಳ್ಳಾಪುರ ಕೂಡ ಇದೇ ಪಟ್ಟಿಗೆ ಸೇರಿದ್ದು, ಜಿಲ್ಲೆಯಲ್ಲಿ ಒಟ್ಟು 25,584 ಮತದಾರರಿದ್ದಾರೆ. ಇನ್ನೂ ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಶಿಡ್ಲಘಟ್ಟ ಹಾಗೂ ಚಿಂತಾಮಣಿ ಒಟ್ಟಾರೆ 5 ವಿಧಾನಸಭೆಯ ಕ್ಷೇತ್ರಗಳು ಈ ಆಗ್ನೇಯ ಪದವೀಧರ ವ್ಯಾಪ್ತಿಯನ್ನು ಹೊಂದಿವೆ.
ಕೋಲಾರ ಜಿಲ್ಲೆಯು ಸಹ ಇದೇ ಆಗ್ನೇಯ ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಇಲ್ಲಿಯೂ ಒಟ್ಟಾರೆ 31,300 ರಷ್ಟು ಮತದಾರರ ಸಂಖ್ಯೆಯಿದೆ. ಅಲ್ಲದೆ ಈ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳೆಂದರೆ ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಮಾಲೂರು, ಬಂಗಾರಪೇಟೆ ಹಾಗೂ ಕೆ.ಜಿ.ಎಫ್ ಕ್ಷೇತ್ರಗಳನ್ನು ಒಳಗೊಂಡಿದೆ.

ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಈ ಬಾರಿ ಮೊದಲಿನಂತಿಲ್ಲ. ಮತದಾರರ ಸ್ವರೂಪದಲ್ಲಿ ಬದಲಾವಣೆಗಳಾಗುತ್ತಿವೆ, ನಿರುದ್ಯೋಗಿ ಮತ್ತು ವಿವಿಧ ವೃತ್ತಿಪರ ಪದವೀಧರರ ಭಾಗವಹಿಸುವಿಕೆ ಅಧಿಕವಾಗಿ. ಇದರಿಂದ ಲೆಕ್ಕಾಚಾರಗಳು ಸುಲಭವಾಗಿಲ್ಲ. ಜಾತಿ–ಪ್ರಾದೇಶಿಕ ಸಮೀಕರಣಗಳು ಹೇಗೆ ಹೊಂದಿಕೊಳ್ಳುತ್ತವೆ ಹಾಗೂ ಕಾಂಗ್ರೆಸ್ ತನ್ನ ಮುನ್ನಡೆಯನ್ನು ಮತಗಳಾಗಿ ಪರಿವರ್ತಿಸಿಕೊಳ್ಳುತ್ತದೆಯೇ ಎಂಬುದರ ಮೇಲೆ ಈ ಕ್ಷೇತ್ರದ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಸದ್ಯ ತೀವ್ರ ಹೋರಾಟ ನಡೆಸಿ ಬಿಜೆಪಿ ತೆಕ್ಕೆಗೆ ಈ ಕ್ಷೇತ್ರ ಉಳಿದಿದ್ದು, ಆದರೆ ಈ ಬಾರಿ ಮುಂದಾಲೋಚನೆಯಿಂದ ಕಾಂಗ್ರೆಸ್ ಕೂಡ ಚುನಾವಣೆಗೂ ಒಂದು ವರ್ಷ ಮುಂಚಿತವಾಗಿಯೇ ಅಭ್ಯರ್ಥಿಯನ್ನು ಘೋಷಿಸಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಯುವ ನಾಯಕ ಶಶಿ ಹುಲಿಕುಂಟೆಮಠ ಹಾಗೂ ಬಿಜೆಪಿಯಿಂದ ಇತ್ತೀಚಿಗಷ್ಟೇ ಕೆ.ಎಂ. ಸುರೇಶ್ ಹೆಸರುಗಳು ಅಧಿಕೃತವಾಗಿ ಘೋಷಣೆಯಾಗಿವೆ. ಈ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.






