2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕೀಯ ಚಟುವಟಿಕೆಗಳು ಜೋರಾಗುತ್ತಿವೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಸತತ ಆಡಳಿತವನ್ನು ಉಳಿಸಿಕೊಳ್ಳಲು ಸಜ್ಜಾಗಿದ್ದರೆ, ಬಿಜೆಪಿ ಹಾಗೂ ಎಡಪಕ್ಷ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕಾಗಿ ತೀವ್ರ ಪೈಪೋಟಿ ನಡೆಸುತ್ತಿವೆ.ಮೂಲಗಳ ಪ್ರಕಾರ, ಏಪ್ರಿಲ್ 23 ಮತ್ತು 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬರುತ್ತಾರಾ ಅಥವಾ ಬಂಗಾಳದಲ್ಲಿ ಬದಲಾವಣೆಯಾಗುತ್ತದೆಯಾ ಎಂಬುದು ಕುತೂಹಲ ಮೂಡಿಸಿದೆ. ರಾಜಕೀಯ ಸಮೀಕ್ಷೆಗಳ ಜೊತೆಗೆ ಜ್ಯೋತಿಷ್ಯದ ವಿಶ್ಲೇಷಣೆಯೂ ಚರ್ಚೆಗೆ ಕಾರಣವಾಗಿದೆ.

ಕೆಲವು ಸಮೀಕ್ಷೆಗಳ ಪ್ರಕಾರ ಟಿಎಂಸಿ ಮತ್ತೆ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ‘ಐಎಎನ್ಎಸ್-ಮ್ಯಾಟ್ರಿಜ್’ ಸಮೀಕ್ಷೆ 155-170 ಸ್ಥಾನಗಳನ್ನು ಸೂಚಿಸಿದರೆ, ‘ವೋಟ್ವೈಬ್ ಸಿಎನ್ಎನ್-ನ್ಯೂಸ್ 18’ ಸಮೀಕ್ಷೆ 184-194 ಸ್ಥಾನಗಳನ್ನು ಟಿಎಂಸಿಗೆ ಭವಿಷ್ಯ ನುಡಿದಿದೆ. ಆದರೆ, ಜ್ಯೋತಿಷಿಗಳ ಅಭಿಪ್ರಾಯಗಳು ವಿಭಿನ್ನವಾಗಿವೆ.

ಜ್ಯೋತಿಷ್ಯದ ಪ್ರಕಾರ, ಮಮತಾ ಬ್ಯಾನರ್ಜಿ ಅವರ ಜಾತಕದಲ್ಲಿ ಶನಿ ಮತ್ತು ಗುರುಗಳ ಪ್ರಭಾವ ಮಹತ್ವದ್ದಾಗಿದ್ದು, ಸೂರ್ಯ ಮತ್ತು ಬುಧನ ಬಲದಿಂದ ಅವರು ಪ್ರಬಲ ನಾಯಕಿಯಾಗಿದ್ದಾರೆ. ಆದರೆ, ಚುನಾವಣೆಯ ಸಮಯದಲ್ಲಿ ‘ಅಂಗಾರಕ ಯೋಗ’ ಉಂಟಾಗುವುದರಿಂದ ರಾಜಕೀಯದಲ್ಲಿ ಸವಾಲುಗಳು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ತೃಣಮೂಲ ಕಾಂಗ್ರೆಸ್ನ ಜಾತಕದ ಪ್ರಕಾರ, ಗುರು ಮಹಾದಶೆ ಮತ್ತು ರಾಹು ಅಂತರ್ದಶೆ ನಡೆಯುತ್ತಿದ್ದು, ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದ್ದರೂ ಅದು ಸುಲಭವಲ್ಲ ಎನ್ನಲಾಗಿದೆ. ಶನಿಯ ಪ್ರಭಾವದಿಂದ ಆಡಳಿತ ಪಕ್ಷವು ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು.ಇನ್ನೊಂದೆಡೆ, ಕೆಲವು ಜ್ಯೋತಿಷಿಗಳು ವಿರೋಧಾಭಿಪ್ರಾಯ ವ್ಯಕ್ತಪಡಿಸಿ, ಈ ಬಾರಿ ಮಮತಾ ಬ್ಯಾನರ್ಜಿ ಸೋಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಿದ್ದಾರೆ. ಬಿಜೆಪಿ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂಬ ಅಂದಾಜು ಕೂಡ ವ್ಯಕ್ತವಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ನೇಮಕಾತಿ ಹಗರಣ, ಸಿಎಎ-ಎನ್ಆರ್ಸಿ ವಿಷಯ, ಮಹಿಳಾ ಸುರಕ್ಷತೆ ಮೊದಲಾದ ಅಂಶಗಳು ಚುನಾವಣೆಯ ಫಲಿತಾಂಶವನ್ನು ಪ್ರಭಾವಿಸಬಹುದು. ಅಂತಿಮವಾಗಿ, ಬಂಗಾಳದ ಜನರ ತೀರ್ಪೇ ಈ ಚುನಾವಣೆಯ ದಿಕ್ಕು ನಿರ್ಧರಿಸಲಿದೆ.






