ಧಾರವಾಡ: ಧಾರವಾಡದಲ್ಲಿ ಇಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ ಹಾಗೂ ಉದ್ಯೋಗಾಕಾಂಕ್ಷಿಗಳು ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ಬೀದಿಗಿಳಿದು ಉಗ್ರ ಹೋರಾಟ ನಡೆಸಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಶ್ರೀನಗರ ವೃತ್ತದಿಂದ ಜುಬ್ಲಿ ಸರ್ಕಲ್ವರೆಗೆ ಪ್ರತಿಭಟನಾ ರ್ಯಾಲಿ ನಡೆದಿದ್ದು, ಸರ್ಕಾರದ ವಿರುದ್ಧ ಬೀದಿಗಿಳಿದ ಪ್ರತಿಭಟನಾಕಾರರು, ಬ್ಯಾರಿಕೇಡ್ಗಳನ್ನು ತಳ್ಳಿ ಮುನ್ನುಗ್ಗಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವ್ರ ತಳ್ಳಾಟ ನೂಕಾಟ ನಡೆದಿದೆ. ಇದೇ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟ ಕೂಡ ನಡೆದಿದ್ದು ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ರಫೀಕ್ ಹಾಗೂ ತಹಸೀಲ್ದಾರ್ ಗಾಯಗೊಂಡಿದ್ದಾರೆ.

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಪ್ರತಿಕ್ರಿಯಿಸಿದ್ದು, ಮಾತಿನಲ್ಲಿ ಮಾತ್ರವಲ್ಲ, ಕಾರ್ಯದಲ್ಲಿಯೂ ನಿಮ್ಮ ಜೊತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ. ನಿಮ್ಮ ಕನಸುಗಳನ್ನು ಕಾಪಾಡಿ, ಅವಕಾಶಗಳನ್ನು ವಿಸ್ತರಿಸಿ, ಸಾರ್ವಜನಿಕ ಸೇವೆಯನ್ನು ಪ್ರತಿಯೊಬ್ಬ ಅರ್ಹ ಯುವ ಮನಸ್ಸಿಗೆ ಸಾಧಿಸಬಹುದಾದ ದಾರಿಯನ್ನಾಗಿ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಧಾರವಾಡದಲ್ಲಿ ಸರ್ಕಾರದ ಉದ್ಯೋಗಾಕಾಂಕ್ಷಿಗಳಿಂದ ನಡೆಯುತ್ತಿರುವ ಪ್ರತಿಭಟನೆಗಳನ್ನು ನಾನು ಗಂಭೀರವಾಗಿ ಗಮನಿಸಿದ್ದೇನೆ. ಸರ್ಕಾರದ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವ ಅನೇಕ ಯುವಕರಲ್ಲಿ ಉಂಟಾಗಿರುವ ಆತಂಕ, ನಿರಾಶೆ ಮತ್ತು ಅನಿಶ್ಚಿತತೆಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆ. ಪ್ರತಿಯೊಂದು ಅರ್ಜಿಯ ಹಿಂದೆಯೂ ಒಂದು ಕನಸು, ಒಂದು ಕುಟುಂಬದ ನಿರೀಕ್ಷೆ, ವರ್ಷಗಳ ಪರಿಶ್ರಮ ಮತ್ತು ಕರ್ನಾಟಕಕ್ಕೆ ಸೇವೆ ಸಲ್ಲಿಸುವ ಆಸೆ ಅಡಗಿದೆ. ಮುಖ್ಯಮಂತ್ರಿಯಾಗಿ, ನಿಮ್ಮ ಚಿಂತೆಗಳು ನಮ್ಮ ಗಮನದಲ್ಲಿವೆ ಮತ್ತು ನಿಮ್ಮ ಭವಿಷ್ಯ ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ.

ನಾವು ಅಧಿಕಾರಕ್ಕೆ ಬಂದಾಗ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಈ ದೊಡ್ಡ ಪ್ರಮಾಣದ ಖಾಲಿತನ ಒಂದು ದಿನದಲ್ಲಿ ಉಂಟಾಗಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ದೀರ್ಘಕಾಲದ ನಿರ್ಲಕ್ಷ್ಯ ಮತ್ತು ಸಮಯೋಚಿತ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸದಿರುವುದೇ ಇದಕ್ಕೆ ಕಾರಣವಾಗಿದೆ. ಈಗಲೂ ಬಿಜೆಪಿ ವಿರೋಧ ಪಕ್ಷದ ನಾಯಕರು ತಮ್ಮ ಸೀಮಿತ ರಾಜಕೀಯ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿರುವುದು ದುಃಖಕರವಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯ ಮತ್ತು ಸಿದ್ಧತೆಯ ಮೇಲೆ ಗಮನ ಕೇಂದ್ರೀಕರಿಸಬೇಕಾದ ಸಮಯದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆ. 2019 ರಿಂದ 2023ರ ಅವಧಿಯಲ್ಲಿ ನಡೆದ ನೇಮಕಾತಿ ಅಕ್ರಮಗಳು ಮತ್ತು ಭ್ರಷ್ಟಾಚಾರ ಪ್ರಕರಣಗಳು ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸಿ, ಹುದ್ದೆಗಳ ಬೃಹತ್ ಬ್ಯಾಕ್ಲಾಗ್ಗೆ ಕಾರಣವಾದವು. ನಮ್ಮ ಸರ್ಕಾರ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ಸ್ಥಿರತೆಯನ್ನು ಪುನಃ ಸ್ಥಾಪಿಸಲು ಬದ್ಧವಾಗಿದೆ.

ಇದರ ಜೊತೆಗೆ, ಆಂತರಿಕ ಮೀಸಲಾತಿ ಕುರಿತಾಗಿ ಮಾನ್ಯ ನ್ಯಾಯಾಲಯಗಳ ಮುಂದೆ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಕೆಲವು ನೇಮಕಾತಿ ಪ್ರಕ್ರಿಯೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಸಂವಿಧಾನಬದ್ಧತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಸರ್ಕಾರವಾಗಿ, ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗುವಂತೆ ತ್ವರಿತ ನಿರ್ಧಾರಗಳನ್ನು ಕೈಗೊಳ್ಳುವುದಕ್ಕಿಂತ ಕಾನೂನುಬದ್ಧವಾಗಿ ಜವಾಬ್ದಾರಿಯಿಂದ ನಡೆದುಕೊಳ್ಳುವುದನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ.
ಈ ಎಲ್ಲಾ ವ್ಯವಸ್ಥಾತ್ಮಕ ಮತ್ತು ಕಾನೂನುಬದ್ಧ ಸವಾಲುಗಳ ನಡುವೆಯೂ, ಕಳೆದ 2.5 ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲೂ 40,000ಕ್ಕೂ ಹೆಚ್ಚು ನೇಮಕಾತಿಗಳನ್ನು ಪೂರ್ಣಗೊಳಿಸಿದ್ದೇವೆ. ವಿಳಂಬಗಳಿಂದಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳ ಸಂಕಷ್ಟವನ್ನು ನಾವು ಮನಗಂಡಿದ್ದೇವೆ. ಈ ಹಿನ್ನೆಲೆಯಲ್ಲಿ, ಮುಂದಿನ ನೇಮಕಾತಿಗಳಲ್ಲಿ ವಯೋಮಿತಿ 5 ವರ್ಷಕ್ಕಿಂತ ಹೆಚ್ಚು ಸಡಿಲಿಕೆ ನೀಡಲಾಗಿದೆ, ಇದರಿಂದ ವ್ಯವಸ್ಥಾತ್ಮಕ ವಿಳಂಬದಿಂದ ಯಾರೂ ಅನ್ಯಾಯವಾಗಿ ಅವಕಾಶ ಕಳೆದುಕೊಳ್ಳದಂತೆ ನೋಡಿಕೊಳ್ಳಲಾಗಿದೆ.

ಉಳಿದಿರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಮುಂದುವರಿಯುತ್ತಿದೆ ಮತ್ತು ಅದನ್ನು ಇನ್ನಷ್ಟು ವೇಗಗೊಳಿಸಲಾಗುವುದು ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಪಾರದರ್ಶಕ, ವ್ಯವಸ್ಥಿತ ಮತ್ತು ಕಾಲಬದ್ಧ ರೀತಿಯಲ್ಲಿ ನೇಮಕಾತಿ ಪ್ರಕ್ರಿಯೆ ಸಾಗುವಂತೆ ಎಲ್ಲಾ ಅಗತ್ಯ ಆಡಳಿತಾತ್ಮಕ ಮತ್ತು ನೀತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹುದ್ದೆಗಳ ಭರ್ತಿ ಮಾಡುವ ಜೊತೆಗೆ, ಇಂತಹ ಬ್ಯಾಕ್ಲಾಗ್ ಮರುಕಳಿಸದಂತೆ ನೇಮಕಾತಿ ಸಂಸ್ಥೆಗಳನ್ನು ಬಲಪಡಿಸಲಾಗುವುದು.
ಇದು ಕೇವಲ ಹುದ್ದೆಗಳ ಭರ್ತಿಯ ವಿಚಾರವಲ್ಲ, ಆಡಳಿತಾತ್ಮಕ ಸಾಮರ್ಥ್ಯವನ್ನು ಪುನರ್ನಿರ್ಮಿಸುವುದು, ನೇಮಕಾತಿಯಲ್ಲಿ ನ್ಯಾಯತೆಯನ್ನು ಪುನಃ ಸ್ಥಾಪಿಸುವುದು ಮತ್ತು ರಾಜ್ಯದ ಎಲ್ಲಾ ಭಾಗಗಳ ಹಾಗೂ ಸಮುದಾಯಗಳ ಅರ್ಹ ಅಭ್ಯರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸುವುದೇ ನಮ್ಮ ಉದ್ದೇಶವಾಗಿದೆ.
ಎಲ್ಲಾ ಉದ್ಯೋಗಾಕಾಂಕ್ಷಿಗಳಿಗೆ ನಾನು ಮನವಿ ಮಾಡುತ್ತೇನೆ. ಆತ್ಮವಿಶ್ವಾಸ ಮತ್ತು ಸಹನೆಯೊಂದಿಗೆ ನಿಮ್ಮ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಸಿದ್ಧತೆಯ ಮೇಲೆ ಗಮನ ಹರಿಸಿ. ಕರ್ನಾಟಕದ ಯುವಜನತೆ ನಮ್ಮ ಭವಿಷ್ಯದ ಶಿಲ್ಪಿಗಳು. ನಿಮ್ಮ ಧೈರ್ಯ ಮತ್ತು ಹಠಾತ್ಮಕ ಪರಿಶ್ರಮ ನಮಗೆ ಸ್ಪೂರ್ತಿ ನೀಡುತ್ತದೆ. ಮಾತಿನಲ್ಲಿ ಮಾತ್ರವಲ್ಲ, ಕಾರ್ಯದಲ್ಲಿಯೂ ನಿಮ್ಮ ಜೊತೆ ನಮ್ಮ ಸರ್ಕಾರ ದೃಢವಾಗಿ ನಿಂತಿದೆ. ನಿಮ್ಮ ಕನಸುಗಳನ್ನು ಕಾಪಾಡಿ, ಅವಕಾಶಗಳನ್ನು ವಿಸ್ತರಿಸಿ, ಸಾರ್ವಜನಿಕ ಸೇವೆಯನ್ನು ಪ್ರತಿಯೊಬ್ಬ ಅರ್ಹ ಯುವ ಮನಸ್ಸಿಗೆ ಸಾಧಿಸಬಹುದಾದ ದಾರಿಯನ್ನಾಗಿ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.







