ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಉಗ್ರ ಅಬ್ದುಲ್ ರೆಹ್ಮಾನ್ ಫರೀದಾಬಾದ್ ಜೈಲಿನಲ್ಲಿ ಹತ್ಯೆಗೀಡಾಗಿದ್ದಾನೆ. ಉಗ್ರ ಅಬ್ದುಲ್ ರೆಹ್ಮಾನ್’ನನ್ನು ಜೈಲಿನೊಳಗೆ ಸಹ ಕೈದಿಯೊಬ್ಬರು ಹತ್ಯೆ ಮಾಡಿದ್ದಾರೆಂದು ಮಂಗಳವಾರ ತಿಳಿದಬಂದಿದೆ.

ರಾಮ ಮಂದಿರದ ಮೇಲೆ ದಾಳಿ ನಡೆಸುವ ಯೋಜನೆ ರೂಪಿಸಿದ್ದ ಆರೋಪದ ಮೇಲೆ ಅಬ್ದುಲ್ ರೆಹ್ಮಾನ್’ನನ್ನು ಕಳೆದ ವರ್ಷದ ಮಾರ್ಚ್ನಲ್ಲಿ ಗುಜರಾತ್ ಎಟಿಎಸ್ ಮತ್ತು ಹರಿಯಾಣ ವಿಶೇಷ ಕಾರ್ಯಪಡೆ (STF) ಜಂಟಿ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಪಡಿಸಿತ್ತು

ಉಗ್ರ ಅಬ್ದುಲ್ ರೆಹಮಾನ್ ಮತ್ತು ಸಹ ಕೈದಿ ಕಾಶ್ಮೀರಿ ಯುವಕ ಅರುಣ್ ಚೌಧರಿ ಮಧ್ಯೆ ಭಾನುವಾರ ಜಗಳ ನಡೆದಿದೆ. ಜಗಳ ಹೊಡೆದಾಟಕ್ಕೆ ತಿರುಗಿ ರಾತ್ರಿ 8 ಗಂಟೆಯ ವೇಳೆಗೆ ಅರುಣ್ ಚೌಧರಿ ಹರಿತವಾದ ವಸ್ತುವಿನಿಂದ ತಲೆಗೆ ಹೊಡೆದಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ರೆಹಮಾನ್ನನ್ನು ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ರೆಹಮಾನ್ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ.

ಆರೋಪಿ ಕೈದಿ ಅರುಣ್ ಚೌಧರಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






