ಲಾಲಾರಸದಿಂದ ಕರೋನಾ ವೈರಸ್ ವೇಗವಾಗಿ ಹಬ್ಬುತ್ತವೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಐಸಿಸಿ ಕೂಡ ಈ ಬಗ್ಗೆ ಚಿಂತಿಸಿದೆ. ಐಸಿಸಿಯ ವೈದ್ಯಕೀಯ ಸಲಹಾ ಸಮಿತಿಯ ಮುಖ್ಯಸ್ಥ ಡಾ. ಪೀಟರ್ ಹಾರ್ಕೋರ್ಟ್ ಉಗುಳನ್ನು ಬಳಸಿಕೊಂಡು ಚೆಂಡನ್ನು ಹೊಳೆಯುವಂತೆ ಮಾಡುವುದನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಪರಿಶೀಲಕನಾಗಿದ್ದ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ.
ಕರೋನಾ ಪ್ರಭಾವ ಕ್ರಿಕೆಟ್ ಮೇಲೂ ಬಿದ್ದಿರುವ ಪರಿಣಾಮ ಸದ್ಯಕ್ಕೆ ಯಾವುದೇ ಪಂದ್ಯಕೂಟಗಳು ನಡೆಯುತ್ತಿಲ್ಲ. ಐಸಿಸಿ ತೀರ್ಮಾನದಂತೆ ಎಲ್ಲಾ ಪಂದ್ಯಗಳನ್ನೂ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಈಗ ಆಟಗಾರರ ಆರೋಗ್ಯ ದೃಷ್ಟಿಯಿಂದ ಲಾಲಾರಸವನ್ನು ಬಳಸಿಕೊಂಡು ಚೆಂಡನ್ನು ಹೊಳೆಯುವಂತೆ ಮಾಡುವುದನ್ನು ನಿಷೇಧಿಸಲು ಮುಂದಾಗಿದೆ. ಇನ್ನೂ ಈ ಬಗ್ಗೆ ಐಸಿಸಿ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.
ಬೌಲರ್ಗಳು ಚೆಂಡನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮತ್ತು ಸ್ವಿಂಗ್ ಆಗಲು ಚೆಂಡಿಗೆ ತಮ್ಮ ಲಾಲಾರಸ ಉಜ್ಜುತ್ತಾರೆ. ಹೀಗಾಗಿ ಒಬ್ಬರ ಲಾಲಾರಸ ಮತ್ತೊಬ್ಬರು ಮುಟ್ಟುವುದರಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಐಸಿಸಿಯ ವೈದ್ಯಕೀಯ ಸಲಹಾ ಸಮಿತಿ ಇಟ್ಟ ಈ ಸಲಹೆಯ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಅಲ್ಲದೇ ಲಾಲಾರಸ ಉಪಯೋಗ ಬಹುತೇಕ ನಿಷೇಧಕ್ಕೆ ಒಳಗಾಗಲಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಇದೇ ವೇಳೆ ಚೆಂಡನ್ನು ಹೊಳೆಯುವಂತೆ ಮಾಡಲು ಬೆವರನ್ನು ಬಳಸಿಕೊಳ್ಳಬಹುದು ಎಂದೂ ಐಸಿಸಿಯ ವೈದ್ಯಕೀಯ ಸಲಹಾ ಸಮಿತಿ ಹೇಳಿದೆ.
![](https://pratidhvani.in/wp-content/uploads/2021/02/pratidhvani_2020_04_e241e77c_4e48_4c8a_8518_5c7e48e673cc_Stay_Home_2-180.jpg)