ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣಾರ್ಭಟ ಜೋರಿದೆ. ಇನ್ನೊಂದು ವಾರ ಮಳೆಯೂ ಇದೆ. ಈ ಮಧ್ಯೆ ಪ್ರವಾಹದ ಸ್ಥಿತಿಯಿಂದಾಗಿ ಕಲುಷಿತ ನೀರು ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ತೊಂದರೆ ಕೊಡ್ತಿದೆ. ಮಕ್ಕಳ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಿದೆ.
ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರ ಜೋರಿದೆ. ಪ್ರವಾಹದ ಸ್ಥಿತಿ ಮುಂದುವರೆಯುತ್ತಿದೆ. ಇದರಿಂದ ಪೋಷಕರಲ್ಲಿ ಆತಂಕ ಹೆಚ್ಚಾಗುತ್ತಿದೆ. ಒಂದು ಕಡೆ ಮಳೆಯಿಂದ ಜನರ ಜೀವನ ಬೀದಿಗೆ ಬಿದ್ರೆ, ಮತ್ತೊಂದೆಡೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗ್ತಿದೆ. ಕುಡಿಯುವ ನೀರಿನ ಜೊತೆ ಕಲುಷಿತ ನೀರು ಮಿಕ್ಸ್ ಆಗಿ ವಾಂತಿ – ಭೇದಿ ಜ್ವರದಂತಹ ಖಾಯಿಲೆಗೆ ಮಕ್ಕಳು ತುತ್ತಾಗ್ತಿದಾರೆ. ಮಳೆಹಾನಿ ಪ್ರದೇಶಗಳ ಜಾಗದಲ್ಲಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿದೆ. ರೈನ್ಬೋ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಒಂದರಲ್ಲಿಯೇ ಮಕ್ಕಳ ಸಂಖ್ಯೆ ಹೆಚ್ಚಾಗ್ತಿದೆ. ಒಂದು ದಿನಕ್ಕೆ ಓಪಿಡಿಗೆ 300 ಕ್ಕೂ ಹೆಚ್ಚು ಮಕ್ಕಳು ಬರ್ತಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಕೇವಲ ರೇನ್ಬೋ ಆಸ್ಪತ್ರೆ ಮಾತ್ರವಲ್ಲ ಬೆಂಗಳೂರಿನ ಬಹುತೇಕ ಆಸ್ಪತ್ರೆಗೆ ಪೋಷಕರು ಮಕ್ಕಳು ಕರೆದುಕೊಂಡು ಬಂದು ಚೆಕ್ ಅಪ್ ಮಾಡಿಸಿಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಫ್ಲೂ ವೈರಸ್, ಅಲರ್ಜಿ, ರೆಸ್ಪಿರೇಟರಿ ವೈರಸ್ ಇನ್ಫೆಕ್ಷನ್, ಲಂಗ್ಸ್ ಡ್ಯಾಮೇಜ್ ಸಮಸ್ಯೆ ಪ್ರಮುಖವಾಗಿ ಆರ್ಎಸ್ವಿ ಸಮಸ್ಯೆ ಮಕ್ಕಳನ್ನು ಹೆಚ್ಚು ಕಾಡ್ತಿದೆ. ಕಲುಷಿತ ನೀರು ಸೇವಿಸಿದ ಮಕ್ಕಳಲ್ಲಿ ಆರ್ಎಸ್ವಿ ಖಾಯಿಲೆ ಇತ್ತೀಚೆಗೆ ಹೆಚ್ಚಾಗಿದೆ. ಮಕ್ಕಳಲ್ಲಿ ಜ್ವರದ ಟೆಂಪ್ರೇಚರ್ 103-104 ರಷ್ಟು ಕಂಡು ಬರ್ತಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಾಗಿಯೇ ಎಚ್ಚರ ವಹಿಸುವುದು ಒಳಿತು.
ಪೋಷಕರಿಗೆ ವೈದ್ಯರು ನೀಡುತ್ತಿರುವ ಸಲಹೆ ಏನು ?
ಮಕ್ಕಳಿಗೆ ಬಿಸಿ ನೀರನ್ನೇ ಕುಡಿಸಬೇಕು. ಕಲುಷಿತ ನೀರಿನಲ್ಲಿ ಓಡಾಡಲು ಬಿಡಬಾರದು. ಮಾಸ್ಕ್ ಹಾಗೂ ಸ್ವಚ್ಛತೆ ವಹಿಸಬೇಕು. ಮಕ್ಕಳಿಗೆ ಹೆಚ್ಚು ತರಕಾರಿ ಹಾಗೂ ಹಣ್ಣು ನೀಡಬೇಕು. ಜ್ವರ, ಕೆಮ್ಮುವಿನಂಥಹ ಲಕ್ಷಣ ಇರೋ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಆದಷ್ಟರ ಮಟ್ಟಿಗೆ ಮಕ್ಕಳಿಗೆ ಕಲುಷಿತ ನೀರು ಸೇರದಂತೆ ನೋಡಿಕೊಳ್ಳಿ ಎನ್ನುತ್ತಿದ್ದಾರೆ ವೈದ್ಯರು. ಒಟ್ಟಾರೆ ಮಳೆಯಿಂದಾಗಿ ಸಾಂಕ್ರಮಿಕ ರೋಗಗಳು ಉಲ್ಭಣವಾಗುತ್ತಿವೆ. ಡೆಂಘೀ ಪ್ರಕರಣಗಳು ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ. ಹೀಗಾಗಿ ಮಕ್ಕಳ ವಿಷಯದಲ್ಲಿ ಪೋಷಕರು ಎಚ್ಚರವಹಿಸಿ ಮಳೆಗಾಲ ಮುಗಿಯುವ ವರೆಗೆ ಹೆಚ್ಚಿನ ಕಾಳಜಿ ತೋರಬೇಕಿದೆ.