ಸಮಯಕ್ಕೆ ಸರಿಯಾಗಿ ಸಾಲ ಹಿಂತಿರುಗಿಸದಿದ್ದಕ್ಕೆ ಸಹೋದರಿಯರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಅಮಾನುಷ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ ಎಂದು ಡಿಎಚ್ ವರದಿ ಮಾಡಿದೆ.
ಆನೇಕಲ್ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರದಲ್ಲಿ ಘಟನೆ ನಡೆದಿದ್ದು ರಾಮಕೃಷ್ಣ ರೆಡ್ಡಿ, ಸುನಿಲ್ ಹಾಗೂ ಇಂದ್ರಮ್ಮ ವಿರುದ್ದ ಪ್ರಕರಣವನ್ನ ದಾಖಲಿಸಿಕೊಳ್ಳಲಾಗಿದೆ. ಈಗಾಗಲೇ ಪೊಲೀಸರು ರಾಮಕೃಷ್ಣ ಹಾಗೂ ಸುನಿಲ್ ನನ್ನು ಬಂಧಿಸಿದ್ದು, ಮೂರನೇ ಆರೋಪಿ ಇಂದ್ರಮ್ಮಗೆ ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.
ಆರಂಭದಲ್ಲಿ ಈ ಬಗ್ಗೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ದೂರು ಸ್ವೀಕರಿಸದೇ ನಿರ್ಲಕ್ಷ್ಯ ತೋರಿದ್ದಾರೆ. ನಂತರ ಸ್ಥಳೀಯರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರಿಂದ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೊಡ್ಡಬೊಮ್ಮಸಂದ್ರದ ನಿವಾಸಿ ನೆರಿಗಾ ಗ್ರಾಮದ ರಾಮಕೃಷ್ಣ ರೆಡ್ಡಿ ಬಳಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೇ. 30ರ ಬಡ್ಡಿಗೆ 1 ಲಕ್ಷ ರೂ. ಪಡೆದಿದ್ದರು. ಸಂಪೂರ್ಣ ಸಾಲದ ಮೊತ್ತವನ್ನ ಒಂದೇ ಬಾರಿ ಮರುಪಾವತಿಸುವಂತೆ ರಾಮಕೃಷ್ಣ ಹಾಗೂ ಸಂಗಡಿಗರು ದುಂಬಾಲು ಬಿದ್ದಿದ್ದರು.
ಜಮೀನು ಮಾರಾಟವಾದ ನಂತರ ತಾವು ನೀಡಿರುವ ಸಾಲವನ್ನ ಹಿಂತಿರುಗಿಸುವುದಾಗಿ ಮಹಿಳೆ ಮನವಿ ಮಾಡಿದ್ದರು. ಆದರೆ ಇದಕ್ಕೊಪ್ಪದ ಆರೋಪಿಗಳು ಮಹಿಳೆಯ ಮನೆಗೆ ನುಗ್ಗಿ ಆಕೆಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.
ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ಠಾಣಾಧಿಕಾರಿ ರಾಘವೇಂದ್ರ ಇಂಬ್ರಾಪುರ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಮತ್ತು ಆರೋಪಿಗಳೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳುವಂತೆ ಸಂತ್ರಸ್ತರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಘಟನೆಯ ಬಗ್ಗೆ ಆಕ್ರೋಶವನ್ನ ಹೊರಹಾಕಿದ್ದಾರೆ. ಆರೋಪಿಗಳ ಜೊತೆ ಠಾಣಾಧಿಕಾರಿಯ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ರಾಜ್ಯಸರ್ಕಾರಕ್ಕೆ ಆಗ್ರಹಿಸಿದ್ದಾರೆ.