ರಾಜ್ಯ ಬಿಜೆಪಿ ಸರ್ಕಾರ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಲಿಂಗಾಯತರ ಓಲೈಕೆಗೆ ಮುಂದಾಗಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಬಸವ ಜಯಂತಿ ಆಚರಣೆ ಮಾಡುವಂತೆ ದಶಕಗಳ ಹೋರಾಟ ಮಾಡಿದ್ದರು ಸಹ ಸುಮ್ಮನಾಗಿತ್ತು. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಸವನ ಬಾಗೇವಾಡಿಯಲ್ಲಿ ಬಸವ ಜಯಂತಿ ಆಚರಣೆ ಮಾಡಲು ತರಾತುರಿಯಲ್ಲಿ ಕಳೆದ ಏಪ್ರಿಲ್ 27 ಕ್ಕೆ ಆದೇಶ ಮಾಡಿತ್ತು. ಸರ್ಕಾರದ ಆದೇಶದಿಂದ ಬಸವ ಅಭಿಮಾನಿಗಳಲ್ಲಿ ಇನ್ನಿಲ್ಲದ ಸಂತೋಷವಾಗಿತ್ತು. ಆದ್ರೆ ಈಗ ಸರ್ಕಾರ ಕಾಟಾಚಾರಕ್ಕೆ ಜಯಂತಿ ಆಚರಣೆ ಮಾಡಿದೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಬಸವ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯವಹಿಸಿದ ಸರ್ಕಾರದ ವಿರುದ್ಧ ಬಸವ ಪ್ರೇಮಿಗಳು ಆಕ್ರೋಶ ಹೊರ ಹಾಕ್ತಿದ್ದಾರೆ.
ರಾಜ್ಯ ಸರ್ಕಾರದಿಂದ ಬಸವ ಜಯಂತಿ ಆಚರಣೆ ಎಂದಾಗ ಬಸವಾಭಿಮಾನಿಗಳಲ್ಲಿ ಸಂತಸ ಮನೆ ಮಾಡಿತ್ತು. ಬಸವೇಶ್ವರರ ಹುಟ್ಟೂರಲ್ಲೆ ಜಯಂತಿ ಎಂದಾಗ ಬಸವ ತತ್ವಗಳ ಪ್ರಚಾರಕ್ಕೆ ಅನುಕೂಲವಾಗುತ್ತೆ. ಬಸವಣ್ಣನವರ ವಚನ ಸಾಹಿತ್ಯವನ್ನ ಅವರ ಹುಟ್ಟೂರಲ್ಲೆ ಆನಂದಿಸಬಹುದು ಎಂದುಕೊಂಡಿದ್ದರು. ಆದ್ರೆ ಜಯಂತಿಯ ದಿನ ಆಗಿದ್ದೇ ಬೇರೆ. ಕಾಟಾಚಾರಕ್ಕಾಗಿ ಸರ್ಕಾರ ಬಸವ ಜಯಂತಿಯನ್ನ ಹುಟ್ಟೂರಲ್ಲಿ ಆಚರಣೆಗೆ ಆದೇಶ ಮಾಡಿದೆ ಹೊರತಾಗಿ ಸರ್ಕಾರದ ಇಚ್ಛಾಶಕ್ತಿ ಇದರಲ್ಲಿ ಕಾಣಿಸುತ್ತಿಲ್ಲ ಎಂದು ಬಸವಾಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಇದೆ ಮೊದಲ ಬಾರಿಗೆ ಬಸವೇಶ್ವರರ ಹುಟ್ಟೂರಲ್ಲಿ ಬಸವ ಜಯಂತಿಯನ್ನ ಸರ್ಕಾರವೇ ಆಚರಣೆ ಮಾಡ್ತಿದೆ. ಆದ್ರೆ ಇಂದು ನಡೆದ ಬಸವ ಜಯಂತಿಯಲ್ಲಿ ಸರ್ಕಾರದ ಜನಪ್ರತಿಧಿಗಳೇ ಕಾಣಲಿಲ್ಲ. ಮುಖ್ಯವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಬಸವ ಜಯಂತಿ ಆಚರಣೆಗೆ ಗೈರಾಗಿದ್ದಾರೆ. ಹೀಗಾಗಿ ಸರ್ಕಾರ ಕಾಟಾಚಾರಕ್ಕೆ ಬಸವ ಜಯಂತಿಯನ್ನ ಸರ್ಕಾರದಿಂದ ಬಸವನ ಬಾಗೇವಾಡಿಯಲ್ಲಿ ಹಮ್ಮಿಕೊಳ್ತಾ ಅಂತಾ ಜನರು ಪ್ರಶ್ನೆ ಮಾಡ್ತಿದ್ದಾರೆ.
ಕೇವಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಉಸ್ತುವಾರಿ ಸಚಿವ ಉಮೇಶ ಕತ್ತಿ ಅಷ್ಟೇ ಅಲ್ಲ.. ಬಹುತೇಕ ಶಾಸಕರು, ಸಂಸದರು ಸೇರಿ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ರು. ಆದ್ರೆ ಕಾರ್ಯಕ್ರಮದ ತಯಾರಿಗಾಗಿ ಶ್ರಮಿಸುತ್ತಿದ್ದ ಕಾರ್ಯಕ್ಮದ ಅಧ್ಯಕ್ಷತೆ ವಹಿಸಿದ್ದ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಕಾರ್ಯಕ್ರಮದಲ್ಲಿದ್ದರು. ಇನ್ನು ಬಸವನ ಬಾಗೇವಾಡಿಯಲ್ಲೆ ಸರ್ಕಾರದಿಂದ ಬಸವ ಜಯಂತಿ ನಡೆಯಬೇಕು ಅಂತಾ ವಿಧಾನ ಸೌಧದಲ್ಲಿ ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಇದ್ದರು. ಇವ್ರನ್ನ ಹೊರತು ಪಡೆಸಿ ವಿಜಯಪುರ ಜಿಲ್ಲೆಯ ಬಹುತೇಕ ಶಾಸಕರು ಸಂಸದರು ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದು ಕಂಡು ಬಂತು.
ಸರ್ಕಾರವೇ ಬಸವ ಜಯಂತಿಗೆ ಆದೇಶಿಸಿ ಸರ್ಕಾರದ ಜನಪ್ರತಿನಿಧಿಗಳೆ ಇಲ್ಲದಿದ್ರೆ ಹೇಗೆ? ಎನ್ನುವ ಪ್ರಶ್ನೆಯು ಕೇಳಿ ಬಂತು. ಸರ್ಕಾರ ಕಾರ್ಯಕ್ರಮ ಆಯೋಜಿಸಿ ಈ ರೀತಿ ನಿರ್ಲಕ್ಷ್ಯ ಮೆರೆಯಬಾರದಿತ್ತು. ಇದೊಂದು ನೋವಿನ ಸಂಗತಿ ಎಂದು ಜನ ಬೇಸರ ವ್ಯಕ್ತಪಡಿಸಿದರು.
ಲಿಂಗಾಯತರ ಮತಗಳನ್ನ ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುವ ಬಿಜೆಪಿ ನಾಯಕರು, ಬಸವ ಜಯಂತಿ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ಎಂದು ಈ ಭಾಗದ ಜನ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಚುನಾವಣೆ ವೇಳೆ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದಾರೆ.