‘ಖೇಲಾ ಹೋಬೆ’ ಘೋಷಣೆಯ ಮೂಲಕ ಬಂಗಾಳದ ನೆಲದಲ್ಲಿ ಪ್ರಧಾನಿ ಮೋದಿಯವರ ಎಲ್ಲಾ ಆಟಗಳನ್ನು ತಲೆಕೆಳಗು ಮಾಡಿ ಚುನಾವಣೆ ಗೆದ್ದ ಮಮತಾ ಬ್ಯಾನರ್ಜಿ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಅಂತಹದ್ದೇ ಆಟಕ್ಕೆ ಚಾಲನೆ ನೀಡಿದ್ದಾರೆಯೇ?
ಹೌದು, ಐದು ದಿನಗಳ ಭೇಟಿಗಾಗಿ ದೆಹಲಿಗೆ ಬಂದಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ನಡೆಸಿದ ಮಾತುಕತೆಗಳ ಬಳಿಕ ಇಂತಹದ್ದೊಂದು ಪ್ರಶ್ನೆ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಬಂದಿದೆ.
ಬ್ಯಾನರ್ಜಿ ಅವರು ಸೋನಿಯಾ ಭೇಟಿಯ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಾ, ‘ಅಚ್ಛೇದಿನ’ಗಳನ್ನು ಈಗಾಗಲೇ ಸಾಕೆನ್ನುವಷ್ಟು ಅನುಭವಿಸಿದ್ದೇವೆ. ಹಾಗಾಗಿ ದೇಶ ಈಗ ಸಚ್ಚೇದಿನ್(ಸತ್ಯ, ವಾಸ್ತವದ ದಿನಗಳನ್ನು)ಗಳನ್ನು ಎದುರು ನೋಡುತ್ತಿದೆ. ಆ ನಿಟ್ಟಿನಲ್ಲಿ ದೇಶದ ಪ್ರತಿಪಕ್ಷಗಳು ಮನಸ್ಸು ಮಾಡಿದರೆ, ಕೇವಲ ಆರು ತಿಂಗಳಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ರಾಷ್ಟ್ರವ್ಯಾಪಿ ಒಂದು ಪರ್ಯಾಯ ಶಕ್ತಿಯನ್ನು ಕಟ್ಟುವುದು ಸಾಧ್ಯ. ಈ ಹಿಂದೆಯೂ ಸಾಕಷ್ಟು ಬಾರಿ ಹಾಗೇ ದಿಢೀರನೇ ಸಶಕ್ತ ಪರ್ಯಾಯ ಶಕ್ತಿಗಳು ಹುಟ್ಟಿ ಜನತೆಯ ಮುಂದೆ ಹೊಸ ಆಯ್ಕೆಗಳನ್ನು ಇಟ್ಟ ಉದಾಹರಣೆಗಳಿವೆ. ಹಾಗಾಗಿ ಮುಂದಿನ ದಿನಗಳಲ್ಲಿ ‘ಖೇಲಾ ಹೋಬೆ’ ಘೋಷಣೆ ರಾಷ್ಟ್ರವ್ಯಾಪಿ ಪ್ರತಿಧ್ವನಿಸುವ ದಿನಗಳು ದೂರವಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಮಾಡಿದನ್ನೇ ಆಡುವ ಮತ್ತು ಆಡಿದ್ದನ್ನು ಮಾಡಿ ತೋರಿಸುವ ಛಲಗಾತಿ ಎನಿಸಿಕೊಂಡಿರುವ ಮಮತಾ ಬ್ಯಾನರ್ಜಿ ಅವರ ಈ ಮಾತುಗಳು ಮತ್ತು ಕಾಂಗ್ರೆಸ್ ಅಧಿನಾಯಕಿಯೊಂದಿಗಿನ ಅವರ ಮಹತ್ವದ ಸಮಾಲೋಚನೆ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿಯೊಂದನ್ನು ಕಟ್ಟುವ ಪ್ರಯತ್ನಗಳು ಮತ್ತೊಮ್ಮೆ ಗಮನ ಸೆಳೆದಿವೆ.
ದೇಶದ ಜನತೆ ಮೋದಿ ಆಡಳಿತದ ಅಚ್ಛೇದಿನಗಳನ್ನು ಬೇಕಾದಷ್ಟು ಅನುಭವಿಸಿ ಹೈರಾಣಾಗಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಗಳು ಏನಿದ್ದರೂ ಪ್ರಧಾನಿ ಮೋದಿ ವರ್ಸಸ್ ದೇಶದ ಜನಸಾಮಾನ್ಯರು ಎಂಬ ನೆಲೆಯಲ್ಲಿಯೇ ನಡೆಯಲಿವೆ. ಹಾಗಾಗಿ ಈ ಹಿಂದೆ ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಅವರ ಭಾರೀ ಜನಪ್ರಿಯತೆಯ ನಡುವೆ ನಡೆದ ಚುನಾವಣೆಗಳಲ್ಲಿ ದೇಶದ ಜನತೆ ಅವರನ್ನು ಕಿತ್ತೊಗೆದ ಇತಿಹಾಸ ಮತ್ತೆ ಮರುಕಳಿಸಲಿದೆ. ಆದರೆ ಜನತೆಗೆ ಒಂದು ಸಶಕ್ತ ಪರ್ಯಾಯ ರಾಜಕೀಯ ಶಕ್ತಿಯ ಅನಿವಾರ್ಯತೆ ಇದೆ. ಹಾಗಾಗಿ ಪ್ರತಿಪಕ್ಷಗಳು ಅಂತಹ ರಾಜಕೀಯ ಪರ್ಯಾಯ ಕಟ್ಟುವ ನಿಟ್ಟಿನಲ್ಲಿ ಗಂಭೀರವಾಗಿದ್ದರೆ, ಇದು ಸಕಾಲ. ಅಂತಹದ್ದೊಂದು ರಾಜಕೀಯ ವೇದಿಕೆ ಕಟ್ಟುವ ದಿಕ್ಕಿನಲ್ಲಿ ಎಲ್ಲರಿಗೂ ಆಸಕ್ತಿ ಇದೆ. ಆದರೆ ಯಾರೊಬ್ಬರೂ ಮುಂದೆ ಬಂದು ಸಮಾನಮನಸ್ಕರೊಂದಿಗೆ ಮಾತನಾಡಿ, ಒಂದೆಡೆ ಸೇರಿಸಿ ಅಂತಹ ವೇದಿಕೆಗೆ ಚಾಲನೆ ನೀಡಲು ಮುಂದೆಬರುತ್ತಿಲ್ಲ. ಹಾಗಾಗಿ, ಅಂತಹ ಬೆಕ್ಕಿಗೆ ಗಂಟೆ ಕಟ್ಟುವ ಕೆಲಸಕ್ಕೆ ತಾವೇ ಮುಂದೆ ಬಂದಿರುವುದಾಗಿಯೂ ದೀದಿ ಹೇಳಿದ್ದಾರೆ.
ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಕಟ್ಟುವ ನಿಟ್ಟಿನಲ್ಲಿ ತಮ್ಮ ಕೈಲಾದದ್ದನ್ನು ತಾವು ಮಾಡುವುದಾಗಿ ಹೇಳಿರುವ ಮಮತಾ, ಆ ಪರ್ಯಾಯ ರಾಜಕೀಯ ಶಕ್ತಿಯನ್ನು ತಮ್ಮದೇ ಮುಂದಾಳತ್ವದಲ್ಲಿ ನಡೆಸಬೇಕೆಂದೇನೂ ತಮ್ಮ ನಿರೀಕ್ಷೆಯಿಲ್ಲ. ಯಾರು ಬೇಕಾದರೂ ನೇತೃತ್ವ ವಹಿಸಿಕೊಳ್ಳಲಿ. ಆದರೆ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವ ನಿಟ್ಟಿನಲ್ಲಿ ತಾವು ತಮ್ಮ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದಿದ್ದರೆ ನಾವೆಲ್ಲಾ ಒಟ್ಟಾಗಲೇಬೇಕಿದೆ. ಬರಲಿರುವ ಉತ್ತರಪ್ರದೇಶ ಚುನಾವಣೆ ಅದಕ್ಕೊಂದು ತಾಲೀಮು. ಆ ಅವಕಾಶವನ್ನು ನಾವು ಕಳೆದುಕೊಳ್ಳಲೇಬಾರದು. ಆದರೆ, ಮಾಯಾವತಿಯಂಥವರು ಏಕಾಂಗಿಯಾಗಿಯೇ ಚುನಾವಣೆ ಎದುರಿಸುವುದಾದರೆ ಎದುರಿಸಲಿ. ಈ ನಡುವೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಬಿಜೆಪಿಯೇತರ ಪರ್ಯಾಯ ಬಣದ ಪ್ರಯತ್ನಗಳಿಂದ ದೂರವೇ ಉಳಿದ ಬಗ್ಗೆ ಕೇಳಿದ ಪ್ರಶ್ನೆಗೆ, ಆ ಇಬ್ಬರೂ ನಾಯಕರು ತಮ್ಮೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಸಂದರ್ಭ ಬಂದಾಗ ಅವರೊಂದಿಗೆ ಮಾತುಕತೆ ನಡೆಸಲು ತಾವು ಸಿದ್ಧ ಎಂದು ಹೇಳಿದ್ದಾರೆ.
ಇದೇ ವೇಳೆ ಕಳೆದ ಚುನಾವಣೆಯಲ್ಲಿ ತಮ್ಮ ಗೆಲುವಿನ ಸೂತ್ರದಾರ ಎನ್ನಲಾದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಪ್ರಶ್ನೆಗಳಿಗೆ ಅವರು, ಪ್ರಶಾಂತ್ ಕಿಶೋರ್ ಅವರು ತಮ್ಮ ನಿರ್ಧಾರ ಕೈಗೊಳ್ಳಲು ಸಂಪೂರ್ಣ ಸ್ವತಂತ್ರರು ಮತ್ತು ಅವರ ಕುರಿತ ಪ್ರಶ್ನೆಗಳಿಗೆ ಉತ್ತರಿಸಲೂ ಅವರು ಶಕ್ತರು. ಹಾಗಾಗಿ ಈ ಪ್ರಶ್ನೆಯನ್ನು ಅವರಿಗೇ ಕೇಳಿ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೆಲ್ಲಾ ಮಾಧ್ಯಮದವರ ಮುಂದೆ ಮಮತಾ ಚರ್ಚಿಸಿದ ಸಂಗತಿಗಳಾದವು.
ಅಸಲಿಗೆ ದೇಶದಲ್ಲಿಈ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ವರ್ಚಸ್ಸನ್ನು ಬದಿಗೊತ್ತಿ ಅವರ ವಿರುದ್ಧ ‘ಖೇಲೋ ಹೋಬೆ’ ಸೆಡ್ಡು ಹೊಡೆದು, ಅಸಲೀ ಆಟ ತೋರಿಸಿ ಗೆಲ್ಲುವ ಮೂಲಕ ‘ಸರಿಸಮಾನ ನಾಯಕರೇ ಇಲ್ಲ’ ಎಂಬ ನಾಯಕನ ಎದುರು ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದ ಮಮತಾ ದೀದಿಯ ಗೆಲುವಿನ ಬಳಿಕ ಆ ಗೆಲುವಿನ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತು ಮಮತಾ ರಾಷ್ಟ್ರ ರಾಜಕಾರಣದಲ್ಲಿ ವಹಿಸುತ್ತಿರುವ ಪಾತ್ರ ಕುತೂಹಲ ಮೂಡಿಸಿದೆ.
ಪಶ್ಚಿಮಬಂಗಾಳದ ಚುನಾವಣೆಯ ಬೆನ್ನಲ್ಲೇ ಪ್ರಶಾಂತ್ ಕಿಶೋರ್ ತಾವಿನ್ನು ಚುನಾವಣಾ ತಂತ್ರಗಾರಿಕೆಯ ವೃತ್ತಿಯನ್ನು ತೊರೆಯುವುದಾಗಿ ಘೋಷಿಸಿದರು. ಆದರೆ, ಅದಾದ ಕೆಲವೇ ದಿನಗಳಲ್ಲಿ ಎನ್ ಸಿಪಿ ನಾಯಕ ಶರದ್ ಪವಾರ್, ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಮತ್ತಿತರರನ್ನು ಭೇಟಿಯಾದರು. ಅದೇ ಹೊತ್ತಿಗೆ ಬಿಜೆಪಿಯ ಮಾಜಿ ಹಿರಿಯ ನಾಯಕ ಯಶವಂತ ಸಿನ್ಹಾ ನೇತೃತ್ವದಲ್ಲಿ ಕಾಂಗ್ರೆಸ್ ಹೊರತುಪಡಿಸಿ ಬಹುತೇಕ ಉಳಿದ ಪ್ರತಿಪಕ್ಷಗಳ ನಾಯಕರು ದೆಹಲಿಯಲ್ಲಿ ಸಭೆ ನಡೆಸಿದರು. ಅದು ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ರಾಜಕೀಯ ಪರ್ಯಾಯ ಕಟ್ಟುವ ದಿಸೆಯಲ್ಲಿ ಪ್ರಾಥಮಿಕ ಪ್ರಯತ್ನ ಎಂದೇ ಬಿಂಬಿಸಲಾಗಿತ್ತು. ಆ ಬಳಿಕ ಪ್ರಶಾಂತ್ ಕಿಶೋರ್ ಕಾಣಿಸಿಕೊಂಡಿದ್ದು ಸೀದಾ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರ ನಿವಾಸದೆದುರೇ!
ಕಾಂಗ್ರೆಸ್ ನಾಯಕರೊಂದಿಗೆ ಎರಡು ಮೂರು ಸುತ್ತಿನ ಮಾತುಕತೆಯ ಬಳಿಕ ಪ್ರಶಾಂತ್ ಕಿಶೋರ್ ಪಂಜಾಬ್ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ಆಡಳಿತ ಪಕ್ಷ ಕಾಂಗ್ರೆಸ್ಸಿನಲ್ಲಿ ಮೂಡಿರುವ ಒಡಕು ಸರಿಪಡಿಸಲು ಮಧ್ಯವರ್ತಿಯ ಪಾತ್ರ ವಹಿಸಿದ್ದಾರೆ ಎಂದೇ ಕೆಲವು ಮಾಧ್ಯಮಗಳು ವಿಶ್ಲೇಷಿಸಿದ್ದವು. ಆದರೆ, ಅವರು ಪಂಜಾಬ್ ನಾಯಕರೊಂದಿಗೆ ಪಕ್ಷದ ಹೈಕಮಾಂಡ್ ಜೊತೆಗೂ ನಿರಂತರ ಮಾತುಕತೆಗಳನ್ನು ನಡೆಸಿದರು. ಜೊತೆಗೆ ಸ್ವತಃ ಗಾಂಧೀ ಕುಟುಂಬದೊಂದಿಗೆ ಸಮಾಲೋಚನೆ ನಡೆಸಿದರು. ಆ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.
ಇದೀಗ ಪ್ರಶಾಂತ್ ಕಿಶೋರ್ ಭೇಟಿಯ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕಾಂಗ್ರೆಸ್ ನಾಯಕಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆ ಮಾತುಕತೆ ವೇಳೆ ರಾಹುಲ್ ಗಾಂಧಿ ಕೂಡ ಹಾಜರಿದ್ದರು. ಆ ಭೇಟಿಯ ಬಳಿಕ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವಿರುದ್ಧ ಮತ್ತೊಂದು ಪ್ರಬಲ ದನಿಯಾಗಿರುವ ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪ್ರತಿನಿಧಿಸುವ ಬಲಪಂಥೀಯ ಮೂಲಭೂತದ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವ ಗೀತ ರಚನೆಕಾರ ಜಾವೆದ್ ಅಖ್ತರ್ ಹಾಗೂ ನಟಿ ಶಬಾನಾ ಆಜ್ಮಿಯವರನ್ನೂ ಬಂಗಾಳದ ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ.
ಇನ್ನೂ ಮೂರು ದಿನ ಮಮತಾ ದೀದಿ ದೆಹಲಿಯಲ್ಲಿ ಬೀಡಬಿಡಲಿದ್ದು, ಮುಂದಿನ ದಿನಗಳಲ್ಲಿ ಅವರು ಭೇಟಿ ಮಾಡಲಿರುವ ಪ್ರಮುಖ ನಾಯಕರ ಪಟ್ಟಿ ಇನ್ನಷ್ಟು ಬೆಳೆಯಬಹುದು. ಅದರಲ್ಲೂ ಪ್ರತಿಭಟನಾನಿರತ ರೈತ ನಾಯಕರೊಂದಿಗೂ ಅವರು ಸಮಾಲೋಚನೆ ನಡೆಸಬಹುದು.
ಪ್ರಶಾಂತ್ ಕಿಶೋರ್ ಮತ್ತು ಮಮತಾ ಬ್ಯಾನರ್ಜಿ ಅವರ ಈ ಸರಣಿ ಭೇಟಿಗಳು ಕೇವಲ ಔಪಚಾರಿಕವಲ್ಲ ಎಂಬುದನ್ನು ಸ್ವತಃ ಅವರೇ ಖಚಿತಪಡಿಸಿದ್ದು, ತಮ್ಮದು ರಾಜಕೀಯ ಭೇಟಿ ಎಂಬುದನ್ನು ನಿಚ್ಚಳವಾಗಿ ಹೇಳಿದ್ದಾರೆ. ಹಾಗಾಗಿ, ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿಯವರಿಗೆ ಪರ್ಯಾಯ ರಾಜಕೀಯ ಶಕ್ತಿಗಳನ್ನು ಕಟ್ಟುವ ನಿಟ್ಟಿನಲ್ಲಿ ಈ ಭೇಟಿಗಳು ವಹಿಸುವ ಪಾತ್ರ ಮಹತ್ವದ್ದಿರಲಿದೆ. ಅದಕ್ಕೂ ಮುನ್ನ ಮುಂದಿನ ವರ್ಷಾರಂಭದಲ್ಲೇ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಅಂತಹ ಪರ್ಯಾಯ ರಾಜಕಾರಣದ ತಾಲೀಮು ನಡೆಯಲಿದ್ದು, ಅದಕ್ಕಾಗಿಯೇ ಈ ಎಲ್ಲಾ ಭೇಟಿ, ಮಾತುಕತೆಗಳು ಆರಂಭವಾಗಿವೆ ಎಂಬುದಲ್ಲಿ ಅನುಮಾನವೇ ಇಲ್ಲ. ಆ ಹಿನ್ನೆಲೆಯಲ್ಲಿ ಮಮತಾ ದೀದಿಯ ದೆಹಲಿ ಭೇಟಿಯ ಪರಿಣಾಮಗಳು ಮುಂದಿನ ಒಂದೆರಡು ವಾರಗಳಲ್ಲಿ ರಾಷ್ಟ್ರ ರಾಜಕಾರಣದ ಮೇಲೆ ಬೀರುವ ಪರಿಣಾಮಗಳು ಕುತೂಹಲಕಾರಿ!