ಪ್ರಶ್ನೆ: ಉತ್ತರ ಭಾರತದಲ್ಲಿ ರೈತ ಆಂದೋಲನದ ತೀವ್ರತೆ ಇಷ್ಟು ದಕ್ಷಿಣ ಭಾರತದಲ್ಲಿ ಇರಲಿಲ್ಲ. ಈಗ ಏನು ರೈತ ಮಹಾಪಂಚಾಯತ್ಗಳಲ್ಲಿ ನೀವು ಭಾಗವಹಿಸಿದ್ದೀರಾ, ನಿಮಗೆ ಹೇಗೆ ಅನ್ನಿಸಿತು? ಯಾವ ರೀತಿಯ ಬೆಂಬಲ ನಿಮಗೆ ಸಿಕ್ಕಿತು?
ಉತ್ತರ ಭಾರತದಲ್ಲಿ ಪ್ರತಿಭಟನೆಯ ತೀವ್ರತೆ ಹೆಚ್ಚಾಗುವುದು ಸಹಜವಾಗಿತ್ತು. ಏಕೆಂದರೆ, ಎಂಎಸ್ಪಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಸಮಸ್ಯೆ ಪಶ್ಚಿಮ ಉ.ಪ್ರ. ಪಂಜಾಬ್ ಮತ್ತು ಹರಿಯಾಣದಲ್ಲಿ ಮೊದಲಿನಿಂದಲೂ ಇದೆ. ಇದರ ಮೇಲೆ ಸರ್ಕಾರ ಈ ಮೂರು ಕಾನೂನುಗಳನ್ನು ಜಾರಿಗೆ ತಂದಿತು, ಎಂಎಸ್ಪಿ ಸಮಸ್ಯೆ ಹಿಂದಿನಿಂದಲೂ ಇತ್ತು. ರೈತರು ಹುತಾತ್ಮರಾದಾಗ, ಕಳೆದ 3-4 ವರ್ಷಗಳಿಂದ ಎಂಎಸ್ಪಿ ಸಾಲ ಮನ್ನಾ ಕುರಿತಾಗಿ ರೈತ ಆಂದೋಲನ ಆಗಾಗಲೇ ಆರಂಭಿಸಲಾಗಿತ್ತು.
ಹಾಗಾಗಿ ಸಹಜವಾಗಿಯೇ ಅಲ್ಲಿ ಆಂದೋಲನ ಆರಂಭವಾಯಿತು. ದೆಹಲಿ ಹತ್ತಿರವೇ ಇದೆ. ದೇಶದ ರಾಜಕಾರಣದ ಕೇಂದ್ರಬಿಂದುವಾದ ದೆಹಲಿಯಲ್ಲಿ ರೈತರು ಬಂದು ಕುಳಿತುಕೊಂಡ ವಿಚಾರ ಬಹಳಷ್ಟು ಜನಪ್ರಿಯವಾಯಿತು. ಎರಡನೇಯದು, ದಕ್ಷಿಣ ಭಾರತೀಯರಿಗೆ ದೆಹಲಿ ಹೋಗುವುದು ಕಷ್ಟ. ಉತ್ತರ ಭಾರತದಲ್ಲಿ ರೈತ ಆಂದೋಲನ ಹೆಚ್ಚಿದೆ, ದಕ್ಷಿಣ ಭಾರತದಲ್ಲಿ ಇಲ್ಲ ಎಂದು ನಾನು ಹೇಳುವುದಿಲ್ಲ. ನಾನು ಈಗ ಕರ್ನಾಟಕಕ್ಕೆ ಬಂದಿದ್ದೇನೆ. ಇಲ್ಲಿನ ರೈತರ ಶಕ್ತಿ ಮತ್ತು ಆಂದೋಲನಗಳಲ್ಲಿ ಅವರ ಅನುಭವ ತುಂಬಾ ಹೆಚ್ಚಿದೆ.
ಇದು ಪ್ರೊ. ನಂಜುಡಸ್ವಾಮಿ ಅವರ ಕರ್ಮಭೂಮಿ. ಇಲ್ಲಿಯೂ ಹಸಿರು ಶಾಲು ಹಾಕಿರುವ ಸಂಘಟನೆಗಳ ರೈತರು ನಿಮಗೆ ಕಾಣಸಿಗುತ್ತಾರೆ. ಶಿವಮೊಗ್ಗದಲ್ಲಿ ನಾನು ನೋಡಿದಂತೆ, ತುಂಬಾ ಪ್ರಭಾವಶಾಲಿಯಾದ, ಅತೀ ದೊಡ್ಡ ಮತ್ತು ಅತ್ಯಂತ ಪರಿಣಾಮಕಾರಿಯಾದ ಸಭೆ ನಡೆಯಿತು. ನನಗೆ ಅನ್ನಿಸುತ್ತದೆ, ಹದಿನೈದು ಸಾವಿರಕ್ಕಿಂತ ಕಡಿಮೆ ಜನರು ಇರಲಿಕ್ಕಿಲ್ಲ. ಶಿಸ್ತಿನಿಂದ ಇದ್ದರು. ಅಲ್ಲಿನ ಜನರ ಭಾಗವಹಿಸುವಿಕೆ ಹಾಗೂ ಅವರ ಉತ್ಸಾಹವನ್ನು ನೋಡಿದರೆ, ಇಲ್ಲಿಯೂ ಒಂದು ದೊಡ್ಡ ಆಂದೋಲನಕ್ಕೆ ಸಿದ್ದರಾಗುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿ ಮೂಡಿದೆ.
ಪ್ರಶ್ನೆ:ರೈತ ಆಂದೋಲನ ಆರಂಭವಾದಾಗ, ಸರ್ಕಾರವು ನಿಮ್ಮ ಜತೆ ಮಾತುಕತೆಯನ್ನು ನಡೆಸಲು ಪ್ರಯತ್ನಿಸಿತ್ತು. 11 ಸುತ್ತುಗಳ ಮಾತುಕತೆಯೂ ನಡೆದಿದೆ. ಆದರೆ, ಯಾವುದೇ ಫಲಿತಾಂಶ ದೊರಕಿಲ್ಲ. ಈಗ ಸಂಪೂರ್ಣ ಸರ್ಕಾರ ಪಂಚ ರಾಜ್ಯಗಳ ಚುನಾವಣೆಯಲ್ಲಿ ನಿರತವಾಗಿದೆ. ಪ್ರಧಾನಿಯಿಂದ ಹಿಡಿದು ಕಟ್ಟಕಡೇಯ ಬಿಜೆಪಿ ನಾಯಕರು ಕೂಡಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ನೀವು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದ್ದೀರಾ? ಸಂಯುಕ್ತ ಕಿಸಾನ್ ಮೋರ್ಚಾದಿಂದ, ಅಥವಾ ನಿಮ್ಮ ನಡುವಿನ ಅಂತರ ಹೆಚ್ಚಾಗುತ್ತಿದೆಯೇ?
ನಾನು ಒಂದು ವಾಸ್ತವವನ್ನು ನಿಮಗೆ ತಿಳಿಸುತ್ತೇನೆ. ಈ ಆಂದೋಲನ ಆರಂಭವಾಗಿದ್ದು ಪಂಜಾಬ್ನ ಎ ಐ ಕೆ ಎಸ್ ಸಿ ಸಿ ಸಂಘಟನೆಯಿಂದ. ಇದು ಆರಂಭವಾದ ನಂತರ, ಪಂಜಾಬ್ನ ಉಳಿದ 21-22 ಸಂಘಟನೆಗಳಿದ್ದವು, ಅವರನ್ನೂ ಜತೆಯಲ್ಲಿ ಸೇರಿಸಿಕೊಂಡೆವು. ಸಪ್ಟೆಂಬರ್ ವೇಳೆಗೆ ಇದು ದೊಡ್ಡ ಆಂದೋಲನದ ರೂಪ ಪಡೆಯಿತು. ಪಂಜಾಬ್ನ ಎಲ್ಲಾ ಶಾಸಕರು ಹಾಗೂ ಸಂಸದರ ಮನೆಗಳಿಗೆ ದೊಡ್ಡ ದೊಡ್ಡ ಟ್ರಾಕ್ಟರ್ಗಳಲ್ಲಿ ತೆರಳಿ ಮಾತುಕತೆ ನಡೆಸಲಾಯಿತು. ಮೂರು ಕಾನೂನುಗಳನ್ನು ವಿರೋಧಿಸಿ, ಎಂಎಸ್ಪಿ ಗಾಗಿ ರೈತರೊಂದಿಗೆ ಕೈಜೋಡಿಸಿ ಇಲ್ಲವಾದರೆ, ನಿಮಗೆ ನಮ್ಮ ಗ್ರಾಮವನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದ್ದೆವು. ರೈತ ಸಂಘಟನೆಗಳು ಗ್ರಾಮದ ಆಸುಪಾಸಿನಲ್ಲಿ ಧರಣಿಯನ್ನು ಕೂಡಾ ಆರಂಭಿಸಿದವು. ಯಾರಾದರೂ, ಶಾಸಕರು, ಸಂದರು ಬಂದರೆ ಅವರನ್ನು ಒಳಗೆ ಹೋಗಲು ಬಿಡಲಿಲ್ಲ. ನಂತರ 25 ಸೆಪ್ಟೆಂಬರ್ನಂದು ಬೃಹತ್ ಬಂದ್ ನಡೆಯಿತು.
ಇದರ ನಂತರ 1 ಅಕ್ಟೋಬರ್ನಂದು ಸಂಪೂರ್ಣ ಪಂಜಾಬ್ ಅನ್ನು ಸೀಲ್ ಮಾಡಲಾಯಿತು. ರೈಲ್ವೇ ಸೇವೆ ಬಂದ್ ಮಾಡಿದ್ವಿ, ರಿಲಾಯನ್ಸ್ ಪೆಟ್ರೋಲ್ ಪಂಪ್, ಮಾಲ್ಗಳನ್ನು ಬಂದ್ ಮಾಡಿದ್ವಿ. ಅದಾನಿ ಸ್ಟೋರ್ಗಳನ್ನು ಬಂದ್ ಮಾಡಿದ್ವಿ. ಅವುಗಳು ಇವತ್ತಿಗೂ ಮುಚ್ಚಿಯೇ ಇವೆ. ಎಲ್ಲಾ ಟೋಲ್ಗಳಲ್ಲಿ ಕಲೆಕ್ಷನ್ ನಿಲ್ಲಿಸಲಾಯಿತು. ಇವತ್ತಿಗೂ ಪಂಜಾಬ್ನ ಟೋಲ್ಗಳಲ್ಲಿ ಟಿಕೆಟ್ ಇಲ್ಲ. ಈ ಆಂದೋಲನಕ್ಕೆ ಹೆದರಿ ಕೇಂದ್ರ ಸರ್ಕಾರ ಮೊದಲ ಬಾರಿ, ಯಾವಾಗ ಅಲ್ಲಿ ಡೀಸೆಲ್, ವಿದ್ಯುತ್ ಕೊರತೆ ಉಂಟಾಯಿತು, ಜಮ್ಮು ಕಾಶ್ಮೀರದಲ್ಲಿ ಸೇನೆಗೆ ಸರಕು ಸಾಗಾಣೆ ಕಡಿಮೆಯಾಯಿತು, ಆ ನಂತರ 8ನೇ ಅಕ್ಟೋಬರ್ ನಂದು ಮೊದಲ ಬಾರಿಗೆ ಮಾತುಕತೆಗೆ ಸರ್ಕಾರ ನಮ್ಮನ್ನು ಕರೆಯಿತು. ನಾವು ಹೋಗಿದ್ದೆವು, ಆದರೆ ಆ ಸಭೆಯನ್ನು ನಾವು ತಿರಸ್ಕರಿಸಿದೆವು.
ಪ್ರಧಾನ ಕಾರ್ಯದರ್ಶಿ ಹೇಳಿದರು, ಈ ಕಾನೂನುಗಳು ಯಾವ ರೀತಿ ರೈತ ಪರವಾಗಿದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಅದರ ನಂತರ ಒಂದರ ಮೇಲೊಂದರಂತೆ ಸಭೆಗಳು ನಡೆದವು. ನಾವು ಹೋರಾಟ ಮುಂದುವರೆಸಿದೆವು. ಪಂಜಾಬ್ನಲ್ಲಿ ನಡೆಯುತ್ತಿದ್ದ ಹೋರಾಟ ದೀಪಾವಳಿಯಂದು ನವೆಂಬರ್ 13ರಂದು ನಮ್ಮೊಂದಿಗೆ ಮಾತುಕತೆ ನಡೆಸುತ್ತಿದ್ದ ಮಂತ್ರಿ ತಮ್ಮ ಮಾತ ಮುರಿದ ಕಾರಣಕ್ಕೆ 26 ನವೆಂಬರ್ನಂದು ನಾವು ದೆಹಲಿಗೆ ಹೋದೆವು. ಅಲ್ಲಿ ಹೋದ ನಂತರವೂ, ಮುಂದಿನ ಹಂತದ ಮಾತುಕತೆಗಳು ನಡೆದವು. ಅಲ್ಲಿಯೂ ಕೂಡಾ ಸರ್ಕಾರ, ಈ ಮೂರು ಕಾನೂನುಗಳ ಕುರಿತು ಸಂಶೋಧನೆ ಮಾಡಿ, ಮುಂದಿನ ಒಂದೂವರೆ ವರ್ಷಗಳಿಗೆ ನಾವು ಈ ಕಾನೂನುಗಳನ್ನು ತಡೆಯುತ್ತೇವೆ, ಎಂದಿತು. ಅದನ್ನು ನಮ್ಮ ರೈತ ಸಂಘಟನೆಗಳು ಒಪ್ಪಿಲ್ಲ. ಆ ಹೊತ್ತಿಗೆ ನಮ್ಮ ಆಂದೋಲನ ಸಾಕಷ್ಟು ಹಬ್ಬಿತ್ತು. ಹರಿಯಾಣ ಜತೆ ಸೇರಿತ್ತು, ಉ.ಪ್ರ. ಬಂದಿತ್ತು. ಟಿಕಾಯತ್, ಗುಲ್ನಾಮ್, ಮಹಾರಾಷ್ಟ್ರ, ಮಧ್ಯಪ್ರದೇಶದ ರೈತ ಸಂಘಟನೆಗಳು ಸೇರಿ ಸಂಯುಕ್ತ ಕಿಸಾನ್ ಮೋರ್ಚಾ ರೂಪುಗೊಂಡಿತು.
ಅದರ ಅಂತಿಮ ರೂಪ ದೆಹಲಿ ಗಡಿಗೆ ಬಂದ ನಂತರ, 475ಕ್ಕೂ ಹೆಚ್ಚು ಸಂಘಟನೆಗಳಿದ್ದವು ಆಗ. ಹತ್ತು ದಿನಗಳ ಹಿಂದೆ ಟಿಕಾಯತ್ ಅವರ ಸಂಘಟನೆಯೂ ಇದರ ಜತೆ ಸೇರಿದೆ. ಇದರಿಂದ ಇನ್ನಷ್ಟು ಬಲ ಬಂದಿದೆ. ಬಿಜೆಪಿಯ ಎಲ್ಲರೂ ಈಗ ಚುನಾವಣೆಯಲ್ಲಿದ್ದಾರೆ. ಆದರೆ, ನಾನು ಏನು ಹೇಳಲು ಬಯಸುತ್ತೇನೆಂದರೆ, ಮಾತುಕತೆ ನಡೆಸಲು ನಮ್ಮಿಂದ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. 22 ಜನವರಿಯಂದು ನಡೆದ ಮಾತುಕತೆಯಲ್ಲಿ ನಾವು ಸ್ಪಷ್ಟವಾಗಿ ಅವರ ಪ್ರಸ್ತಾಪವನ್ನು ನಾವು ತಿರಸ್ಕರಿಸಿದ್ದೆವು. ಹೊಸ ಪ್ರಸ್ತಾಪದೊಂದಿಗೆ ಅವರು ಬರಬೇಕಿದೆ. ಯಾವಗ ಅವರು ಕರೆಯುತ್ತಾರೆ ಅವಾಗ ನಾವು ಹೋಗುತ್ತೇವೆ. ಇದರ ನಡುವೆ ನಮ್ಮ ಹೋರಾಟ ನಡೆಯುತ್ತಲೇ ಇದೆ. ಹೋರಾಟ ಸಂಪೂರ್ಣ ದೇಶಕ್ಕೆ ಹಬ್ಬಿದೆ. ನೀವೇ ನೋಡಿ ಕರ್ನಾಟಕದಲ್ಲಿ ಇನ್ನೂ ರ್ಯಾಲಿಗಲು ನಡೆಯುತ್ತವೆ. ಮಧ್ಯಪ್ರದೇಶ ಸೇರಿದಂತೆ ಸಂಪೂರ್ಣ ದೇಶದಲ್ಲಿ ಬೃಹತ್ ಸಮ್ಮೇಳನ ನಡೆಯುತ್ತವೆ. ಈ ಎರಡು ವಿಚಾರಗಳ ಕುರಿತ ಹೋರಾಟ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಸಂಪೂರ್ಣ ದೇಶದಲ್ಲಿ ನಡೆಯುತ್ತಿದೆ. ದೆಹಲಿ ಗಡಿಯಲ್ಲಿನ ಸಂಘರ್ಷ ಇನ್ನೂ ಜಾರಿಯಲ್ಲಿದೆ, ದೇಶದ ಇತರೆಡೆಗಳಲ್ಲಿಯೂ ಇದು ನಡೆಯುತ್ತಿದೆ.
ಪ್ರಶ್ನೆ:ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ವಿರುದ್ದ ವೋಟ್ ಕಿ ಚೋಟ್ ಅಭಿಯಾನ ಸಂಯುಕ್ತ ಕಿಸಾನ್ ಮೋರ್ಚಾ ಆರಂಭಿಸಿತ್ತು. ಪಶ್ಚಿಮ ಬಂಗಾಳಕ್ಕೆ ನಿಮ್ಮ ಒಂದು ತಂಡವೂ ಭೇಟಿ ಕೊಟ್ಟಿತ್ತು. ಆ ಅಭಿಯಾನ ಯಾವ ರೀತಿ ನಡೆಯುತ್ತಿದೆ? ಎಷ್ಟು ಕ್ಷೇತ್ರಗಳಲ್ಲಿ ನೀವು ಈಗ ಪ್ರಚಾರ ನಡೆಸಿದ್ದೀರಾ?
ಸಂಯುಕ್ತ ಕಿಸಾನ್ ಮೋರ್ಚಾದಿಂದ ವೋಟ್ ಕಿ ಚೋಟ್, ಬಿಜೆಪಿ ಕೊ ಸಜಾ ದೋ, ನೋ ವೋಟ್ ಟು ಬಿಜೆಪಿ ಹೀಗೆ ಮುಂತಾದ ಹೆಸರಿನಲ್ಲಿ ಅಭಿಯಾನ ಆರಂಭಿಸಲಾಗಿದೆ. ನಾವು ಒಂದು ಪತ್ರ ತಯಾರಿಸಿದೆವು. ಅದನ್ನು ಐದು ರಾಜ್ಯಗಳಿಗೂ ಕಳುಹಿಸಿಕೊಟ್ಟಿದ್ದೇವೆ. ದಕ್ಷಿಣದ ಮೂರು ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಪುದುಚೆರಿಯಲ್ಲಿ ಅಭಿಯಾನ ನಡೆಸುವ ಅಗತ್ಯವಿಲ್ಲ. ಅದು ವ್ಯರ್ಥ. ಪಶ್ಚಿಮ ಬಂಗಾಲಕ್ಕೆ 20 ಜನರ ತಂಡ ಹೋಗಿದೆ. 4-5 ದಿನ ಅಭಿಯಾನ ನಡೆಯಿತು. ಅಲ್ಲಿ ನಾವು ಇದೇ ಘೋಷಣೆಗಳನ್ನು ನೀಡಿದೆವು, ಬಿಜೆಪಿಗೆ ಶಿಕ್ಷೆ ನೀಡಿ. ನಿಮಗೆ ಯಾರಿಗೆ ಬೇಕು ಅವರಿಗೆ ಮತ ನೀಡಿ. ಆದರೆ, ಬಿಜೆಪಿಗೆ ಶಿಕ್ಷೆ ನೀಡಿ. ಇದೇ ರೀತಿ ಅಸ್ಸಾಂನಲ್ಲಿಯೂ ನಾವು ಕೆಲವು ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಮೊದಲ ಸುತ್ತಿನ ಚುನಾವಣೆಯ ನಂತರ ಯಾರು ಯಾರು ಎಲ್ಲಿಗೆ ಹೋಗಬೇಕು ಎಂಬ ಕುರಿತು ನಾವು ಆಲೋಚನೆ ನಡೆಸುತ್ತೇವೆ. ಅಲ್ಲಿನ ರೈತ ಸಂಘಟನೆಯಾದ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಸಮಿತಿಯು ಸಂಯುಕ್ತ ಕಿಸಾನ್ ಮೋರ್ಚಾಕ್ಕೆ ಮಾಹಿತಿಯನ್ನು ನೀಡಲಿದೆ. ಅದರ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗ ಮೊದಲ ಸುತ್ತಿನ ಅಭಿಯಾನ ಕೊನೆಗೊಂಡಿದೆ.
ಪ್ರಶ್ನೆ: ನಿಮಗೆ ಏನು ಅನ್ನಿಸುತ್ತದೆ? ಇದರಿಂದ ಬಿಜೆಪಿಗೆ ಎಷ್ಟು ನಷ್ಟವಾಗಬಹುದು?
ಅದು ಮೇ 2ರಂದು ತಿಳಿಯುತ್ತದೆ. ದೂರದಿಂದ ಕುಳಿತು ಇದನ್ನು ಅಂದಾಜಿಸುವುದು ಸುಲಭವಲ್ಲ. ನಮ್ಮ ಕಡೆಯಿಂದ ಬಿಜೆಪಿಗೆ ಪೆಟ್ಟಾಗಲಿ ಎಂದು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಏಕೆಂದರೆ, ಈ ಕಾನೂನುಗಳು ಜಾರಿಗೆ ಬಂದಾಗಲೇ ಎಐಕೆಎಸ್ಎಸ್ ವತಿಯಿಂದ ದೇಶದ ಎಲ್ಲಾ ಬಿಜೆಪಿ ಶಾಸಕ ಹಾಗೂ ಸಂಸದರ ಮನೆಯ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು. ಕೆಲವು ಕಡೆ ಹೆಚ್ಚಾಯಿತು ಕೆಲವು ಕಡೆ ಕಡಿಮೆಯಾಯಿತು. ಪಂಜಾಬ್ನಲ್ಲಿ ಹೆಚ್ಚಿನ ಮಟ್ಟದಲ್ಲಿ ಆಯಿತು. ಹರಿಯಾಣದಲ್ಲಿ ಈಗ ಪ್ರತಿಭಟನೆ ನಡೆಯುತ್ತಿದೆ. ಹರಿಯಾಣದಲ್ಲಿ ಬಿಜೆಪಿ ಶಾಸಕ ಹಾಗೂ ಸಂಸದರಿಗೆ ಒಂದೂ ಸಭೆ ನಡೆಸಲು ಅವಕಾಶ ಕೊಟ್ಟಿಲ್ಲ. ಇದರ ಮುಂದುವರೆದ ಭಾಗವಾಗಿ ಚುನಾವಣೆಯಲ್ಲಿ ಬಿಜೆಪಿಗೆ ಹೊಡೆತ ಬೀಳುವ ರೀತಿಯಲ್ಲಿ ಯೋಜನೆ ರೂಪಿಸಿದೆವು. ಇದರಿಂದ ಬಿಜೆಪಿಗೆ ಸ್ವಲ್ಪ ನೋವುಂಟಾಗುತ್ತದೆ. ಈಗಾಗಲೇ ನೋವು ಇದೆ. ಇದನ್ನು ಇನ್ನಷ್ಟು ಎಳೆಯುವ ಪ್ರಯತ್ನ. ಇದರಿಂದಾಗಿ ಬಿಜೆಪಿ ಒತ್ತಡಕ್ಕೆ ಸಿಲುಕಿ ನಮ್ಮ ಸಮಸ್ಯೆಗಳ ಕುರಿತು ಗಮನ ಹರಿಸುತ್ತದೆ ಎಂಬ ವಿಶ್ವಾಸವಿದೆ.
ಪ್ರಶ್ನೆ:ಈಗ ರೈತ ಆಂದೋಲನದ ಕಿಚ್ಚು ಸಂಪೂರ್ಣ ದೇಶದಲ್ಲಿ ಹಬ್ಬುತ್ತಿದೆ. ಇದನ್ನು ಇನ್ನೂ ಬಲಿಷ್ಟವಾಗಿ ಬೆಳೆಸಬೇಕಾದ ಅಗತ್ಯವಿದೆ. ಇದಕ್ಕಾಗಿ ಸಂಯುಕ್ತ ಕಿಸಾನ್ ಮೋರ್ಚಾ ಏನು ಮಾಡುತ್ತಿದೆ?
ನಾನು ನಿಮಗೆ ಹೇಳಲು ಬಯಸುತ್ತೇನೆ, ಸಂಯುಕ್ತ ಕಿಸಾನ್ ಮೋರ್ಚಾದಲ್ಲಿ ವೈಯಕ್ತಿಕ ಸಂಘಟನೆಗಳೂ ಭಾಗಿಯಾಗಿವೆ. ಹೀಗೆಯೇ ಕೆಲವು ಮೋರ್ಚಾಗಳು, ಎಐಕೆಎಸ್ಎಸ್ ಅಡಿಯಲ್ಲಿ 250 ಸಂಘಟನೆಗಳಿವೆ. ಕಿಸಾನ್ ಮಹಾಸಂಘ್ನಲ್ಲಿ 125 ಸಂಘಟನೆಗಳಿವೆ. ಇತ್ತೀಚಿಗೆ ಸೇರ್ಪಡೆಯಾದ ಟಿಕಾಯತ್ ಅವರ ಸಂಘದಲ್ಲೂ ನೂರಾರು ಸಂಘಟನೆಗಳಿವೆ. ಕರ್ನಾಟಕದ ಚುಕ್ಕಿ ಅವರು ಕೂಡಾ ಟಿಕಾಯತ್ ಅವರೊಂದಿಗಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ಸಂಘರ್ಷ್ ಸಮಿತಿಯಲ್ಲಿ ಇದ್ದಾರೆ. ಕಬ್ಬು ಬೆಳೆಗಾರರು ಮಹಾಸಂಘದಲ್ಲಿ ಇದ್ದಾರೆ. ಈಗ ನಾವು ಏನು ಪ್ರಯತ್ನ ಪಡುತ್ತಿದ್ದೇವೆ ಎಂದರೆ, ಅಖಿಲ ಭಾರತ ಮಟ್ಟದಲ್ಲಿ ನಾವು ಒಂದಾಗಿದ್ದೇವೆ ಹಾಗೆಯೇ, ರಾಜ್ಯಗಳಲ್ಲಿ ಇರುವ ರೈತ ಸಂಘಟನೆಗಳನ್ನೂ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ. ಏನೇ ಯೋಜನೆ ಇದ್ದರೂ ಅದನ್ನು ಒಂದಾಗಿ ಜಾರಿಗೊಳಿಸಬೇಕು.
ಇತಿಹಾಸ ನೋಡಿದರೆ, ರೈತ ಸಂಘಟನೆಗಳು ದೂರ ದೂರ ಇವೆ. ಕಾರಣ ಏನೇ ಇರಲಿ. ನೀವು ಕರ್ನಾಟಕದಲ್ಲಿದ್ದೀರಾ ಅಂದ್ರೆ ನಿಮಗೆ ಗೊತ್ತಿರುತ್ತದೆ. ಸಂಯುಕ್ತ ಕಿಸಾನ್ ಮೋರ್ಚಾ ಈ ಸಂಘಟನೆಗಳನ್ನು ಜತರಗೂಡಿಸುವ ಕೆಲಸ ಮಾಡುತ್ತಿದೆ. ಸಿಂಘು ಗಡಿಯಲ್ಲಿರುವ ರಾಷ್ಟ್ರೀಯ ನಾಯಕತ್ವದ ಜವಾಬ್ದಾರಿ ಏನೆಂದರೆ, ಈ ಆಂದೋಲನವನ್ನು ಬಹಳ ದೂರ ಕೊಂಡೊಯ್ಯುವ ಇರಾದೆ ಇದ್ದರೆ, ರಾಷ್ಟ್ರಮಟ್ಟದಲ್ಲಿ ಒಗ್ಗೂಡಿದ ಹಾಗೇ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿಯೂ ರೈತ ಸಂಘಟನೆಗಳನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಈ ರಚನಾತ್ಮಕ ಮಾತುಕತೆಯನ್ನು ನಾವು ಕರ್ನಾಟಕ, ತೆಲಂಗಾಣ, ಆಂಧ್ರದಲ್ಲಿ ಮಾಡಿದ್ದೇವೆ. ಕರ್ನಾಟಕದ ನಾಯಕರೊಂದಿಗೆ ಮಾತನಾಡಿದ್ದೇವೆ ಕೂಡಾ.
ನಮ್ಮ ಪ್ರಮುಖ ಎರಡು ವಿಚಾರಗಳೇನಿವೆ, ಅದನ್ನು ಜನರಿಗೆ ಮನದಟ್ಟು ಮಾಡುವ ಕೆಲಸವಾಗಬೇಕು. ಏಕೆಂದರೆ, ಹಲವು ಜನರಿಗೆ ಇನ್ನೂ ನೈಜ ವಿಚಾರಗಲು ತಿಳಿದಿಲ್ಲ. ಎಂಎಸ್ಪಿಯ ಹೊರತಾಗಿ ಕೃಷಿ ಕಾನೂನುಗಲ ಕುರಿತು ಕರ್ನಾಟಕ ತಮಿಳುನಾಡಿನಲ್ಲಿ ಅಷ್ಟು ತೀವ್ರತೆ ಇಲ್ಲ. ಎಲ್ಲರಿಗೂ ಎಂಎಸ್ಪಿ ಸಿಗಬೇಕು, ಎಲ್ಲರಿಗೂ ಮಾರುಕಟ್ಟೆ ಸಿಗಬೇಕು ಅದರೊಂದಿಗೆ ಈ ಮೂರೂ ಕಾನೂನುಗಳು ರದ್ದಾಗಬೇಕು. ಆಗ ರೈತರಲ್ಲಿ ಅರಿವು ಮೂಡುತ್ತದೆ. ಈಗ ಎಲ್ಲಿ ಹೋರಾಟ ಕಡಿಮೆ ಇದೆ ಅಲ್ಲಿಯೂ ನಾವು ಪ್ರಯತ್ನ ಪಡುತ್ತಿದೇವೆ.
ಪ್ರಶ್ನೆ: ಎಲ್ಲೆಡೆಯಿಂದ ಕೇಳಿ ಬರುತ್ತಿರುವ ಮಾತು ಏನೆಂದರೆ, ಮಹಾಪಂಚಾಯತ್ಗಳಲ್ಲಿ ಕೃಷಿ ಕಾನೂನು ಮತ್ತು ಎಂಎಸ್ಪಿ ಕುರಿತಾಗಿ ಮಾತ್ರ ಮಾತನಾಡಲಾಗುತ್ತಿದೆ. ರೈತರ ಸ್ಥಳೀಯ ಸಮಸ್ಯೆಗಳ ಕುರಿತು ಮಾತನಾಡುತ್ತಿಲ್ಲ. ನಿರುದ್ಯೋಗ, ಬೆಲೆ ಏರಿಕೆ ಕುರಿತು ಏಕೆ ಮಾತನಾಡುತ್ತಿಲ್ಲ?
ನಿಮಗೆ ನೆನಪಿರಬಹುದು, ಮಾರ್ಚ್ 15ಕ್ಕೆ ನಾವು ಕರೆ ಕೊಟ್ಟಿದ್ದೆವು, ಅದರಲ್ಲಿ ನಿರುದ್ಯೋಗ, ತೈಲ ಬೆಲೆ ಏರಿಕೆ ಕುರಿತು ದೇಶಾದ್ಯಂತ ನಾವು ಬೇಡಿಕೆ ಪತ್ರವನ್ನು ಕಳುಹಿಸಿಕೊಟ್ಟಿದ್ದೆವು. ಅದನ್ನು ಪ್ರಧಾನಿಯವರಿಗೆ ಸಂಭೋಧಿಸಿ ಬರೆಯಲಾಗಿತ್ತು. ಜಿಲ್ಲಾಧಿಕಾರಿಗಳ ಮುಖಾಂತರ ಇದನ್ನು ಕಳುಹಿಸಿಕೊಡಲಾಗಿತ್ತು. ಇದು ಒಂದು. ಎರಡನೇಯದು, ನೀವು ಹೇಳುತ್ತಿರುವುದು ಕೂಡಾ ಸರಿ, ಇನ್ನೂ ಹಲವು ಸಮಸ್ಯೆಗಳಿವೆ. ಆದರೆ, ಅವುಗಳನ್ನು ನಾವು ನಮ್ಮ ಬೇಡಿಕೆ ಪಟ್ಟಿಗೆ ಸೇರಿಸಿದರೆ, ಕೆಲವರು ಅದನ್ನು ನೋಡಿ ನಗಬಹುದು. ಇವರು ಒಂದರ ಮೇಲೆ ಒಂದರಂತೆ ಬೇಡಿಕೆ ಹೆಚ್ಚಿಸುತ್ತಿದ್ದಾರೆ ಎಂದು. ಕಾರ್ಮಿಕರ ಕುರಿತು ನಾಲ್ಕು ಕಾಯ್ದೆಗಳಿವೆ. ಕಾರ್ಮಿಕ ಸಂಘಟನೆಗಳು ಕೂಡಾ ಕೆಲವೊಮ್ಮೆ ಹೇಳುತ್ತವೆ, ಕಾರ್ಮಿಕ ಹಾಗೂ ರೈತ ಕಾನೂನುಗಳನ್ನು ಜತೆಯಲ್ಲಿಯೇ ವಿರೋಧಿಸೋಣ ಎಂದು.
ಅದನ್ನು ಒಂದೇ ದಾರಿಯಲ್ಲಿ ತರಬಹುದು ಆದರೆ, ನಿರಂತರವಾಗಿ ಹೋರಾಟ ನಡೆಸಲು ಕೆಲವೊಂದು ಸಮಸ್ಯೆಗಳಿವೆ. ಅವುಗಳ ಪರಿಹಾರವನ್ನು ನಾಯಕರು ಕಂಡುಕೊಳ್ಳುತ್ತಾರೆ. ಕೆಲವೊಂದು ದಕ್ಷಿಣ ಭಾರತದ ತಮಿಳು ನಾಡು, ಕರ್ನಾಟಕ ರಾಜ್ಯಗಳಿಗೆ ಸೀಮಿತವಾಗಿರುವ ವಿಚಾರಗಳಿವೆ. ನೀವು ಹೇಳಿದ ಹಾಗೆ, ನಿರುದ್ಯೋಗ, ಬೆಲೆ ಏರಿಕೆ ಇವೆಲ್ಲಾ ಸಂಪೂರ್ಣ ದೇಶವನ್ನು ಭಾದಿಸುವಂತ ವಿಚಾರಗಳು. ಆದರೂ, ಕರ್ನಾಟಕದ ರೈತರ ಕೆಲವೊಂದು ಸಮಸ್ಯೆಗಳು ಇರಬಹುದು. ಭು ಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆಯಂತವು, ನಾನು ವೈಯಕ್ತಿಕವಾಗಿ ಹೇಳುತ್ತಿದ್ದೇನೆ, ಎಲ್ಲಾ ರಾಜ್ಯಗಳ ರೈತರಿಗೂ ಕೂಡ ಅಲ್ಲಿನ ಸ್ಥಳೀಯ ಸಮಸ್ಯೆಗಳ ಕುರಿತು ದನಿ ಎತ್ತಲು ಹಕ್ಕಿದೆ.
ಸ್ಥಳೀಯವಾಗಿ ಹೋರಾಟ ನಡೆಸಬೇಕಾದಲ್ಲಿ, ಎಸ್ಕೆಎಂನ ನಾಯಕತ್ವವನ್ನು ಅವರು ಭೇಟಿಯಾಗಬಹುದು. ಏಕೆಂದರೆ, ಈ ಹೋರಾಟ ಎಷ್ಟು ದಿನ ನಡೆಯುತ್ತದೆ ಎಂಬುದು ಹೇಳುವುದು ಕಷ್ಟ. ಹೀಗಿರುವಾಗ, ಕರ್ನಾಟಕದ ರೈತರಿಗೆ ಯಾವುದಾದರೂ ತುರ್ತು ಸಮಸ್ಯೆ ಒದಗಿ ಬಂದರೆ, ನಾವು ಈ ಕುರಿತಾಗಿ ಹೋರಾಟ ಮಾಡಬೇಕು, ಮಾತನಾಡಬೇಕು ಎಂದು ಕರ್ನಾಟಕದ ರೈತರು ಇಚ್ಚಿಸಿದ್ದಲ್ಲಿ, ಅವರಿಗೆ ಆ ಹೋರಾಟವನ್ನು ಮುಂದುವರೆಸಲು ಹಕ್ಕು ಇರಬೇಕು. ಸ್ಥಳೀಯವಾಗಿ ರೈತರು ಕ್ರೋಢಿಸಿಕೊಳ್ಳುವ ಶಕ್ತಿ ಎಸ್ಕೆಎಂನ ಶಕ್ತಿಯಾಗುತ್ತದೆ. ನೀವು ಅವರಿಗೆ ಅಲ್ಲಿ ಹೋರಾಟ ಮಾಡಲು ಬಿಡುವುದಿಲ್ಲವಾದರೆ, ಶಕ್ತಿ ರೂಪುಗೊಳ್ಳುವುದಿಲ್ಲ. ನೀವು ಸರಿಯಾಗಿ ಹೇಳುತ್ತಿದ್ದೀರಾ.
ಪ್ರಶ್ನೆ:ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯವರು ಪ್ರಚಾರ ಮಾಡುವಾಗ ಹೇಳಿದ್ದಾರೆ, ಈ ದೇಶದಲ್ಲಿ ರೈತರ ಪರಿಸ್ಥಿತಿಯನ್ನು ಸುಧಾರಿಸುವ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ, ರೈತರಿಗಾಗಿ ಪ್ರಗತಿಪರ ಯೋಜನೆಗಳನ್ನು ರೂಪಿಸುವ ಪಕ್ಷ ಬಿಜೆಪಿ ಮಾತ್ರ ಎಂದು. ಇದಕ್ಕೆ ನಿಮ್ಮ ಉತ್ತರ ಏನು?
ನಾನು ನಿಮಗೆ ಒಂದು ಮಾತು ಹೇಳುತ್ತೇನೆ, ಈ ಮೂರು ಕಾಯ್ದೆಗಳು ಎಲ್ಲಿ ಜಾರಿಯಾಗಿವೆ ಮಧ್ಯಪ್ರದೇಶದ ಮಾರುಕಟ್ಟೆಗಳಲ್ಲಿ ಧಾನ್ಯ ಸಂಗ್ರಹ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಜನರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಯಾವ ಉದ್ಯಮಿಗಳು ಗದ್ದೆಯಿಂದಲೇ ಬೆಳೆಯನ್ನು ಖರೀದಿಸಿದರು, ಅವರು ಈಗ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಮೋದಿಯವರು ಒಳ್ಳೆಯದೇ ಮಾಡುತ್ತಿದ್ದಾರೆ ಎಂದಾದರೆ, ರೈತರಿಗೆ ಎಂಎಸ್ಪಿ ಏಕೆ ಕೊಡುತ್ತಿಲ್ಲ? ಸಿ2+50% ನೀಡಲು ಹಿಂದೇಟು ಏಕೆ? ಅವರು ತುಂಬಾ ಮಾತನಾಡುತ್ತಾರೆ. ಒಂದು ರಾಷ್ಟ್ರ, ಒಂದು ರಾಷ್ಟ್ರ… ಒಂದು ರಾಷ್ಟ್ರ ಒಂದು ಮಾರುಕಟ್ಟೆ ನೀತಿಯನ್ನು ಎರಡು ಮಾರುಕಟ್ಟೆಯಾಗಿ ಏಕೆ ಮಾಡುತ್ತಿದ್ದಾರೆ? ಒಂದು ರಾಜ್ಯದಲ್ಲಿ ಭತ್ತಕ್ಕೆ 1900 ರೂ. ಸಿಗುತ್ತಿದ್ದರೆ ಇನ್ನೊಂದರಲ್ಲಿ 1000 ಮಾತ್ರ ಏಕೆ ಸಿಗುತ್ತಿದೆ? ಒಂದು ರಾಷ್ಟ್ರ ಒಂದು ಬೆಲೆ ಏಕೆ ಸಿಗುತ್ತಿಲ್ಲ? ಚುನಾವಣೆಯಲ್ಲಿ ಮಾತನಾಡುವುದು ತುಂಬಾ ಸುಲಭ. ಅವರು ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಹೊಂದಿದ್ದರೆ, ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲಬೇಕಿತ್ತು.
ಇಷ್ಟರಲ್ಲಿ ರೈತ ಆಂದೋಲನ ಮುಗಿದುಹೋಗುತ್ತಿತ್ತು. ರೈತ ಮುಖಂಡರು ಮೂರ್ಖರಲ್ಲ, ಒಂದು ಡಿಗ್ರಿ ಸೆಲ್ಷಿಯಸ್ ಚಳಿಯಲ್ಲಿ ಕುಳಿತು ಪ್ರತಿಭಟಿಸಲು. ಮಳೆಯಿಂದ ಜನರು ಸಾವನ್ನಪ್ಪಿದ್ದಾರೆ. ನ್ಯಮೋನಿಯಾದಿಂದ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಈ ಪ್ರಕೋಪಗಳನ್ನು ಸಹಿಸುವಷ್ಟು ಅಸಾಹಯಕ ಪರಿಸ್ಥಿತಿಗೆ ಮೋದಿಯವರು ತಳ್ಳಿದ್ದಾರೆ. ಇವರಿಗಿಂತ ಕ್ರೂರ ವ್ಯಕ್ತಿ ಇನ್ನೊಬ್ಬ ಯಾರು ಇರಲು ಸಾಧ್ಯ? ಈ ಮೂರು ಕಾನೂನುಗಳಿಲ್ಲದೇ ದೇಶ ನಡೆಯುತ್ತಿರಲಿಲ್ಲವೇ? ಸಂಪೂರ್ಣ ಕೃಷಿ, ಮಾರುಕಟ್ಟೆ ಎಲ್ಲವನ್ನೂ ಅಂಬಾನಿ ಅದಾನಿಗೆ ಕೊಡುವ ಆಸೆಯಲ್ಲವೇ ಇವರದ್ದು. ಇದರಲ್ಲಿ ರೈತರ ಪ್ರಗತಿ ಎಲ್ಲಿದೆ? ಮೂರೂ ಕಾನೂನುಗಳನ್ನು ಒಂದೇ ಬಾರಿಗೆ ಏಕೆ ಜಾರಿಗೆ ತಂದರು. ಕಾರ್ಪೊರೇಟ್ ಕೃಷಿ, ಕಾರ್ಪೊರೇಟ್ ಮಾರುಕಟ್ಟೆ, ಕಾರ್ಪೊರೇಟ್ ಅನ್ನು ನಿಯಂತ್ರಿಸಲು ಈ ಕಾನೂನುಗಳನ್ನು ತಂದಿದ್ದಾರೆ. ಅದಾನಿ ಮೊದಲೇ ದೊಡ್ಡ ದೊಡ್ಡ ಗೋದಾಮುಗಳ ನಿರ್ಮಾಣವನ್ನು ಮಾಡಿದ್ದರು. ಈ ಕಾನೂನು ಅವರು ಹೇಳಿದ್ದಕ್ಕಾಗಿ ಬಂದವು. ಮೊದಲೇ ಶುರು ಮಾಡಿದ್ದರು ಇವರು. ನಾನು ಏನು ಹೇಳುತ್ತೇನೆಂದರೆ, ಬಿಜೆಪಿ ಸರ್ಕಾರ ಏನಿದೆ, ಈ ಸರ್ಕಾರದಲ್ಲಿ ರೈತರ ಮಾತುಗಳನ್ನು ಕೇಳುವ ಮತ್ತು ಅರ್ಥ ಮಾಡಿಕೊಳ್ಳುವ ಜನರೇ ತುಂಬಾ ಕಡಿಮೆಯಿದ್ದಾರೆ.
ಯಾರಿದ್ದಾರೆ ಇಲ್ಲಿ? ಖರೀದಿಸುವವರು ಅದಾನಿ, ಅಂಬಾನಿ ಇಬ್ಬರು ಗುಜರಾತಿಗಳು. ಮಾರುವವರು ಮೋದಿ ಮತ್ತು ಅಮಿತ್ ಶಾ. ದೇಶವನ್ನು ಮಾರಲು ಹೊರಟಿದ್ದಾರೆ. ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಸಾರ್ವಜನಿಕ ಕ್ಷೇತ್ರದಿಂದ ಬೃಹತ್ ಸಂಸ್ಥೆಗಳನ್ನು ಮಾರುತ್ತಿದ್ದಾರೆ. ಇಲ್ಲಿ ಎಲ್ಲಿ ದೇಶದ ಪ್ರಗತಿಯಾಗುತ್ತಿದೆ? ಹೀಗೇಯೇ ರೈತರ ಪ್ರಗತಿ ಅಂತ ಕೂಡಾ ಅವರು ಹೇಳುತ್ತಾರೆ. ರೈತರನ್ನು ಕಾರ್ಪೊರೇಟ್ಗಳ ಎದುರು ತಳ್ಳುವುದು ಸಿಂಹದ ಎದುರು ಯಾರನ್ನಾದರು ತಳ್ಳಿದಂತೆ. ಇದು ಮೋದಿ ಸರ್ಕಾರ ಕಾರ್ಯವೈಖರಿ.
ನೀವು ಯೂರೋಪ್ನಲ್ಲಿ ನೋಡಬಹುದು, ರೈತರಿಗೆ ಆದಾಯ ಕೃಷಿಯಿಂದ ಸಿಗುತ್ತಿದೆ. ಯಾವ ದಿನ ಕಾಂಟ್ರಾಕ್ಟ್ ಫಾರ್ಮಿಂಗ್ ಬರುತ್ತದೆ, ಹಿಂದೆ ಕೃಷಿಯಲ್ಲಿನ ನಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ನಂತರ ನಿರುದ್ಯೋಗ, ಬಡತನದಿಂದ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ. ಒಂದಾ ಹೋರಾಡಬೇಕು ಇಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕು. ಅಂತಹ ಸಂಕಟದಿಂದ ರೈತರನ್ನು ಬದುಕಿಸಲು ಈ ಹೋರಾಟ ಮಾಡುತ್ತಿದ್ದೇವೆ. ನಾನು ಇಲ್ಲಿ ಇದನ್ನೂ ಹೇಲಲು ಇಷ್ಟ ಪಡುತ್ತೇನೆ, ಬಿಜೆಪಿಯ ನರೇಂದ್ರ ಮೋದಿ ಸರ್ಕಾರವನ್ನು ಈ ರೈತ ಆಂದೋಲನ ಒತ್ತಡದಲ್ಲಿ ಹಾಕುತ್ತದೆ. ಕಳೆದ ಹಲವು ವರ್ಷಗಳಿಂದ ಸೃಷ್ಟಿಸಲು ಸಾಧ್ಯವಾಗದ ಉದಾಹರಣೆಯನ್ನು ನಾವು ಸೃಷ್ಟಿಸುತ್ತೇವೆ.
ಮುಖ್ಯವಾಗಿ ಮೋದಿಯವರ ಆರುವರೆ ವರ್ಷಗಲ ಆಡಳಿತದಲ್ಲಿ, ಯಾವುದೇ ಹೋರಾಟವಿರಲಿ ಅದನ್ನು ದಬ್ಬಾಳಿಕೆಯಿಂದ ಮುಚ್ಚಿ ಹಾಕಿ, ಪರಿಹಾರ ನೀಡಲಿಲ್ಲ. ಈಗ ಮೊತ್ತ ಮೊದಲ ಬಾರಿಗೆ ಅವರು ಹೇಳಿದ್ದಾರೆ, ನಿಮ್ಮ ಸಮಸ್ಯೆಯನ್ನು ನಾವು ಕೇಳುತ್ತೇವೆ ಎಂದು. ಇದರ ಬಗ್ಗೆ ಸಂಶೋಧನೆ ಮಾಡುತ್ತೇವೆ, ಒಂದೂವರೆ ವರ್ಷಗಳಿಗೆ ತಡೆಯುತ್ತೇವೆ ಎಂದಿದ್ದಾರೆ. ಈ ಹಿಂದೆ ಯಾವುದೇ ಕಾನೂನು ತಂದಾಗ ಈ ರೀತಿ ಅವರು ಯೋಚಿಸಿದ್ದಾರಾ? ನನಗೆ ತಿಳಿದಿದೆ, ಈ ರೈತ ಆಂದೋಲನ ಮೋದಿ ಸರ್ಕಾರಕ್ಕೆ ಸವಾಲಾಗಿದೆ. ಸವಾಲಾಗಿ ಉಳಿಯುತ್ತದೆ. ದೇಶದ ಮೂಲೆ ಮೂಲೆಯ ರೈತರು ಈ ಆಂದೋಲನದಲ್ಲಿ ಪಾಲ್ಗೊಂಡು ಈ ಆಂದೊಲನಕ್ಕೆ ಹೊಸ ದಾರಿಯನ್ನು ನೀಡುತ್ತಾರೆ ಎಂಬ ಭರವಸೆ ನನಗಿದೆ.
ಪ್ರಶ್ನೆ:ನಿಮಗೆ ಕೊನೆಯ ಪ್ರಶ್ನೆ. ಈ ಹಿಂದೆ ಸಿಎಎ ಎನ್ಆರ್ಸಿ ಕುರಿತಾಗಿ ಪ್ರತಿಭಟನೆಗಳು ನಡೆದವು. ನಂತರ ಕೋವಿಡ್ ಕಾರಣದಿಂದ ಲಾಕ್ಡೌನ್ ಹೇರಲಾಯಿತು. ಆ ಬಳಿಕ ಪ್ರತಿಭಟನೆಗಲು ನಡೆಯಲೇ ಇಲ್ಲ. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ. ಕೋವಿಡ್ ಎರಡನೇ ಅಲೆ ಆರಂಭವಾಗಿರುವ ಕುರಿತು ವರದಿಗಳು ಬರುತ್ತಿವೆ. ಈಗ ಮತ್ತೆ ಲಾಕ್ಡೌನ್ ಆದರೆ, ರೈತ ಆಂದೋಲನದ ಕುರಿತು ಸಂಯುಕ್ತ ಕಿಸಾನ್ ಮೋರ್ಚಾದ ನಿರ್ಧಾರ ಏನಾಗಿರುತ್ತೆ?
ನೋಡಿ ನಾನೊಬ್ಬ ವೈದ್ಯ ಕೂಡಾ. ನಾನು ಕರೋನಾವನ್ನು ಬೇರೆಯವರಂತೆ ನೋಡುವುದಿಲ್ಲ. ಏಕೆಂದರೆ, ಬಹಳಷ್ಟು ಜನ ಕರೋನಾದಿಂದ ಸಾವಿಗೀಡಾದ್ದನ್ನು ನೋಡಿದ್ದೇನೆ. ಎರಡನೇಯದು ಏನೆಂದರೆ, ಕರೋನಾದಿಂದ ಜನರು ಸಾವನ್ನಪ್ಪುತ್ತಾರೆ ನಿಜ, ಆದರೆ ನನಗೆ ಏನು ಅನ್ನಿಸುತ್ತದೆ ಎಂದರೆ, ಇದರ ಬಗ್ಗೆ ಚರ್ಚೆ ಇನ್ನು ನಡೆಯಬೇಕಿದೆ, ನಾವು ಈಗ ಕ್ರಮಿಸಿರುವ ಹಾದಿಯನ್ನು ನೋಡಿದಾಗ ಕರೋನಾದ ಕಾರಣದಿಂದ ನಾವು ಇದನ್ನು ಕೈಬಿಡುತ್ತೇವೆ ಎಂದು ನನಗೆ ಅನ್ನಿಸುವುದಿಲ್ಲ.
ನಾವು ಏನು ಹೇಳುತ್ತೇವೆಂದರೆ, ಈಗಾಗಲೇ 300 ಜನರು ಹುತಾತ್ಮರಾಗಿದ್ದಾರೆ ಈ ಆಂದೋಲನದಲ್ಲಿ. ಆಂದೋಲನದಲ್ಲಿ ಕುಳಿತಿರುವ ಇನ್ನೂ ನೂರು ಜನ ಸಾವನ್ನಪ್ಪಿದರೂ ನಮಗೆ ಒಪ್ಪಿಗೆಯಿದೆ. ಏಕೆಂದರೆ, ಈ ಮೂರು ಕಾನೂನುಗಳು ಕೂಡಾ ನಮ್ಮ ಸಾವಿನ ವಾರಂಟ್ಗಳಾಗಿದೆ. ಇದರಿಂದಲೂ ನಾವು ಸಾಯುತ್ತೇವೆ. ಬಡತನದಿಂದ, ಎಂಎಸ್ಪಿ ಸಿಗದೇ ಇರುವ ಕಾರಣದಿಂದ, ಸಾಲಭಾದೆಯಿಂದ ಇವರ ದಾಖಲೆಗಳ ಪ್ರಕಾರ ನಾಲ್ಕು ಲಕ್ಷ ಜನ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಆತ್ಮಹತ್ಯೆ, ಆಂದೋಲನದಲ್ಲಿ ಸಾವು, ಈ ಕಾನೂನುಗಳ ಡೆತ್ ವಾರಂಟ್ ಈ ವಿಚಾರಗಳನ್ನು ಗಮನಿಸಿದರೆ, ನನ್ನ ಪ್ರಕಾರ ನಾವು ಆಂದೋಲನದಲ್ಲಿ ಹುತಾತ್ಮರಾಗುವುದನ್ನು ಆಯ್ಕೆ ಮಾಡಿಕೊಳ್ಳಬೇಕು ಹೊರತಾಗಿ ಕರೋನಾದ ಕಾರಣದಿಂದ ಹೋರಾಟವನ್ನು ಕೈಬಿಡುವುದಲ್ಲ. ಸರ್ಕಾರ ಪ್ರಯತ್ನ ಪಡಬಹುದು. ಈಗಾಗಲೇ ಬಹಳಷ್ಟು ಕಾರಣಗಲಿಗೆ ನಮ್ಮ ಮೇಲೆ ಪ್ರಕರಣ ದಾಖಲಿಸಿದೆ. ಹಾಗೇ ಕರೋನಾ ಪ್ರಕರಣ ಕೂಡಾ ದಾಖಲಿಸಲಿ. ನೋಡಿಕೊಳ್ಳುತ್ತೇವೆ.