
ರಾಜ್ಯದಲ್ಲಿ ಜಾತಿ ಜನಗಣತಿ ಜಾರಿಗೆ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದೆ. ವರದಿ ಬಗ್ಗೆ ಪರ ವಿರೋಧದ ಚರ್ಚೆ ಜೋರಾಗಿ ನಡೆದಿದ್ದು, ವಿಶೇಷ ಸಂಪುಟ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಾರದೇ ಮುಕ್ತಾಯಗೊಂಡಿದೆ. ಸಭೆಯಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ವೈಯಕ್ತಿಕ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮಲ್ಲಿಕಾರ್ಜುನ ಖರ್ಗೆಯವ್ರಿಗೂ ಕ್ಯಾಬಿನೆಟ್ನಲ್ಲಾದ ಪರ ವಿರೋಧ ಚರ್ಚೆ ಬಗ್ಗೆ ಮಾಹಿತಿ ನೀಡಿಲಾಗಿದೆ. ಮೇ 2ರಂದು ಮುಂದಿನ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಬಗ್ಗೆ ಚರ್ಚೆ ಮಾಡಲು ನಿರ್ಧಾರ ಮಾಡಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ತಾಂತ್ರಿಕ ಮಾಹಿತಿಗಳು ಅಗತ್ಯವಾಗಿ ಇರೋದ್ರಿಂದ ಚರ್ಚೆ ಅಪೂರ್ಣವಾಗಿದೆ. ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮುಂದಿನ ಕ್ಯಾಬಿನೆಟ್ನಲ್ಲಿ ಪ್ರತ್ಯೇಕವಾಗಿ ಚರ್ಚೆ ಮಾಡ್ತೇವೆ ಎಂದಿದ್ದಾರೆ. ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ನಮ್ಮ ಸಮಾಜದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಹಾಗೂ ಶಂಕರ್ ಬಿದರಿಯವರ ನಿಲುವನ್ನು ಸಭೆಯಲ್ಲಿ ಹೇಳಿದ್ದೇನೆ. ಅಂತಿಮವಾಗಿ ಮುಖ್ಯಮಂತ್ರಿಯವರು ಯಾವ ಸಮಾಜಕ್ಕೂ ಅನ್ಯಾಯ ಆಗದಂತೆ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಆಗಲಿದೆ ಎಂದಿದ್ದಾರೆ.
ಜಾತಿ ಜನಗಣತಿ ವಿಚಾರವಾಗಿ ಸಚಿವ ಸಂಪುಟದಲ್ಲಿ ಸಚಿವರ ನಡುವೆ ಜಟಾಪಟಿ ನಡೆದಿದೆ. ಸಮುದಾಯದ ನಿಲುವನ್ನು ಕ್ಯಾಬಿನೆಟ್ನಲ್ಲಿ ಪ್ರಸ್ತಾಪಿಸಿರೋ ಸಚಿವ ಎಂ.ಬಿ.ಪಾಟೀಲ್, ವರದಿಯ ಬಗ್ಗೆ ಆಕ್ಷೇಪ ಎತ್ತಿದ್ದಾರೆ ಎನ್ನಲಾಗಿದೆ. ಸಮುದಾಯವನ್ನ ವಿಗಂಡಿಸಿ ವರದಿ ಮಾಡಿರೋದಕ್ಕೆ ನಮ್ಮ ವಿರೋಧ ಇದೆ. ಸಮುದಾಯ ವಿಂಗಡನೆ ಮಾಡಿರೋದ್ರಿಂದ ಜನ ಸಂಖ್ಯೆ ಕಡಿಮೆ ಆಗಿದೆ. ಮರುಪರಿಶೀಲನೆ ಮಾಡದೇ ವರದಿ ಜಾರಿ ಮಾಡಿದ್ರೆ ಸಮುದಾಯ ತಿರುಗಿ ಬೀಳುತ್ತದೆ. ನಾವು ವರದಿಯನ್ನ ಸಂಪೂರ್ಣವಾಗಿ ವಿರೋಧಿಸ್ತಿಲ್ಲ, ಆದರೆ ವರದಿಯಲ್ಲಿನ ಲೋಪ ದೋಷಗಳನ್ನ ಸರಿಪಡಿಸಿ ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ.

ಕ್ಯಾಬಿನೆಟ್ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಮುದಾಯದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಸಮುದಾಯದ ನಿರ್ಣಯದ ಬಗ್ಗೆ ಕ್ಯಾಬಿನೆಟ್ನಲ್ಲಿ ಉಲ್ಲೇಖಿಸಿರೋ ಡಿ.ಕೆ ಶಿವಕುಮಾರ್, ಜನಸಂಖ್ಯೆ ಕಡಿಮೆ ಆಗಿರೊ ಬಗ್ಗೆ ಆಕ್ಷೇಪವಿದೆ ಅಂತ ತಿಳಿಸಿದ್ದಾರಂತೆ. ಒಕ್ಕಲಿಗ ಶಾಸಕರ ಅಭಿಪ್ರಾಯದ ವಿಚಾರವನ್ನೂ ಪ್ರಸ್ತಾಪ ಮಾಡಿದ ಡಿಸಿಎಂ ಡಿಕೆಶಿ, ಜಾತಿ ಜನಗಣತಿಯನ್ನ ಮರುಪರಿಶೀಲಿಸಿ ಸೂಕ್ತ ನಿರ್ಣಾಯವನ್ನ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಡಿ.ಕೆ ಶಿವಕುಮಾರ್ ಮಾತಿಗೆ ಸಿಟ್ಟಾದ ದಲಿತ ಸಚಿವರು ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ. ಈ ವೇಳೆ ದಲಿತ ಸಚಿವರ ಹೇಳಿಕೆ ಮಧ್ಯೆ ಧ್ವನಿಗೂಡಿಸಿರೋ ಸಿಎಂ ಸೇರಿ ಕೆಲ ಸಚಿವರು, ಈ ಸಂದರ್ಭದಲ್ಲಿ ವರದಿಗೆ ವಿರೋಧ ಸರಿಯಲ್ಲ, ವಿಶೇಷ ಅಧಿವೇಶನ ಕರೆದು ಚರ್ಚಿಸೋಣ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಜಾತಿ ಜನಗಣತಿಯ ಬಗ್ಗೆ ಕ್ಯಾಬಿನೆಟ್ನಲ್ಲಿ ಅಪೂರ್ಣ ಚರ್ಚೆ ವಿಚಾರಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರೋ ಆರ್.ಅಶೋಕ್, 10 ವರ್ಷಗಳ ಹಿಂದೆ ಆರಂಭವಾದ ಸಿಎಂ ಸಿದ್ದರಾಮಯ್ಯ ಅವರ ಜಾತಿ ಜನಗಣತಿ ಬೃಹನ್ನಾಟಕ, ಮೆಗಾ ಸೀರಿಯಲ್ ರೀತಿಯಲ್ಲಿ ಮುಂದುವರಿಯುತ್ತಿದೆ. ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಶೂನ್ಯತೆ ಬಗ್ಗೆ ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿರುವ ಜನಾಕ್ರೋಶದ ಕಿಚ್ಚಿನಿಂದ ತಪ್ಪಿಸಿಕೊಳ್ಳಲು ಯತ್ನ ನಡೆಸಿದೆ. ತಮ್ಮ ಸರ್ಕಾರದ ವಿರುದ್ಧ ಎದ್ದಿರುವ ಜನಾಕ್ರೋಶದ ಜ್ವಾಲೆ ಕಡಿಮೆಯಾಗುವ ತನಕ ಜಾತಿ ಜನಗಣತಿ ಜಪ ಮಾಡುತ್ತಲೇ ಇರುವ ನಿರ್ಧಾರ ಮಾಡಿದಂತಿದೆ ಅಂತ ಕಾಲೆಳೆದಿದ್ದಾರೆ.