ಮೂಲ : ಕೆ ವೆಂಕಟರಮಣನ್ ದ ಹಿಂದೂ 11-7-2021
ಅನುವಾದ : ನಾ ದಿವಾಕರ
ಆದಿವಾಸಿಗಳ ಹಕ್ಕುಗಳ ಹೋರಾಟಗಾರ ಮತ್ತು ಜೆಸ್ಯೂಟ್ ಪಾದ್ರಿ ಸ್ಟ್ಯಾನ್ ಸ್ವಾಮಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ಸಾವನ್ನಪ್ಪಿರುವುದು ಅವರ ವಿರುದ್ಧ ಬಳಸಲ್ಪಟ್ಟ ಯುಎಪಿಎ ಕಾಯ್ದೆಯನ್ನು ಸಾರ್ವಜನಿಕ ಚರ್ಚೆಗೊಳಪಡಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ನಿರ್ಬಂಧ) ಕಾಯ್ದೆ 1967, (ಯುಎಪಿಎ) ಇಂದು ದೇಶಾದ್ಯಂತ ಚರ್ಚೆಗೊಳಗಾಗುತ್ತಿದೆ. ಈ ಕಾಯ್ದೆಯನ್ವಯ ಬಂಧನಕ್ಕೊಳಗಾದವರಿಗೆ ಜಾಮೀನು ಪಡೆಯುವುದು ಅಸಾಧ್ಯವಾಗಿರುವುದೇ, ಸ್ಟ್ಯಾನ್ ಸ್ವಾಮಿ ಅವರ ಸಾವಿಗೂ ಕಾರಣವಾಗಿದೆ. ಜಾಮೀನು ನಿರಾಕರಿಸಲಾದ ಸ್ಟ್ಯಾನ್ ಸ್ವಾಮಿ ಬಂಧನದಲ್ಲಿರುವಾಗಲೇ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಈ ಘಟನೆಯ ನಂತರ, ಎಲ್ಗರ್ ಪರಿಷತ್ ಪ್ರಕರಣದಲ್ಲಿ ಇದೇ ಯುಎಪಿಎ ಕಾಯ್ದೆಯನ್ವಯ ಬಂಧನಕ್ಕೊಳಗಾಗಿರುವ ಇತರ ಹದಿನೈದು ಜನರ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿದೆ. ಯುಎಪಿಎ ಭಾರತದ ಪ್ರಮುಖ ಭಯೋತ್ಪಾದನೆ ನಿರ್ಬಂಧ ಕಾಯ್ದೆಯೂ ಆಗಿದೆ.
1960ರ ದಶಕದಲ್ಲಿ ದೇಶದ ಹಲವು ಭಾಗಗಳಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬಂದಿದ್ದರಿಂದ ಕೇಂದ್ರ ಸರ್ಕಾರ ಒಂದು ಕಠಿಣ ಕಾನೂನು ಜಾರಿಗೊಳಿಸುವ ಆಲೋಚನೆ ಮಾಡಿತ್ತು.1967ರ ನಕ್ಸಲ್ಬಾರಿ ದಂಗೆಯ ಹಿನ್ನೆಲೆಯಲ್ಲಿ ಈ ಕಾನೂನಿನ ತುರ್ತು ಹೆಚ್ಚಾಗಿ ಕಾಣತೊಡಗಿತ್ತು.1966ರ ಮಾರ್ಚ್ನಲ್ಲಿ ರಾಷ್ಟ್ರಪತಿಗಳು ಕಾನೂನುಬಾಹಿರ ಚಟುವಟಿಕೆಗಳ ( ನಿರ್ಬಂಧ) ಸುಗ್ರೀವಾಜ್ಞೆಯೊಂದನ್ನು ಹೊರಡಿಸಿದ್ದರು. ವ್ಯಕ್ತಿಗಳ ಮತ್ತು ಸಂಘಟನೆಗಳ ಕಾನೂನುಬಾಹಿರ ಚಟುವಟಿಕೆಗಳನ್ನು ನಿರ್ಬಂಧಿಸುವ ಸಲುವಾಗಿ ಒಂದು ಪರಿಣಾಮಕಾರಿಯಾದ ಕಾನೂನು ಅವಶ್ಯ ಎಂದು ಮನಗಂಡು ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಈ ಸುಗ್ರೀವಾಜ್ಞೆಯು ಸಂಸತ್ತಿನಲ್ಲಿ ಚರ್ಚೆಗೆ ಬಂದಾಗ ಸಾಕಷ್ಟು ವಾಗ್ವಾದಗಳು ನಡೆದು, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಮಸೂದೆಯನ್ನು ಕೈಬಿಡಲಾಗಿತ್ತು. ಕೊಂಚ ಭಿನ್ನವಾದ ನಿಯಮಗಳನ್ನೊಳಗೊಂಡ ಯುಎಪಿಎ ಕಾಯ್ದೆಯನ್ನು ಸಂಸತ್ತಿನಲ್ಲಿ ಅನುಮೋದಿಸಲಾಗಿತ್ತು.
ಕಾಯ್ದೆಯ ವ್ಯಾಪ್ತಿ ಮತ್ತು ವಿಸ್ತರಣೆ
“ ಯಾವುದೇ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ತನ್ನ ಚಟುವಟಿಕೆಗಳ ಮೂಲಕ, ಲಿಖಿತ ಅಥವಾ ಮೌಖಿಕ ಅಭಿಪ್ರಾಯಗಳ ಮೂಲಕ, ಪ್ರಾತಿನಿಧಿಕ ಸಂಜ್ಞೆಗಳ ಮೂಲಕ, ಭಾರತದ ಭೂ ಪ್ರದೇಶದಿಂದ ಆ ವ್ಯಕ್ತಿಯ ಅಥವಾ ಆ ಗುಂಪಿನ ಪ್ರತ್ಯೇಕತೆಗಾಗಿ ಆಗ್ರಹಿಸಿದರೆ ಅಥವಾ ಪ್ರತ್ಯೇಕತೆಗೆ ಬೆಂಬಲಿಸುವಂತಹ ಧೋರಣೆಯನ್ನು ಪ್ರದರ್ಶಿಸಿದರೆ, ಅಂತಹ ಚಟುವಟಿಕೆಗಳು ದೇಶದ ಸಾರ್ವಭೌಮತೆ ಮತ್ತು ಭೌಗೋಳಿಕ ಅಖಂಡತೆಯನ್ನು ಪ್ರಶ್ನಿಸಿದರೆ, ಅಂತಹ ವ್ಯಕ್ತಿ ಅಥವಾ ಗುಂಪುಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಬಹುದು ” ಎಂದು ಈ ಮೂಲ ಕಾಯ್ದೆಯಲ್ಲಿ ಹೇಳಲಾಗಿತ್ತು.
ಯುಎಪಿಎ ಕಾಯ್ದೆಯನ್ನು ಜಾರಿಗೊಳಿಸುವುದಕ್ಕೂ ಮುನ್ನ, ಸಂಘಟನೆಗಳನ್ನು, ಗುಂಪುಗಳನ್ನು ಕ್ರಿಮಿನಲ್ ಕಾನೂನು (ತಿದ್ದುಪಡಿ) 1952 ಕಾಯ್ದೆಯನ್ವಯ ಕಾನೂನುಬಾಹಿರ ಎಂದು ಘೋಷಿಸಲಾಗುತ್ತಿತ್ತು. ಆದರೆ ನಿಷೇಧ ಹೇರುವ ಔಚಿತ್ಯವನ್ನು ಪರಿಶೀಲಿಸಲು ನ್ಯಾಯಾಂಗದ ಯಾವುದೇ ಸಾಧನಗಳು ಇರಲಿಲ್ಲವಾದ್ದರಿಂದ ಸುಪ್ರೀಂಕೋರ್ಟ್ ನಿಷೇಧವನ್ನು ಕುರಿತ ನಿಯಮವನ್ನು ಪ್ರಶ್ನಿಸಿತ್ತು. ಈ ಕಾರಣದಿಂದ ಯುಎಪಿಎ ಕಾಯ್ದೆಯಲ್ಲಿ ನ್ಯಾಯಮಂಡಲಿಯನ್ನು ಸ್ಥಾಪಿಸುವ ನಿಯಮವನ್ನು ಸೇರಿಸಲಾಗಿತ್ತು. ಇದರನ್ವಯ ಯಾವುದೇ ಒಂದು ಸಂಘಟನೆ ಅಥವಾ ಗುಂಪನ್ನು ಕಾನೂನುಬಾಹಿರ ಎಂದು ಘೋಷಿಸಿದ ಆರು ತಿಂಗಳೊಳಗಾಗಿ ನ್ಯಾಯಮಂಡಲಿಯು ಇದನ್ನು ದೃಢೀಕರಿಸಬೇಕಿತ್ತು.
2004 ಮತ್ತು 2013ರ ತಿದ್ದುಪಡಿಗಳ ನಂತರ ಯುಎಪಿಎ ಕಾಯ್ದೆ ಹೊಸ ಸ್ವರೂಪ ಪಡೆದಿದೆ. ಈ ಹೊಸ ನಿಯಮದನ್ವಯ ಈ ಕಾಯ್ದೆಯಡಿ, ಸಂಘಟನೆಗಳನ್ನು ಕಾನೂನುಬಾಹಿರ ಎಂದು ಘೋಷಿಸುವುದು, ಭಯೋತ್ಪಾದಕ ಚಟುವಟಿಕೆಗಳು ಮತ್ತು ಕೃತ್ಯಗಳಿಗೆ ಶಿಕ್ಷೆ ವಿಧಿಸುವುದು, ದೇಶದ ಸುಭದ್ರತೆಗೆ ಅಪಾಯ ಉಂಟುಮಾಡುವುದು, ಆರ್ಥಿಕ, ಹಣಕಾಸಿನ, ಆಹಾರದ, ಜೀವನೋಪಾಯದ, ಪರಿಸರದ ಮತ್ತು ಜೈವಿಕ ಶಕ್ತಿಯ ಭದ್ರತೆಗೆ ಅಪಾಯ ಉಂಟುಮಾಡುವುದು ಈ ಎಲ್ಲವನ್ನೂ ಒಳಗೊಳ್ಳಲಾಗಿದೆ. ಅಕ್ರಮ ಹಣ ಸಾಗಾಣಿಕೆ ಮತ್ತು ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ನೀಡುವುದನ್ನು ನಿರ್ಬಂಧಿಸುವ ನಿಯಮಗಳನ್ನೂ ಸೇರಿಸಲಾಗಿದೆ.
ಆರಂಭದಲ್ಲಿ ಸಂಘಟನೆಗಳ ಮೇಲಿನ ನಿಷೇಧ ಎರಡು ವರ್ಷಗಳಿಗೆ ಸೀಮಿತವಾಗಿತ್ತು. 2013ರ ತಿದ್ದುಪಡಿಯ ನಂತರ ಇದನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. 2002ರ ಪೋಟಾ ಕಾಯ್ದೆಯನ್ನು ಅನೂರ್ಜಿತಗೊಳಿಸಿದ ನಂತರ, ಈ ಹಿಂದೆ ಇದ್ದಂತಹ ಕಾನೂನುಗಳನ್ವಯ ಭಯೋತ್ಪಾದಕ ಚಟುವಟಿಕೆ ಎಂದು ಪರಿಗಣಿಸಲಾಗುತ್ತಿದ್ದ ಕೃತ್ಯಗಳನ್ನೂ ಈ ಕಾಯ್ದೆಯ ವ್ಯಾಪ್ತಿಗೊಳಪಡಿಸಲಾಗಿದೆ. 2004ರ ತಿದ್ದುಪಡಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ ಭಯೋತ್ಪಾದನೆ ನಿರ್ಬಂಧವನ್ನು ಕುರಿತ ನಿರ್ಣಯಗಳನ್ನೂ ಸಹ ಸೇರಿಸಲಾಗಿದೆ.
2021ರಲ್ಲಿ ಸೂಚಿಸಲಾದ ಕೆಲವು ತಿದ್ದುಪಡಿಗಳಿಗೆ 2013ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಹಣಕಾಸು ಚಟುವಟಿಕೆಗಳ ಕಾರ್ಯಪಡೆ ಎಂಬ ಅಂತರ್ ಸರ್ಕಾರಿ ಸಂಸ್ಥೆಯ ವ್ಯಾಪ್ತಿಗೊಳಪಟ್ಟಿದ್ದ ಅನೇಕ ನಿಯಮಗಳನ್ನು, ಯುಎಪಿಎ ವ್ಯಾಪ್ತಿಗೊಳಪಡಿಸಲು ಈ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅಕ್ರಮ ಹಣ ಸಾಗಾಣಿಕೆ ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆರವು ನೀಡುವುದನ್ನು ನಿಯಂತ್ರಿಸಲು ಈ ನಿಯಮವನ್ನು ಬಳಸಲಾಗುತ್ತಿತ್ತು. 2019ರಲ್ಲಿ ಯುಎಪಿಎ ಕಾಯ್ದೆಗೆ ಮತ್ತಷ್ಟು ತಿದ್ದುಪಡಿಗಳನ್ನು ತರುವ ಮೂಲಕ ವ್ಯಕ್ತಿಗಳನ್ನೂ ಭಯೋತ್ಪಾದಕ ಎಂದು ಪರಿಗಣಿಸುವ ಹೊಸ ನಿಯಮವನ್ನು ಅಧಿಕೃತವಾಗಿ ಸೇರ್ಪಡಿಸಲಾಯಿತು.
ಮಾದಕ ವಸ್ತುಗಳ ಕಾಯ್ದೆ ಮತ್ತಿತರ ಭಯೋತ್ಪಾದನೆಯ ಬಗ್ಗೆ ಇದ್ದ ಅನೂರ್ಜಿತ ಕಾನೂನುಗಳಂತೆಯೇ ಯುಎಪಿಎ ಕಾಯ್ದೆಯೂ ಸಹ ಕ್ರಿಮಿನಲ್ ಪ್ರೊಸೀಜರ್ ಕೋಡ್ ನಿಯಮಗಳಲ್ಲಿ ಮಾರ್ಪಾಡು ಮಾಡುವ ಅವಕಾಶವನ್ನು ಹೊಂದಿದೆ. ಸಾಮಾನ್ಯವಾಗಿ 15 ದಿನಗಳ ಬಂಧನದ ಅವಕಾಶವಿದ್ದುದನ್ನು 30 ದಿನಗಳಿಗೆ ವಿಸ್ತರಿಸಲಾಗಿದೆ. ಚಾರ್ಜ್ಷೀಟ್ ಸಲ್ಲಿಸುವ ಮುನ್ನ ಗರಿಷ್ಟ ನ್ಯಾಯಾಂಗ ಬಂಧನದ ಅವಧಿಯನ್ನು 90 ರಿಂದ 180 ದಿನಗಳವರೆಗೆ ವಿಸ್ತರಿಸಲಾಗಿದೆ. ಸರ್ಕಾರಿ ವಕೀಲರು ತನಿಖೆಯಲ್ಲಿನ ಪ್ರಗತಿಯ ವರದಿಯನ್ನು ಮಂಡಿಸಿದ ನಂತರ ಅದರ ಆಧಾರದ ಮೇಲೆಯೇ ಈ ಅವಧಿಯನ್ನು ನಿಗದಿಪಡಿಸಬೇಕಿದೆ. ಈ ವರದಿಯಲ್ಲಿ ಸರ್ಕಾರಿ ವಕೀಲರು ಅವಧಿ ವಿಸ್ತರಣೆಗೆ ಕಾರಣಗಳನ್ನೂ ನೀಡಬೇಕಾಗುತ್ತದೆ. ಈ ನೂತನ ಕಾಯ್ದೆಯಡಿ ಜಾಮೀನು ಪಡೆಯುವುದು ದುಸ್ತರವಾಗುತ್ತದೆ.
ಯುಎಪಿಎ ಕಾಯ್ದೆಯ ಸೆಕ್ಷನ್ 43ಡಿ (5)ರ ಅನ್ವಯ, ನ್ಯಾಯಾಲಯದ ದೃಷ್ಟಿಯಲ್ಲಿ ಆರೋಪಿಗಳ ವಿರುದ್ಧ ಮಾಡಲಾಗಿರುವ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ಕಂಡುಬಂದಲ್ಲಿ ಜಾಮೀನು ನಿರಾಕರಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ತನ್ನ ತೀರ್ಪೊಂದರಲ್ಲಿ, ಜಾಮೀನು ವಿಚಾರಣೆಯ ಸಂದರ್ಭದಲ್ಲಿ ಗಂಭೀರವಾದ ವಿಚಾರಣೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಆದರೆ ಸರ್ಕಾರಿ ವಕೀಲರು ಮಂಡಿಸಿದ ವಾದಗಳ ಸಾಧ್ಯಾಸಾಧ್ಯತೆಗಳನ್ನು ಪರಿಗಣಿಸಬಹುದು ಎಂದು ಹೇಳಿದೆ. ಅಂದರೆ, ಇರುವ ಸಾಕ್ಷಿ ಪುರಾವೆಗಳನ್ನು ಪರಿಶೀಲನೆಯನ್ನು ನ್ಯಾಯಾಲಯದಿಂದ ನಿರೀಕ್ಷಿಸದೆಯೇ ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ನಿರೂಪಿಸುವ ಹೊಣೆ ಆರೋಪಿಯ ಮೇಲಿರುತ್ತದೆ. ಈ ಕಾರಣಕ್ಕಾಗಿಯೇ ಮಾನವ ಹಕ್ಕು ಕಾರ್ಯಕರ್ತರು ಈ ಕಾಯ್ದೆಯನ್ನು ಕರಾಳ ಎಂದು ಪರಿಗಣಿಸುತ್ತಾರೆ. ಏಕೆಂದರೆ ವಿಚಾರಣೆ ಮುಗಿಯುವವರೆಗೂ ಆರೋಪಿಗೆ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ.