
ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಗೆ ಇಬ್ಬರು ಕನ್ನಡಿಗರೂ ಸೇರಿ ಒಟ್ಟು 26 ಮಂದಿ ಜೀವ ಕಳೆದುಕೊಂಡಿದ್ದಾರೆ. ಅದರಲ್ಲಿ ಗುಜರಾತ್ನ ಅಹಮದಾಬಾದ್ ನಿವಾಸಿ ಶೈಲೇಶ್ ಕೂಡ ಒಬ್ಬರು. ಸೂರತ್ನಲ್ಲಿ ಬ್ಯಾಂಕ್ ಉದ್ಯೋಗಿ ಆಗಿದ್ದ ಶೈಲೇಶ್ ಕಲಾಥಿಯಾ ಅವರ ಪತ್ನಿ ಶೀತಲ್ ಕಲಾಥಿಯಾ ಕೇಂದ್ರ ಸರ್ಕಾರಕ್ಕೆ ಈ ಪ್ರಶ್ನೆಯನ್ನು ಕೇಳಿದ್ದಾರೆ. ಪ್ರಸಿದ್ಧ ಪ್ರವಾಸಿ ಜಾಗಗಳಲ್ಲಿ ಯಾವುದೇ ಭದ್ರತೆ ಒದಗಿಸದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗಂಡನ ಅಂತ್ಯಕ್ರಿಯೆ ವೇಳೆ ಮಾತನಾಡಿರುವ ಶೀತಲ್ ಕಲಾಥಿಯಾ, ಉಗ್ರರ ಗುಂಡಿಗೆ ಬಲಿಯಾದ ಎಲ್ಲಾ ಅಮಾಯಕರಿಗೆ ಹಾಗು ಅವರ ಕುಟುಂಬಗಳಿಗೆ ನ್ಯಾಯ ದೊರೆಯಬೇಕು. ಪಹಲ್ಗಾಮ್ನಲ್ಲಿ ಪ್ರವಾಸಿಗರಿಗೆ ಪೊಲೀಸರು ಅಥವಾ ಭಾರತೀಯ ಸೇನೆಯ ಭದ್ರತೆ ಇರಲಿಲ್ಲ. ಗಣ್ಯ ವ್ಯಕ್ತಿಗಳಿಗೆ ಭದ್ರತಾ ಸಿಬ್ಬಂದಿ ಬೆಂಗಾವಲು ಪಡೆಯೇ ಇರುತ್ತದೆ. ಕೆಲವೊಮ್ಮೆ ಗಣ್ಯರ ಭದ್ರತೆಗಾಗಿ ಹೆಲಿಕಾಪ್ಟರ್ ಬಳಕೆ ಮಾಡಲಾಗುತ್ತದೆ. ವಿಐಪಿಗಳ ಭದ್ರತೆಗೆ ಖರ್ಚು ಮಾಡುವ ಹಣ ಯಾವುದು..? ಎಂದು ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರ ಎದುರಲ್ಲೇ ಆಕ್ರೋಶ ಹೊರಹಾಕಿದ್ದಾರೆ.

ಪಹಲ್ಗಾಮ್ನಲ್ಲಿ ಉಗ್ರರ ಗುಂಡೇಟಿನಿಂದ ಗಾಯಗೊಂಡವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿತ್ತು. ಆದರೆ ಸೇನಾ ಶಿಬಿರದ ಬಳಿ ತೆರಳಿ ತುರ್ತು ಸಹಾಯಕ್ಕಾಗಿ ಬೇಡಿಕೊಂಡೆ. ಅಲ್ಲಿ ಪ್ರಥಮ ಚಿಕಿತ್ಸೆಗೆ ಬೇಕಾಗಿದ್ದ ವೈದ್ಯಕೀಯ ಕಿಟ್ ಕೂಡ ಲಭ್ಯವಿರಲಿಲ್ಲ. ಭಯೋತ್ಪಾದಕರು ಮುಸ್ಲಿಮರು ಮತ್ತು ಹಿಂದೂಗಳನ್ನು ಪ್ರತ್ಯೇಕಿಸಿ ಹಿಂದೂ ಪುರುಷರನ್ನು ಮಾತ್ರ ಕೊಲ್ಲುತ್ತಿದ್ದರು. ಈ ಸಂದರ್ಭದಲ್ಲಿ ನಮ್ಮ ಭಾರತೀಯ ಸೇನೆ ಏನು ಮಾಡುತ್ತಿತ್ತು..? ಕಾಶ್ಮೀರದಲ್ಲಿ ಲಕ್ಷಾಂತರ ಸೈನಿಕರನ್ನು ನಿಯೋಜಿಸಲಾಗಿದೆ. ಆದರೆ ಪಹಲ್ಗಾಮ್ನಲ್ಲಿ ಯಾರೂ ಕೂಡ ಇರಲಿಲ್ಲ ಯಾಕೆ..? ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ನಾವು ಕಟ್ಟುವ ತೆರಿಗೆ ಹಣದಿಂದ ಸರ್ಕಾರ ನಡೆಯುತ್ತದೆ. ನಾವು ಕೆಲಸ ಮಾಡಿ ಸಂಪಾದನೆ ಮಾಡುವ ವೇತನಕ್ಕೂ ತೆರಿಗೆ ಕೊಡುತ್ತೇವೆ. ನಾವು ಖರೀದಿಸುವ ಪ್ರತಿಯೊಂದು ವಸ್ತುವಿನ ಮೇಲೂ ನಾವು ನಿಮಗೆ ತೆರಿಗೆ ಪಾವತಿಸುತ್ತೇವೆ. ಆದರೆ, ನನ್ನ ಗಂಡನಿಗೆ ಭದ್ರತೆಯ ಅಗತ್ಯ ಇದ್ದಾಗ ನೀವು ಭದ್ರತೆ ನೀಡಲು ಸಾಧ್ಯವಾಗಲಿಲ್ಲ. ನಿಮಗೆ ಭದ್ರತೆ ಒದಗಿಸಲು ಸಾಧ್ಯ ಆಗದಿದ್ದರೆ, ಆ ಪ್ರವಾಸಿ ತಾಣವನ್ನು ಏಕೆ ತೆರೆದಿರುವುರಿ..? ಮುಚ್ಚಿಬಿಡಿ..? ಎಂದು ಆಕ್ರೋಶದ ಮಾತುಗಳನ್ನು ಆಡಿದ್ದಾರೆ. ಒಟ್ಟಾರೆ ನಾವು ತೆರಿಗೆ ಕಟ್ತೇವೆ, ನೀವು ಭದ್ರತೆ ಕೊಡಲು ಆಗ್ತಿಲ್ಲ ಅಂದ ಮೇಲೆ ನಿಮಗೆ ತೆರಿಗೆ ಕಟ್ಟುವುದೇ ವ್ಯರ್ಥ ಎಂದಿದ್ದಾರೆ.
ಸರ್ಕಾರ ವಿಐಪಿಗಳಿಗೆ ಮಾತ್ರ ಭದ್ರತೆ ನೀಡುತ್ತದೆ. ಆದರೆ ತೆರಿಗೆ ಪಾವತಿಸುವ ಸಾಮಾನ್ಯ ಜನರ ಜೀವಕ್ಕೆ ಬೆಲೆಯಿಲ್ಲವೇ..? ಎಂದು ಬಹಿರಂಗವಾಗಿ ಪ್ರಶ್ನಿಸಿದ ಶೀತಲ್ ಕಲಾಥಿಯಾ, ಸರ್ಕಾರ ನಮ್ಮನ್ನು ಯಾವ ರೀತಿಯಲ್ಲಿನ ಆಳುತ್ತಿದೆ..? ನೀವು ಕಾಶ್ಮೀರದ ಹೆಸರು ಕೆಡಿಸುತ್ತಿದ್ದೀರಿ. ಸಮಸ್ಯೆ ಕಾಶ್ಮೀರದಲ್ಲಿ ಇಲ್ಲ. ಕಾಶ್ಮೀರದಲ್ಲಿ ಸೂಕ್ತ ಭದ್ರತೆ ಕೊಡದೆ ಇರುವುದು ಪ್ರಮುಖ ಸಮಸ್ಯೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇದ್ದರೂ, ಯಾವುದೇ ಭದ್ರತಾ ಸಿಬ್ಬಂದಿ ಅಲ್ಲಿ ಇರಲಿಲ್ಲ ಎಂದರೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಉಗ್ರರ ದಾಳಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳಲು ಕಾರಣ ಎಂದಿದ್ದಾರೆ.