ಕೊನೆಗೂ ಅವರ ಸ್ಟ್ಯಾನ್ ಸ್ವಾಮಿಯ ಅಂತ್ಯ ಕಾಣುವುದರಲ್ಲಿ ಯಶಸ್ವಿಯಾದರು. ಇದು ಒಂದು ರೀತಿಯಲ್ಲಿ ರಾಜಕೀಯ-ನ್ಯಾಯಿಕ ಕೊಲೆ ಎನ್ನಬಹುದು. ಆದಿವಾಸಿಗಳ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟಗಳು ಮತ್ತು ತಮ್ಮ ಸರಳತೆಯ ಮೂಲಕವೇ ಹೋರಾಟಕ್ಕೆ ಬಲ ನೀಡಿದ ಅವರ ನಿಲುವು ರಾಜಕಾರಣಿಗಳಿಗೆ ಸ್ವೀಕೃತವಾಗಲಿಲ್ಲ. ಸ್ಟ್ಯಾನ್ ಸ್ವಾಮಿ, ಉಲ್ಬಣಿಸಿದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರೂ ಹೋರಾಟದಲ್ಲಿ ನಿರತರಾಗಿದ್ದರು ಎಂಬ ವಾಸ್ತವವನ್ನು ನ್ಯಾಯಾಂಗ ಒಪ್ಪಿಕೊಳ್ಳಲಿಲ್ಲ. ಸ್ಟ್ಯಾನ್ ಸ್ವಾಮಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯ “ ಸಮುದಾಯದ ಸಾಮೂಹಿಕ ಹಿತಾಸಕ್ತಿಗಳ ದೃಷ್ಟಿಯಲ್ಲಿ ಅರ್ಜಿದಾರರ ವ್ಯಕ್ತಿಗತ ಸ್ವಾತಂತ್ರ್ಯ ಗೌಣವಾಗುತ್ತದೆ, ಹಾಗಾಗಿ ವೃದ್ಧಾಪ್ಯ ಮತ್ತು ಅನಾರೋಗ್ಯ ಅರ್ಜಿದಾರರ ಪರ ರಕ್ಷಣೆಗೆ ಬರುವುದಿಲ್ಲ ” ಎಂದು ಹೇಳಿತ್ತು.
ನ್ಯಾಯಾಲಯದ ಈ ಚಿಂತನಾ ಕ್ರಮ ಒಂದು ರೀತಿಯಲ್ಲಿ ಮರಣದಂಡನೆ ವಿಧಿಸುವ ಪ್ರಭಾವವನ್ನೇ ಹೊಂದಿತ್ತು. ಜೈಲಿನಲ್ಲಿ ವೈದ್ಯಕೀಯ ಸೌಲಭ್ಯಗಳಿರಲಿಲ್ಲ. ಸ್ಟ್ಯಾನ್ ಸ್ವಾಮಿಗೆ ಜೈಲಿನಲ್ಲಿ ನೀಡಿದ ಅಲೋಪತಿ ಔಷಧಿಗಳನ್ನು ಸೂಚಿಸಿದ್ದವರು ಆಸ್ಪತ್ರೆಯಲ್ಲೇ ಇರುವ ಆಯುರ್ವೇದ ವೈದ್ಯರು. ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗಿದ್ದುದರಿಂದ ದೈಹಿಕ ಅಂತರ ಕಾಪಾಡುವುದೂ ಸಾಧ್ಯವಿರಲಿಲ್ಲ. ತಮ್ಮ ಎಲ್ಲ ಕ್ರಿಯೆಗಳನ್ನೂ ಸಮರ್ಥಿಸಿಕೊಂಡಿದ್ದ ಜೈಲು ಅಧಿಕಾರಿಗಳು ಸ್ಟ್ಯಾನ್ ಸ್ವಾಮಿಯ ರಕ್ತ ಸಂಚಲನ ಸರಿಯಾಗಿದೆ, ಹೃದಯ ಬಡಿತವೂ ಸರಿ ಇದೆ ಎಂದು ವರದಿ ನೀಡಿದ್ದರು. ಸ್ವಾಮಿ ಅವರ ಉದರ ಬೇನೆ ಮತ್ತು ಲಂಬಾರ್ ಸ್ಪಾಂಡಿಲಿಟಿಸ್ ಸಮಸ್ಯೆಯನ್ನು ಕುರಿತು ಜೈಲಿನ ಅಧಿಕಾರಿಗಳು ಸೊಲ್ಲೆತ್ತಿರಲಿಲ್ಲ. ತಮ್ಮದೇ ಸ್ವಂತ ಖರ್ಚಿನಲ್ಲಿ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಸ್ವಾಮಿ ಕೋರಿದ್ದರು. ಆದರೆ ಅಧಿಕಾರಿಗಳ ಒತ್ತಡ ಮೇರೆಗೆ ಸರ್ಕಾರಿ ಸ್ವಾಮ್ಯದ ಜೆ ಜೆ ಆಸ್ಪತ್ರೆಗೆ ದಾಖಲಾಗಿದ್ದರು. ಸ್ವಾಮಿಯವರ ಸಲಹೆಯನ್ನು ಜೈಲು ಅಧಿಕಾರಿಗಳು ಸ್ವೀಕರಿಸಲಿಲ್ಲ.
“ ನಾನು ಆ ಆಸ್ಪತ್ರೆಗೆ ಮೂರು ಬಾರಿ ಹೋಗಿದ್ದೇನೆ. ಅಲ್ಲಿನ ವ್ಯವಸ್ಥೆ ನನಗೆ ಪರಿಚಯವಿದೆ. ಅಲ್ಲಿ ಚಿಕಿತ್ಸೆಗೆ ದಾಖಲಾಗುವುದರ ಬದಲು ನಾನು ಸಾಯಲು ಬಯಸುತ್ತೇನೆ ”ಎಂದು ಸ್ವಾಮಿ ಹೇಳಿದ್ದರು. ಈ ಹಿನ್ನೆಲೆಯಲ್ಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವೂ ಸಹ ಸ್ಟ್ಯಾನ್ ಸ್ವಾಮಿ ಅವರಿಗೆ ವೈದ್ಯಕೀಯ ಸೌಲಭ್ಯಗಳನ್ನು ನಿರಾಕರಿಸಿದ್ದನ್ನು ಕುರಿತು ತಲೋಜಾ ಜೈಲು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದುದನ್ನು ಗಮನಿಸಬೇಕು. ತಲೋಜಾ ಜೈಲು ಸದಾ ಕೈದಿಗಳಿಂದ ತುಂಬಿರುತ್ತದೆ. ಇಲ್ಲಿರುವ ಮೂವರೂ ವೈದ್ಯರು ಸದಾ ಕಾಲ ಲಭ್ಯವಿರುತ್ತಾರೆ, ಆದರೆ ಮೂವರೂ ಆಯುರ್ವೇದ ವೈದ್ಯರು. ಸ್ವಾಮಿ ಅವರಿಗೆ ಚಿಕಿತ್ಸೆ ನೀಡಿದ ವಿಧಾನವನ್ನು ಗಮನಿಸಿದರೆ ಅದು ನಿಧಾನವಾಗಿ ಕೊಲ್ಲುವ ಒಂದು ಮಾದರಿಯಷ್ಟೇ ಎಂದು ನಿವೃತ್ತ ನ್ಯಾಯಮೂರ್ತಿ ಮದನ್ ಲೋಕುರ್ ಹೇಳಿರುವುದು ಮಾರ್ಮಿಕವಾಗಿದೆ.
ಪ್ರತಿಯೊಂದು ಸಂದರ್ಭದಲ್ಲೂ ಸರ್ಕಾರ ಸ್ಟ್ಯಾನ್ ಸ್ವಾಮಿಯವರನ್ನು ಪಡೆದೇ ತೀರುವಂತೆ ವರ್ತಿಸಿದ್ದುದನ್ನು ಇಲ್ಲಿ ಗಮನಿಸಬೇಕು ಮತ್ತು ದಾಖಲಿಸಬೇಕು. ತನ್ನದೇ ಆದ ಕಾರಣಗಳಿಗಾಗಿ ಕೇಂದ್ರ ಸರ್ಕಾರ ವಿಭಿನ್ನ ಅಭಿಪ್ರಾಯಗಳನ್ನು, ನಿಲುವುಗಳನ್ನು ತಳೆಯುವವರ ಬಗ್ಗೆ ಅಸಹನೆ ಹೊಂದಿರುವುದಕ್ಕೆ, ದೈಹಿಕವಾಗಿ ದುರ್ಬಲರಾಗಿದ್ದ, ಅನಾರೋಗ್ಯ ಪೀಡಿತ ಸ್ಟ್ಯಾನ್ ಸ್ವಾಮಿ ಸಾಂಕೇತಿಕ ಪ್ರತಿನಿಧಿಯಾಗಿ ಕಾಣುತ್ತಾರೆ. ಸ್ವಾಮಿ ಅವರನ್ನು ಅವರ ಸ್ವಂತ ಸ್ಥಳ ರಾಂಚಿಯಿಂದ ಮುಂಬಯಿಗೆ ಅವರನ್ನು ಸಾಗಹಾಕಿದ್ದೇ ಇದಕ್ಕೆ ಸಾಕ್ಷಿಯಾಗಿದೆ. 83 ವರ್ಷದ ವಯೋವೃದ್ಧ ಸ್ಟ್ಯಾನ್ ಸ್ವಾಮಿಗೆ ದೃಷ್ಟಿ ಮಂದವಾಗಿತ್ತು. ಆದರೆ ಕಾನೂನು ಪ್ರಕಾರ ಯಾವುದೇ ವೈದ್ಯಕೀಯ ತಪಾಸಣೆ ಮಾಡಲಿಲ್ಲ. ಈ ಪ್ರಯಾಣವೇ ಅವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿತ್ತು. ಸ್ಟ್ಯಾನ್ ಸ್ವಾಮಿ ಅವರನ್ನು ಭಯೋತ್ಪಾದನಾ ನಿರ್ಬಂಧಕ ಯುಎಪಿಎ ಕಾಯ್ದೆಯಡಿ ಬಂಧಿಸಿದಾಗಲೇ ಸರ್ಕಾರದ ದೃಢ ನಿರ್ಧಾರ ಸ್ಪಷ್ಟವಾಗಿತ್ತು. “ ಜಾತಿ ಹಿಂಸಾಚಾರವನ್ನು ಪ್ರಚೋದಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಮಾವೋವಾದಿಗಳು ಹೂಡಿದ್ದ ಪಿತೂರಿಯಲ್ಲಿ ಭಾಗವಹಿಸಿದ್ದರು” ಎಂಬ ಆರೋಪದ ಮೇಲೆ ಸ್ವಾಮಿ ಅವರನ್ನು ಬಂಧಿಸಲಾಗಿತ್ತು. ಇಂತಹ ಅಪಾಯಕಾರಿ ವ್ಯಕ್ತಿಗೆ ದಯೆ ತೋರುವ ಸಾಧ್ಯತೆಯೇ ಇರುವುದಿಲ್ಲ!
ಮಹಾರಾಷ್ಟ್ರ ಪೊಲೀಸರು ಸ್ವಾಮಿಯವರ ರಾಂಚಿಯಲ್ಲಿನ ಮನೆಯನ್ನು ಶೋಧಿಸಿ, ವಿಚಾರಣೆಯನ್ನೂ ನಡೆಸಿದ್ದರು. ಆದರೆ ಅಪರಾಧದ ಯಾವುದೇ ಚಿಹ್ನೆಗಳೂ, ಸಾಕ್ಷಿಗಳೂ ದೊರೆತಿರಲಿಲ್ಲ. ಆದರೆ ಮೇಲಧಿಕಾರಿಗಳು ಈ ವಾಸ್ತವವನ್ನು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ವಹಿಸಲಾಯಿತು. ಇದು ನಿರೀಕ್ಷಿತ ಫಲಿತಾಂಶ ನೀಡಿತ್ತು. ಪ್ರಧಾನಮಂತ್ರಿಯವರನ್ನು ಹತ್ಯೆಯಾಗುವುದರಿಂದ ತಪ್ಪಿಸಲಾಗಿತ್ತು. ಧಾಳಿ ನಡೆಸುವ ಮುನ್ನವೇ ಬಂಧಿಸಲ್ಪಟ್ಟು ಸೆರೆಮನೆಗೆ ತಳ್ಳಲ್ಪಟ್ಟವರತ್ತ ಒಮ್ಮೆ ಗಮನಿಸಿದರೆ ನಮ್ಮ ಭದ್ರತಾಪಡೆಗಳ ಕಾರ್ಯಕ್ಷಮತೆ ಶ್ಲಾಘನೀಯವಾಗಿ ಕಾಣುತ್ತದೆ. ಸುಧೀರ್ ಧಾವಳೆ, ಶೋಮಾ ಸೆನ್, ಮಹೇಶ್ ರೌತ್, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್ ಇವರನ್ನು ಜೂನ್ 2018ರಲ್ಲೇ ಬಂಧಿಸಲಾಗಿತ್ತು. ಸುಧಾ ಭರದ್ವಾಜ್, ವೆರ್ನನ್ ಗಾನ್ಸ್ಲೇವ್ಸ್, ಅರುಣ್ ಫೆರೀರಾ ಮತ್ತು ವರಾವರರಾವ್ ಅವರನ್ನು ಎರಡು ತಿಂಗಳ ನಂತರ ಬಂಧಿಸಲಾಯಿತು. ಎಲ್ಲರಿಗೂ ವೈದ್ಯಕೀಯ ಜಾಮೀನು ನಿರಾಕರಿಸಲಾಯಿತು. ವರಾವರರಾವ್ ಅವರ ಆರೋಗ್ಯ ಅತಿಯಾಗಿ ಕ್ಷೀಣಿಸಿದ್ದರಿಂದ ಅವರಿಗೆ ಜಾಮೀನು ದೊರೆತಿದೆ. ಇವರೆಲ್ಲರೂ ಮುಕ್ತವಾಗಿ ಹೊರಗೆ ಇದ್ದಿದ್ದರೆ ಎಷ್ಟು ಜನರನ್ನು ಹತ್ಯೆ ಮಾಡಬಹುದಿತ್ತು ? ಊಹಿಸಿಕೊಳ್ಳಿ. !!
ಇವರೊಂದಿಗೆ ಜೈಲಿನಲ್ಲಿರುವಾಗಲೇ ತನ್ನ ತಾಯಿಯನ್ನು ಕಳೆದುಕೊಂಡ ಪತ್ರಕರ್ತ ಸಿದ್ದಿಖ್ ಕಪ್ಪನ್, ಜೈಲುವಾಸಿಯಾಗಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡ ನತಾಶಾ ನಾರ್ವಲ್ ಅವರನ್ನೂ ಗಮನಿಸಿ. ಇವರಿಬ್ಬರೂ ಏಕೆ ಜೈಲು ಶಿಕ್ಷೆ ಎದುರಿಸಿದ್ದರು? ಮುಕ್ತವಾಗಿದ್ದರೆ ಇವರು ಅಪಾಯಕಾರಿಯಾಗಲಿದ್ದಾರೆ ಎನ್ನುವಂತಹ ಅಪರಾಧಗಳನ್ನು ಇವರು ಎಸಗಿದ್ದಾರೆ ಎಂದು ನಿರ್ಧರಿಸಿದವರಾರು? ಸಾಮಾನ್ಯ ಪ್ರಜೆಗಳು ತಮ್ಮ ನಿತ್ಯ ಜೀವನದ ಚಟುವಟಿಕೆ ಎಂದು ಭಾವಿಸುವುದನ್ನು ಅಧಿಕಾರಸ್ಥರು ಏಕೆ ಅಪರಾಧ ಎಂದು ಭಾವಿಸಿ ಬಂಧಿಸುತ್ತಾರೆ? ತಮ್ಮ ದೇಶಕ್ಕೆ ಕೀರ್ತಿ ತರುವಂತಹ ಕಾನೂನು ಪಾಲಕ ,ಪ್ರಾಮಾಣಿಕ ಪ್ರಜೆಗಳು ಸರ್ಕಾರದ ದೃಷ್ಟಿಯಲ್ಲಿ ಏಕೆ ಶಂಕಿತರಾಗಿ ಕಾಣುತ್ತಾರೆ? ಇಂತಹ ಒಂದು ಸರ್ಕಾರವನ್ನು ಪ್ರಜಾತಾಂತ್ರಿಕ ಎಂದು ಕರೆಯಬಹುದೇ
ಪ್ರಶ್ನೆಗಳು ಇಲ್ಲಿಗೇ ನಿಲ್ಲುವುದಿಲ್ಲ. ದೇಶಕ್ಕೆ ಕೀರ್ತಿ ತರಲು ಶ್ರಮಿಸುತ್ತಿರುವ ಪ್ರಜೆಗಳಿಗೆ ನರೇಂದ್ರ ಮೋದಿಯ ಭಾರತ ಏಕೆ ಹೆದರುತ್ತದೆ? ದೇಶಭಕ್ತರನ್ನು ಪ್ರಧಾನಮಂತ್ರಿಗಳು ಏಕೆ ಅಪಾಯಕಾರಿ ಎಂದು ಭಾವಿಸುತ್ತಾರೆ? ತಮ್ಮ ಅಭಿಪ್ರಾಯಕ್ಕೆ ವ್ಯತಿರಿಕ್ತವಾದ ನಿಲುವು ಹೊಂದಿರುವವರ ಬಗ್ಗೆ ಅವರ ಅಸಹನೆ ಏಕೆ? ಪ್ರಜಾಪ್ರಭುತ್ವ ಎಂದರೆ ಹೆದರುತ್ತಿರುವವರು ಯಾರು? ಇದಕ್ಕೆ ಉತ್ತರವನ್ನು ಮಹಾತ್ಮ ಗಾಂಧಿಯವರ ಮಾತುಗಳಲ್ಲಿ ಕಾಣಬಹುದೇನೋ “ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ಜನತೆಗೆ ಸ್ವಾತಂತ್ರ್ಯದ ಪ್ರಜ್ಞೆ ಬಲವಾಗಿರಬೇಕು., ಆತ್ಮ ಗೌರವ ಮತ್ತು ಒಗ್ಗಟ್ಟಿನ ಪ್ರಜ್ಞೆ ಇರಬೇಕು. ಈ ಜನತೆ ಉತ್ತಮ ಮತ್ತು ಪ್ರಾಮಾಣಿಕ ವ್ಯಕ್ತಿಗಳನ್ನು ಮಾತ್ರ ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಲು ಒತ್ತಾಯಿಸಬೇಕು.”
ಮೂಲ : ಟಿ ಜೆ ಎಸ್ ಜಾರ್ಜ್ ( Which leaders are ‘good and true’? ದ ಇಂಡಿಯನ್ ಎಕ್ಸ್ ಪ್ರೆಸ್ 11-7-21)
ಅನುವಾದ; ನಾ ದಿವಾಕರ