ನವಿರುರಸ್ತೆಯ ಕ್ಷಿಪ್ರಗತಿಯ ಪಯಣದ ಹಿತ ಹಲವು ಸುಖಾನುಭವಗಳನ್ನು ಕಸಿದುಕೊಳ್ಳುತ್ತದೆ
ಮೈಸೂರು ಬೆಂಗಳೂರು ನಡುವೆ ದಶಪಥ ರಸ್ತೆ ಬಹುಪಾಲು ಪೂರ್ಣವಾಗಿದೆ. ಮೂರೂವರೆ-ನಾಲ್ಕು ಗಂಟೆಗಳ ತ್ರಾಸದಾಯಕ ಪಯಣದಿಂದ ಸಮಾಜದ ಹಿತವಲಯದ ಒಂದು ವರ್ಗ ಈಗ ಎರಡೇ ಗಂಟೆಗಳ ಪಯಣದ ಆಹ್ಲಾದವನ್ನು ಅನುಭವಿಸಬಹುದಾಗಿದೆ. ನೆಲಹಾಸುಗಳಂತಹ ನವಿರಾದ ರಸ್ತೆ, ಉಬ್ಬುತಗ್ಗುಗಳಿಲ್ಲದ, ಹಳ್ಳಕೊಳ್ಳಗಳಿಲ್ಲದ ರಸ್ತೆ, ಸಂಚಾರ ನಿಬಿಡತೆಯೂ ಇಲ್ಲದೆ, ಸಂಚಾರ ನಿರ್ಬಂಧಗಳೂ ಇಲ್ಲದೆ, ಸಿಗ್ನಲ್ಗಳ ಕಾಟ ಇಲ್ಲದೆ, ವಾಹನ ಸಂಚಾರದಿಂದ ಉಂಟಾಗುವ ಟ್ರಾಫಿಕ್ ಜಾಮ್ಗಳ ಗೋಜಲುಗಳಿಲ್ಲದೆ ಮೈಸೂರಿನ ಕೊಲಂಬಿಯಾ ಏಷಿಯಾದಿಂದ ಬೆಂಗಳೂರಿನ ಕೆಂಗೇರಿಯವರೆಗೆ ವಿಸ್ತರಿಸುವ ದಶಪಥದ ಪಯಣ ಒಂದು ಹೊಸ ಅನುಭವವನ್ನೇನೋ ಕೊಡುತ್ತದೆ. ಸಮಯದ ತುರ್ತು ಇರಲಿ ಇಲ್ಲದಿರಲಿ, ತಾವು ಉದ್ದೇಶಿಸಿದ ಸ್ಥಳವನ್ನು ಆದಷ್ಟೂ ಬೇಗನೆ ತಲುಪುವ ತುಡಿತ ಮಾನವ ಸಹಜವಾದದ್ದು. ಆದ್ದರಿಂದಲೇ ವಿವಿಧ ನಗರಗಳ ನಡುವೆ ತಡೆರಹಿತ ರೈಲು, ಬಸ್ಸುಗಳಿಗೆ ಬೇಡಿಕೆಯೂ ಹೆಚ್ಚಾಗಿರುತ್ತದೆ.
ಬೆಂಗಳೂರಿಗೆ ಎರಡು ಗಂಟೆಗಳ ಒಳಗೆ ತಲುಪಬಹುದು ಎಂಬ ಖುಷಿಯೊಂದಿಗೇ ಇತ್ತೀಚೆಗೆ ಓಲಾ ಕ್ಯಾಬ್ನಲ್ಲಿ ಚಲಿಸಿದಾಗ, ಪ್ರಯಾಣದ ಹಿತಕರ ಅನುಭವವೇನೋ ಅಪ್ಯಾಯಮಾನ ಎನಿಸಿತ್ತು. ಬಹುಶಃ ನಮ್ಮ ವಾಟ್ಸಾಪ್ಗಳ ತೊಟ್ಟಿಗಳಲ್ಲಿ ಸಂಗ್ರಹವಾಗುವ ಎಲ್ಲ ಸುದ್ದಿಗಳತ್ತಲೂ ಒಮ್ಮೆ ಕಣ್ಣು ಹಾಯಿಸುವುದರೊಳಗಾಗಿ ಅರ್ಧದಾರಿಯನ್ನು ಕ್ರಮಿಸಿರಲು ಸಾಧ್ಯ. ಯಾವ ಊರಿನಲ್ಲಿದ್ದೇವೆ, ಎಲ್ಲಿದ್ದೇವೆ, ಸುತ್ತಮುತ್ತ ಏನಿದೆ ಎಂಬ ಯೋಚನೆಗೂ ಅವಕಾಶವೀಯತೆ ರಾಕೆಟ್ ವೇಗದಲ್ಲಿ ಚಲಿಸುವ ವಾಹನದ ಕಿಟಕಿಯಿಂದಾಚೆಗೆ ದೃಷ್ಟಿ ಹಾಯಿಸಿದರೂ, ಸುತ್ತಮುತ್ತಲಿನ ಹೊಲಗದ್ದೆಗಳು, ತೋಟಗಳು, ಕಡಿದ ಬೆಟ್ಟಗಳು, ಅಭಿವೃದ್ಧಿಗಾಗಿ ತುಂಡರಿಸಲ್ಪಟ್ಟ ಹಳ್ಳಿಗಳು ಮಾತ್ರ ಕಾಣಲು ಸಾಧ್ಯ. ಅತ್ಯಂತ ಕನಿಷ್ಟ ಪ್ರಮಾಣದಲ್ಲಿ ಕಣ್ಣಿಗೆ ಬೀಳುವುದೆಂದರೆ ಮನುಷ್ಯ ಮತ್ತು ಅವನ ಒಡನಾಡಿ ಜಾನುವಾರುಗಳು.
ಜನಗಳ ಗದ್ದಲವಿಲ್ಲದೆ, ಜಾನುವಾರುಗಳ ಸದ್ದಿಲ್ಲದೆ, ಊರು ಕೇರಿಗಳ ಸೋಂಕಿಲ್ಲದೆ ಸಾಗುವ ಈ ಹಾದಿಯುದ್ದಕ್ಕೂ ಮುಕ್ತವಾಗಿ ಕಾಣುವುದು ಆಕಾಶ, ನವಿರಾದ ರಸ್ತೆ, ಸುತ್ತಲಿನ ಅರೆಬೆಂದ ನಿಸರ್ಗದೊಡಲು ಹಾಗೂ ಟೋಲ್ಗಳೆಂದು ಕರೆಯಲ್ಪಡುವ ಬಂಡವಾಳ ವ್ಯವಸ್ಥೆಯ ಸುಲಿಗೆಯ ಪ್ರವೇಶ ದ್ವಾರಗಳು. ಬಹುಶಃ ಇನ್ನೆರಡು ತಿಂಗಳಲ್ಲಿ ಈ ಪ್ರಕೃತಿ ಹಂತಕ ಸುಖಾಸೀನ ಪಯಣವನ್ನು ಸವಿಯಬೇಕಾದಲ್ಲಿ ಸಾಕಷ್ಟು ಹಣ ತೆತ್ತಬೇಕಾಗಬಹುದು. ಮಧ್ಯಮ ವರ್ಗದ ರಥ-ದ್ವಿಚಕ್ರವಾಹನ, ರೈತಾಪಿಯ ರಥ-ಎತ್ತಿನಬಂಡಿ, ಕುದುರೆ ಬಂಡಿ ಅಥವಾ ಜಟಕಾ, ಸಾಮಾನ್ಯರ ರಥ-ಬೈಸಿಕಲ್ಲು ಇವೆಲ್ಲವೂ ಈ ನವಿರು ರಸ್ತೆಗಳಲ್ಲಿ ನಿಷಿದ್ಧವಾಗಿಬಿಡುತ್ತವೆ. ಈ ವಾಹನಗಳ ಸವಾರರಿಗೆ ಟೋಲ್ ಭರಿಸುವ ಶಕ್ತಿ ಇರಲಿ ಇಲ್ಲದಿರಲಿ, ಸಮಾಜದ ಮೇಲ್ ಸ್ತರದ ಒಂದು ವರ್ಗದ ಸುಖಾಸಕ್ತಿಗಾಗಿಯೇ ನಿರ್ಮಿತವಾಗುವ ಇಂತಹ ʼರಾಜಮಾರ್ಗಗಳಲ್ಲಿ ʼ ಅವರೆಲ್ಲರೂ ಶ್ರೀಸಾಮಾನ್ಯರಾಗಿಬಿಡುತ್ತಾರೆ. ಹಾಗಾಗಿ ಅವರು ಬಳಸುವ ಆಧುನಿಕವೂ ಅಲ್ಲದ, ಪ್ರಾಚೀನವೂ ಅಲ್ಲದ ಮಧ್ಯಕಾಲೀನ ಯುಗದ ವಾಹಕಗಳೆಲ್ಲವೂ ಈ ರಸ್ತೆಗಳಿಗೆ ಅಪಥ್ಯವಾಗಿಬಿಡುತ್ತದೆ. ಎರಡೂ ಬದಿಯ ಸರ್ವೀಸ್ ರಸ್ತೆಗಳೇ ಇವರ ಪಾಲಿಗೆ ಶತಪಥದಂತೆ. ಹಾಗೆಂದ ಮಾತ್ರಕ್ಕೆ ʼ ನಟರಾಜ ಸರ್ವೀಸ್ʼ ಎಂದು ಸಾಮಾನ್ಯ ಜನಭಾಷೆಯಲ್ಲಿ ಹೇಳಲಾಗುವ ಕಾಲ್ನಡಿಗೆಯನ್ನು ಬಯಸುವವರಿಗೆ ಈ ರಸ್ತೆಗಳೇನೂ ಮುಕ್ತವಾಗುವುದಿಲ್ಲ. ಅವರಿಗೂ ಸರ್ವೀಸ್ ರಸ್ತೆಯೇ ರಾಜಮಾರ್ಗ.
ಏನೋ ಕಳೆದುಕೊಳ್ಳುವ ಭಾವ
ಪಯಣದ ನಡುವೆಯೇ ಒಮ್ಮೆ ಮನಸು ಹಿಂದಕ್ಕೆ ಜಾರಿದಾಗ ಕನಸಿನಂತೆ ಸ್ಮೃತಿಪಟಲವನ್ನು ಹಾದು ಹೋದ ನೆನಪುಗಳು ಮಾತ್ರ ಪಯಣಕ್ಕಿಂತಲೂ ಹಿತಕರವಾದುದು. ಹಿಂದೊಮ್ಮೆ ಒಡನೆಯೇ ಪಯಣಿಸಿದ್ದ ಅಮ್ಮ, ಅಕ್ಕ ಅಥವಾ ಇತರ ಹಿರಿಯರು ನೆನಪಾಗಿಬಿಡುತ್ತಾರೆ. ಶ್ರೀರಂಗಪಟ್ಟಣ ಹಾದು ಹೋಗುವಾಗ ರಂಗನಾಥನ ದರ್ಶನ ಸಾಧ್ಯವಾಗದಿದ್ದರೂ, ವಾಹನದ ವೇಗ ತಗ್ಗಿಸಿ ದೂರದಿಂದಲೇ ನಮಿಸುವ ಮೂಲಕ ಸಾರ್ಥಕತೆ ಪಡೆಯುವ ಮನಸುಗಳು ನೆನಪಾಗಿಬಿಡುತ್ತವೆ. ಹಾಗೆಯೇ ವಾಹನದ ಹೊರಗೆ ತಲೆಹಾಕಿ ಹರಿವ ಕಾವೇರಿಯನ್ನು ನೋಡಿ ಸಂಭ್ರಮಿಸುವ ಪುಟ್ಟ ಮಕ್ಕಳು. ಕಾವೇರಿ ನದಿ ನೋಡ್ರೋ/ಡ್ರೇ ಎನ್ನುವ ಹಿರಿಯರ ಆಗ್ರಹ, ತಲೆ ಹೊರಗೆ ಹಾಕಬೇಡ ಎನ್ನುವ ಎಚ್ಚರಿಕೆ ಮಾತುಗಳು. ಆದರೆ ದಶಪಥದಲ್ಲಿ ಕಾವೇರಿ ಕಾಣುವುದೇ ಇಲ್ಲ, ಸೇತುವೆಗಳ ಅಡಿಯಲ್ಲಿ ಹುಗಿದುಹೋಗಿರುತ್ತಾಳೆ. ದೈವದರ್ಶನಕ್ಕಾಗಿ ಗಗನವನ್ನೇ ದಿಟ್ಟಿಸಬೇಕಷ್ಟೆ.
ಅಷ್ಟೇ ಅಲ್ಲ ವಾಹನದ ವೇಗ ತಗ್ಗಿದ ಕೂಡಲೇ ಹತ್ತಿರ ಓಡಿಬರುವ ಹೂಮಾರುವ ಪುಟ್ಟ ಹುಡುಗಿ ಅಥವಾ ಮುದುಕಿ, ಒಂದು ಮಾರು ಹೂವು ಕೊಳ್ಳುವಂತೆ ಗೋಗರೆಯುವ ಅಸಹಾಯಕ ಮಗು ಅಥವಾ ಹಿರಿಯ ಜೀವ. ದಿನವಿಡೀ ಹೀಗೇ ರಸ್ತೆಯಲ್ಲೇ ದುಡಿದರೂ ಒಪ್ಪೊತ್ತಿನ ಕೂಳುಮಾತ್ರ ಪಡೆಯಬಲ್ಲ ಆ ಅಮಾಯಕ ʼವ್ಯಾಪಾರಿಗಳುʼ. ಹೂವು ಮಾತ್ರ ಅಲ್ಲ, ಎರಡು ಅಡಿ ಉದ್ದದ ಪೆನ್ನುಗಳು, ಚಳಿಗಾಲದಲ್ಲಿ ವುಲನ್ ಟೊಪ್ಪಿ, ಮೊಬೈಲ್ ಹಿಡಿಕೆ, ವರ್ಷಾರಂಭದಲ್ಲಿ ಪಾಕೆಟ್ ಕ್ಯಾಲೆಂಡರ್, ಸೀಬೆ-ಅನಾನಸ್-ದ್ರಾಕ್ಷಿ ಮುಂತಾದ ಹಣ್ಣುಗಳು, ಹುರಿದ ಕಡಲೆ, ಕತ್ತರಿಸಿದ ಕಲ್ಲಂಗಡಿ ಹೀಗೆ ಕಾರುಗಳ ಸುತ್ತ, ನಿಂತ ಬಸ್ಸುಗಳ ಸುತ್ತ ತಿರುಗಾಡುವ ದುಡಿಮೆಯ ಜೀವಗಳು. ಇವರೊಡನೆ ಚೌಕಾಸಿಯಲ್ಲೇ ಕಾಲಕಳೆದು ಇನ್ನೇನು ಜೇಬಿನಿಂದ/ವ್ಯಾನಿಟಿ ಬ್ಯಾಗಿನಿಂದ ಹಣ ತೆಗೆಯುವಷ್ಟರಲ್ಲಿ ಚಲಿಸಲಾರಂಭಿಸುವ ವಾಹನಗಳು. ಮಿಕಮಿಕ ನೋಡುತ್ತಾ ನಿಲ್ಲುವ ಆ ಅಸಹಾಯಕ ಜೀವಗಳು. ಹಿತವಲಯದ ಜಗತ್ತಿನಿಂದಾಚೆಗೂ ಕಾಣಲೇಬೇಕಾದ ಮತ್ತೊಂದು ಪ್ರಪಂಚ ದಶಪಥದ ಪಯಣದಲ್ಲಿ ಕಾಣುವುದೇ ಇಲ್ಲ.
ಮಂಡ್ಯ ಮದ್ದೂರು ಮೂಲಕ ಹಾದು ಹೋಗುವಾಗ ಮೂಗಿಗೆ ಬಡಿಯುವ ಮದ್ದೂರು ವಡೆಯ ಪರಿಮಳ ದಶಪಥದಲ್ಲಿ ನೆನಪಾಗಲೂ ಸಾಧ್ಯವಾಗುವುದಿಲ್ಲ. ಹಸಿವಿನ ಹಂಗನ್ನೂ ಲೆಕ್ಕಿಸದೆ ಅಡಿಗಾಸ್ ಬಳಿಯೋ, ಮದ್ದೂರು ಟಿಫಾನಿಸ್ ಬಳಿಯೋ ವಾಹನ ನಿಲ್ಲಿಸಿ ಮದ್ದೂರು ವಡೆಯನ್ನು ಸವಿದು ಮುಂದೆ ಹೋಗುವ ಒಂದು ಆಯ್ಕೆ ನೆನಪಾಗಿಬಿಡುತ್ತದೆ. ಮದ್ದೂರು ದಾಟಿ ಚನ್ನಪಟ್ಟಣ ಪ್ರವೇಶಿಸುತ್ತಿದ್ದ ಹಾಗೆಯೇ ಮಕ್ಕಳನ್ನು ಮತ್ತು ವಯಸ್ಸಾದವರನ್ನೂ ಆಕರ್ಷಿಸುತ್ತಿದ್ದ ಜಗದ್ವಿಖ್ಯಾತ ಚನ್ನಪಟ್ಟಣದ ಬೊಂಬೆಗಳು, ಸಾಲು ಸಾಲು ಅಂಗಡಿಗಳು ಎಂತಹ ಜಿಪುಣರನ್ನೂ ಖರೀದಿಗೆ ಆಕರ್ಷಿಸುತ್ತಿದ್ದ ತಾಣಗಳು. ಖರೀದಿಸದಿದ್ದರೂ, ಕನಿಷ್ಠ ಪಕ್ಷ ನಮ್ಮ ಎಳೆಯ ಮಕ್ಕಳಿಗೆ, ಈ ಬೊಂಬೆಗಳ ಚರಿತ್ರೆ ಮತ್ತು ವರ್ತಮಾನದ ಮಹತ್ವನ್ನು ತಿಳಿಸುವ ಸಲುವಾಗಿಯಾದರೂ, ಒಮ್ಮೆ ನಿಂತು ಹತ್ತಾರು ಅಂಗಡಿಗಳನ್ನು ಸುತ್ತಾಡಿ, ಚೌಕಾಸಿಯ ಹಗ್ಗಜಗ್ಗಾಟವನ್ನು ಯಶಸ್ವಿಯಾಗಿ ಪೂರೈಸಿ ಕೊನೆಗೆ ಬರಿಗೈಲಿ ಹಿಂದಿರುಗುವ ಅನುಭವವೂ ಸಹ ಹಿತಕರವಾದದ್ದೇ. ಅಲ್ಲಿ ವಸ್ತು ಮತ್ತು ಖರೀದಿಗಿಂತಲೂ ಮುಖ್ಯವಾಗಿರುತ್ತಿದ್ದುದು ಆ ಕೌಶಲ್ಯದ ಜಗತ್ತಿನಲ್ಲಿ ಕಳೆಯಬಹುದಾಗಿದ್ದ ಆನಂದದ ಕ್ಷಣಗಳು. ದಶಪಥ ರಸ್ತೆ ಇವೆಲ್ಲವನ್ನೂ ಕಸಿದುಕೊಂಡಿದೆ.
ಕಣ್ಣಿಗೆ ಆಹ್ಲಾದವೆನಿಸುವ ರಾಮನಗರದ ಬೃಹತ್ ಬೆಟ್ಟಗಳು, ಕಲ್ಲು ಬಂಡೆಗಳು ಮೈಸೂರು ಬೆಂಗಳೂರು ನಡುವೆ ಪ್ರಯಾಣಿಸುವವರಿಗೆ ಒಂದು ಸುಂದರ ದೃಶ್ಯತಾಣವಾಗಿದ್ದವು. ಸಮೀಪಕ್ಕೆ ಹೋಗಿ ನೋಡದಿದ್ದರೂ, ಜಾನಪದ ಲೋಕದ ಸವಿಯೂಟದೊಂದಿಗೆ ಈ ಶಿಲೆಗಳ ವೀಕ್ಷಣೆ ಮಕ್ಕಳಿಗೆ ಆಹ್ಲಾದ ನೀಡುತ್ತಿದ್ದವು. ಹಾಗೆಯೇ ಹಿರಿಯ ತಲೆಮಾರಿಗೆ 1975ರ ಶೋಲೆ ಚಿತ್ರವನ್ನು, ಗಬ್ಬರ್ ಸಿಂಗ್ನನ್ನು ನೆನಪಿಸುವ ʼಶೋಲೆಬೆಟ್ಟʼ ಸಹ ಒಂದು ರೀತಿಯಲ್ಲಿ ದೂರದ ಪ್ರೇಕ್ಷಣೀಯ ಸ್ಥಾವರವಾಗಿತ್ತು. ನವಿರಾದ ರೇಷಿಮೆ, ಗಡುಸಾದ ಕಲ್ಲು ಬಂಡೆಗಳು ಮತ್ತು ಸೂಕ್ಷ್ಮ ಮಾನವ ಕೌಶಲ್ಯದ ಬೊಂಬೆಗಳು, ಈ ಮೂರರ ಮಿಶ್ರಣವನ್ನು ಚನ್ನಪಟ್ಟಣ-ರಾಮನಗರದಲ್ಲಿ ಕಾಣುವ ಮೂಲಕವೇ ಕರ್ನಾಟಕದ ಚರಿತ್ರೆಯ ಪುಟಗಳೂ ತೆರೆದುಕೊಳ್ಳುತ್ತಿದ್ದವು. ಶ್ರೀರಂಗಪಟ್ಟಣದಲ್ಲಿ ನೆನಪಾಗುವ ಟಿಪ್ಪು ಇಲ್ಲಿಯೂ ನೆನಪಾಗುವುದು ಕಾಕತಾಳೀಯವೇನಲ್ಲ, ಚಾರಿತ್ರಿಕ ವಾಸ್ತವ.
ಕಣ್ಮನ ತಣಿಸುವ ಈ ಸುಂದರ ದೃಶ್ಯಗಳನ್ನು ದಾಟುತ್ತಿರುವಂತೆಯೇ ಚುರುಗುಟ್ಟುವ ಹೊಟ್ಟೆಯನ್ನು ಆಕರ್ಷಿಸುತ್ತಿದ್ದುದು ಬಿಡದಿಯ ತಟ್ಟೆ ಇಡ್ಲಿಗಳು. ಮದ್ದೂರಿನ ವಡೆಯಂತೆಯೇ ಬಿಡದಿಯ ತಟ್ಟೆಇಡ್ಲಿ ಎಂತಹ ಪ್ರಯಾಣಿಕರನ್ನೂ ಸೆಳೆಯುವ ಉದರಾಕರ್ಷಣೆಯ ತಿನಿಸುಗಳು. ಶ್ರೀರಂಗಪಟ್ಟಣದ ಚಾರಿತ್ರಿಕ ತಾಣಗಳು, ಕಾವೇರಿಯ ಹರಿವು, ನದಿ ಸಂಗಮ, ಕೋಟೆ, ದೇವಾಲಯ ಇವುಗಳೊಂದಿಗೇ ಸಕ್ಕರೆ ಜಿಲ್ಲೆ ಮಂಡ್ಯದ ಸಿಹಿ ಕಬ್ಬಿನ ಗದ್ದೆಗಳು, ಇವೆಲ್ಲವನ್ನೂ ದಾಟಿ ಬೆಂಗಳೂರು ಪ್ರವೇಶಿಸುವ ವೇಳೆಗೆ ಎಂತಹುದೇ ತ್ರಾಸದಾಯಕ ಪಯಣದಲ್ಲೂ ಮನಸು ಆಹ್ಲಾದದಿಂದ ಕೂಡಿರುವುದಕ್ಕೆ ಕಾರಣವೇ ಈ ತಾಣಗಳು, ತಿಂಡಿ ತಿನಿಸುಗಳು, ಆಟಿಕೆಗಳು ಮತ್ತು ನಿಸರ್ಗದ ಸಹಜ ಸೌಂದರ್ಯ ತಾಣಗಳು.
ದಶಪಥದ ಪಯಣದಲ್ಲಿ ಕಳೆದುಹೋಗುವ ಈ ಸಂತಸದ ಕ್ಷಣಗಳನ್ನು ಬದಿಗೊತ್ತಿ, ಹಾದಿಯುದ್ದಕ್ಕೂ ಗುರುತಿಸಬಹುದಾದ ನೆನೆಯಬಹುದಾದ ಮಾನವೀಯ ಜಗತ್ತೆಂದರೆ, ಹಳೆಯ ಮಾರ್ಗದಲ್ಲಿ ತಮ್ಮ ಜೀವನ ಮತ್ತು ಜೀವನೋಪಾಯಕ್ಕಾಗಿ ಹಳೆಯ ಚತುಷ್ಪಥವನ್ನೇ ಅವಲಂಬಿಸಿದ್ದ ಸಾವಿರಾರು ಸಣ್ಣಪುಟ್ಟ ವ್ಯಾಪಾರಿಗಳು, ಹೋಟೆಲುಗಳು, ಟೀ ಸ್ಟಾಲುಗಳು, ಹೂವುಹಣ್ಣು ಮಾರಾಟಗಾರರು, ಆಟಿಕೆಗಳ ಮಾರಾಟಗಾರರು ಮತ್ತು ರಸ್ತೆಯಲ್ಲಿ ನಿಂತುಕೊಂಡೇ ವಹಿವಾಟು ನಡೆಸುವ ಜಂಗಮ ವ್ಯಾಪಾರಿಗಳು. ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವವರನ್ನೇ ಬಹುಮಟ್ಟಿಗೆ ನಂಬಿ ಬದುಕುತ್ತಿದ್ದ ಈ ಜನಸಮೂಹ ಈಗಲೂ ಅದೇ ರಸ್ತೆಯಲ್ಲಿ ಪಯಣಿಸುವ ಬಸ್ ಪ್ರಯಾಣಿಕರನ್ನೋ, ಪ್ರವಾಸಿಗರನ್ನೋ ಅವಲಂಬಿಸಬೇಕಾಗುತ್ತದೆ. ಜೇಬಿನಲ್ಲಿ ಹಣ ಇದ್ದವರು ದಶಪಥದಲ್ಲೇ ಚಲಿಸುತ್ತಾರೆ. ಹಣ ಇಲ್ಲದವರು ಅಥವಾ ಕಡಿಮೆ ಖರ್ಚು ಮಾಡುವ ಜನರು ಹಳೆಯ ಮಾರ್ಗಗಳಲ್ಲಿ ಪ್ರಯಾಣಿಸುತ್ತಾರೆ. ಪ್ರವಾಸಿಗರೂ ಸಹ ನಿರ್ದಿಷ್ಟ ಸ್ಥಾವರಗಳಿಗೆ ಮಾತ್ರವೇ ಭೇಟಿ ನೀಡಿ ಪುನಃ ದಶಪಥಕ್ಕೇ ಹಿಂದಿರುಗುತ್ತಾರೆ. ಹಾಗಾಗಿ ಈ ಮಾರ್ಗದಲ್ಲಿ ತಮ್ಮ ನಿತ್ಯ ದುಡಿಮೆಯಿಂದ ಬದುಕು ಸವೆಸುತ್ತಿದ್ದ ಸಾವಿರಾರು ಜನರು, ಬಿಡದಿಯ ತಟ್ಟೆ ಇಡ್ಲಿಯಿಂದ ಶ್ರೀರಂಗಪಟ್ಟಣದ ಹೂಮಾರುವವರವರೆಗೆ, ಬಹುಶಃ ತಮ್ಮ ಜೀವನೋಪಾಯದ ಮಾರ್ಗಗಳನ್ನು ಬದಲಿಸಿಕೊಳ್ಳಬೇಕಾಗಬಹುದು. ಇದರ ಪರಿಣಾಮವನ್ನು ಇನ್ನೂ ಅಧ್ಯಯನಗಳ ಮೂಲಕ ಗ್ರಹಿಸಬಹುದಾಗಿದೆ.
ಯೋಚಿಸಬೇಕಾದ ವಿಷಯ ಎಂದರೆ, ಸಮಾಜದ ಆರ್ಥಿಕ ಉನ್ನತಿಯ ಫಲಾನುಭವಿಗಳು ವೇಗವಾಗಿ ಚಲಿಸಿ, ಶೀಘ್ರವಾಗಿ ಗುರಿ ತಲುಪುವ ಎಷ್ಟೇ ಉತ್ಸುಕತೆಯನ್ನು ಹೊಂದಿದ್ದರೂ, ವ್ಯಕ್ತಿಗತ ನೆಲೆಯಲ್ಲಿ-ಭಾವನಾತ್ಮಕವಾಗಿಯಾದರೂ-ಹಳೆಯ ಮೈಸೂರು-ಬೆಂಗಳೂರು ರಸ್ತೆಯ ಸುಖಾನುಭವಗಳಿಂದ ವಂಚಿತರಾಗುತ್ತಾರೆ. ದುಡ್ಡು ಖರ್ಚು ಮಾಡಿದರೆ ಸಿಗಲಾರದಂತಹ ಈ ರೀತಿಯ ಜೀವನಾನುಭವಗಳನ್ನು ದಶಪಥವೇ ನುಂಗಿಹಾಕಿತೇ ಅಥವಾ ಅತಿವೇಗದ ಬದುಕಿಗೆ ಒಗ್ಗಿಹೋದ ಸಮಾಜದ ಒಂದು ವರ್ಗವೇ ಕಳೆದುಕೊಂಡಿದೆಯೇ ? ಇದು ವ್ಯಕ್ತಿಗತ ಅಭಿವ್ಯಕ್ತಿಗೆ ಬಿಟ್ಟ ವಿಚಾರ. ಜೀವನದಲ್ಲಿ ಹಣ ಕೊಟ್ಟರೆ ಎಲ್ಲವೂ ಸಿಗುವುದಿಲ್ಲ ಹಾಗೆಯೇ ಕಳೆದುಕೊಳ್ಳುವ ಹಿತಾನುಭವಗಳನ್ನು ಹಣದಿಂದ ಖರೀದಿಸಲೂ ಆಗುವುದಿಲ್ಲ. ಅತಿವೇಗದಲ್ಲಿ ಬೆಂಗಳೂರು ತಲುಪುವ ರಭಸದಲ್ಲಿ ಕಳೆದುಹೋಗುವ ರಸಮಯ ಕ್ಷಣಗಳನ್ನು ಭರಿಸುವುದಾದರೂ ಎಲ್ಲಿಂದ ? ಮತ್ತೆ ಇದು ವ್ಯಕ್ತಿಗತವಾಗಿ ಕಾಡಬೇಕಾದ ಪ್ರಶ್ನೆ ಅಲ್ಲವೇ ?
-೦-೦-೦-೦-