ದೇಶದಲ್ಲಿ ಹಲವಾರು ವಿಷಯಗಳಿಗೆ ಗಂಭೀರ ಚರ್ಚೆ ಮತ್ತು ಪ್ರತಿಭಟನೆ ನಡೆಯುತ್ತಿರುವ ಸಮಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಕರ್ನಾಟಕಕ್ಕೆ ಭೇಟಿ ನೀಡಿ ತೆರಳಿದ್ದಾರೆ.
ಹೀಗೆ ಬಂದು ಹಾಗೆ ಹೋದ ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಜ್ಯಕ್ಕಾದರೂ ಆದ ಲಾಭವೇನು? ಬಿಜೆಪಿ ಮುಖಂಡರೇ ಹೇಳಿಕೊಂಡಂತೆ ಅವರನ್ನು ನೋಡೋದಷ್ಟೇ ಈ ಭೇಟಿ ಪ್ರವಾಸ ಆಯಿತಾ? ರಾಜ್ಯದ ಜನತೆಗೆ ಏನಾದರೂ ಕೊಡುಗೆ ಸಿಕ್ಕಿತಾ? ಕೊನೆಗೆ ಬಿಜೆಪಿಗಾದರೂ ಏನಾದರೂ ಲಾಭವಾಯಿತಾ? ಹೀಗೆ ಹಲವಾರು ಪ್ರಶ್ನೆಗಳು ಜನರನ್ನು ಕಾಡತೊಡಗಿದೆ.
ಹೌದು, ಪ್ರಧಾನಿ ಭೇಟಿ ನೀಡುತ್ತಾರೆ ಅಂದರೆ ಅಲ್ಲಿ ಏನಾದರೂ ಒಂದು ಘೋಷಣೆ ಅಥವಾ ನೆರವಿನ ಹಸ್ತ ಅಥವಾ ಇನ್ನಾವುದೋ ರೀತಿಯಲ್ಲಿ ರಾಜ್ಯದ ಜನತೆಗೆ ಕೊಡುಗೆ ಸಿಗುತ್ತದೆ ಎಂಬ ಭರವಸೆ ಮೂಡಿರುತ್ತದೆ. ಆದರೆ ಈ ವಿಷಯದಲ್ಲಿ ರಾಜ್ಯದ ಜನತೆಗೆ ಮಾತ್ರವಲ್ಲ, ಸ್ವತಃ ಬಿಜೆಪಿ ಮುಖಂಡರಿಗೆ ಭ್ರಮನಿರಸನ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಪ್ರಧಾನಿ ಎರಡು ದಿನಗಳ ಪ್ರವಾಸದ ವೇಳೆ ಎರಡು ನಗರಗಳಿಗೆ ಭೇಟಿ ನೀಡಿದರು. ಆದರೆ ಅವರು ಎರಡು ದಿನಗಳಲ್ಲಿ ೨೪ ಗಂಟೆ ಕೂಡ ಇರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಬೆಂಗಳೂರಿಗೆ ಸೋಮವಾರ ಮಧ್ಯಾಹ್ನ ಆಗಮಿಸಿದ ಪ್ರಧಾನಿ ಒಂದೆರಡು ಕಾರ್ಯಕ್ರಮ ಉದ್ಘಾಟಿಸಿ ಮೈಸೂರಿಗೆ ತೆರಳಿದರು. ಮೈಸೂರಿನಲ್ಲಿ ತಂಗಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಳಿಗ್ಗೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜವಂಶಸ್ಥರೊಂದಿಗೆ ಊಪಹಾರ ಸೇವಿಸಿ ದೆಹಲಿಗೆ ಮರಳಿದರು.
ಪ್ರಧಾನಿ ಅಲ್ಪಾವಧಿಯ ಭೇಟಿಯಲ್ಲಿ ರಾಜ್ಯಕ್ಕೆ ಏನೂ ಸಿಗಲಿಲ್ಲ. ಅವರ ವರ್ಚಸ್ಸನ್ನು ವೃದ್ದಿಸಿ ಪಕ್ಷ ಲಾಭ ಮಾಡಿಕೊಳ್ಳುವ ಪ್ರಯತ್ನಗಳು ಸಫಲವಾಗಲಿಲ್ಲ. ಬೆಂಗಳೂರಿಗೆ ಭೇಟಿ ನೀಡಿದ ಒಂದು ದಿನದಲ್ಲಿ ಅವರು ಇದ್ದಿದ್ದು ಕೇವಲ ೪.೩೦ ಗಂಟೆ ಮಾತ್ರ. ಇದಕ್ಕಾಗಿ ಬಿಬಿಎಂಪಿ ೨೩ ಕೋಟಿ ಖರ್ಚು ಮಾಡಿತು. ಅಲ್ಲದೇ ಬೆಂಗಳೂರು ವಿಶ್ವವಿದ್ಯಾಲಯದ ೬೪ ಕಾಲೇಜು ಹಾಗೂ ಹಲವಾರು ಶಾಲೆಗಳಿಗೆ ರಜೆ ನೀಡಲಾಯಿತು.
ಪ್ರಧಾನಿ ನಗರಕ್ಕೆ ಬಂದರೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅವಶ್ಯಕತೆ ಏನಿತ್ತು? ಅಷ್ಟೋಂದು ಭದ್ರತೆಯ ಭೀತಿ ಅಥವಾ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಹೀಗೆ ಮಾಡಿದರೆ ಅಂದರೆ ಅದೂ ಇಲ್ಲ. ಏಕೆಂದರೆ ದಾರಿ ಮಧ್ಯದಲ್ಲಿ ಕಾರು ನಿಲ್ಲಿಸಿ ನಿಲ್ಲಿಸಿ ಕೈ ಬಿಸಿ ಮೋದಿ ಪ್ರಯಾಣ ಮಾಡುತ್ತಿದ್ದರು. ಅಲ್ಲೇಲ್ಲಾ ಜನರೇ ಇರಲಿಲ್ಲ. ಬದಲಾಗಿ ಬಿಜೆಪಿ ಕಾರ್ಯಕರ್ತರೇ ನಿಂತು ಘೋಷಣೆ ಕೂಗುತ್ತಿದ್ದರು.
ಪ್ರಧಾನಿ ಭೇಟಿ ನೀಡಿ ರಾಜ್ಯವನ್ನು ಕಾಡುತ್ತಿರುವ ಸಮಸ್ಯೆಗಳು, ಅಭಿವೃದ್ದಿ, ವಿವಾದಗಳ ಬಗ್ಗೆ ಚಕಾರ ಎತ್ತಲಿಲ್ಲ. ರಾಜ್ಯದ ಅಭಿವೃದ್ಧಿ ಕುರಿತು ಉಸಿರೆತ್ತಲಿಲ್ಲ. ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳ ಬಗ್ಗೆ ತುಟಿ ಬಿಚ್ಚಲಿಲ್ಲ. ಅಷ್ಟೇಕೆ ರಾಜ್ಯಕ್ಕೆ ಕಾಲಿಟ್ಟಿರುವ ಅಗ್ನಿಪಥ್ ಯೋಜನೆ ಬಗ್ಗೆಯೂ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೂ ಮಾಡಲಿಲ್ಲ. ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ಮಾಡಿದರೂ ಪ್ರತಿಕ್ರಿಯಿಸಲಿಲ್ಲ
ಇಷ್ಟೆಲ್ಲ ಇಲ್ಲಗಳ ನಡುವೆ ಪ್ರಧಾನಿ ಮೋದಿ ಭೇಟಿಯಿಂದ ಬಿಜೆಪಿ ಉತ್ಸಾಹಗೊಂಡಿದೆ. ಮುಂಬರುವ ಚುನಾವಣೆಗೆ ಇದು ಟಾನಿಕ್ ಎಂದು ಹಿರಿಹಿರಿ ಹಿಗ್ಗಿದೆ. ಅದರಲ್ಲೂ ಪ್ರಧಾನಿಯನ್ನು ನಾನೇ ಕರೆಸಿದ್ದೇನೆ. ನನಗೆ ಧನ್ಯವಾದ ಹೇಳಿ ಎಂದು ಹೇಳಿಕೊಂಡ ಸಂಸದ ಪ್ರತಾಪ್ ಸಿಂಹ ಪಕ್ಷದೊಳಗೆ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು ಬಿಟ್ಟರೆ ಪ್ರಧಾನಿ ಭೇಟಿಯಿಂದ ಯಾರಿಗೂ ಲಾಭವಾಗಿಲ್ಲ ಎಂದಷ್ಟೇ ಹೇಳಬಹುದು.