ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ನಡೆದ ಧ್ವಂಸ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಜ್ರಿವಾಲ್ ಮಖ್ಯವಲ್ಲ, ಈ ದೇಶ ಮುಖ್ಯ. ಹೀಗಾಗಿ, ನಾನು ದೇಶಕ್ಕಾಗಿ ಸಾಯಲು ಸಿದ್ಧ. ಗೂಂಡಾಗಿರಿ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರು ದೇಶದ ಯುವಕರಿಗೆ ಕೆಟ್ಟ ಸಂದೇಶ ರವಾನಿಸುತ್ತಿದ್ದಾರೆ ಎಂದೂ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಸ್ಪರ ಕಿತ್ತಾಟದಿಂದಲೇ ನಾವು 75 ವರ್ಷ ಹಾಳು ಮಾಡಿಕೊಂಡಿದ್ದೇವೆ. ನಾವು ಈ ದೇಶವನ್ನು ಒಗ್ಗಟ್ಟಿನಿಂದ ಮುನ್ನಡೆಸಬೇಕಿದೆ. ಗೂಂಡಾಗಿರಿಯಿಂದ ಈ ದೇಶದ ಏಳಿಗೆ ಸಾಧ್ಯವಿಲ್ಲ. ನಾವೆಲ್ಲರೂ ಶಾಂತಿಯುತವಾಗಿ ದುಡಿಯಬೇಕಾದ್ದು 21ನೇ ಶತಮಾನದ ಭಾರತದ ಅನಿವಾರ್ಯತೆ ಇದೆ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕಳೆದ ವಾರ ದಿಲ್ಲಿ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ತೆರಿಗೆ ರಹಿತ ಸೌಲಭ್ಯ ನೀಡಲು ನಿರಾಕರಿಸಿದ್ದರು. ಅಷ್ಟೇ ಅಲ್ಲ, ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಯೂಟ್ಯೂಬ್ನಲ್ಲಿ ಚಿತ್ರದ ಪ್ರದರ್ಶನಕ್ಕೆ ಏರ್ಪಾಡು ಮಾಡಲಿ ಎಂದು ಸವಾಲೆಸೆದಿದ್ದರು.
ಕೇಜ್ರಿವಾಲ್ ಅವರ ಈ ಹೇಳಿಕೆ ಖಂಡಿಸಿ ಕೇಜ್ರಿವಾಲ್ ನಿವಾಸದ ಎದುರು ಮಾರ್ಚ್ 30, ಬುಧವಾರದಂದು ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ತೇಜಸ್ವಿ ಸೂರ್ಯ ಸಾರಥ್ಯದಲ್ಲಿ ಪ್ರತಿಭಟನೆ ನಡೆದಿತ್ತು. ನಿವಾಸದ ಹಲವು ವಸ್ತುಗಳು ಧ್ವಂಸಗೊಂಡಿದ್ದವು ಎಂದು ಮಾಧ್ಯಮಗಳೂ ಕೂಡ ವರದಿ ಮಾಡಿವೆ.