ಮಮತಾ ಬ್ಯಾನರ್ಜಿ ಸರ್ಕಾರದ ಜತೆಗಿನ ಬಹಿರಂಗ ಗುದ್ದಾಟದ ಕಾರಣ ಕಳೆದ ಮೂರು ವರ್ಷಗಳಿಂದ ಸದಾ ಸುದ್ದಿಯಲ್ಲಿರುವ ಜಗದೀಪ್ ಧನಕರ್ ಅವರನ್ನು ಆಗಸ್ಟ್ 6ರಂದು ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಗೆ NDA ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಧನಕರ್ ಅವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಆಯ್ಕೆ ಮಾಡಿದಾಗಲೇ ಬಂಗಾಳದ ಸಿಎಂ ಮಮತರನ್ನು ಕೆರಳಿಸಿತ್ತು ಆದರೀಗ ಉಪ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ಮಮತಾ ಬ್ಯಾನರ್ಜಿ ಅವರನ್ನು ಮತ್ತಷ್ಟು ಕೆರಳಿಸಿದ್ದಾರೆ.
ಬಂಗಾಳ ಸರ್ಕಾರವು ಕೋಮುವಾದವನ್ನು ಬೆಳೆಸುತ್ತಿದೆ, ಧರ್ಮಗಳ ಓಲೈಕೆಯಲ್ಲಿ ತೊಡಗಿದೆ ಎಂದು ಧನಕರ್ ಅವರು ಆರೋಪಿಸುತ್ತಿದ್ದರೆ, ಮಮತಾ ಅವರ ಬಣವು ಧನಕರ್ ಅವರನ್ನು ‘ಬಿಜೆಪಿ ಏಜೆಂಟ್’ ಎಂದು ಟೀಕಿಸಿದೆ.
ಜಗದೀಪ್ ಧನಕರ್ ಪರಿಚಯ ಮತ್ತವರ ರಾಜಕೀಯ ಜೀವನ:
– 1951ರ ಮೇ 18ರಂದು ರಾಜಸ್ಥಾನದ ಜುಂಝುನು ಜಿಲ್ಲೆಯಲ್ಲಿ ಕಿತಾನಾ ಗ್ರಾಮದ ರೈತಾಪಿ ಕುಟುಂಬದಲ್ಲಿ ಧನಕರ್ ಜನನ.
– ಚಿತ್ತೋರಗಡದ ಸೈನಿಕ ಶಾಲೆಯಲ್ಲಿ ಶಾಲಾ ಶಿಕ್ಷಣ
– ರಾಜಸ್ಥಾನ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ ಪದವಿ
– ರಾಜಸ್ಥಾನ ವಿವಿಯಿಂದ ಎಲ್ಎಲ್ಬಿ ಪದವಿ
– ರಾಜಸ್ಥಾನ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ವಕೀಲಗಿರಿ ಮಾಡಿದ್ದರು.
– ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್ನ ಅಧ್ಯಕ್ಷರಾಗಿಯೂ ಸೇವೆ.
– 1989ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ರಾಜಸ್ಥಾನದ ಜುಂಝುನು ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧೆ. ಪ್ರಥಮ ಪ್ರಯತ್ನದಲ್ಲಿಯೇ ಗೆಲುವು ಕಂಡರು.
– ಧನಕರ್ ತಮ್ಮ ಗುರುವಿನೊಂದಿಗೆ ವಿಪಿ ಸಿಂಗ್ ಸರ್ಕಾರದಿಂದ ಹೊರಬಂದರು.
– ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು.
– 1993ರಲ್ಲಿ ಕಿಶನ್ಗಡ ಕ್ಷೇತ್ರದಿಂದ ರಾಜಸ್ಥಾನದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು.
– ಅಶೋಕ್ ಗೆಹ್ಲೋಟ್ ಪ್ರವರ್ಧಮಾನಕ್ಕೆ ಬಂದ ಬಳಿಕ ಅವರು 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು.
– 2019ರ ಜುಲೈ 30ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧನಕರ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರನ್ನಾಗಿ ನೇಮಿಸಿದರು.