ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜಮಾಲ್ ಅಜಾದ್ ಅಣ್ಣಿಗೇರಿಗೆ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪಕ್ಷದ ಮುಖಂಡರುಗಳೇ ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಇದೀಗ ನಡೆದ ಬೆಳವಣಿಗೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಸಮಿತಿ ರಚನಾ ಆದೇಶವನ್ನೇ ತಡೆ ಹಿಡಿದು ನೂತನ ಆದೇಶ ಹೊರಡಿಸಲಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಕರಾವಳಿಯಲ್ಲಿ ಗಲಭೆಗೆ ಕಾರಣವಾಗಿ, ಬಿಜೆಪಿಗೆ ಗೆಲುವು ತಂದು ಕೊಟ್ಟ ಹೊನ್ನಾವರದ ಪರೇಶ್ ಮೇಸ್ತಾ ಮೃತಪಟ್ಟು 5 ವರ್ಷ ಕಳೆಯುತ್ತಾ ಬಂತು. ಅಂದು 2017ರ ಡಿಸೆಂಬರ್ 6 ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ 21 ವರ್ಷದ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಡಿಸೆಂಬರ್ 8 ರಂದು ಹೊನ್ನಾವರದ ಶನಿ ದೇವಾಲಯದ ಹಿಂಭಾಗದಲ್ಲಿನ ಶೆಟ್ಟಿ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಮೇಸ್ತಾನನ್ನ ಕೋಮು ಗಲಭೆಯಲ್ಲಿ ಕೊಲೆ ಮಾಡಲಾಗಿದೆ ಎಂದು ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ಪ್ರಕರಣವನ್ನ ಅಂದಿನ ಕಾಂಗ್ರೆಸ್ ಸರ್ಕಾರ ಸಿಬಿಐ ತನಿಖೆಗೆ ಸಹ ಒಪ್ಪಿಸಿತ್ತು. ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಜಮಾಲ್ ಅಜಾದ್ ಅಣ್ಣಿಗೇರಿ ಎಂಬಾತನನ್ನ ಎ1 ಆರೋಪಿಯನ್ನಾಗಿ ಮಾಡಿ ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಇನ್ನೂ ಸಿಬಿಐ ನಡೆಸುತ್ತಿದ್ದು, ಬಂಧಿತರೆಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಇನ್ನು ಪ್ರಕರಣದಲ್ಲಿ ಪರೇಶನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಅಂದು ಹೋರಾಟ ನಡೆಸಿದ್ದ ಬಿಜೆಪಿ ನಾಯಕರುಗಳು, ಹಿಂದೂ ಸಂಘಟನೆಗಳ ಬಳಿ ಇಂದು ಸಿಬಿಐ ತನಿಖೆ ಯಾವ ಹಂತದಲ್ಲಿದೆ ಎಂಬ ಮಾಹಿತಿಯೇ ಇಲ್ಲ. ಇದರ ಮದ್ಯ ಈಗ ಪರೇಶ್ ಮೆಸ್ತಾ ಪ್ರಕರಣದಲ್ಲಿ ಆರೋಪಿಯಾದವನಿಗೆ ವಕ್ಫ್ ಬೋರ್ಡ ಉಪಾಧ್ಯಕ್ಷ ಸ್ಥಾನವನ್ನ ಬಿಜೆಪಿ ಸರ್ಕಾರ ನೀಡಿದೆ. ಆಜಾದ್ ಅಣ್ಣಿಗೇರಿ ಎನ್ನುವವರಿಗೆ ಜಿಲ್ಲಾ ವಕ್ಪ ಬೋಡ್೯ ಉಪಾಧ್ಯಕ್ಷ ಸ್ಥಾನ ನೀಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆರೋಪಿತನಿಗೆ ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ ಹೀಗಾಗಿ ಇದರ ವಿರುದ್ಧವಿಗ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆ ಪ್ರಾರಂಭವಾದ ಬೆನ್ನಲ್ಲೇ ಈ ಆದೇಶವನ್ನು ವಾಪಸ್ ಪಡೆಯಲಾಗಿದೆ.
ಪರೇಶ್ ಮೇಸ್ತಾ ಹತ್ಯೆ ವಿರುದ್ಧವೇ ಹೋರಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಈ ಋಣ ತೀರಿಸಲೆಂದು ಪ್ರಕರಣದ ಆರೋಪಿಗೆ ಸರ್ಕಾರಿ ಸಂಸ್ಥೆಯಲ್ಲಿ ಸ್ಥಾನವನ್ನ ಕೊಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ.