ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ನಗರದ ನೆಲಮಂಗಲದಲ್ಲಿ ನಿರ್ಮಿಸಲಾಗಿರುವ ‘ಶ್ರೀ ಧರ್ಮಸ್ಥಳ ನಿಸರ್ಗ ಚಿಕಿತ್ಸೆ ಹಾಗೂ ಯೋಗ ಶಿಕ್ಷಣ ಸಂಸ್ಥೆ’ಯನ್ನು ಅವರು ಉದ್ಘಾಟಿಸಲಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಸ್ಥೆಯ ಘಟಕ ‘ಕ್ಷೇಮವನ’ ಉದ್ಘಾಟನೆಗೆ ಯೋಗಿ ಆದಿತ್ಯನಾಥ್ ಆಗಮಿಸುತ್ತಿದ್ದಾರೆ. ಸೆಪ್ಟೆಂಬರ್ 1ರ ಗುರುವಾರ 11.45ರ ಸುಮಾರಿಗೆ ಕಾರ್ಯಕ್ರಮ ನಡೆಯಲಿದೆ. ನೆಲಮಂಗಲದ ಕುಣಿಗಲ್ ಬೈಪಾಸ್ ರಸ್ತೆಯ ಸಮೀಪದ ಸಂಭ್ರಮ ಹೋಟೆಲ್ ಹತ್ತಿರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಸಂಸ್ಥೆಯ ಘಟಕ ಕ್ಷೇಮವನ ನಿರ್ಮಾಣ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸಚಿವರಾದ ಡಾ.ಕೆ. ಸುಧಾಕರ್, ಆನಂದ ಸಿಂಗ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಯೋಗ, ಧ್ಯಾನ, ಜತೆಗೆ ಹವಾನಿಯಂತ್ರಿತ ಈಜುಕೊಳದ ಈಜು ಸೌಲಭ್ಯವನ್ನು ಕೂರ್ಮ ಎಂಬ ವಿನೂತನ ಕಟ್ಟಡದಲ್ಲಿ ಒದಗಿಸಲಾಗಿದ್ದು, ಕೂರ್ಮಾವತಾರದ ಪೌರಾಣಿಕ ಪರಿಕಲ್ಪನೆಯಲ್ಲಿ ಈ ಕಟ್ಟಡ ಅರಳಿಕೊಂಡಿದೆ.