ಉತ್ತರ ಪ್ರದೇಶದ ಔರಯ್ಯಾ ಎಂಬಲ್ಲಿ ಶುಕ್ರವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 23ಜನ ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಇನ್ನು ಸುಮಾರು 20 ಜನರು ಈ ಘಟನೆಯಿಂದಾಗಿ ಗಾಯಗೊಂಡಿದ್ದಾರೆ.
ಅಪಘಾತದಿಂದ ಬಾಧಿತರಾಗಿರುವ ಕಾರ್ಮಿಕರಲ್ಲಿ ಹೆಚ್ಚಿನವರು ಬಿಹಾರ್, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆಂದು ತಿಳಿದು ಬಂದಿದೆ. ಗಾಯಗೊಂಡವರಲ್ಲಿ 15 ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಇಟಾವದ, ಸೈಫಾಯ್ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಔರಾಯ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಅಭಿಷೇಕ್ ಸಿಂಗ್ ಅವರು ಈ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದು, ಗಾಯಗೊಂಡವರಿಗೆ ಚಿಕಿತ್ಸೆಯನ್ನು ನೀಡುವುದು ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.
ಇನ್ನು, ಕಳೆದ ಕೆಲವು ದಿನಗಳಿಂದ ಭಾರೀ ವಾಹನಗಳಿಂದಾಗುವ ಅಪಘಾತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಕಂಡು ಬಂದಿದೆ. 2 ಲಾಕ್ಡೌನ್ಗಳ ನಂತರ ಬೀದಿಗಿಳಿದ ವಾಹನಗಳ ಚಾಲಕರ ಬೇಜವಾಬ್ದಾರಿತನಕ್ಕೆ ವಲಸೆ ಕಾರ್ಮಿಕರು ಬಲಿಯಾಗುತ್ತಿದ್ದಾರೆ. ಈ ಕುರಿತಾಗಿ ಸರ್ಕಾರವು ಗಮನ ಹರಿಸುವ ಅಗತ್ಯವಿದೆ.