ಹೆಚ್ಚು ಕಡಿಮೆ ಎರಡು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಎಂಬ ಗಜಪ್ರಸವ ಈಗ ಎರಡೋ ಮೂರೋ ದಿನದಲ್ಲಿ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಒಟ್ಟು 27 ಸ್ಥಾನಗಳು ಖಾಲಿ ಇದ್ದು 15ಕ್ಕೂ ಹೆಚ್ಚು ಸ್ಥಾನಗಳನ್ನು ತುಂಬಲಾಗುತ್ತದೆ. ಮುಂದಿನ ವರ್ಷ ಚುನಾವಣೆ ನಡೆಯುವ ಉತ್ತರ ಪ್ರದೇಶ, ಗುಜರಾತ್, ಉತ್ತರಖಂಡ, ಹಿಮಾಚಲ ಪ್ರದೇಶ, ಪಂಜಾಬ್ ರಾಜ್ಯಗಳನ್ನು ದೃಷ್ಟಿಯಲ್ಲಿ ಸಂಪುಟ ಪುನರ್ರಚನೆ ಆಗಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಿಂದ ಈ ಬಾರಿ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದು ಕುತೂಹಲಕಾರಿಯಾದ ಸಂಗತಿಯಾಗಿದೆ.
ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಕರೋನಾದಿಂದ ಮೃತಪಟ್ಟರು. ಅವರಿಂದ ತೆರವಾಗಿರುವ ಮಂತ್ರಿ ಸ್ಥಾನ ಖಾಲಿ ಇದೆ. ಆದುದರಿಂದ ರಾಜ್ಯಕ್ಕೆ ಕನಿಷ್ಠ ಒಂದು ಸಚಿವ ಸ್ಥಾನವಾದರೂ ಸಿಗಲಿದೆ ಎಂಬ ಲೆಕ್ಕಾಚಾರದೊಂದಿಗೆ ರಾಜ್ಯದಿಂದ 25 ಬಿಜೆಪಿ ಲೋಕಸಭಾ ಸದಸ್ಯರನ್ನು ಆರಿಸಿ ಕಳುಹಿಸಿರುವುದರಿಂದ ಎರಡು ಸ್ಥಾನ ಸಿಗಬಹುದು ಎಂಬ ಅಂದಾಜು-ನಿರೀಕ್ಷೆಗಳು ಕೇಳಿಬರುತ್ತಿವೆ. ಹಿಂದೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರನ್ನು ಹೊರತುಪಡಿಸಿಯೂ ನಾಲ್ಕು ಸಚಿವ ಸ್ಥಾನ ಸಿಕ್ಕಿದ್ದ ಹಿನ್ನಲೆಯಲ್ಲಿ ಇಂಥ ನಿರೀಕ್ಷೆ ಹುಟ್ಟುಕೊಂಡಿದ
ಸದ್ಯ ರಾಜ್ಯದಿಂದ ಕೇಂದ್ರ ಸಚಿವರಾಗಿರುವವರ ಪೈಕಿ ಡಿ.ವಿ. ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿ ಬಹುತೇಕ ಮುಂದುವರೆಯುತ್ತಾರೆ. ಮೊದಲಿಗೆ ಸದಾನಂದಗೌಡರನ್ನು ಸಂಪುಟದಿಂದ ಕೈಬಿಡಲಾಗುತ್ತಿತ್ತು ಎಂಬ ಚರ್ಚೆ ನಡೆಯುತ್ತಿತ್ತು. ಆದರೆ ಕರೋನಾ ಸಂದರ್ಭದಲ್ಲಿ ಸದಾನಂದಗೌಡರು ಸಮರ್ಥವಾಗಿ ಕೆಲಸ ಮಾಡಿದ್ದಾರೆ ಎಂಬ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮೆಚ್ಚುಗೆ ಇದೆ. ಮಂತ್ರಿಗಳ ಸಭೆಯಲ್ಲಿ ಅವರು ಅದನ್ನು ಹೇಳಿದ್ದಾರೆ. ಹಾಗಾಗಿ ಸದಾನಂದಗೌಡರ ಸ್ಥಾನಕ್ಕೆ ಧಕ್ಕೆ ಇಲ್ಲ. ಒಂದೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಪರಿಗಣಿಸುವುದಾದರೆ ಮಾತ್ರ ಪ್ರಹ್ಲಾದ್ ಜೋಶಿ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇಲ್ಲದಿದ್ದರೆ ಅವರು ಕೂಡ ಮುಂದುವರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೊಸಬರ ವಿಷಯಕ್ಕೆ ಬರುವುದಾದರೆ ಸಿಗುವ ಒಂದೋ ಅಥವಾ ಎರಡೋ ಸ್ಥಾನಕ್ಕೆ ಒಂದು ಡಜನ್ ಆಕಾಂಕ್ಷಿಗಳಿದ್ದಾರೆ. ಅವರುಗಳೆಂದರೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬೀದರ್ ಸಂಸದ ಭಗವಂತ ಖೂಬಾ, ಬಾಗಲಕೋಟೆ ಸಂಸದ ಪಿ.ಸಿ. ಗದ್ದೀಗೌಡರ್, ಗುಲ್ಬರ್ಗ ಸಂಸದ ಉಮೇಶ್ ಜಾಧವ್, ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ. ಮೋಹನ್, ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ, ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮೈಸೂರು ಸಂಸದ ಪ್ರತಾಪ ಸಿಂಹ, ಬಿಜಾಪುರ ಸಂಸದ ರಮೇಶ್ ಜಿಗಜಿಣಗಿ ಹಾಗೂ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್.
ಇವರ ಪೈಕಿ ಯಾರಿಗೂ ಹೈಕಮಾಂಡಿನಿಂದ ಯಾರೊಬ್ಬರೂ ‘ನಿಮ್ಮನ್ನು ಮಂತ್ರಿ ಮಾಡುತ್ತೇವೆ’ ಎಂದು ಭರವಸೆ ಕೊಟ್ಟಿಲ್ಲ. ಆದರೆ ಎಲ್ಲರೂ ತಮ್ಮ ತಮ್ಮದೇ ಲೆಕ್ಕಾಚಾರದೊಂದಿಗೆ ‘ಸಚಿವ ಸ್ಥಾನ ಸಿಗಬಹುದು’ ಎಂದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚು ಚರ್ಚೆ ಆಗುತ್ತಿರುವ ಹೆಸರು ಬಿ.ವೈ. ರಾಘವೇಂದ್ರ ಅವರದು. ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ವಿಷಯ ಚರ್ಚೆ ರಾಘವೇಂದ್ರ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಸಂಗತಿಯೊಂದಿಗೆ ತಳುಕು ಹಾಕಿಕೊಂಡಿದೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದರೆ ಅಥವಾ ನಿರ್ಧರಿಸುವುದಾದರೆ ತಮಗೆ ಸಚಿವ ಸ್ಥಾನ ಹುಡುಕಿಕೊಂಡು ಬರಲಿದೆ ಎಂಬುದು ರಾಘವೇಂದ್ರ ಲೆಕ್ಕಾಚಾರ.
ತೆರವಾಗಿರುವ ಸ್ಥಾನ ಲಿಂಗಾಯತರದ್ದಾಗಿರುವುದರಿಂದ ಜಾತಿ ಲೆಕ್ಕಾಚಾರ ಚುಕ್ತಾ ಮಾಡಲು ಮತ್ತು ಅದಕ್ಕೂ ಮಿಗಿಲಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಯಡಿಯೂರಪ್ಪ ಅವರನ್ನು ಸಮಾಧಾನ ಪಡಿಸಲು ಸಾಧನ ಆಗಲಿದೆ ಎಂಬ ಕಾರಣಕ್ಕೆ ರಾಘವೇಂದ್ರಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇವರಿಗೆ ತೀವ್ರವಾಗಿ ಪೈಪೋಟಿ ನೀಡುತ್ತಿರುವವರು ಹಾವೇರಿ ಸಂಸದ ಶಿವಕುಮಾರ್ ಉದಾಸಿ. ಲಿಂಗಾಯತ ಎನ್ನುವುದರ ಜೊತೆಗೆ ವಿದ್ಯಾವಂತ, ಸಂಸದೀಯ ಸ್ಥಾಯಿ ಸಮಿತಿಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ ಎಂಬ ಹೆಚ್ಚುಗಾರಿಕೆ ಇದೆ. ಹಾಗಾಗಿ ತನ್ನ ಹೆಸರನ್ನು ಪರಿಗಣಿಸಬಹುದು ಎಂಬುದು ಶಿವಕುಮಾರ್ ಉದಾಸಿ ಲೆಕ್ಕಾಚಾರ.
ಇನ್ನೊಂದು ಆಸಕ್ತಿಕರ ವಿಚಾರ ಕೇಳಿಬರುತ್ತಿದೆ. ತಮ್ಮ ವಿರುದ್ಧ ಬಂಡಾಯ ಎದ್ದಿರುವ ಪಂಚಮಸಾಲಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರಿಗೆ ಸಚಿವ ಸ್ಥಾನ ಕೊಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಲಾಭಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಲಿಂಗಾಯತ ಎನ್ನುವ ಜೊತೆಗೆ ಬಾಬಾ ರಾಮದೇವ್ ಪ್ರಭಾವದಿಂದ ತನಗೆ ಸಚಿವ ಸ್ಥಾನ ಸಿಗಲಿದೆ ಎಂದು ಬೀದರ್ ಸಂಸದ ಭಗವಂತ ಖೂಬಾ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಲಿಂಗಾಯತರ ಪೈಕಿ ತಾವೇ ಹಿರಿಯರಾಗಿದ್ದು ತಮಗೇ ಸಚಿವ ಸ್ಥಾನ ಎಂಬುದು ಬಾಗಲಕೋಟೆ ಸಂಸದ ಪಿ.ಸಿ. ಗದ್ದೀಗೌಡರ್ ಅವರ ವಿಶ್ವಾಸ.
ಲೋಕಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಹಾಗೂ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ಮಾಡುವ ಮುತ್ಸದಿ ರಾಜಕಾರಣಿ ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪರಾಭವಗೊಳಿಸಿದ ಕಾರಣಕ್ಕೆ ತನಗೆ ಮಂತ್ರಿ ಸ್ಥಾನ ನೀಡಬಹುದೆಂದು ಗುಲ್ಬರ್ಗ ಸಂಸದ ಉಮೇಶ್ ಜಾಧವ್ ನಂಬಿಕೊಂಡಿದ್ದಾರೆ. ದಲಿತರ ಪೈಕಿ ಮತ್ತೊಮ್ಮೆ ತಮ್ಮ ಹೆಸರನ್ನು ಪರಿಗಣಿಸಬಹುದೆಂದು ಮಾಜಿ ಸಚಿವ ರಮೇಶ್ ಜಿಗಜಿಣಗಿ ಆಸೆ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಬೆಂಬಲಿಸುತ್ತಿರುವ ದಲಿತ ಎಡಗೈ ಸಮುದಾಯದಿಂದ ಈ ಬಾರಿ ಹೊಸಬರಿಗೆ ಅವಕಾಶ ನೀಡುತ್ತಾರೆ, ಅದು ನಾನೇ ಎನ್ನುವುದು ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಲೆಕ್ಕಾಚಾರ.
ರಾಜ್ಯದಲ್ಲಿ ಹಿಂದುಳಿದ ವರ್ಗದ ಪ್ರಬಲ ನಾಯಕ ಸಿದ್ದರಾಮಯ್ಯ ವಿರುದ್ಧ ಹಿಂದುಳಿದ ವರ್ಗಗಳನ್ನು ಸಂಘಟನೆ ಮಾಡಲು ಈ ಸಲ ಕೇಂದ್ರ ಸರ್ಕಾರದಲ್ಲಿ ಹಿಂದುಳಿದ ಜಾತಿಗಳಿಗೆ ಪ್ರಾತಿನಿಧ್ಯ ನೀಡಬಹುದು. ತನ್ನ ಹೆಸರನ್ನು ಪರಿಗಣಿಸಬಹುದು ಎಂದು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ನಿರೀಕ್ಷೆ ಹೊಂದಿದ್ದಾರೆ. ಡಿ.ವಿ. ಸದಾನಂದಗೌಡ ಅವರನ್ನು ಸಂಪುಟದಿಂದ ಕೈಬಿಟ್ಟರೆ ಒಕ್ಕಲಿಗ ಸಮುದಾಯದ ತಮ್ಮನ್ನು ಪರಿಗಣಿಸಬಹುದೆಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ಕನಸು ಕಾಣುತ್ತಿದ್ದಾರೆ. ಪುದುಚೇರಿಯಲ್ಲಿ ಎನ್ ಡಿಎ ಸರ್ಕಾರ ರಚಿಸಿದ ಕಾರಣಕ್ಕೆ ಹಾಗೂ ಕೇರಳ ರಾಜ್ಯದ ಪ್ರಾತಿನಿಧ್ಯ ನೀಡಲು ತಮಗೂ ಸಚಿವ ಸ್ಥಾನ ನೀಡಬಹುದು ಎಂದು ರಾಜೀವ್ ಚಂದ್ರಶೇಖರ್ ಲೆಕ್ಕಾಚಾರ.