ಭಾರತ ಸರಕಾರದ ಚುನಾವಣಾ ಆಯೋಗದ ವೆಬ್ಸೈಟ್ ಬಳಸಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆ ಪೊಲೀಸರು ಮಧ್ಯಾಹ್ ಬಂಧಿಸಿದ್ದಾರೆ.
ಧಾರವಾಡದ ಅಂಜುಮನ್ ಕಾಂಪ್ಲೆಕ್ಸ್ನಲ್ಲಿರುವ ಎಂಜೆಆರ್ ಝರಾಕ್ಸ್ ಸೆಂಟರ್ನ ಮಹ್ಮದ್ಅಲಿ ಎಂಬಾತನೇ ಬಂಧಿತ ಆರೋಪಿ. ಈತ ಚುನಾವಣಾ ಆಯೋಗದ ವೆಬ್ಸೈಟ್ ಬಳಕೆ ಮಾಡಿ ಅನಧಿಕೃತವಾಗಿ ವೋಟರ್ ಐಡಿ ತೆಗೆದುಕೊಡುತ್ತಿದ್ದ. ಈ ರೀತಿಯ ವೋಟರ್ ಐಡಿ ಪಡೆದ ಮಹಿಳೆಯೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿಯೊಂದನ್ನು ಸಲ್ಲಿಸಲು ಬಂದಾಗ ಅದು ತಹಶೀಲ್ದಾರ ಕಚೇರಿಯಿಂದ ಪೂರೈಕೆ ಮಾಡಲಾದ ಅಧಿಕೃತ ವೋಟರ್ ಐಡಿ ಅಲ್ಲ ಎಂಬುದು ಗೊತ್ತಾಗಿದೆ. ಈ ಸಂಬಂಧ ಸ್ವತಃ ತಹಶೀಲ್ದಾರ ಸಂತೋಷ ಹಿರೇಮಠ ಅವರು ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್ ದಾಖಲಿಸಿದ್ದು, ಮಹ್ಮದ್ಅಲಿ ಅವರ ಝರಾಕ್ಸ್ ಅಂಗಡಿಗೆ ಭೇಟಿ ನೀಡಿದ ತಹಶೀಲ್ದಾರ ಸಂತೋಷ ಹಿರೇಮಠ ಹಾಗೂ ಸೈಬರ್ ಕ್ರೈಂ ಠಾಣೆಯ ಪೊಲೀಸರು ಅಂಗಡಿಯಲ್ಲಿ ಪರಿಶೀಲನೆ ನಡೆಸಿ, ಅಲ್ಲಿದ್ದ ಪ್ರಿಂಟರ್ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ವೋಟರ್ ಐಡಿ ಅಷ್ಟೇ ಅಲ್ಲ
ಈ ಹಿಂದೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನಲ್ಲಿ ನೆರೆ ಹಾವಳಿ ಹಿಂದೆ ಸಂತ್ರಸ್ತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಸುಮಾರು, 50ಲಕ್ಷ ರೂಪಾಯಿ ಗುಳಂ ಸಹ ಮಾಡಲಾಗಿತ್ತು. ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೃದ್ಯಾಪ ವೇತನ, ಅಂಗವಿಕಲರ ವೇತನ, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ, ಸಹಾಯ ಸೇರಿದಂತೆ ಅನೇಕ ಯೋಜನೆಗಳಲ್ಲಿ ಅವ್ಯವಹಾರ ನಡೆದ ಬಗ್ಗೆ ಧಾರವಾಡ ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ.