ಮಹಾರಾಷ್ಟ್ರ ಸರ್ಕಾರ ಅಸ್ಥಿರತೆಯನ್ನು ಎದುರಿಸುತ್ತಿದೆ; ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯದ್ದು ನಿಜವಾದ ಹಿಂದುತ್ವ ಅಲ್ಲವೆಂದಿರುವ ಹಿರಿಯ ಸಂಪುಟ ಸದಸ್ಯ ಏಕನಾಥ ಶಿಂಧೆ, ತಮ್ಮ ಬಣ ನಿವಾದ ಹಿಂದುತ್ವ ಹೊಂದಿದೆಯೆಂದೂ, ಬಾಳಾ ಠಾಕ್ರೆ ಅವರ ಹಿಂದುತ್ವದ ಹಾದಿಯಲ್ಲಿದೆಯೆಂದು ಹೇಳಿ ಉದ್ಧವ್ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದು ಸರ್ಕಾರದಿಂದ ಬೆಂಬಲ ಹಿಂಪಡೆದು ಸರ್ಕಾರ ಬೀಳಿಸುವ ಅವರ ಯೋಜನೆಯ ಭಾಗವಾಗಿ ಹೊರ ಹೊಮ್ಮಿದೆ.
ಈ ಹಿನ್ನೆಲೆಯಲ್ಲಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದ ಸಿಎಂ ಉದ್ಧವ್ ಠಾಕ್ರೆ ಅವರು ಶಿವಸೇನೆ ಸಂಸ್ಥಾಪಕ, ತಮ್ಮ ತಂದೆ ಬಾಳಠಾಕ್ರೆ ಹಾಗೂ ಶೀವಸೇನೆಯನ್ನು ಎದುರಿಟ್ಟೇ ದಾಳ ಹೂಡಿದ್ದಾರೆ. ಅಲ್ಲದೆ, ಶಿವಸೇನೆಗೆ ಅವಿನಾಭಾವ ಬಂಧವಿರುವ ಬಾಳಾಠಾಕ್ರೆ ವಾಸಿಸಿದ್ದ ತಮ್ಮ ಕುಟುಂಬದ ಮನೆಗೆ ಏಕಾಏಕಿ ಸ್ಥಳಾಂತರಗೊಂಡು ಶಿವಸೇನೆಯ ನಿಷ್ಟೆಯನ್ನು ಭಾವನಾತ್ಮಕವಾಗಿ ಸೆಳೆಯಲು ಪ್ರಯತ್ನಿಸಿದ್ದಾರೆ.
ಹೌದು, ಬುಧವಾರ ರಾತ್ರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಅಧಿಕೃತ ನಿವಾಸವನ್ನು ತೊರೆದಿದ್ದಾರೆ. ತಮಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದ್ದರೂ, ರಾಜಕೀಯದ ಬಿಕ್ಕಟ್ಟಿನ ನಡುವೆ ತಮ್ಮ ಕುಟುಂಬದ ಮನೆಗೆ ಸ್ಥಳಾಂತರವಾದ ಉದ್ಧವ್ ಠಾಕ್ರೆ ಅವರ ನಡೆಯಲ್ಲಿ ಪರೋಕ್ಷ ಸಂದೇಶವಿದೆಯೆಂದು ವಿಶ್ಲೇಷಿಸಲಾಗಿದೆ. ಉದ್ಧವ್ ಠಾಕ್ರೆ ತಂದೆ ಬಾಳಾ ಸಾಹೇಬ್ ಠಾಕ್ರೆ ವಾಸಿಸಿದ್ದ ಅವರ ಕುಟುಂಬದ ಮನೆಗೂ ಶಿವಸೇನೆ ಪಕ್ಷಕ್ಕೂ ಇರುವ ಅವಿನಾಭಾವ ಸಂಬಂಧದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಲ್ಲಿಗೆ ಸ್ಥಳಾಂತರಗೊಂಡಿದ್ದಾರೆ.
ಅದಕ್ಕೂ ಮುನ್ನ, ತಮ್ಮ ಸರ್ಕಾರಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಮೊದಲ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ್ದ ಠಾಕ್ರೆ, “ನನ್ನ ಸ್ವಂತ ಜನರಿಗೆ ನಾನು ಮುಖ್ಯಮಂತ್ರಿಯಾಗಲು ಇಷ್ಟವಿಲ್ಲದಿದ್ದರೆ, ನನ್ನ ಬಳಿಗೆ ಬಂದು ನೇರವಾಗಿ ಹೇಳಬೇಕು., ನಾನು ರಾಜಿನಾಮೆ ನೀಡಲು ಸಿದ್ಧ, ನಾನು ಬಾಳಾಸಾಹೇಬರ ಮಗ, ನಾನು ಹುದ್ದೆಯ ಹಿಂದೆ ಬಿದ್ದಿಲ್ಲ,” ಎಂದು ಹೇಳಿದ್ದರು.
“ನಾನು ಹುದ್ದೆಯಿಂದ ಕೆಳಗಿಳಿಯಲು ಸಿದ್ಧನಿದ್ದೇನೆ, ಆದರೆ, ಮುಂದಿನ ಮುಖ್ಯಮಂತ್ರಿ ಶಿವಸೇನೆಯವರೇ ಆಗಿರುತ್ತಾರೆ ಎಂದು ನನಗೆ ಭರವಸೆ ಕೊಡುತ್ತೀರ?” ಎಂದು ಅವರು ಪ್ರಶ್ನಿಸಿದ್ದರು. ಆ ಮೂಲಕ ಬಂಡಾಯ ನಾಯಕರು ಬಿಜೆಪಿಯವರೊಂದಿಗೆ ಸೇರಿ ಸರ್ಕಾರ ರಚಿಸಿದರೆ ಶಿವಸೇನೆಯ ಮುಖ್ಯಮಂತ್ರಿಯಾಗಲ್ಲ ಎಂಬ ಪರೋಕ್ಷ ಸಂದೇಶವನ್ನು ಶಿವಸೇನೆ ಕಾರ್ಯಕರ್ತರಿಗೆ ರವಾನಿಸಿದ್ದರು. ಆ ಮೂಲಕ ಶಿವಸೇನೆ ಕಾರ್ಯಕರ್ತರ ನಿಷ್ಟೆ ತಮ್ಮ ಬಣದ ಪಾಲಿಗೆ ನಿಲ್ಲುವಂತೆ ಬಾಣ ಹೂಡಿದ್ದಾರೆ.
ಬಂಡಾಯ ನಾಯಕ ಏಕನಾಥ್ ಶಿಂಧೆ ಅವರಿಗೆ ಇದು ನೇರ ಸವಾಲಾಗಿದೆ. ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲು ಪ್ರಯತ್ನ ಪಡುತ್ತಿರುವ ಶಿವಸೇನೆಯ ಬಂಡಾಯ ಶಾಸಕರಿಗೆ ಮುಖ್ಯಮಂತ್ರಿಯ ಈ ಪ್ರಶ್ನೆ ಸವಾಲಾಗಿ ಪರಿಣಮಿಸಲಿದೆ. ಉದ್ಧವ್ ಠಾಕ್ರೆ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಲು ಬಿಜೆಪಿಯ ನಿರಾಕರಿಸಿದ್ದೇ ಶಿವಸೇನೆ-ಬಿಜೆಪಿ ಮೈತ್ರಿಯ ಅಂತ್ಯಕ್ಕೆ ಕಾರಣವಾಗಿತ್ತು. ಈಗ ಮತ್ತೆ ಬಿಜೆಪಿ ಸಿಎಂ ಸ್ಥಾನವನ್ನು ಶಿವಸೇನೆಗೆ ಬಿಟ್ಟು ಕೊಡುವುದು ಅಸಾಧ್ಯವೆಂದು ಹೇಳಲಾಗುತ್ತಿದೆ.