ದೇಶವನ್ನೇ ಬೆಚ್ಚಿಬೀಳಿಸಿದ ಉದಯಪುರದ ಹತ್ಯೆಯ ರುವಾರಿಗಳು ಬಿಜೆಪಿ ನಾಯಕರೊಂದಿಗೆ ಸಂಬಂಧ ಹೊಂದಿರುವುದು ಈಗ ಬೆಳಕಿಗೆ ಬಂದಿದೆ. ಹತ್ಯೆಯ ಬಳಿಕ ಆರೋಪಿಗಳ ಗತಕಾಲವನ್ನು ಕೆದಕಿದ ಇಂಡಿಯಾಟುಡೆ ವಾಹಿನಿಯು ಈ ಮಾಹಿತಿಯನ್ನು ಹೊರ ಹಾಕಿದೆ.
ಇಂಡಿಯಾ ಟುಡೆ ಮಾಡಿದ ವರದಿ ಪ್ರಕಾರ, ಕನಿಷ್ಟ ಮೂರು ವರ್ಷಗಳಿಂದ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಹಾಗೂ ಕಾರ್ಯಕರ್ತರೊಂದಿಗೆ ಟೈಲರ್ ಕನ್ನಯ್ಯಲಾಲ್ ಹತ್ಯೆ ಆರೋಪಿಗಳು ಸಂಬಂಧ, ಒಡನಾಟ ಹೊಂದಿದ್ದಾರೆ.
ರಾಜಸ್ಥಾನ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸದಸ್ಯ ಇರ್ಷಾದ್ ಚೈನ್ವಾಲ ಎಂಬಾತನೊಂದಿಗೆ ಹತ್ಯೆ ಆರೋಪಿ ರಿಯಾಝ್ ಇರುವ ಹಲವು ಚಿತ್ರಗಳನ್ನು ವಾಹಿನಿಯು ತನ್ನ ವರದಿ ಮೂಲಕ ಬಿಡುಗಡೆ ಮಾಡಿದೆ. ಇದು ಸಾಕಷ್ಟು ಸದ್ದು ಮಾಡಿದೆ.
ಇರ್ಷಾದ್ ಚೈನ್ವಾಲ ಪ್ರಕಾರ, ರಿಯಾಝ್ ಹಲವು ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದು, ಬಿಜೆಪಿಗಾಗಿ ಕೆಲಸ ಮಾಡುವ ಇಂಗಿತವನ್ನೂ ಅವರೊಂದಿಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿರುವ ಮಹಮ್ಮದ್ ತಾಹೀರ್ ಎಂಬ ಬಿಜೆಪಿ ಕಾರ್ಯಕರ್ತನೊಂದಿಗೂ ರಿಯಾಝ್ಗೆ ಹೆಚ್ಚಿನ ಒಡನಾಟವಿತ್ತು ಎಂದು ಇರ್ಷಾದ್ ಚೈನ್ವಾಲ ಅವರು ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದ್ದಾರೆ.
ತಾಹೀರ್ ಜೊತೆಗೆ ಹಲವು ಬಿಜೆಪಿ ಕಾರ್ಯಕ್ರಮದಲ್ಲಿ ರಿಯಾಝ್ ಅಟ್ಟಾರಿ ಭಾಗಿಯಾಗಿದ್ದ. ಕುತೂಹಲಕಾರಿಯೆಂದರೆ, ಕನ್ನಯ್ಯಲಾಲ್ ಹತ್ಯೆಯ ಬಳಿಕ ತಾಹಿರ್ ತನ್ನ ಫೋನ್ ಅನ್ನು ಆಫ್ ಮಾಡಿ, ತಲೆ ಮರೆಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಕೃತ್ಯದಲ್ಲಿ ಬಿಜೆಪಿಯ ಮೇಲೆ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು
ಇಂಡಿಯಾ ಟುಡೇ ಈ ವರದಿಯನ್ನು ಟ್ವೀಟ್ ಮಡಿದ ಬೆನ್ನಲ್ಲೇ ಹಲವು ನೆಟ್ಟಿಗರು ಈ ಕೊಲೆಯಲ್ಲಿ ಬಿಜೆಪಿಗೆ ಲಾಭವಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಮುಂದಿನ ವರ್ಷ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂಬ ಊಹಾಪೋಹಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡಲಾಗುತ್ತಿದೆ.
ಅದರಲ್ಲೂ 2019 ರಲ್ಲಿ ತಬಿಜೆಪಿ ಸದಸ್ಯ ತಾಹಿರ್ ಫೇಸ್ಬುಕ್ ಮೂಲಕ ಹಂಚಿಕೊಂಡ ಚಿತ್ರವೊಂದರಲ್ಲಿ ಕೊಲೆ ಆರೋಪಿ ರಿಯಾಝ್ ಬಿಜೆಪಿಯ ಸ್ಥಳೀಯ ನಾಯಕರೊಂದಿಗೆ ಇರುವುದು ಕಂಡು ಬಂದಿದೆʼ
ಚುನಾವಣೆ ಬಂದಾಗ ಜನರನ್ನು ಕೋಮುವಾದಿಗಳನ್ನಾಗಿ ಮಾಡಲು ಮತ್ತು ಅಧಿಕಾರವನ್ನು ಪಡೆಯಲು ರಕ್ತಪಾತ ನಡೆಯಬೇಕು ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನಾಯಕಿ ರೇಣುಕಾ ಛೌಧರಿ ಈ ವರದಿಯ ತುಣುಕನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದು, ನನಗೆ ಯಾವುದೇ ಆಶ್ಚರ್ಯವಾಗಿಲ್ಲ ಎಂದು ಬರೆದಿದ್ದಾರೆ.
@AdaniHu ಎಂಬ ಟ್ವಿಟರ್ ಖಾತೆಯು, ಮುಂದಿನ ಅಸೆಂಬ್ಲಿ ಗೆಲುವಿಗಾಗಿ ಇದು ಬಿಜೆಪಿಯ ಫಾರ್ಮುಲಾ ಎಂದು ಪ್ರತಿಕ್ರಿಯಿಸಿದೆ.
“ಬಿಜೆಪಿ ಮತ್ತು ಸಂಘದ ರಾಜಕೀಯವನ್ನು ನೀವು ಅರ್ಥಮಾಡಿಕೊಂಡರೆ, ಬಂಗಾಳ, ಜಮ್ಮು, ಕೇರಳ ಮತ್ತು ಇತರ ಹಿಂದೂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಹೇಗೆ ದಾಳಿ ಮಾಡಲಾಗುತ್ತದೆ ಎಂಬುದು ನಿಮಗೆ ತನ್ನಿಂತಾನೆ ಅರ್ಥವಾಗುತ್ತದೆ. ಅಧಿಕಾರದ ಹಂಬಲ ಯಾರ ಬದುಕನ್ನೂ ನೋಡುವುದಿಲ್ಲ, ಅದು ನಿಮ್ಮಿಂದ ಸಾಧ್ಯ” ಎಂದು ಪ್ರಶಾಂತ್ ಸಿಂಗ್ ಟ್ವೀಟ್ ಮಾಡಿದ್ದಾರೆ.
“ನನಗೆ ಆಶ್ಚರ್ಯವಾಗಿಲ್ಲ.. ಎಲ್ಲಾ ಧಾರ್ಮಿಕ ದ್ವೇಷ ಹರಡುವಿಕೆಯ ಹಿಂದೆ ಭಕ್ತರು ಮತ್ತು ಬಿಜೆಪಿಯವರು ಇದ್ದಾರೆ.. ಭಾರತದಲ್ಲಿ ಮಾತ್ರವಲ್ಲ.. ಪ್ರಪಂಚದಾದ್ಯಂತ.. ಈ ಪಾರ್ಟಿಯಲ್ಲಿ ಅತಿ ಹೆಚ್ಚು ಭಯೋತ್ಪಾದಕರು ಇದ್ದಾರೆ.” ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ.
“ಉದಯಪುರದಲ್ಲಿ ಕನ್ಹಯ್ಯಾಲಾಲ್ನನ್ನು ನಿರ್ದಯವಾಗಿ ಕೊಂದ ಭಯೋತ್ಪಾದಕರು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಪುರಾವೆ ಇಲ್ಲಿದೆ” ಗೌರವ್ ಪಾಂಧೀ ಎಂಬವರು ವರದಿಯ ತುಣುಕಿನೊಂದಿಗೆ ಟ್ವೀಟ್ ಮಾಡಿದ್ದಾರೆ.