ಒಂದು ದೇಶ. ಅಲ್ಲಿರುವ 50% ಜನರು ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದವರು. 30% ಜನರು ಹೇಗೋ ಜೀವಿಸಿ ಹೋಗುತ್ತಾರೆ. 20% ಜನರು ರಿಚ್ಚು. ಒಮ್ಮೆ ಅಲ್ಲಿಯ ಸರಕಾರವು ಪ್ರತಿ ಕುಟುಂಬವೂ ಒಂದೊಂದು ಬಿಎಂಡಬ್ಲ್ಯು ಕಾರನ್ನು ಕಡ್ಡಾಯವಾಗಿ ಕೊಳ್ಳಲೇಬೇಕು ಎಂದು ಕಾನೂನು ಮಾಡಿತು. ಕಾರಿಗೆ ಬರೋಬ್ಬರಿ ಟ್ಯಾಕ್ಸ್ ಕೂಡ ಹಾಕಿದ್ದ ಸರಕಾರವು ಖಜಾನೆ ತುಂಬಿಸಿಕೊಳ್ಳಲು ಹಾಕಿದ ಯೋಜನೆ ಅದಾಗಿತ್ತು. ಜನರ ಬಗ್ಗೆ ಕಾಳಜಿಯೇನೆಂದಾಗಲಿ, ಮುತ್ಸದ್ದಿತನ ಎಂದರೇನಂದಾಗಲಿ ಗೊತ್ತಿಲ್ಲದ ಜನರ ಕೈಗೆ ಅಧಿಕಾರ ಸಿಕ್ಕರೆ ಹೀಗಾಗುತ್ತದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವನ್ನು ದೇಶದ್ರೋಹ ಎಂದು ಬಿಂಬಿಸಲಾಯಿತು. ಅಲ್ಲಿಯ ಜನರಿಗೆ ಬದುಕಬೇಕಾದರೆ ದುಬಾರಿ ಕಾರು ಕೊಳ್ಳಲೇಬೇಕಾದ ಅನಿವಾರ್ಯತೆ ಬಂತು. ಕೆಲವರು ಸಲೀಸಾಗಿ, ಕೆಲವರು ಒಂದಷ್ಟು ಕಷ್ಟದಿಂದ ಕಾರು ತೆಗೊಂಡರು.ಅವರಿಗೆ ದೇಶದ ವಾತಾವರಣವು ಬದುಕಲಾರದಷ್ಟು ಕಠಿಣವಾಗಿ ಪರಿಣಮಿಸಲೂ ಇಲ್ಲ. “ಈ ನಿಯಮ ಅಷ್ಟೇನೂ ಕಷ್ಟಕರವಾದುದಲ್ಲ, ಹೇಗೋ ಸಂಬಾಳಿಸಬಹುದು” ಎಂದು ಸರಕಾರದ ನಿಲುವನ್ನು ಅವರು ಸಮರ್ಥಿಸಿ ದೇಶಪ್ರೇಮಿಗಳಾದರು. ದೇಶವಾಸಿಗಳ ಮೇಲೆ ಪ್ರೀತಿ, ಸಂವೇದನೆ ಇಲ್ಲದೆ, ಅವರ ನೋವಿಗೆ ಮಿಡಿಯದೇ ದೇಶಪ್ರೇಮಿಗಳಾಗಲು ಸಾಧ್ಯವಿತ್ತು ಅಲ್ಲಿ. ವಾಸ್ತವದಲ್ಲಿ ಆ ಸಮರ್ಥಕರು ಸಂವೇದನಾರಹಿತ ಮನಸಿನ ದುಷ್ಟರು. ಅವರಿಗೆ ಸ್ವಾರ್ಥವಲ್ಲದೆ ಇತರರ ವೇದನೆ ಏನೂ ಅಲ್ಲವಾಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ವಾ?
ಸರಕಾರದ ನಿಯಮ ಪಾಲಿಸಲು ಆಗದೆ ಬಿಸಿಕಾವಲಿಯಲ್ಲಿ ಸುಟ್ಟುಕೊಳ್ಳುವಂತೆ ಚಡಪಡಿಸುವವರು ಸರಕಾರದ ನಿಯಮವನ್ನು ವಿರೋಧಿಸುತ್ತಾರೆ. ಜೊತೆಗೆ, ಬಿಎಂಡಬ್ಲ್ಯು ಕಾರು ಕೊಳ್ಳಬಲ್ಲ ಸಾಮರ್ಥ್ಯವಿದ್ದ ಕೆಲವರೂ ಸರಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಾರೆ. “ಈ ಕಾನೂನಿಂದ ನಮಗೆ ಅಷ್ಟೇನೂ ತೊಂದರೆಯಾಗಲ್ಲ ನಿಜ, ಆದರೆ ನಮ್ಮ ದೇಶದ ಬಹುಸಂಖ್ಯಾತರ ಜೀವನ ನರಕಮಯವಾಗುತ್ತದೆ, ಪಾಪ” ಎಂಬುದು ಅವರ ಮನಸ್ಸಿನ ಅಸಮಾಧಾನಕ್ಕೆ ಕಾರಣ. ಅವರಲ್ಲಿರುವ ಹೃದಯವು “ಅಷ್ಟು ಮಂದಿಯ ಸಂಕಟ ನಮ್ಮ ಸಂಕಟ ಕೂಡ” ಎಂದು ಯೋಚಿಸುವಂತೆ ಮಾಡುತ್ತದೆ. ಸಂವೇದನಾಶೀಲ ಮನದೊಡೆಯರಾದ ಅವರು ನಿಜವಾದ ಶ್ರೀಮಂತರು.
ಸುಲಭವಾಗಿ ಅರ್ಥವಾಗಲು ಈ ಉದಾಹರಣೆ. ನಾಳೆ ಭಾರತದಲ್ಲಿ ಈ ನಿಯಮ ಬಂದರೂ ಸ್ವಾಗತಿಸುವ ಉಳ್ಳವರು ಸಂವೇದನಾರಾಹಿತ್ಯರು ಇದ್ದೇ ಇರುತ್ತಾರೆ.
ಯುಪಿಎ ಸರಕಾರದ ಸಮಯದಲ್ಲಿ ಆರು ತಿಂಗಳಾಂತರದಲ್ಲಿ ಒಂದೆರಡು ರೂ. ಇಂಧನ ಬೆಲೆ ಜಾಸ್ತಿಯಾದರೆ, (ಅದೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಾದಾಗ) ಭಾರತ ಬಂದ್ ಮಾಡಿದವರು ಇದೀಗ ಅಧಿಕಾರದಲ್ಲಿದ್ದಾರೆ. ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆಯೂ ಆಯಿತು. ಆದ್ದರಿಂದ ಶ್ರೀಲಂಕಾ, ನೇಪಾಳ ಮುಂತಾದ ರಾಷ್ಟ್ರಗಳಲ್ಲಿ ಬೆಲೆಯೂ ಗಮನಾರ್ಹ ಇಳಿಕೆಯಾಯಿತು. ಆದರೆ ನಮ್ಮ ‘ಇಂಧನ ಬೆಲೆ ಇಳಿಕೆಗಾಗಿ ಭಾರತ ಬಂದ್ ಮಾಡಿದ’ ಪಕ್ಷದ ಅಧಿಕಾರದ ಭಾರತದಲ್ಲಿ ಇಂಧನದ ದರ ತುಂಬಾನೇ ಅಧಿಕವಾಗಿದೆ. ಇತ್ತೀಚಿನ ಬೆಲೆ ಕಡಿಮೆ ಆನಂತರವೂ ಅಂತಾರಾಷ್ಡ್ರೀಯ ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಇದು ತುಂಬಾ ಜಾಸ್ತಿ. ಪರಿಣಾಮವಾಗಿ ಎಲ್ಲಾ ವಸ್ತುಗಳ ಬೆಲೆ ಭಾರೀ ಅಂತರದಲ್ಲಿ ಆಗಿವೆ. ಇತರ ವಸ್ತುಗಳ ಸರಕಾರಿ ತೆರಿಗೆಯನ್ನೂ ಡಬಲ್ ಮಾಡಿದೆ ನಮ್ಮ ಸರಕಾರ.
2013 ರಲ್ಲಿ ನರೇಂದ್ರ ಮೋದಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾದ ಮೇಲೆ ದಿಲ್ಲಿಯ ರೋಹಿಣಿಯಲ್ಲಿರುವ ಜಪಾನೀಸ್ ಪಾರ್ಕ್ನಲ್ಲಿ ಭಾಷಣ ಮಾಡಿ “ಭಯ್ಯಾ ಮೆಹೆಂಗಾಯಿ ಕಮರ್ ತೋಡ್ ರಹಿ ಹೈ” ಎಂದು ಹೇಳುತ್ತಾರೆ. ಅಂದರೆ “ಬೆಲೆ ಏರಿಕೆಯು ಜನರ ಸೊಂಟ ಮುರಿಯುತ್ತಿದೆ” ಎಂದು. ಇನ್ನೊಂದು ಭಾಷಣದಲ್ಲಿ ಅವರು “ಇಂಧನ ಬೆಲೆ ಆಕಾಶಕ್ಕೆ ಏರುತ್ತಿದೆ.. ಹೌದಾ ಅಲ್ವಾ.”. ಎಂದು ಜನರನ್ನು ಕೇಳುತ್ತಾರೆ. ಆನಂತರ “ಇಂತಹದ್ದನ್ನು ಸರಿಮಾಡಲೇ ದೇವನು ನನ್ನನು ಸೃಷ್ಟಿಸಿದ್ದಾನೆ” ಎನ್ನುತ್ತಾರೆ. ಮತ್ತೊಂದು ಭಾಷಣದಲ್ಲಿ ಜನರು ಹಸಿವೆಯಿಂದ ನರಳುತ್ತಾರೆ. ಅವರು ಸಾಯಬೇಕಾ, ಯಾಕೆ ಈ ಪರಿಯಾಗಿ ಬೆಲೆ ಮಾಡುತ್ತೀರಿ, ಕರುಣೆನೇ ಇಲ್ವಾ ಎಂದು ಕೇಳುತ್ತಾರೆ. ಬಾಬಾ ರಾಮದೇವ್ “ಮೋದಿ ಅಧಿಕಾರಕ್ಕೆ ಬಂದರೆ 20 ರೂಪಾಯಿಗೆ ಪೆಟ್ರೋಲ್ ಕೊಡುತ್ತಾರೆ” ಎಂದಿದ್ದರು. ಬಿಜೆಪಿ ನಾಯಕರಿಂದ ದೇಶಾದ್ಯಂತ ಬೆಲೆಯೇರಿಕೆಯ ವಿರುದ್ಧ ತೀವ್ರ ಪ್ರತಿಭಟನೆಗಳು ಆಗಾಗ್ಗ ಆಗ್ತಿತ್ತು.
ಇಂಧನ ಬೆಲೆ ಏರಿಕೆಯು ಇತರ ವಸ್ತುಗಳ ಬೆಲೆಯೇರಿಕೆಗೆ ಕಾರಣವಾಗುವುದು ಎಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಅಂದಹಾಗೆ ಆಗ ಇದ್ದ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಗೊತ್ತಾ? ಪೆಟ್ರೋಲ್ ಲೀಟರ್ ಒಂದಕ್ಕೆ 71.28 ರೂ. ಮತ್ತು ಡೀಸೆಲ್ ಬೆಲೆ 51.40 ರೂ. ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್ ಒಂದಕ್ಕೆ 105.5 ಡಾಲರ್ ಇತ್ತು. ಆಗ ಅಡುಗೆ ಅನಿಲ ಸಿಲಿಂಡರ್ 400 ರೂಪಾಯಿಗೆ ಸಿಗುತ್ತಿತ್ತು. ಇದನ್ನೇ ಬಿಜೆಪಿ “ಇವು ಜನರಿಗೆ ಬದುಕಲಾರದ ದಿನಗಳಿವು..” ಅಂದು ಹೇಳಿದ್ದು. ಇದಕ್ಕಿಂತ ಕಡಿಮೆ ದರಕ್ಕೆಇಂಧನ ಸಿಗಲು ಮತ್ತು ಇತರ ವಸ್ತುಗಳ ಬೆಲೆ ಕಡಿಮೆಯಾಗಲು ನಮಗೆ ಅಧಿಕಾರ ಕೊಡಿ ಎಂದು ಹೇಳಿದ್ದು. ಕಚ್ಚಾ ತೈಲ ಬ್ಯಾರಲ್ ಒಂದಕ್ಕೆ 105 ಡಾಲರ್ ಇರುವಾಗ 54 ರೂಪಾಯಿಗೆ ಸಿಗುತ್ತಿದ್ದ ಡೀಸೆಲ್ ಕಚ್ಚಾತೈಲದ ಬೆಲೆ ಬ್ಯಾರೆಲ್ ಒಂದಕ್ಕೆ 40 ರೂಪಾಯಿಗೆ ಇಳಿದಾಗಲೂ 85 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದೀಗ ಬ್ಯಾರೆಲ್ ಬೆಲೆ 83 ಡಾಲರ್ ಇದೆ. ಆದರೆ ಇದೀಗ ಪೆಟ್ರೋಲ್ ಬೆಲೆ 100 ದಾಟಿಯೇ ಇದೆ. ಆದರೆ ಡೀಸೆಲ್ ತೊಂಬತ್ತು ರೂಪಾಯಿಯ ಆಸುಪಾಸು ಇದೆ. ಈ ಬಗ್ಗೆ ಜನರಿಗೆ ಸುಳ್ಳು ಸಮರ್ಥನೆ ಕೊಡಲಾಗುತ್ತದೆ
ಪಾಪ, ವಿದ್ಯಾವಂತರೇ ಅವುಗಳನ್ನು ನಂಬಿ “ಅಪ್ಪ ಮಾಡಿಟ್ಟ ಸಾಲವನ್ನು ಮಕ್ಕಳು ತೀರಿಸಬೇಡವೇ? ಪೆಟ್ರೋಲ್, ಡೀಸೆಲ್ ಮತ್ತು ಇತರ ವಸ್ತುಗಳ ಬೆಲೆಯೇರಿಕೆಯಿಂದ ಸಂಗ್ರಹಿಸುವ ತೆರಿಗೆಯ ಹಣದಿಂದ ತೈಲ ಬಾಂಡಿನ ಮರುಪಾವತಿ ಮಾಡಲಾಗುತ್ತಿದೆ , ಬಡ್ಡಿ ಕಟ್ಟಲಾಗಿದೆ, ವಿಶ್ವಬ್ಯಾಂಕಿನ ಸಾಲವನ್ನು ಮೋದಿ ತೀರಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಮಾಡಿದ ವಿಶ್ವಬ್ಯಾಂಕಿನ ಸಾಲ ಮೋದಿ ತೀರಿಸಿದ್ದಾರೆ, ತೀರಿಸುತ್ತಿದ್ದಾರೆ ಎಂದು ಬಿಜೆಪಿಯ ನಾಯಕರೇ ಸಾಮಾಜಿಕ ಮಾಧ್ಯಮಗಳಲ್ಲಿ ಅಂಕಿ ಅಂಶ ಹಾಕುತ್ತಿದ್ದಾರೆ. ಇಂತಹ ಸುಳ್ಳುಗಳಲ್ಲಿ ವಿದ್ಯಾವಂತರೂ ಬಂಧಿಯಾಗುತ್ತಿದ್ದಾರೆ. ಆದರೆ ಇದು ಜನರನ್ನು ವಂಚನೆಯ ಮೇಲೆ ವಂಚನೆಗೊಳಿಸುವಿಕೆಯಾಗಿದೆ.
ವಾಸ್ತವವನ್ನುಬಜೆಟ್ ದಾಖಲೆಯಲ್ಲಿರುವ ಅಂಕಿಅಂಶಗಳನ್ನು ಪರಿಶೀಲಿಸಿದಾಗ ಮೋದಿ ಸರಕಾರ ಮರುಪಾವತಿ ಮಾಡಿರುವುದು ಕೇವಲ 3,500 ಮೌಲ್ಯದ ಬಾಂಡ್ಗಳನ್ನು ಮಾತ್ರ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಇರುವ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೆಷಣೆ ಕೋಶ ಪಿಪಿಎ ಕೂಡ ಇದನ್ನು ದೃಢಪಡಿಸಿದೆ. ಯುಪಿಎ ಸರಕಾರ ಕೂಡ ಹೀಗೆ ಬಾಂಡ್ ಗಳನ್ನು ಮರುಮಾವತಿ ಮಾಡುತ್ತಿತ್ತು. ಮೋದಿ ಸರಕಾರ ಪಾವತಿಸಿದ ಬಡ್ಡಿಯ ಮೊತ್ತವೂ ಯುಪಿಎ ಸರಕಾರಗಳಿಗಿಂತ ಹೆಚ್ಚಲ್ಲ. ಈಗಿನ ಸರಕಾರ ಸಂಗ್ರಹಿಸುವ ಲಕ್ಷಾಂತರ ಕೋಟಿ ಇಂಧನ ತೆರಿಗೆಯಿಂದ “ಮೋದಿ ಸ್ಪೆಷಲ್” ಆಗಿ ಯಾವುದೇ ಸಾಲ ಸಂದಾಯವಾಗುತ್ತಿಲ್ಲ ಎನ್ನುವುದು ವಾಸ್ತವ. ಇನ್ನು ವಿಶ್ವಬ್ಯಾಂಕಿನ ಸಾಲಕ್ಕೆ ಸಂಬಂಧಿಸಿದ ವಾಸ್ತವವೂ ಭಿನ್ನವಲ್ಲ. ಮೋದಿ ಆಡಳಿತದಲ್ಲಿಯೂ ವರ್ಷವರ್ಷ ಸಾಲವನ್ನು ಮಾಡಲಾಗುತ್ತದೆ. ಸರ್ಕಾರ ಹೊಂದಿರುವ ಒಟ್ಟಾರೆ ಸಾಲದ ವಿಸ್ತೃತ ವಿಶ್ಲೇಷಣೆಯನ್ನು ಒಳಗೊಂಡ ಸ್ಥಿತಿಗತಿ ವರದಿಯನ್ನು ಹಣಕಾಸು ಸಚಿವಾಲಯ ಹೊರತರುತ್ತದೆ. ಅವುಗಳನ್ನು ನೋಡಿದರೆ ಸಾಕು ವಾಸ್ತವವು ತಿಳಿಯಲು. ಉದಾಹರಣೆಗೆ 2014ರ ಜೂನ್ನಲ್ಲಿ ಕೇಂದ್ರ ಸರ್ಕಾರದ ಮೇಲೆ ಒಟ್ಟಾರೆ 54,90,763 ಕೋಟಿ ರೂಪಾಯಿನಷ್ಟು ಸಾಲವಿತ್ತು. ಆದರೆ, ಅದು 2018ರ ಸೆಪ್ಟೆಂಬರ್ನಲ್ಲಿ 82,03,253 ಕೋಟಿ ರೂ.ಗೆ ಏರಿಕೆ ಕಂಡಿದೆ ಎಂದು ಸರ್ಕಾರದ ಸಾಲಕ್ಕೆ ಸಂಬಂಧಿಸಿದ ಹಣಕಾಸು ಸಚಿವಾಲಯದ 8ನೇ ಆವೃತ್ತಿಯ ಸ್ಥಿತಿಗತಿ ವರದಿ ತಿಳಿಸಿದೆ.
ಶ್ರೀಮಂತರು, ಸರಕಾರಿ ಉದ್ಯೋಗಿಗಳು, ತಿಂಗಳಿಗೆ 30,000 ಅಥವಾ ಅದಕ್ಕಿಂತ ಹೆಚ್ಚು ಸಾವಿರ ವರಮಾನ ಇರುವ ಕುಟುಂಬ ಹೇಗೂ ಬದುಕಬಹುದು. ಆದರೆ ಭಾರತದಲ್ಲಿ ಬಹುಸಂಖ್ಯಾತರ ತಿಂಗಳ ಅದಾಯ ಸರಾಸರಿ ರೂ. 3000 ಇದೆ. ಅಂತಹವರು ಈ ಹಣದುಬ್ಬರದಲ್ಲಿ ಹೇಗೆ ಬದುಕುತ್ತಾರೆ? ಧರ್ಮ ಧರ್ಮ ಎನ್ನುವ ಜನರಿಗೆ ಜನರ ಕಷ್ಟ ನೋವುಗಳು ಏನೂ ಅಲ್ಲವಾ? ಹಾಗಾದರೆ ಧರ್ಮ ಎಂದರೇನು?
ಆದರೆ ‘ಹೇಗೋ ಬದುಕಬಹುದು’ ವರ್ಗವು ಬೆಲೆ ಏರಿಕೆಯ ಬಗ್ಗೆ ಮೌನ ಅಥವಾ ಸಮರ್ಥನೆ ಮಾಡುತ್ತಿವೆ. ಅವರಿಗೆ ಬದುಕಲಾಗದವರ ಸ್ಥಿತಿಯು ಮನ ತಟ್ಟುವುದಿಲ್ಲ. ಸುಳ್ಳು ಸಮರ್ಥನೆಗಳು, ಕಲ್ಪನೆಗಳನ್ನು ಬರೆಯೋದು ಬೇರೆ. ನೇಪಾಳದಂತ ದೇಶಗಳು ಕಚ್ಚಾತೈಲ ಬೆಲೆ ಇಳಿಕೆಯ ಪ್ರಯೋಜನವನ್ನು ಜನರಿಗೆ ತಲುಪಿಸಲು ಸಾಧ್ಯವಾಗುವುದಾದರೆ ಭಾರತದ ಐವತ್ತಾರು ಇಂಚಿನೆದೆಯ ಮೋದಿಗೆ ಸಾಧ್ಯವಾಗುವುದಿಲ್ಲವೇ? ಸಾಧ್ಯ ಇದೆ, ಆದರೆ ಅಭಿನಯ, ಭಾವನಾತ್ಮಕ ಮಾತುಗಾರಿಕೆಯನ್ನು ಹೊರತಾಗಿ ನಮ್ಮ ಮೋದಿ ಮತ್ತು ಟೀಮ್ನ ಎದೆ ಸೀಳಿದರೂ ಜನದ್ವೇಷವಲ್ಲದೆ ಜನರ ಪ್ರೀತಿ, ಧರ್ಮ ಸಿಗದು.
ಬೆಲೆ ಏರಿಕೆಯಿಂದ ಬದುಕಲಾಗದ ಜನರು ಅನಕ್ಷರಸ್ಥರು, ಧ್ವನಿ ಇಲ್ಲದವರು. ಬದುಕಬಹುದಷ್ಟು ಉಳ್ಳವರ ಸಮರ್ಥನೆಗಳನ್ನು ನಂಬಿ ಸುಮ್ಮನಿರ್ತಾರೆ. ಉಳ್ಳವರಿಗೆ ಬೆಲೆಏರಿಕೆಯಿಂದ ಬದುಕಲಾರದ ಸ್ಥಿತಿ ಆಗದು. ಆದ್ದರಿಂದ ಅವರು ಈ ಬಗ್ಗೆ ವಿರೋಧಿಸದೇ ಸ್ವಾಗತಿಸುತ್ತಾರೆ. ಸುಳ್ಳು ಸಮರ್ಥನೆ ಮಾಡುತ್ತಾರೆ. ತಿಳಿಯಿರಿ ಸಂವೇದನರಾಹಿತ್ಯರೇ, ಭಾರತದ ಬಹುಸಂಖ್ಯಾತರ ತಿಂಗಳ ಸರಾಸರಿ ಅದಾಯ ಮೂರು ಸಾವಿರ ರೂ.!!
- ಅಬೂಮನ್ಹ ಪಡಿಕಲ್